Friday 22 December 2017

ಮಿಲಿಂದನ ಪ್ರಶ್ನೆಗಳು(ಪನ್ಹ) milinda panha in kannada 1. ಇದ್ದಿಬಲ ವರ್ಗ

                                       1. ಇದ್ದಿಬಲ ವರ್ಗ

 

1. ಕತಾಧಿಕಾರಸ ಫಲ ಪನ್ಹೊ (ದಾನಫಲ ಪ್ರಶ್ನೆ)

ಇದನ್ನು ಕೇಳಿದ ಮಿಲಿಂದನು, ನಾಗಸೇನ ಆಚಾರ್ಯರ ಪಾದಗಳಿಗೆ ಬಿದ್ದು ವಂದಿಸಿದನು ಮತ್ತು ಕೈಗಳನ್ನು ಜೋಡಿಸಿ ಹಾಗೆಯೇ ಮೇಲಿಟ್ಟು ಹೀಗೆ ಹೇಳಿದನು ಭಂತೆ ನಾಗಸೇನ, ಪರಧರ್ಮಗಳ ನಾಯಕರು ಹೀಗೆ ಹೇಳುತ್ತಾರೆ ಒಂದುವೇಳೆ ಬುದ್ಧರು ದಾನಗಳನ್ನು ಸ್ವೀಕರಿಸಿದವರೇ ಆದ ಪಕ್ಷದಲ್ಲಿ ಅವರು ಮುಕ್ತರಾಗಿಲ್ಲ, ಅವರು ಪ್ರಪಂಚಕ್ಕೆ ಅಂಟಿದ್ದಾರೆ. ಈ ರೀತಿಯಾಗಿ ಜಗತ್ತಿಗೆ, ಜಗತ್ತಿನ ವಿಷಯಗಳಿಗೆ ಅಂಟಿದ್ದಾರೆ, ಆದ್ದರಿಂದ ಅವರಿಗೆ ನೀಡಿದ ಆದರ, ದಾನಗಳು ವ್ಯರ್ಥ ಎಂದು. ಮತ್ತೊಂದೆಡೆ ಹೇಳುವುದಾದರೆ, ಯಾರು ಪೂರ್ಣವಾಗಿ ಪ್ರಾಪಂಚಿಕತೆಯಿಂದ ಮುಕ್ತರೋ, ಅಂಟಿಲ್ಲವೋ ಆಗ ಅವರಿಗೆ ದಾನ, ಆದರಗಳನ್ನು ಅಪರ್ಿಸಲಾಗುವುದಿಲ್ಲ. ಅಂಟಿಲ್ಲದ ವ್ಯಕ್ತಿ ಯಾವುದೇ ಗೌರವ, ಆದರ, ದಾನ ಸ್ವೀಕರಿಸುವುದಿಲ್ಲ. ಹೀಗಾಗಿ ಯಾರು ಸ್ವೀಕಾರ ಮಾಡುವರೋ ಅವರಿಗಿತ್ತ ದಾನ ನಿಷ್ಫಲವಾಗಿರುತ್ತದೆ. ಈ ಇಕ್ಕಟ್ಟಿನ ಪ್ರಶ್ನೆಗೆ ಎರಡು ಕೋಡುಗಳಿವೆ (ಕೊಂಬುಗಳಿವೆ), ಯಾರಿಗೆ ಅರಹತ್ವಜ್ಞಾನವಿಲ್ಲವೋ ಅವರು ಇದರ ವ್ಯಾಪ್ತಿಯನ್ನು ಅರಿಯಲಾರರು, ಶ್ರೇಷ್ಠರಿಗೆ ಮೀಸಲಿಟ್ಟ ಪ್ರಶ್ನೆಯಿದು, ಸಾಮಾನ್ಯರಿಗೆ ಈ ಪ್ರಶ್ನೆ ಜಾಲದಿಂದ ಆಶ್ರುವು ಸೀಳಾಗಿ ಹರಿಯುತ್ತದೆ. ನಿಮಗೆ ಈಗ ಆ ಪ್ರಶ್ನೆಯನ್ನು ಹಾಕಲಾಗಿದೆ. ನಿಮ್ಮ ಉತ್ತರದಿಂದ ಭವಿಷ್ಯದಲ್ಲಿ ಬರುವ ಸಂಘಕ್ಕೆ ಪರರು ಹಾಕುವ ಕಠಿಣ ಪ್ರಶ್ನೆಗಳಿಗೆ ಉತ್ತರಿಸುವ ಅವಕಾಶ ಸಿಗುತ್ತದೆ. (90)
ಆಗ ಥೇರರು ಹೀಗೆ ಉತ್ತರಿಸಿದರು ಓ ಮಹಾರಾಜ, ಬುದ್ಧ ಭಗವಾನರು ಸಂಪೂರ್ಣವಾಗಿ ಮುಕ್ತರಾಗಿದ್ದಾರೆ, ಅಂಟುವಿಕೆಯಿಂದ ಬಿಡುಗಡೆ ಹೊಂದಿದ್ದಾರೆ. ಭಗವಾನರು ಬೋಧಿವೃಕ್ಷದ ಬುಡದಲ್ಲಿರುವಾಗಲೇ ಯಾವ ಆದರ, ಸತ್ಕಾರ, ದಾನಗಳನ್ನು ಸ್ವೀಕರಿಸಲಿಲ್ಲ. ಅವರ ಮನಸ್ಸು ಅದರಿಂದಾಗಿ ಪೂರ್ಣ ಮುಕ್ತವಾಗಿದೆ. ಇದರ ಬಗ್ಗೆ ಧಮ್ಮಸೇನಾನಿಗಳಾದ ಸಾರಿಪುತ್ತರು ಹೀಗೆ ಹೇಳಿದ್ದಾರೆ:
ಪೂಜಿಸಿದರೂ ಈ ಅಸಮಾನರವರಿಗೆ, ದೇವ-ಮನುಷ್ಯರು ಸಹಾ. ಅವರು ಲಾಭ ಸತ್ಕಾರಗಳಿಗೆ ಅಂಟುವವರಲ್ಲ, ಅವರು ಅದನ್ನೆಲ್ಲಾ ಸ್ವೀಕರಿಸುವವರಲ್ಲ. ಹಾಗೆಯೇ ನಿರಾಕರಿಸುವವರೂ ಅಲ್ಲ, ಹೀಗೆ ಎಲ್ಲಾ ಬುದ್ಧರು ಇದ್ದರು ಹಾಗು ಇರುವರು.
12. ರಾಜರು ಕೇಳಿದರು ಪೂಜ್ಯ ನಾಗಸೇನ, ಒಬ್ಬ ತಂದೆಯು ತನ್ನ ಮಗನ ಬಗ್ಗೆ ಅಥವಾ ಮಗನು ತಂದೆಯ ಬಗ್ಗೆ ಪ್ರಶಂಸಿಸಬಹುದು. ಆದರೆ ಇದನ್ನೇ ಟೀಕಿಸುವವರಿಗೆ ಹೇಳಿ ನಿಶ್ಶಬ್ದಗೊಳಿಸಲಾಗುವುದಿಲ್ಲ ಇದು ಕೇವಲ ನಂಬಿಕೆಯ ವ್ಯಕ್ತತೆಯಾಗಿದೆ, ಬನ್ನಿ ಚೆನ್ನಾಗಿ ವಿವರಿಸಿ, ಪರಧಮರ್ಿಯ ಬಲೆಯಿಂದ ಪಾರಾಗಿ.
ಆಗ ಥೇರರು ಹೀಗೆ ಹೇಳಿದರು ಓ ಮಹಾರಾಜ, ಭಗವಾನರು ಪ್ರಾಪಂಚಿಕತೆಯಿಂದ ಪೂರ್ಣವಾಗಿ ವಿಮುಕ್ತರಾಗಿದ್ದಾರೆ ಮತ್ತು ಭಗವಾನರು ಉಡುಗೊರೆಗಳನ್ನು ಸ್ವೀಕರಿಸುವುದಿಲ್ಲ ಅಥವಾ ನೀಡಿ ಎಂದೂ ಹೇಳಿಲ್ಲ. ಉಡುಗೊರೆ ಸ್ವೀಕರಿಸದ ತಥಾಗತರ ಅಸ್ತಿಗೆ ರತ್ನಗಳ ನಿಧಿಯಿಂದ ಕೂಡಿದ ಸ್ತೂಪಗಳನ್ನು ದೇವತೆಗಳು ಅಥವಾ ಮಾನವರು ನಿಮರ್ಿಸಿ ಪೂಜಿಸುವರು. ಆದರೆ ಈ ರೀತಿಯಾಗಿ ಪೂಜಿಸಿ, ಉಡುಗೊರೆ ನೀಡಿದ ದಾನಿಗಳಿಗೆ 3 ಪರಮ ದಿವ್ಯ ಸ್ಥಿತಿಗಳಲ್ಲಿ ಒಂದನ್ನು ಪಡೆಯುತ್ತಾರೆ (ಮುಂದಿನ ಜನ್ಮದಲ್ಲಿ ಮಾನವ ಅಥವಾ ದೇವ ಇಲ್ಲವೆ ಅರಹಂತರು ಆಗುತ್ತಾರೆ). ಓ ಮಹಾರಾಜ, ಊಹಿಸಿ, ಶ್ರೇಷ್ಠವಾದ ಮತ್ತು ದಿವ್ಯವಾದ ಬೆಂಕಿಯನ್ನು ಹಚ್ಚಿ ನಂತರ ಅದು ಆರಿಹೋದಾಗ, ಮತ್ತೆ ಅದು ಯಾವುದೇ ಹುಲ್ಲನ್ನಾಗಲಿ ಅಥವಾ ಕಟ್ಟಿಗೆಗಳಾಗಲಿ ಸ್ವೀಕರಿಸುವುದೇ?
ಒಂದುವೇಳೆ ಅದನ್ನು ಸುಟ್ಟರೂ, ಅದು ಇಂಧನವನ್ನು ಸ್ವೀಕರಿಸುವುದಿಲ್ಲ, ಹಾಗಿರುವಾಗ, ನಿಬ್ಬಾಣ ಪಡೆದ ಮತ್ತು ಸುಡಲು ಆಗದ ಅರಿವು ಇಲ್ಲದ ವಸ್ತುವು ಸ್ವೀಕರಿಸುವುದೇ?
ಯಾವಾಗ ಬೃಹತ್ ಬೆಂಕಿಯು ಆರಿಹೋಯಿತೋ, ನಂದಿತೋ, ನಂತರ ಜಗತ್ತಿಗೆ ಬೆಂಕಿಯ ವಿಯೋಗವಾಗುವುದೇ?
ಹಾಗೇನು ಇಲ್ಲ. ಒಣಕಟ್ಟಿಗೆಯು ಬೆಂಕಿಗೆ ಆಧಾರವಾಗಿದೆ ಮತ್ತು ಅದರಿಂದ ಯಾವುದೇ ಮನುಷ್ಯನು ಸಹಾ ಬೆಂಕಿ ಪಡೆಯಬಹುದು, ಹೀಗೆ ಇಂಧನದಿಂದ ಮತ್ತು ಪ್ರಯತ್ನದಿಂದಾಗಿ, ಬೆಂಕಿಯ ಕಡ್ಡಿಯಿಂದಾಗಿ, ಬೆಂಕಿಯನ್ನು ಉತ್ಪಾದಿಸಬಹುದು ಮತ್ತು ಅ ಬೆಂಕಿಯಿಂದ ಅವಶ್ಯಕ ಕಾರ್ಯಗಳನ್ನು ಪೂರೈಸಬಹುದು. ಹೀಗಾಗಿ ಟೀಕಿಸುವ ಪರರ ಹೇಳಿಕೆಯಾದ ಯಾರು ಸ್ವೀಕರಿಸದವರಿಗೆ ದಾನ-ಉಡುಗೊರೆ ನೀಡುವರೋ ಅದು ವ್ಯರ್ಥ ಮತ್ತು ಶೂನ್ಯ ಎಂದು ಹೇಳಿರುವರೋ ಅದು ಸುಳ್ಳಾಗಿ ಪರಿಣಮಿಸಿದೆ. ಹೇಗೆ ಬೃಹತ್ ಮತ್ತು ದಿವ್ಯವಾದ ಬೆಂಕಿಯನ್ನು ಹಚ್ಚುವರೋ, ಹಾಗೆಯೇ ಮಹಾರಾಜ, ಭಗವಾನರು ಬುದ್ಧತ್ವದ ಘನತೆಯನ್ನು ದಶಸಹಸ್ರ ಲೋಕ ವ್ಯವಸ್ಥೆಗಳಲ್ಲಿ ಬೆಳಗಿದ್ದಾರೆ, ನಂತರ ಅನುಪಾದಿಸೆಸಾಯ ನಿಬ್ಬಾಣ ಧಾತು ಅಂದರೆ ಪರಿನಿಬ್ಬಾಣ ಪ್ರಾಪ್ತಿಮಾಡಿದರು. ಹೇಗೆ ಅಗ್ನಿಯು ಆರಿಹೋಗುವುದೋ, ನಂತರ ಅದು ಯಾವುದೇ ಇಂಧನ ಸ್ವೀಕರಿಸುವುದಿಲ್ಲವೋ ಅದೇರೀತಿಯಾಗಿ, ಲೋಕಹಿತಕ್ಕಾಗಿ ಅವರು ದಾನ, ಗೌರವ ಸ್ವೀಕರಿಸುತ್ತಿದ್ದರು ನಂತರ ಅದು ನಿರೋಧವಾಯಿತು. ಉರಿಯುತ್ತಿದ್ದ ಅಗ್ನಿಯು ನಂದಿ ಹೋದಮೇಲೆ ಅಲ್ಲಿರುವ ಜನರು ತಮ್ಮ ಶಕ್ತಿ ಮತ್ತು ಬಲೆಗಳಿಂದ ಅಗ್ನಿಯನ್ನು ಉತ್ಪತ್ತಿ ಮಾಡುವರು ಮತ್ತು ಅಗ್ನಿಯಿಂದಾಗುವ ಪ್ರಯೋಜನವೆಲ್ಲಾ ಪಡೆಯುತ್ತಾರೆ, ಅದೇರೀತಿಯಲ್ಲಿ ದೇವ ಮತ್ತು ಮನುಷ್ಯರು, ತಥಾಗತರು ಪರಿನಿಬ್ಬಾಣ ಪಡೆದಮೇಲೆ ಅವರು ದಾನ, ಆತಿಥ್ಯ ಸ್ವೀಕರಿಸುವುದಿಲ್ಲ, ಆದರೂ ಸಹಾ ದೇವ, ಮನುಷ್ಯರು ಬುದ್ಧರಿಗಾಗಿ ರತ್ನಖಚಿತವಾದ ಸ್ತೂಪವನ್ನು ಕಟ್ಟಿಸಿ, ವಂದಿಸುತ್ತಾರೆ. ಈ ರೀತಿಯಾದ ವಂದನೆಗಳಿಂದ ಅವರಿಗೆ ಮೂರರಲ್ಲಿ ಒಂದು ದಿವ್ಯವಾದ ಸ್ಥಿತಿಗಳು ಸಿಗುವುದು. ಆದ್ದರಿಂದ ಮಹಾರಾಜ, ತಥಾಗತರು ಇರಲಿ, ಇಲ್ಲದಿರಲಿ ಆದರೂ ಸಹಾ ಅವರಿಗೆ ನೀಡಿದ ದಾನವು ಮಹತ್ಫಲವಾಗಿದೆ, ನಿಷ್ಫಲವಾಗಿಲ್ಲ.
ಇದೇ ವಿಷಯದ ಮೇಲೆ ಇನ್ನೊಂದು ಕಾರಣವನ್ನು ಕೇಳು. ಓ ಮಹಾರಾಜ, ಊಹಿಸಿ, ಒಂದು ಮಹತ್ ವಾಯುವು ಎದ್ದು, ಆ ಬೃಹತ್ ವಾಯುವು ನಂತರ ಸಾಯುತ್ತದೆ, ಈಗ ಆ ವಾಯುವು ಉತ್ಪನ್ನವಾಗಲು ಸಮ್ಮತಿಸುತ್ತದೆಯೇ?
ಒಂದು ವಾಯುವು ಸತ್ತಮೇಲೆ ಮತ್ತೆ ಪುನರ್ ಉತ್ಪನ್ನವಾಗಲು ಸಾಧ್ಯವಿಲ್ಲ ಏಕೆ? ಏಕೆಂದರೆ ವಾಯುಧಾತುವು ಅರಿವಿಲ್ಲದ ವಸ್ತುವಾಗಿದೆ.
ಅಷ್ಟೇ ಏಕೆ? ಓ ರಾಜ, ವಾಯು ಎಂಬ ಶಬ್ದವು ಸಹಾ ಸತ್ತ ವಾಯುವಿಗೆ ಹೊಂದಿಕೆಯಗುವುದೇ?
ಖಂಡಿತ ಇಲ್ಲ ಭಂತೆ, ಆದರೆ ಬೀಸಣಿಕೆಗಳು, ಚಾಮರಗಳು ವಾಯುವಿನ ಉತ್ಪನ್ನಕ್ಕಾಗಿ ಇವೆ. ಯಾರಾದರೂ ಉಷ್ಣದಿಂದ ಪೀಡಿತರಾದರೆ ಅಥವಾ ಜ್ವರದಿಂದ ಬಳಲುತ್ತಿದ್ದರೆ, ಅವರಿಗೆ ಬೀಸಣಿಗೆ ಮತ್ತು ಛಾಮರಗಳಿಂದ, ಶಾರೀರಿಕ ಶ್ರಮದಿಂದ ಬೀಸಿದಾಗ, ತಂಪಾದ, ಗಾಳಿಯು ಉತ್ಪನ್ನವಾಗಿ ಅದರ ಉಷ್ಣವನ್ನು ಅಥವಾ ಜ್ವರವನ್ನು ಸ್ವಲ್ಪ ಕಡಿಮೆ ಮಾಡುತ್ತದೆ. ಹೀಗಿರುವಾಗ ಪರರು ಹೇಳುವ ಈ ಹೇಳಿಕೆ ಯಾರು ಸ್ವೀಕರಿಸುವುದಿಲ್ಲವೋ ಅವರಿಗೆ ನೀಡುವ ದಾನ ನಿಷ್ಫಲ, ವ್ಯರ್ಥ ಎನ್ನುವುದು ಸುಳ್ಳಾಯಿತು. ಹೇಗೆ ಬೃಹತ್ ಗಾಳಿಯು ಬೀಸಿತೋ ಹಾಗೆಯೇ ಭಗವಾನರು 10 ಸಹಸ್ರ ಲೋಕ ವ್ಯವಸ್ಥೆಗಳಿಗೆ ತಮ್ಮ ಮೈತ್ರಿ ಗಾಳಿಯಿಂದ ತಂಪನ್ನು, ಮಧುರತೆಯನ್ನು, ಶಾಂತತೆಯನ್ನು, ಸೂಕ್ಷ್ಮತೆಯನ್ನು ಪ್ರಸರಿಸಿದ್ದಾರೆ, ಹೇಗೆ ಗಾಳಿಯು ಮೊದಲು ಬೀಸಿ, ನಂತರ ಸತ್ತುಹೋಯಿತೋ ಹಾಗೆಯೇ ಭಗವಾನರು ಸಹಾ ತಮ್ಮ ಮೈತ್ರಿಯನ್ನು, ಸೂಕ್ಷ್ಮವಾದ ಜ್ಞಾನವನ್ನು, ಪರಮಶಾಂತತೆಯನ್ನು, ಪರಮ ಮಧುರತೆಯನ್ನು, ಪರಮ ತಂಪನ್ನು ಪ್ರಸರಿಸಿದ್ದಾರೆ. ನಂತರ ಅವರು ನಿಶ್ಶೇಷವಾದ ಪರಿನಿಬ್ಬಾಣ ಪ್ರಾಪ್ತಿಮಾಡಿದ್ದಾರೆ, ಹೇಗೆ ಜ್ವರಪೀಡಿತರು ಮತ್ತು ಉಷ್ಣಪೀಡಿತರು ಇರುವರೋ, ಹಾಗೆಯೇ ದೇವ ಹಾಗು ಮನುಷ್ಯರು ಸಹಾ ಮೂರು ವಿಧದ ಅಗ್ನಿಗಳಿಂದ (ರಾಗ, ದ್ವೇಷ ಮತ್ತು ಮೋಹ) ಪೀಡಿತರಾಗಿದ್ದಾರೆ. ಹೇಗೆ ಬೀಸಣಿಕೆಗಳು ಮತ್ತು ಚಾಮರಗಳು ವಾಯುವಿನ ಉತ್ಪನ್ನಕ್ಕಾಗಿ ಇದೆಯೋ, ಹಾಗೆಯೇ ಭಗವಾನರ ಅವಶೇಷವಾದ ಅಸ್ತಿ (ತಥಾಗತರ ಧಾತು) ಮತ್ತು ಜ್ಞಾನರತ್ನ (ಬೋಧನೆ) ದಿಂದ ತ್ರಿವಿಧದ ಪ್ರಾಪ್ತಿಯಾಗುತ್ತದೆ ಮತ್ತು ಹೇಗೆ ಉಷ್ಣಪೀಡಿತರು ಮತ್ತು ಜ್ವರಪೀಡಿತರು ಬೀಸಣಕೆ ಮತ್ತು ಚಾಮರಗಳಿಂದ ತಂಪಾದ ವಾಯುವನ್ನು ಉತ್ಪನ್ನಗೊಳಿಸಿ ಉಷ್ಣವನ್ನು ಜ್ವರವನ್ನು ಇಲ್ಲವಾಗಿಸುವರೋ, ಅದೇರೀತಿ ದೇವ ಮತ್ತು ಮನುಷ್ಯರು ತಥಾಗತರ ಧಾತುವಿಗೆ ಮತ್ತು ತಥಾಗತರ ಜ್ಞಾನರತ್ನಕ್ಕೆ (ಬೋಧನೆಗೆ) ಪೂಜಿಸಿ, ಪಾಲಿಸುತ್ತಾರೆ. ತಥಾಗತರು ಪರಿನಿಬ್ಬಾಣ ಪಡೆದು ಏನನ್ನೂ ಸ್ವೀಕರಿಸುವುದಿಲ್ಲ. ಆದರೂ ಸಹಾ ಪೂಜಿಸುವವರಲ್ಲಿ ಒಳ್ಳೆಯತನ, ಕುಶಲ ಉತ್ಪನ್ನವಾಗುತ್ತದೆ. ಈ ರೀತಿಯ ಕುಶಲದಿಂದ ತ್ರಿವಿಧ ಅಗ್ನಿಗಳಾದ ಲೋಭ, ದ್ವೇಷ ಮತ್ತು ಮೋಹಗಳಿಂದ ಪಾರಾಗುತ್ತಾರೆ. ಆದ್ದರಿಂದ ಮಹಾರಾಜ, ತಥಾಗತರು ಇರಲಿ ಇಲ್ಲದಿರಲಿ, ಸ್ವೀಕರಿಸಲಿ ಸ್ವೀಕರಿಸದಿರಲಿ ಅವರಿಗೆ ನೀಡಿದ್ದು ಮಹತ್ಫಲವೇ ನೀಡುತ್ತದೆ ಹೊರತು ನಿಷ್ಫಲವಲ್ಲ.
ಈಗ ಇದೇ ವಿಷಯದ ಮೇಲೆ ಮತ್ತೊಂದು ಉದಾಹರಣೆಯನ್ನು ಕೇಳಿರಿ ಮಹಾರಾಜ. ಊಹಿಸಿ, ಒಬ್ಬ ಮನುಷ್ಯ ನಗಾರಿ ಬಾರಿಸುತ್ತಿರುತ್ತಾನೆ ಮತ್ತು ನಂತರ ಆ ಶಬ್ದವು ಸತ್ತುಹೋಗುತ್ತದೆ, ಮತ್ತೆ ಆ ಶಬ್ದವು ಉತ್ಪನ್ನವಾಗಲು ಸಮ್ಮತಿಸುವುದೇ?
ಖಂಡಿತ ಇಲ್ಲ ಭಂತೆ, ಆ ಶಬ್ದವು ಮರೆಯಾಯಿತು. ಆ ಶಬ್ದವು ಮತ್ತೆ ಪುನರ್ ಉದಯಿಸುವ ಪ್ರಶ್ನೆಯೇ ಇಲ್ಲ (ಸಂಭವನೀಯತೆಯೇ ಇಲ್ಲ). ನಗಾರಿಯಿಂದ ಒಮ್ಮೆ ಉತ್ಪನ್ನವಾದ ಶಬ್ದವು, ಸತ್ತನಂತರ ಮರೆಯಾಗುತ್ತದೆ, ಪೂರ್ಣವಾಗಿ ಕತ್ತರಿಸಲ್ಪಡುತ್ತದೆ. ಆದರೆ ಭಂತೆ ನಗಾರಿಯ ಅರ್ಥವೆಂದರೆ ಶಬ್ದದ ಉತ್ಪನ್ನವೆಂದು ಮತ್ತು ಯಾವುದೇ ಮನುಷ್ಯನಾಗಲಿ ಆತನಿಗೆ ಶಬ್ದದ ಅಗತ್ಯ ಬಂದರೆ ತನ್ನ ಬಲ ಪ್ರಯೋಗದಿಂದ ನಗಾರಿ ಬಡಿದು ಶಬ್ದದ ಉತ್ಪನ್ನ ಮಾಡಬೇಕಾಗುತ್ತದೆ.
ಅದೇರೀತಿಯಲ್ಲಿ ಮಹಾರಾಜ, ಭಗವಾನರು ಸಹಾ ತಮಗೆ ಬೋಧನೆಯನ್ನೇ ಗುರುವನ್ನಾಗಿಸಿ ಹಾಗು ವಿನಯವನ್ನೇ ಆದೇಶವನ್ನಾಗಿ ಮಾಡಿ ಹೊರಟಿದ್ದಾರೆ ಮತ್ತು ಅವರ ಧಾತು ಹಾಗು ಜ್ಞಾನರತ್ನವನ್ನು ನೀಡಿದ್ದಾರೆ. ಅವುಗಳ ಮೌಲ್ಯವನ್ನು ನಾವು ಶೀಲ, ಸಮಾಧಿ, ಪ್ರಜ್ಞಾ ಮತ್ತು ವಿಮುಕ್ತಿ ಹಾಗು ವಿಮುಕ್ತಿಜ್ಞಾನ ಇವುಗಳಿಂದ ಅಳೆಯಬಹುದು. ಅವರು ನಿಶ್ಶೇಷ ಪರಿನಿಬ್ಬಾಣವನ್ನು ಪಡೆದಿದ್ದಾರೆ. ಆದರೂ ಸಹಾ ತ್ರಿವಿಧದ ಪ್ರಾಪ್ತಿಯ ಸಾಧ್ಯತೆ ಕತ್ತರಿಸಿಹೋಗಿಲ್ಲ. ದುಃಖಪೀಡಿತ ಜೀವಿಗಳು ತ್ರಿವಿಧ ಪ್ರಾಪ್ತಿಗೆ ಹಾತೊರೆಯುತ್ತದೆ. ಅವರೆಲ್ಲರೂ ತಥಾಗತರ ಧಾತು, ಜ್ಞಾನರತನವಾದ ಧಮ್ಮಕ್ಕೆ, ವಿನಯಕ್ಕೆ ಶರಣಾಗತರಾಗುತ್ತಾರೆ. ಆದ್ದರಿಂದ ಮಹಾರಾಜ ತಥಾಗತರಿಗೆ ಸಮಪರ್ಿಸಿದ ದಾನ ಪೂಜೆಗಳು ನಿಷ್ಫಲವಲ್ಲ, ವ್ಯರ್ಥವಲ್ಲ, ಅವು ಫಲನೀಡುತ್ತವೆ ಮತ್ತು ಈ ಭವಿಷ್ಯದ ಸಾಧ್ಯತೆಯನ್ನು ಭಗವಾನರು ನೋಡಿದ್ದರು ಮತ್ತು ಇದನ್ನು ತಿಳಿಸಲು ಈ ರೀತಿ ಘೋಷಿಸಿದರು. ನಿಮ್ಮಲ್ಲಿ ಕೆಲವರಿಗೆ ಈ ಯೋಚನೆ ಬರಬಹುದು ಆನಂದ; ಭಗವಾನರ ವಚನವು ಮುಗಿಯಿತು, ನಮಗೀಗ ಗುರುವಿಲ್ಲ. ಆದರೆ ಹೀಗೆ ಯೋಚಿಸಬಾರದು, ನುಡಿಯಬಾರದು, ಬದಲಾಗಿ ನೀವು ನನ್ನ ಬೋಧಿಸಿದ ಸತ್ಯಗಳನ್ನೇ ಮತ್ತು ವಿನಯವನ್ನೇ ನನ್ನ ನಂತರ ಗುರುವಾಗಿ ಭಾವಿಸಬೇಕು. ಹೀಗಾಗಿ ತಥಾಗತರ ಪರಿನಿಬ್ಬಾಣದ ನಂತರ ದಾನ, ಪೂಜೆಯು ನಿಷ್ಫಲ ಎಂಬುವುದು ಸುಳ್ಳಾಗಿದೆ. ನ್ಯಾಯಬದ್ಧವಲ್ಲವಾಗಿದೆ ಹಾಗು ಇಂತಹ ಮಿಥ್ಯಾದೃಷ್ಟಿಯೇ ದುಃಖಕ್ಕೆ ಕಾರಣವಾಗಿದೆ. ಅವನತಿಗೆ ಮಾರ್ಗವಾಗಿದೆ.
ಇದೇ ವಿಷಯದ ಮೇಲೆ ಇನ್ನೊಂದು ಉದಾಹರಣೆ ನೀಡುವೆನು. ಕೇಳಿರಿ, ಓ ಮಹಾರಾಜ, ಭೂಮಿಯು ತನ್ನ ವಿಶಾಲ ಧರೆಯಲ್ಲಿ ಎಲ್ಲಾಬಗೆಯ ಬೀಜಗಳನ್ನು, ಇಡೀ ಭೂಮಿಯಲ್ಲೆಲ್ಲಾ ಬೆಳೆಯಲು ಅನುಮತಿ ನೀಡುವುದೇ?
ಖಂಡಿತ ಇಲ್ಲ ಭಂತೆ.
ಹಾಗಿದ್ದರೂ ಸಹಾ ಆ ಎಲ್ಲಾ ಬೀಜಗಳು ಭೂಮಿಯ ಸಮ್ಮತಿ ಇಲ್ಲದಿದ್ದರೂ ಸಹಾ ದೃಢವಾಗಿ ಬೇರೂರುತ್ತವೆ ಮತ್ತು ವೇಗವಾಗಿ ನಿಲ್ಲುತ್ತವೆ ಮತ್ತು ಮರವಾಗಿ ವಿಶಾಲವಾಗುತ್ತವೆ, ದೊಡ್ಡ ದೊಡ್ಡ ವಿಶಾಲವಾದ ರೆಂಬೆಗಳಿಂದ ಹರಡಿ ಹೂ ಹಣ್ಣುಗಳನ್ನು ಬಿಡುತ್ತವೆ ಅಲ್ಲವೇ?
ಹೌದು ಭಂತೆ, ಭೂಮಿಯ ಸಮ್ಮತಿಯಿಲ್ಲದಿದ್ದರೂ ಸಹಾ ಆ ಎಲ್ಲಾ ಬೀಜಗಳು ದೃಢವಾಗಿ ಬೇರೂರುತ್ತವೆ ಮತ್ತು ವೇಗವಾಗಿ ನಿಲ್ಲುತ್ತವೆ ಮತ್ತು ಮರವಾಗಿ ವಿಶಾಲವಾಗುತ್ತವೆ, ರೆಂಬೆಗಳಿಂದ ಹರಡಿ ಹೂ ಹಣ್ಣುಗಳನ್ನು ನೀಡುತ್ತದೆ.
ಹಾಗಾದರೆ ಮಹಾರಾಜ, ಈ ರೀತಿ ಟೀಕೆ ಮಾಡುವ ಪರ ಧಮರ್ಿಯರು ತಮ್ಮ ಪದಗಳಿಂದಲೇ ಸೋತಿದ್ದಾರೆ ಮತ್ತು ನಾಶವಾಗಿದ್ದಾರೆ. ಅವರ ಈ ಮಾತು ಸ್ವೀಕರಿಸದವರಿಗೆ ದಾನ ಮಾಡಿದರೆ ನಿಷ್ಫಲ ಎಂಬುದು ಸುಳ್ಳಾಗಿದೆ, ಬುಡಮೇಲಾಗಿದೆ. ಓ ಮಹಾರಾಜ, ಹೇಗೆ ಈ ವಿಶಾಲವಾದ ಪೃಥ್ವಿಯಿದೆಯೋ ಹಾಗೆಯೇ ತಥಾಗತರು ಅರಹಂತರೂ ಆದ ಸಮ್ಮಾಸಂಬುದ್ಧರಿದ್ದಾರೆ, ಭೂಮಿಯ ಮೌನದಂತೆ ತಥಾಗತರು ಏನನ್ನೂ ಸ್ವೀಕರಿಸದವರಾಗಿದ್ದಾರೆ. ಹೇಗೆ ಬೀಜಗಳು ಬೆಳೆದು ನಿಂತವೋ ಹಾಗೇ ದೇವತೆಗಳು ಮತ್ತು ಮಾನವರು ಸಹಾ ತಥಾಗತರ ಧಾತುವಿಗೆ ಮತ್ತು ತಥಾಗತರ ಜ್ಞಾನರತನಕ್ಕೆ ಆಶ್ರಯ ಹೊಂದಿದ್ದಾರೆ ಮತ್ತು ಅವರ ಪುಣ್ಯದ ಬೇರುಗಳು ಪ್ರಬಲವಾಗಿ ಬೇರೂರಿವೆ, ಸಮಾಧಿಯ ಅಭಿವೃದ್ಧಿಯಿಂದ ನೆರಳನ್ನು ನೀಡುವವರಾಗಿದ್ದಾರೆ. ಸಧಮ್ಮದ ಸಾರವನ್ನು ಹೊಂದಿದ್ದಾರೆ, ಶೀಲದ ಕೊಂಬೆಗಳನ್ನು ಹೊಂದಿದ್ದಾರೆ, ವಿಮುಕ್ತಿಯ ಪುಷ್ಪಗಳನ್ನು ಬಿಡುತ್ತಾರೆ ಮತ್ತು ಸಮಣತ್ವದ (ಅರಹಂತ) ಫಲವನ್ನು ನೀಡುತ್ತಾರೆ.
ಈಗ ಇನ್ನೊಂದು ಉದಾಹರಣೆಯನ್ನು ಇದೇ ವಿಷಯದ ಮೇಲೆ ನೀಡುವೆನು ಕೇಳಿರಿ, ಒಂಟೆಗಳಾಗಲಿ, ಎಮ್ಮೆಗಳಾಗಲಿ, ಕತ್ತೆಗಳಾಗಲಿ, ಮೇಕೆಗಳಾಗಲಿ, ಎತ್ತುಗಳಾಗಲಿ ಅಥವಾ ಮನುಷ್ಯರೇ ಆಗಲಿ, ತಮ್ಮಲ್ಲಿ ಕ್ರಿಮಿಗಳು ಜನ್ಮ ನೀಡಲು ಸಮ್ಮತಿಸುವವೆ?
ಖಂಡಿತ ಇಲ್ಲ ಭಂತೆ.
ಹಾಗಿರುವಾಗಲು ಆ ಕ್ರಿಮಿಗಳೆಲ್ಲಾ ಹೇಗೆ ಹುಟ್ಟುತ್ತವೆ ಮತ್ತು ತಮ್ಮ ಸಂತತಿಯನ್ನು ಹೇಗೆ ಯಥೇಚ್ಛವಾಗಿ ಬೆಳೆಸುತ್ತವೆ?
ಪಾಪ ಕರ್ಮದ ಬಲದಿಂದ ಭಂತೆ.
ಹಾಗೆಯೇ ಮಹಾರಾಜ ತಥಾಗತರು ಪರಿನಿಬ್ಬಾಣ ಪಡೆದಿದ್ದರೂ ಸಹಾ ತಥಾಗತರ ಧಾತು ಬಲದಿಂದ ಮತ್ತು ತಥಾಗತರ ಜ್ಞಾನ ರತ್ನಬಲದಿಂದ ಮಹತ್ ಲಾಭವು ಸಿಗುತ್ತದೆ.
ಇದೇ ವಿಷಯದ ಬಗ್ಗೆ, ಇನ್ನೊಂದು ಉದಾಹರಣೆಯನ್ನು ನೀಡುವೆನು ಕೇಳಿ, ಓ ಮಹಾರಾಜ, ಮಾನವರಲ್ಲಿ ಹುಟ್ಟುವ 98 ಮೂಲ ರೋಗಗಳಿಗೆ ಜನರು ಅನುಮತಿ ನೀಡುವರೇ?
ಖಂಡಿತ ಇಲ್ಲ ಭಂತೆ.
ಹಾಗಿದ್ದರೂ ಆ ರೋಗಗಳು ಹೇಗೆ ಬರುತ್ತದೆ.
ತಮ್ಮ ಹಿಂದಿನ ಜನ್ಮಗಳ ಪಾಪ ವಿಪಾಕದಿಂದ.
ಆದರೆ ಮಹಾರಾಜ, ಹಿಂದಿನ ಜನ್ಮದ ಪಾಪ ವಿಪಾಕದಿಂದ ಈಗ ಇಲ್ಲಿ ದುಃಖಿಸುವುದಾದರೆ, ಫಲ ನೀಡಿರುವುದಾದರೆ, ಹಿಂದೆ ಇದ್ದ ತಥಾಗತರು ಪರಿನಿಬ್ಬಾಣ ಪಡೆದರೂ ಸಹಾ, ಅವರಿಗಾಗಿ ನೀಡುವ ದಾನ ಪೂಜೆಗಳು ವ್ಯರ್ಥವಾಗುವುದಿಲ್ಲ ಮಹತ್ ಫಲವನ್ನು ನೀಡುತ್ತವೆ.
ಈಗ ಇದೇ ವಿಷಯದ ಮೇಲೆ ಮತ್ತೊಂದು ಉದಾಹರಣೆ ನೀಡುವೆನು ಕೇಳಿ. ಓ ಮಹಾರಾಜ, ನಂದಕ ಎಂಬ ಯಕ್ಷನು ಸಾರಿಪುತ್ತರಿಗೆ ಹೊಡೆಯಲು ಹೋಗಿ ಭೂಮಿಯಿಂದ ನುಂಗಲ್ಪಟ್ಟ ವಿಷಯವನ್ನು ನೀವು ಕೇಳಿರಬೇಕಲ್ಲವೇ?
ಹೌದು ಭಂತೆ, ಜನಪ್ರಚಲಿತವಾಗಿರುವ ಈ ವಿಷಯ ಕೇಳಿದ್ದೇನೆ.
ಹಾಗಿದ್ದರೆ ಸಾರಿಪುತ್ತರವರು ಅದಕ್ಕೆ ಸಮ್ಮತಿಸಿದ್ದರೆ?
ಓ ಭಂತೆ, ಮಾನವರ ಮತ್ತು ದೇವತೆಗಳ ಲೋಕಗಳೆಲ್ಲಾ ನಾಶವಾಗಬಹುದು. ಸೂರ್ಯಚಂದ್ರರು ಭೂಮಿಯ ಮೇಲೆ ಬೀಳಬಹುದು, ಪರ್ವತರಾಜ ಸಿನೇರು ಕರಗಬಹುದು,  ಇವೆಲ್ಲಾ ಸಾಧ್ಯವಾಗಬಹುದು. ಆದರೆ ಸಾರಿಪುತ್ತರು ತಮ್ಮ ಸಹಜೀವಿಗೆ ಅಣು ನೋವನ್ನು ಬಯಸುವುದಿಲ್ಲ. ಏಕೆಂದರೆ ದ್ವೇಷಕ್ಕೆ ಕಾರಣವಾದ ಎಲ್ಲಾ ಸ್ಥಿತಿಗಳು ಅವರಲ್ಲಿ ನಿಶ್ಶೇಷವಾಗಿ ನಾಶವಾಗಿದೆ. ಅದಕ್ಕೆ ಕಾರಣವಾದ ಎಲ್ಲವೂ ತೆಗೆದುಹಾಕಲ್ಪಟ್ಟಿವೆ. ಭಂತೆ, ಆದ್ದರಿಂದ ಸಾರಿಪುತ್ತರು ಅವರ ಪ್ರಾಣ ತೆಗೆಯಲು ಬಂದರು ಸಹ ಕೋಪಗೊಳ್ಳುವುದಿಲ್ಲ.
ಆದರೆ ಓ ರಾಜ, ಸಾರಿಪುತ್ತರು ಕೋಪಗೊಳ್ಳದಿದ್ದರೂ ಸಹಾ ನಂದಕನು ಹೇಗೆ ಭೂಮಿಯಲ್ಲಿ ನುಂಗಲ್ಪಟ್ಟನು?
ತನ್ನ ಪಾಪಕೃತ್ಯಗಳ ಫಲವಾಗಿ.
ಅದೇರೀತಿ ಮಹಾರಾಜ, ಸಮ್ಮತಿಸದಿದ್ದರೂ ಅವರಿಗೆ ಮಾಡುವ ಕರ್ಮವೂ ಫಲ ನೀಡುವಂತೆ, ತಥಾಗತರು ಪರಿನಿಬ್ಬಾಣ ಪಡೆದು ಸ್ವೀಕರಿಸದಿದ್ದರೂ, ಸಹಾ ಅವರಿಗೆ ನೀಡುವ ದಾನ, ಪೂಜೆ ಫಲನೀಡುತ್ತದೆ. ನಂದಕನದಾದರೂ ಒಂದು ಪಾಪಕೃತ್ಯವಾಗಿತ್ತು. ಆದರೆ ತಥಾಗತರಿಗೆ ನೀಡುವ ಉಡುಗೊರೆ ಆತಿಥ್ಯದ ಫಲವೆಷ್ಟು ಯೋಚಿಸಿ.
ಓ ಮಹಾರಾಜ, ಎಷ್ಟು ಜನರನ್ನು ಆಗ ಭೂಮಿಯು ನುಂಗಿತ್ತು ತಿಳಿದಿದೆಯೇ?
ಹೌದು ಭಂತೆ, ಹಲವರನ್ನು ನುಂಗಿತೆಂದು ಕೇಳಿದ್ದೆನೆ.
ಹಾಗಾದರೆ ಹೇಳಿರಿ.
ಬ್ರಾಹ್ಮಣಸ್ತ್ರೀ ಚಿಂಚ, ಶಾಕ್ಯನಾದ ಸುಪ್ಪಬುದ್ಧ, ದೇವದತ್ತ, ನಂದಕಯಕ್ಷ ಮತ್ತು ನಂದ ಬ್ರಾಹ್ಮಣ ಈ ಐವರನ್ನು ಭೂಮಿ ನುಂಗಿತೆಂದು ಕೇಳಿದ್ದೇನೆ.
ಅವರು ಯಾರಿಗೆ ಅಪಚಾರವೆಸಗಿದ್ದರು?
ಭಗವಾನರಿಗೆ ಮತ್ತು ಅವರ ಶಿಷ್ಯರಿಗೆ.
ಹಾಗಾದರೆ ಭಗವಾನರಾಗಲಿ ಅಥವಾ ಅವರ ಶಿಷ್ಯರಾಗಲಿ ಇವರನ್ನು ನುಂಗಲಿ ಎಂದು ಅಪೇಕ್ಷೆಪಟ್ಟಿದ್ದರೆ?
ಖಂಡಿತ ಇಲ್ಲ ಭಂತೆ.
ಹಾಗಿರುವಾಗ ಓ ರಾಜ, ಪರಿನಿಬ್ಬಾಣ ಪಡೆದ ತಥಾಗತರಿಗೆ ಮಾಡಿದ ದಾನವು ನಿಷ್ಫಲವಾಗುವುದಿಲ್ಲ, ಮಹತ್ಫಲವಾಗುತ್ತದೆ.
ಪೂಜ್ಯ ನಾಗಸೇನರವರೆ, ನೀವು ಈ ಪ್ರಶ್ನೆಗೆ ಆಳವಾದ ಉತ್ತರನೀಡಿ ವಿವರಿಸಿದಿರಿ. ನೀವು ರಹಸ್ಯವಾದುದನ್ನು ತೆರೆದು ತೋರಿಸಿದಿರಿ. ಕಗ್ಗಂಟನ್ನು ಬಿಡಿಸಿದಿರಿ, ದಟ್ಟಡವಿಯನ್ನು ತೆರೆದ ಭಾಗವನ್ನಾಗಿಸಿದಿರಿ, ನಿರೋಧವನ್ನು ಎಸೆದಿರಿ, ತಪ್ಪು ಅಭಿಪ್ರಾಯವನ್ನು ಸುಳ್ಳೆಂದು ಸಾಬೀತು ಮಾಡಿದಿರಿ, ನಿಮ್ಮನ್ನೇನಾದರೂ ಪರಪಂಥಿಯರು ಚೇಡಿಸಿದರೆ ಅವರಿಗೆ ಸೋಲಿನ ಕತ್ತಲೆಯು ಕವಿಯುವುದು. ನೀವು ಖಂಡಿತವಾಗಿ ಎಲ್ಲಾ ಶಾಲೆಗಳ ನಾಯಕರಲ್ಲಿಯೇ ಶ್ರೇಷ್ಠರಾಗಿರುವಿರಿ.


2. ಸಬ್ಬನ್ಯುಭಾವ ಪನ್ಹೊ

ಭಂತೆ ನಾಗಸೇನ, ಬುದ್ಧರು ಸರ್ವಜ್ಞರೇ (ಸಬ್ಬಞ್ಞ)? (91)
ಹೌದು ಮಹಾರಾಜ, ಆದರೆ ಅವರ ಜ್ಞಾನದರ್ಶನವು ಸದಾ ನಿರಂತರವಾಗಿ ಅವರೊಂದಿಗೆ ಇರುತ್ತಿರಲಿಲ್ಲ. ಅವರ ಜ್ಞಾನದರ್ಶನವು ಪ್ರತಿಬಿಂಬಿಸುವಿಕೆಯನ್ನು (ಚಿಂತನೆಯನ್ನು) ಅವಲಂಬಿಸಿದೆ. ಆದರೆ ಅವರು ಯಾವುದೇ ವಿಷಯವನ್ನಾಗಲಿ ಅರಿಯಬೇಕೆನಿಸಿದಾಗ ಪ್ರತಿಬಿಂಬಿಸಿದಾಗ ಅದನ್ನೆಲ್ಲಾ ಅರಿಯುತ್ತಿದ್ದರು.
ಪ್ರತಿಬಿಂಬಿಸುವಿಕೆ (ಸತ್ಯಾನ್ವೇಷಣೆ) ಯಿಂದ ಸರ್ವಜ್ಞ ಪ್ರಾಪ್ತಿ ಆಗುವ ಹಾಗಿದ್ದರೆ ಬುದ್ಧರಿಗೆ ಸರ್ವಜ್ಞತೆಯು ಇರಲಿಲ್ಲ ಎಂದು ಹೇಳುತ್ತೇನೆ.
ಊಹಿಸಿ ಮಹಾರಾಜ, ನಿಮ್ಮಲ್ಲಿ ನೂರು ಬಂಡಿಗಳಷ್ಟು ಅಕ್ಕಿಯು ಹೊಟ್ಟಿನಲ್ಲಿವೆ ಮತ್ತು ಪ್ರತಿ ಬಂಡಿಯಲ್ಲಿ ಏಳೂವರೆ ಅಮ್ಮಣಗಳಿವೆ. ಈಗ ಯಾವುದೇ ವ್ಯಕ್ತಿಯು ಕ್ಷಣದಲ್ಲಿ ಇಡೀ ಬಂಡಿಗಳಲ್ಲಿ ಎಷ್ಟು ಲಕ್ಷ ಧಾನ್ಯಗಳಿವೆ ಎಂದು ಹೇಳಬಲ್ಲನೇ? ಒಂದು ಬಂಡಿಯಲ್ಲಿ 63660000 ಧಾನ್ಯಗಳಿವೆ. ಬುದ್ಧರು ಪ್ರತಿ ಧಾನ್ಯಗಳನ್ನು ಕ್ಷಣದಲ್ಲಿ ಪ್ರತ್ಯೇಕಿಸಬಲ್ಲರು. ಆ ಕ್ಷಣದಲ್ಲಿ ಅವರ ಮನಸ್ಸು ಪ್ರತಿಭಾವಂತ ಚಿತ್ತದ 7 ಪಟ್ಟು ಅರಿಯುತ್ತದೆ.
ಏಳು ಬಗೆಯ ಚಿತ್ತಗಳಿವೆ ಮಹಾರಾಜ, ಅವೆಂದರೆ: ಮೊದಲನೇ ವರ್ಗದವರಲ್ಲಿ ಲೋಭ, ದ್ವೇಷ, ಮೋಹ, ಮಿಥ್ಯಾಕರ್ಮದ, ತ್ರಿಕರಣಗಳಲ್ಲಿ ಸುಶಿಕ್ಷತೆಯಿಲ್ಲದ, ಸಾಮಾನ್ಯರಲ್ಲಿ ಚಿಂತಿಸುವ ಶಕ್ತಿಯು ಕಷ್ಟಕರವಾಗಿ ನಡೆಯುತ್ತದೆ ಮತ್ತು ಕ್ರಿಯೆಯು ನಿಧಾನವೇ ಏಕೆ ಹೇಗೆ? ಏಕೆಂದರೆ ಅವರ ಮನಸ್ಸುಗಳು ಪಳಗಿಲ್ಲ, ಅವು ಹೇಗೆ ಕಾಣುತ್ತದೆ ಅಂದರೆ ಬೃಹತ್ ಬಂಬು ಮರಗಳ ರೀತಿ ನಿಧಾನ ಮತ್ತು ಭಾರವಾದ ಚಲನೆಗಳಂತೆ ಇರುತ್ತದೆ. ಹೇಗೆ ಬಂಬು ಮರಗಳ ರೆಂಬೆಗಳು ಪರಸ್ಪರ ಬೆಳೆದು, ತೊಡಕಾಗಿ ನಿಧಾನವಾಗಿ ಎಳೆದಾಡುವುದೋ ಹಾಗೆಯೇ ಸಾಮಾನ್ಯರ ಮನಸ್ಸುಗಳು ಭಾರವಾಗಿ ಮತ್ತು ನಿಧಾನವಾಗಿ ಇರುತ್ತವೆ. ಹೀಗೇಕೆ? ಏಕೆಂದರೆ ಮಿಥ್ಯಗ್ರಹಿಕೆಗಳ ತೊಡಕಾದ ಪೇಚುಗಳು ಇರುವುದರಿಂದಾಗಿ. ಇದು ಒಂದು ಬಗೆಯ ಚಿತ್ತವಾಗಿದೆ.
ಓ ಮಹಾರಾಜ, ಎರಡನೆಯ ವರ್ಗದ ಚಿತ್ತವೆಂದರೆ ಸೋತಪನ್ನರು, ಅವರಿಗೆ ದುರ್ಗತಿಯ ದ್ವಾರಗಳು ಮುಚ್ಚಿರುತ್ತದೆ. ಅವರಲ್ಲಿ ಸಮ್ಮಾದೃಷ್ಟಿಗಳಿರುತ್ತವೆ. ಅವರು ಭಗವಾನರ ಧಮ್ಮವನ್ನು ಹಿಡಿದಿರುತ್ತಾರೆ. ಅವರ ಚಿಂತನಾಶಕ್ತಿಯು ಮೂರು ತಡೆಗಳನ್ನು ಉಳ್ಳವರಿಗೆ (ಸತ್ಕಾಯ ದೃಷ್ಟಿ, ಸಂದೇಹ, ಮೂಢ ಆಚರಣೆಗಳು) ಹೋಲಿಸಿದರೆ ವೇಗವಾದದ್ದು ಮತ್ತು ಸುಲಭವಾಗಿ ಕಾರ್ಯಗತವಾಗುವಂತಹುದು. ಆದರೆ ಅವರಿಗಿಂತ ಉನ್ನತ ಚಿತ್ತದವರಿಗೆ ಹೋಲಿಸಿದರೆ ಕಾರ್ಯಗತವಾಗಲು ಕಷ್ಟಕರವು ಮತ್ತು ನಿಧಾನವಾಗಿ ವತರ್ಿಸುವಂತಹುದು ಆಗಿದೆ ಮತ್ತು ಏಕೆ, ಹೇಗೆ? ಏಕೆಂದರೆ ಅವರ ಚಿತ್ತಗಳು ಆ ಮೂರು ಹಂತಗಳಿಗೆ ಹೋಲಿಸಿದರೆ ಸ್ಪಷ್ಟವಾಗಿರುತ್ತದೆ. ಆದರೂ ಉನ್ನತ ಚಿತ್ತದವರಿಗೆ ಹೋಲಿಸಿದರೆ ಅವರಲ್ಲಿ ಕೊರತೆಯಿರುವುದು. ಅದು ಹೇಗೆಂದರೆ ಬೃಹತ್ ಬಿದಿರಿನ ಟೊಂಗೆಯು ತನ್ನ ಮೂರನೆಯ ಗಂಟಿನವರೆಗೆ ಚೆನ್ನಾಗಿ ಚಲನೆ ಮಾಡುವುದು. ಆದರೆ ನಂತರದ ರೆಂಬೆಗಳು ತೊಡಕಿನಲ್ಲಿ ಇರುವುವು. ಒಂದರಲ್ಲಿ ಇನ್ನೊಂದು ಸೇರಿ ಚಲನೆಗೆ ಕಷ್ಟವಾಗಿರುವುದು. ಮೃದುವಾದ ಕೊಂಬೆಯನ್ನು ಎಳೆದಾಗ ಅದು ಸುಲಭವಾಗಿ ಬರುತ್ತದೆ. ಆದರೆ ಎತ್ತರದ ಕೊಂಬೆಗಳು ಗಂಟುಗಳಲ್ಲಿ ಸಿಲುಕಿ ಮೊಂಡಾಗಿರುತ್ತದೆ. ಇವು ಎರಡನೇ ರೀತಿಯ ಚಿತ್ತಗಳಾಗಿವೆ.
ಈ ರೀತಿಯಾಗಿ ಮೂರನೇ ವರ್ಗದ ಚಿತ್ತವನ್ನು ಗುರುತಿಸಬಹುದು. ಓ ಮಹಾರಾಜ, ಅವರೆಂದರೆ ಸಕದಾಗಾಮಿಗಳಾಗಿದ್ದಾರೆ. ಅವರಲ್ಲಿ ರಾಗ, ದ್ವೇಷ ಮತ್ತು ಮೋಹಗಳು ಕ್ಷೀಣವಾಗಿರುತ್ತದೆ, ಅಲ್ಪವಾಗಿರುತ್ತದೆ. ಅವರ ಚಿಂತನಾ ಶಕ್ತಿಗಳು ಕೆಳಮಟ್ಟದ ಐದು ಹಂತಗಳಿಗೆ ಹೋಲಿಸಿದರೆ ವೇಗವಾಗಿ ಕ್ರಿಯೆಗಳಿಗೆ ಒಳಗಾಗುವುವು ಮತ್ತು ಸುಲಭವಾಗಿ ಕ್ರಿಯೆ ಮಾಡುವವು, ಆದರೆ ಉನ್ನತ ಹಂತದ ಚಿತ್ತಗಳಿಗೆ ಹೋಲಿಸಿದರೆ ಅವು ಕಷ್ಟಕರವಾಗಿ ಕಾರ್ಯ ನಿರ್ವಹಿಸುವವು ಮತ್ತು ನಿಧಾನವಾಗಿ ಕ್ರಿಯೆ ಮಾಡುವವು ಮತ್ತು ಹೀಗೆ ಏಕೆ? ಏಕೆಂದರೆ ಆ ಐದು ಹಂತಗಳಿಗೆ ಹೋಲಿಸಿದರೆ ಅವರ ಚಿತ್ತಗಳು ಸ್ಪಷ್ಟವಾಗಿವೆ. ಆದರೆ ಉನ್ನತ ಹಂತದ ಚಿತ್ತಗಳಿಗೆ ಹೋಲಿಸಿದಾಗ ಅವುಗಳಲ್ಲಿ ಕೊರತೆ ಕಾಣುವುದರಿಂದಾಗಿ ಹೀಗಾಗುತ್ತದೆ,ಇದು ಹೇಗಿರುತ್ತದೆ ಎಂದರೆ ಬೃಹತ್ ಬಿದಿರಿನ ಕೊಂಬೆಯೊಂದು ಐದನೆಯ ಗಂಟಿನವರೆಗೆ ಅದರ ಚಲನೆಯು ಚೆನ್ನಾಗಿರುತ್ತದೆ. ಆದರೆ ಮುಂದಿನ ಮೇಲ್ಭಾಗದ ರೆಂಬೆಗಳು ಗಂಟುಬಿದ್ದಿರುವುದರಿಂದಾಗಿ, ಮೊಂಡಾಗಿರುವುದ ರಿಂದಾಗಿ ಪೇಚಿಗೆ ಬಿದ್ದಿರುವುದರಿಂದಾಗಿ, ಮೃದುವಾದ ರೆಂಬೆಯನ್ನು ಎಳೆದಾಗ ಗಂಟಿನವರೆಗೆ ಸುಲಭವಾಗಿ ಚಲಿಸುವುದು. ಆದರೆ ನಂತರದ ಮೇಲ್ಭಾಗದಲ್ಲಿ ಅದು ಕಷ್ಟಕರವಾಗಿ ಚಲಿಸುವುದರಿಂದಾಗಿ ಇದು ಮೂರನೆಯ ವರ್ಗದ ಚಿತ್ತಗಳಾಗಿವೆ.
ಓ ಮಹಾರಾಜ, ಅನಾಗಾಮಿಗಳೇ ನಾಲ್ಕನೆಯ ವರ್ಗದವರು. ಅವರಲ್ಲಿ ಐದು ಬಂಧನಗಳು ಪೂರ್ಣವಾಗಿ ನಾಶವಾಗಿರುತ್ತದೆ. ಅದರ ಚಿಂತನೆ ಶಕ್ತಿಯು ಹತ್ತು ಹಂತಗಳಿಗೆ ಹೋಲಿಸಿದರೆ ವೇಗವಾಗಿ ಕ್ರಿಯೆ ವಹಿಸುತ್ತದೆ ಮತ್ತು ಸುಲಭವಾಗಿ ಕಾರ್ಯ ಮಾಡುತ್ತದೆ. ಆದರೆ ಅದಕ್ಕಿಂತ ಹೆಚ್ಚಿನ ಹಂತಗಳಲ್ಲಿ ಕಷ್ಟಕರವಾಗಿ ಕಾರ್ಯವಹಿಸುತ್ತದೆ. ಹಾಗು ನಿಧಾನವಾಗಿ ಕ್ರಿಯೆವಹಿಸುತ್ತದೆ ಮತ್ತೆ ಹೀಗೇಕೆ? ಏಕೆಂದರೆ ಆ ಹತ್ತು ಹಂತಗಳಲ್ಲಿ ಅವರ ಮನಸ್ಸು ಸ್ಪಷ್ಟವಾಗಿರುತ್ತದೆ ಮತ್ತು ಉನ್ನತ ಹಂತಗಳಲ್ಲಿ ಅವರಿಗೆ ಕೊರತೆಯಿರುತ್ತದೆ, ಇದು ಹೇಗಿರುತ್ತದೆ ಎಂದರೆ ಬೃಹತ್ ಬಿದಿರಿನ ರೆಂಬೆಯ ಹತ್ತನೇ ಗಂಟಿನವರೆಗೂ ಸುಲಭವಾಗಿ ಚಲನೆ ಮಾಡುತ್ತದೆ. ಆದರೆ ನಂತರದ ಶಾಖೆಗಳಲ್ಲಿ ಗಂಟುಗಳು ಬಿದ್ದಿರುತ್ತವೆ, ಸಿಕ್ಕಿಕೊಂಡಿರುತ್ತದೆ. ಇದೇ ನಾಲ್ಕನೆಯ ವರ್ಗದ ಚಿತ್ತಗಳಾಗಿವೆ.
ಇವುಗಳಿಂದ ಐದನೆಯ ವರ್ಗವನ್ನು ಪ್ರತ್ಯೇಕಿಸಬಹುದು. ಓ ಮಹಾರಾಜ, ಅವರೇ ಅರಹಂತರು. ಅವರಲ್ಲಿ ಲೋಭ, ದ್ವೇಷ ಮತ್ತು ಮೋಹಗಳು ನಾಶವಾಗಿರುತ್ತದೆ. ಅವರಲ್ಲಿನ ಕಲೆಗಳು ತೊಳೆದು ಹೋಗಿರುತ್ತದೆ. ಅವರ ಕ್ಲೇಷಗಳು ಪಕ್ಕಕ್ಕೆ ಎಸೆಯಲಾಗಿದೆ. ಅವರು ಶ್ರೇಷ್ಠ ಜೀವನವನ್ನು ನಡೆಸಿದ್ದಾರೆ ಮತ್ತು ಮಹತ್ತರವಾದ ಕಾರ್ಯವನ್ನು ಸಾಧಿಸಿದ್ದಾರೆ. ಪ್ರತಿ ಭಾರವನ್ನು ಪಕ್ಕಕ್ಕೆ ಇಟ್ಟಿದ್ದಾರೆ. ಮತ್ತು ಕುಶಲದ ತುತ್ತತುದಿಯನ್ನು ಏರಿದ್ದಾರೆ, ಅವರಲ್ಲಿನ ಎಲ್ಲಾ ಬಂಧನಗಳು ಮತ್ತು ಭವಿಷ್ಯದ ಎಲ್ಲಾಬಗೆಯ ತೀವ್ರ ಬಯಕೆಗಳು ಚೂರು ಚೂರಾಗಿವೆ. ಅವರು ಪಟಿಸಂಭಿದಾ ಧ್ಯಾನ ಪ್ರಾಪ್ತಿ ಮಾಡಿರುತ್ತಾರೆ. ಅವರ ಚಿತ್ತವು ಪರಿಶುದ್ಧ ಆಗಿರುತ್ತದೆ. ಹೀಗಾಗಿ ಅವರ ಚಿಂತನಾಶಕ್ತಿಗಳು ವೇಗವಾಗಿರುತ್ತದೆ ಮತ್ತು ಸುಲಭವಾಗಿ ಕಾರ್ಯವಹಿಸುತ್ತಾರೆ. ಆದರೂ ಸಹಾ ಪಚ್ಚೇಕ ಬುದ್ಧರ ಪರಿಮಿತಿಗೆ ಹೋಲಿಸಿದಾಗ ಅವರ ಕಾರ್ಯಗಳು ಆ ಮಟ್ಟದಲ್ಲಿ ಕಷ್ಟಕರವಾಗಿರುತ್ತವೆ ಮತ್ತು ನಿಧಾನವಾಗಿರುತ್ತವೆ. ಹೀಗೇಕೆ? ಏಕೆಂದರೆ ಅವರು ಶ್ರಾವಕರ (ಅರಹಂತರ) ಕ್ಷೇತ್ರದ ಒಳಗೆ ಪರಿಶುದ್ಧರಾಗಿರುತ್ತಾರೆ. ಆದರೆ ಪ್ರತ್ಯೇಕ ಬುದ್ಧರಷ್ಟು ಬೆಳವಣಿಗೆ ಹೊಂದಿರುವುದಿಲ್ಲ. ಇದು ಹೇಗಿರುತ್ತದೆ ಎಂದರೆ ಬೃಹತ್ ಬಿದಿರಿನ ಗಂಟುಗಳಿಂದ ಉದಯಿಸುವ ಎಲ್ಲಾ ಶಾಖೆಗಳನ್ನು ಕತ್ತರಿಸಿ ಹಾಕಿರುತ್ತಾರೆ. ಅಂತಹ ಬಿದಿರಿನ ಚಲನೆಯಂತೆ ಸುಲಭವಾಗಿ ಮತ್ತು ಕ್ಷಿಪ್ರವಾಗಿ, ಮೃದುವಾಗಿ ಚಲಿಸುತ್ತಿರುತ್ತದೆ. ಏಕೆಂದರೆ ಅದರ ಅಭಿವೃದ್ಧಿಗೆ ಯಾವುದೇ ಪ್ರತಿಬಂಧಕವಿರುವುದಿಲ್ಲ, ಅಡ್ಡಿಯಿರುವುದಿಲ್ಲ. ಇದೇ ಪಂಚಮ ವರ್ಗವಾಗಿದೆ.
ಇವುಗಳಿಂದ ಆರನೆಯ ವರ್ಗವು ವಿಭಿನ್ನವಾಗಿರುತ್ತದೆ. ಓ ಮಹಾರಾಜ, ಅವರೇ ಪಚ್ಚೇಕ (ಪ್ರತ್ಯೇಕ) ಬುದ್ಧರು. ಅವರು ಕೇವಲ ತಮಗೆ ಮಾತ್ರ ಅವಲಂಬಿಸಿರುತ್ತಾರೆ, ಅವರು ಯಾವ ಗುರುವಿನ ಆಶ್ರಯ ಹೊಂದಿರುವುದಿಲ್ಲ. ಒಂಟಿಯಾಗಿ ಚಲಿಸುವ ಖಡ್ಗಮೃಗದಂತೆ ಏಕಾಂಗಿಯಾಗಿ ವಾಸಿಸುವರು. ಅವರ ಜೀವನವು ಉನ್ನತವಾಗಿರುತ್ತದೆ. ಅವರ ಚಿತ್ತವು ಎಲ್ಲಾರೀತಿಯ ಕಲೆಗಳಿಂದ ಶುದ್ಧವಾಗಿರುವುದು. ಅವರ ಚಿಂತನ ಶಕ್ತಿಯು (ತಮ್ಮ ಕ್ಷೇತ್ರದ ಪರಿಧಿಯೊಳಗೆ) ವೇಗವಾಗಿ ಕ್ರಿಯೆವಹಿಸುತ್ತದೆ ಮತ್ತು ಸುಲಭವಾಗಿ ಕಾರ್ಯ ಮಾಡುತ್ತದೆ. ಆದರೆ ಸಮ್ಮಾ (ಪರಿಪೂರ್ಣ) ಸಂಬುದ್ಧರಿಗೆ (ಸಮ್ಮಾಸಂಬುದ್ಧರು ಸಹಾ ಏಕಾಂಗಿಯಾಗಿ, ಸ್ವಯಂ ಜ್ಞಾನ ಪ್ರಾಪ್ತಿಗಳಿಸಿರುತ್ತಾರೆ. ಅಷ್ಷೇ ಅಲ್ಲದೆ ಪರರನ್ನು ಜ್ಞಾನೋದಯಗೊಳಿಸುತ್ತಾರೆ) ಹೋಲಿಸಿದಾಗ ಅವರ ಕ್ರಿಯೆಗಳು ಕಷ್ಟಕರವಾಗಿ ಹಾಗು ನಿಧಾನದಂತೆ ಗೋಚರವಾಗುತ್ತದೆ. ಹೀಗೇಕೆ? ಏಕೆಂದರೆ ತಮ್ಮ ಕ್ಷೇತ್ರದ ಪರಿಧಿವರೆಗೆ ಅವರು ಪರಿಶುದ್ಧರಾಗಿರುತ್ತಾರೆ. ಆದರೆ ಸರ್ವಜ್ಞ ಸಮ್ಮಾ ಸಂಬುದ್ಧರ ಕ್ಷೇತ್ರವು ಸೀಮಾತೀತವಾಗಿ ಎಲ್ಲಾಬಗೆಯ ಪರಿಧಿಗಳನ್ನು ದಾಟಿದೆ. ಹೇಗೆಂದರೆ ಓ ಮಹಾರಾಜ, ಒಬ್ಬ ಆಳವಲ್ಲದ ಝರಿಯನ್ನು ಹಗಲಲ್ಲಾಗಲೀ ಅಥವಾ ರಾತ್ರಿಯಲ್ಲಾಗಲಿ, ಭಯರಹಿತನಾಗಿ ಇಚ್ಛಾಶಕ್ತಿಯಿಂದ ದಾಟುತ್ತಾನೆ. ಆದರೆ ಬೃಹತ್ ಸಮುದ್ರವನ್ನು ದೃಷ್ಟಿಸಿದಾಗ ಅದರ ಆಳ ಮತ್ತು ಅಗಲವನ್ನು ಹಾಗು ನಿರಂತರ ಚಲನೆಯನ್ನು ಕಂಡು ಆತನು ದಾಟಲು ಹಿಂದುಮುಂದು ನೋಡುತ್ತಾನೆ, ಭಯದಿಂದ ಆತನು ದಾಟಲು ಶ್ರಮಪಡುವುದಿಲ್ಲ. ಏಕೆ? ಏಕೆಂದರೆ ತನ್ನ ಬಗ್ಗೆ ಕಾಳಜಿ ಹೊಂದಿರುವುದರಿಂದಾಗಿ ಮತ್ತು ಅಪರಿಮಿತ ಸಾಗರದಿಂದಾಗಿ. ಇದೇ ಅರನೆಯ ವರ್ಗದ ಚಿತ್ತಗಳಾಗಿವೆ.
ಇವುಗಳಿಂದ ಏಳನೆಯ ವರ್ಗವು ವಿಶಿಷ್ಟವಾಗಿ ಪ್ರಾಮುಖ್ಯತೆ ಪಡೆದಿದೆ. ಓ ಮಹಾರಾಜ, ಸಮ್ಮಾಸಂಬುದ್ಧರಿಗೆ ಎಲ್ಲಾ ಜ್ಞಾನವಿರುತ್ತದೆ, ದಶಬಲಗಳನ್ನು ಒಳಗೊಂಡಿರುವವರು, ನಾಲ್ಕುರೀತಿಯ ಶ್ರದ್ಧೆಯುಳ್ಳವರು, ಹದಿನೆಂಟು ಬಗೆಯ ಅಸಮಾನ್ಯ ಲಕ್ಷಣಗಳಿಂದ ಕೂಡಿದವರು. ಅವರ ಪ್ರಭುತ್ವಕ್ಕೆ ಪರಿಮಿತಿಯಿಲ್ಲ. ಅವರಲ್ಲಿ ಯಾವ ಅಂಟುವಿಕೆಯಾಗಲಿ, ರಹಸ್ಯವಾಗಲಿ ಇಲ್ಲ. ಅವರ ಚಿಂತನಶಕ್ತಿಯು ಪ್ರತಿ ಅಂಶದಲ್ಲೂ ಕ್ಷಿಪ್ರವಾಗಿ ಕ್ರಿಯೆ ವಹಿಸುತ್ತದೆ. ಹಾಗು ಸುಲಭವಾಗಿ ಕಾರ್ಯನಿರ್ವಹಿಸುತ್ತದೆ. ಊಹಿಸಿ ಮಹಾರಾಜ, ಒಂದು ಬಾಣವು ಚೆನ್ನಾಗಿ ಸುಟ್ಟು, ತುಕ್ಕಿಲ್ಲದ ಪೂರ್ಣವಾಗಿ ನುಣುಪಾದ, ಚೂಪಾದ, ನೇರವಾದ, ಡೊಂಕಿಲ್ಲದ, ಲೋಪವಿಲ್ಲದ ಅಂತಹ ಬಾಣವನ್ನು ಪ್ರಬಲವಾದ ಬಿಲ್ಲಿನಿಂದ ಬಲಿಷ್ಠವಾದ ವ್ಯಕ್ತಿಯು ಉತ್ಕೃಷ್ಟವಾದ ಲೈನಿನ್ ಅಥವಾ ಹತ್ತಿ ಅಥವಾ ಉಣ್ಣೆ ಬಟ್ಟೆಗೆ ಗುರಿಯಾಗಿ ಬಿಟ್ಟರೆ ಆ ಬಾಣವು ತಡಮಾಡುವುದೇ ಅಥವಾ ಕಷ್ಟಕರವಾಗಿ ಚಲಿಸುತ್ತದೆಯೇ?
ಖಂಡಿತ ಇಲ್ಲ ಭಂತೆ, ಏಕೆಂದರೆ ಆ ಬಟ್ಟೆಯು ಅತ್ಯಂತ ತೆಳುವಾಗಿದೆ ಹಾಗು ಬಾಣವು ಉತ್ಕೃಷ್ಟವಾಗಿದೆ ಮತ್ತು ಬಲಯುತವಾಗಿ ಬಿಡಲಾಗಿದೆ.
ಈ ರೀತಿಯಾಗಿ ಮಹಾರಾಜ, ಬುದ್ಧರ ಚಿಂತನಾಶಕ್ತಿಯಾಗಿರುತ್ತದೆ. ಅವರ ಮನಸ್ಸು ಅತ್ಯಂತ ವೇಗವಾಗಿ ಕಾರ್ಯಗತವಾಗುತ್ತದೆ. ಹಾಗು ಸುಲಭವಾಗಿ ಕ್ರಿಯೆ ವಹಿಸುತ್ತದೆ. ಏಕೆಂದರೆ ಅವರ ಚಿತ್ತವೂ ಸರ್ವತ್ರವಾಗಿ ಪರಿಶುದ್ಧವಾಗಿದೆ, ಇದೇ ಏಳನೇಯ ವರ್ಗದ ಚಿತ್ತವಾಗಿದೆ.
ಓ ಮಹಾರಾಜ, ಇವುಗಳಲ್ಲಿ ಕೊನೆಯದಾಗಿರುವ ಸಮ್ಮಾಸಂಬುದ್ಧರ ಚಿಂತನಶಕ್ತಿಯು ಮಿಕ್ಕ ಎಲ್ಲಕ್ಕಿಂತ ಅತಿಶಯವಾಗಿದೆ ಮತ್ತು ಸ್ಪಷ್ಟವಾಗಿದೆ ಮತ್ತು ನಮ್ಮ ನೋಟಕ್ಕಿಂತ ಮೀರಿದ ಉತ್ಕೃಷ್ಟ ಗುಣಮಟ್ಟದ್ದಾಗಿದೆ. ಏಕೆಂದರೆ ಭಗವಾನರ ಚಿತ್ತವು ಅತ್ಯಂತ ಸ್ಪಷ್ಟವಾಗಿದೆ, ಹಾಗು ಕ್ರಿಯಾತ್ಮಕವಾಗಿದೆ ಎಂದರೆ ಮಹಾರಾಜ, ಅವರು ಯಮಕ ಪವಾಡವನ್ನು ಪ್ರದಶರ್ಿಸಬಲ್ಲರು. ಇದರಿಂದ ನಾವು ಅರಿಯಬಹುದು ಓ ಮಹಾರಾಜ, ಅವರ ಮಾನವ ಶಕ್ತಿಗಳು ಎಷ್ಟು ಸ್ಪಷ್ಟ ಹಾಗು ಕ್ರಿಯಾಕಾರಿ ಎಂದು ಅರಿಯಬಹುದು. ಆ ಪರಮೋತ್ತರ ಅತೀಂದ್ರಿಯ ಪವಾಡಗಳ ಕೇವಲ ಬುದ್ಧ ಮಾಡುವಂತಹುದು, ಅದು ತಕರ್ಾತೀತವಾಗಿದೆ. ಅವರ ಆ ಅತೀಂದ್ರಿಯ ಪವಾಡಗಳನ್ನು ಗಣಿಕೆ ಮಾಡಲಾಗುವದಿಲ್ಲ. ಲೆಕ್ಕಾಚಾರ ಮಾಡಲಾಗುವುದಿಲ್ಲ ಅಥವಾ ಭಾಗಿಸಲಾಗುವುದಿಲ್ಲ. ಅಥವಾ ಪತ್ಯೇಕಿಸಲಾಗುವುದಿಲ್ಲ. ಓ ಮಹಾರಾಜ, ಭಗವಾನರ ಜ್ಞಾನವು ಪ್ರತಿಬಿಂಬಿಸುವಿಕೆಗೆ ಅವಲಂಬಿತವಾಗಿದೆ. ಈ ರೀತಿಯಾಗಿ ಅವರು ಗಮನಹರಿಸಿದಾಗ ಅವರು ಅರಿಯಬೇಕಾದುದೆಲ್ಲಾ ಅರಿಯಬಹುದು ಮತ್ತು ಆ ಅದ್ಭುತವನ್ನು ಖಚಿತವಾಗಿ ನುಡಿಯಲು ತರ್ಕವು ಸಾಕಾಗುವುದಿಲ್ಲ ಓ ಮಹಾರಾಜ. ಕೆಲವು ಅತೀಂದ್ರಿಯ ಪವಾಡಗಳು ಕೇವಲ ಸಮ್ಮಾ ಸಂಬುದ್ಧರಿಂದಲೇ ಆಗುವುದು. ಅವು ತಕರ್ಾತೀತವಾದವು. ಗಣಕೆಗೆ ಮೀರಿದ್ದು. ಲೆಕ್ಕಾಚಾರಕ್ಕೆ ಮೀರಿದ್ದು, ಭಾಗಿಸಲಾಗದ್ದು, ಪ್ರತ್ಯೇಕಿಸಲಾಗದ್ದು, ಓ ಮಹಾರಾಜ, ಭಗವಾನರ ಸರ್ವಜ್ಞತ್ವವು ಪ್ರತಿಬಿಂಬಿಸುವಿಕೆಗೆ ಅವಲಂಬಿತವಾಗಿದೆ, ಅದರಿಂದಾಗಿ ಅವರು ಏನೆಲ್ಲವನ್ನು ಅರಿಯುತ್ತಾರೆ. ಅವರು ಎಷ್ಟು ಸುಲಭವಾಗಿ ಅರಿಯುತ್ತಾರೆ ಎಂದರೆ ಒಬ್ಬ ಮನುಷ್ಯ ಒಂದು ಕೈಯಿಂದ ಇನ್ನೊಂದು ಕೈಗೆ ಏನಾದರೂ ವಗರ್ಾವಣೆ ಮಾಡುವಂತೆ ಅಥವ ತೆರೆದ ಬಾಯಿಂದ ಏನಾದರೂ ಹೇಳುವಂತೆ ಅಥವಾ ಬಾಯಲ್ಲಿನ ಆಹಾರವನ್ನು ನುಂಗುವಂತೆ ಅಥವಾ ಮುಚ್ಚಿರುವ ಕಣ್ಣುಗಳನ್ನು ತೆರೆಯುವಂತೆ ಅಥವಾ ತೆರೆದ ಕಣ್ಣುಗಳನ್ನು ಮುಚ್ಚುವಂತೆ ಅಥವಾ ಮಡಚಿರುವ ಕೈಯನ್ನು ತೆರೆಯುವಂತೆ ಅಥವಾ ನೇರವಾಗಿರುವ ಕೈಯನ್ನು ಮಡಚುವಂತಹ ಕಾರ್ಯಗಳಿಗಿಂತಲೂ ವೇಗವಾಗಿ ಅವೆಲ್ಲಕ್ಕಿಂತ ಸುಲಭವಾಗಿ ಅವರು ಸತ್ಯಗಳನ್ನು ಅರಿಯುತ್ತಾರೆ. ಆರ್ಯ ಸತ್ಯಗಳ ವಿನಃ ಬೇರೆಯದನ್ನು ಅರಿಯಲು ಪ್ರತಿಬಿಂತಿಸಬೇಕಾಗುತ್ತದೆ.
ಆದರೆ ಪೂಜ್ಯ ನಾಗಸೇನ, ಪ್ರತಿಬಿಂಬಿಸುವಿಕೆಯು ಅನ್ವೇಷಣೆಯ ಉದ್ದೇಶಕ್ಕಾಗಿ ಬಳಸುತ್ತಾರೆ. ಬನ್ನಿ, ತರ್ಕಬದ್ಧವಾಗಿ ಇದನ್ನು ನನಗೆ ಪರಿಹರಿಸಿರಿ.
ಊಹಿಸಿ ಮಹಾರಾಜ, ಒಬ್ಬ ಶ್ರೀಮಂತನಿದ್ದಾನೆ. ಆತನಲ್ಲಿ ಅಪಾರ ಆಸ್ತಿ, ಐಶ್ವರ್ಯವಿರುತ್ತದೆ. ಆತನಲ್ಲಿ ಚಿನ್ನ, ಬೆಳ್ಳಿ, ಮತ್ತಿತರ ಐಶ್ವರ್ಯ ರಾಶಿಯಿರುತ್ತದೆ. ಆತನ ಉಗ್ರಾಣದಲ್ಲಿ ಎಲ್ಲಾಬಗೆಯ ಧಾನ್ಯ ಬೆಳೆಗಳಾದ ಗೋಧಿ, ಅಕ್ಕಿ, ಭತ್ತ, ಬಾರ್ಲಿ, ಒಣಧಾನ್ಯಗಳು, ಎಣ್ಣೆ ಬೀಜಗಳು, ಬೇಳೆಗಳು, ಕಾಳುಗಳು, ಬೀಜಗಳು, ಎಣ್ಣೆ, ತುಪ್ಪ, ಬೆಣ್ಣೆ, ಹಾಲು, ಮೊಸರು, ಜೇನು, ಸಕ್ಕರೆ, ಬೆಲ್ಲ ಇತ್ಯಾದಿ ಇರುತ್ತದೆ. ಅವೆಲ್ಲವನ್ನು ಆತನು ನಾನಾಬಗೆಯ ಪಾತ್ರೆಗಳಲ್ಲಿ ಇಟ್ಟಿರುತ್ತಾನೆ. ಈಗ ಯಾರಾದರೂ ಯಾತ್ರಿಕರು ಆತಿಥ್ಯಕ್ಕೆ ಬಂದಾಗ ಮನೆಯಲ್ಲಿ ಸಿದ್ಧಪಡಿಸಿದ್ದ ಆಹಾರವೆಲ್ಲವೂ ಮುಗಿದಿರುತ್ತದೆ. ಆಗ ಶ್ರೀಮಂತ ಉಗ್ರಾಣಕ್ಕೆ ಬಂದು, ನಂತರ ಆಹಾರವನ್ನು ಸಿದ್ಧಪಡಿಸಿ ಬಡಿಸುತ್ತಾನೆ. ಅವರು ಬಂದಾಗ ಸಿದ್ಧವಾಗಿರದೆ, ನಂತರ ಸಿದ್ಧಪಡಿಸಿ ಬಡಿಸಿದ ಮಾತ್ರಕ್ಕೆ ಆತನು ಬಡವನೆಂದು ಕರೆಸಿಕೊಳ್ಳವುದು ನ್ಯಾಯವೇ?
ಖಂಡಿತ ಇಲ್ಲ ಭಂತೆ, ಚಕ್ರವತರ್ಿಗಳ ಅರಮನೆಯಲ್ಲಿ ಸಹಾ ಅಕಾಲದಲ್ಲಿ ಬಂದಾಗ ಆಹಾರ ಸಿದ್ಧವಾಗಿರುವುದಿಲ್ಲ. ಇನ್ನು ಸಾಮಾನ್ಯರಲ್ಲಿ ಹೇಳುವುದೇನಿದೆ. ಕೇವಲ ಇಷ್ಟಕ್ಕೆ ಬಡವನೆನ್ನಲಾಗದು, ಆತ ಶ್ರೀಮಂತನೇ ಆಗಿದ್ದಾನೆ.
ಅದೇರೀತಿಯಲ್ಲಿ ಮಹಾರಾಜ, ತಥಾಗತರು ಸರ್ವಜ್ಞತ್ವವು ಪ್ರತಿಬಿಂಬಿಸಿದಾಗ ಅರಿಯಲ್ಪಡುತ್ತದೆ. ಆದರೆ ಏನೆಲ್ಲಾವನ್ನು ಅರಿಯಬಹುದು ಊಹಿಸಿ ಮಹಾರಾಜ. ಒಂದು ಫಲಭರಿತ ಮರವಿರುತ್ತದೆ. ಆದರೆ ಅದರಿಂದ ಯಾವುದೇ ಫಲವು ನೆಲಕ್ಕೆ ಬಿದ್ದಿರುವುದಿಲ್ಲ. ಅಷ್ಟು ಮಾತ್ರಕ್ಕೆ ಅದನ್ನು ಬಂಜೆ ಮರವೆಂದು ಕರೆಯಲಾಗುವುದಿಲ್ಲ, ಕರೆಯಲಾಗುವುದೇ?
ಇಲ್ಲ ಭಂತೆ, ನೆಲಕ್ಕೆ ಬಿದ್ದಿರುವುದು ಹಣ್ಣಿನ ಲಕ್ಷಣವೇ ಆದರೂ ಮರವನ್ನು ಫಲರಹಿತ ಎಂದು ಕರೆಯಲಾಗುವುದಿಲ್ಲ. ಹಣ್ಣು ಬಯಸುವವರು ಬೀಳುವ ಹಂತದವರೆಗೆ ಕಾಯಬೇಕಷ್ಟೆ.
ಅದೇರೀತಿ ಮಹಾರಾಜ, ತಥಾಗತನಿಗೆ ಜ್ಞಾನಪ್ರಾಪ್ತಿಗೆ ಪ್ರತಿಬಿಂಬಿಸುವಿಕೆ ಅತ್ಯವಶ್ಯಕ. ಅದಿಲ್ಲದೆ ಯಾರಿಗೂ ಏನೂ ಅರಿಯಲಾಗದು. ಅವರು ಪ್ರತಿಬಿಂಬಿಸುವಿಕೆಯಿಂದ ಅವರು ಬಯಸುವಂತಹುದೆಲ್ಲಾ ಅರಿಯುತ್ತಾರೆ.
ಪ್ರತಿಬಿಂಬಿಸಿದಾಗೆಲ್ಲಾ ಹಾಗೆಯೇ ಆಗುವುದೇ ಭಂತೆ ನಾಗಸೇನ.
ಹೌದು ಮಹಾರಾಜ, ಮಹಾ ಚಕ್ರವತರ್ಿಯು ದಿವ್ಯವಾದ ಚಕ್ರವನ್ನು ನೆನೆಸಿಕೊಂಡಾಗಲೆಲ್ಲಾ ಅದು ಪ್ರತ್ಯಕ್ಷವಾಗುತ್ತದೆ. ಅದೇರೀತಿಯಲ್ಲಿ ತಥಾಗತರು ಅರಿಯಬೇಕಾದ ವಿಷಯವನ್ನು ಪ್ರತಿಬಿಂಬಿಸಿದಾಗ ಅದನ್ನೆಲ್ಲಾ ವಿವರವಾಗಿ ಅರಿಯುತ್ತಾರೆ.
ಭಂತೆ ನಾಗಸೇನ, ನೀವು ಪ್ರಬಲವಾದ ಉದಾಹರಣೆಗಳಿಂದ, ಕಾರಣಗಳಿಂದ ಭಗವಾನರ ಸರ್ವಜ್ಞತೆಯ ಬಗ್ಗೆ ವಿವರಿಸಿದ್ದೀರಿ. ನಾನು ನಿಮ್ಮ ಈ ವಿಚಾರಗಳಿಂದಲೇ ಸಹಮತವನ್ನು ಹೊಂದಿದ್ದೇನೆ, ಬುದ್ಧರು ಸರ್ವಜ್ಞರೇ ಆಗಿದ್ದಾರೆ.

3. ದೇವದತ್ತರ ಪ್ರವಜ್ಯ (ಪಬ್ಬಜ್ಜ)ದ ಪ್ರಶ್ನೆ

ಭಂತೆ ನಾಗಸೇನ, ದೇವದತ್ತರವರನ್ನು ಯಾರು ಪಬ್ಬಜ್ಜ ನೀಡಿ ಸಂಘಕ್ಕೆ ಸೇರಿಸಿಕೊಂಡರು?
ಓ ಮಹಾರಾಜ, ಆರು ಕ್ಷತ್ರಿಯ ಕುಮಾರರಾದ ಭದ್ದಿಯ, ಅನುರುದ್ಧ, ಆನಂದ, ಭಗು, ಕಿಂಬಲ, ದೇವದತ್ತ ಹಾಗು ಉಪಾಲಿ ಇವರೆಲ್ಲರೂ ಬುದ್ಧತ್ವ ಪ್ರಾಪ್ತಿಮಾಡಿದ ನಂತರ ಜೊತೆಯಲ್ಲಿಯೇ ಕೂಡಿ ಭಗವಾನರಂತೆ ಗೃಹತ್ಯಾಗ ಮಾಡಿದರು. ಆದ್ದರಿಂದಾಗಿ ಭಗವಾನರು ಅವರನ್ನು ಸಂಘಕ್ಕೆ ಸೇರಿಸಿಕೊಂಡರು.
ಆದರೆ ಈ ದೇವದತ್ತನೇ ಮುಂದೆ ಸಂಘ ಒಡೆಯುವ ಕಾರ್ಯಕ್ಕೆ ಕೈ ಹಾಕಿದನಲ್ಲವೇ?
ಹೌದು ಮಹಾರಾಜ, ದೇವದತ್ತನು ಪಬ್ಬಜ್ಜಿತನಾಗಿ ಸಂಘ ಸೇರಿದ ಕಾಲನಂತರ ಸಂಘಭೇದ ಮಾಡಲು ಹೊರಟನು. ಅದನ್ನು ಯಾವ ಗೃಹಸ್ಥನಾಗಲಿ, ಭಿಕ್ಷುಣಿಯಾಗಲಿ, ಶಿಕ್ಷಣ ಪಡೆಯುವವನಾಗಲಿ, ಸಾಮಣೇರನಾಗಲಿ, ಸಾಮಣೇರಿಯಾಗಲಿ, ಮಾಡಲಿಲ್ಲ. ಸಮಾನ ಸೀಮೆಯಲ್ಲಿದ್ದ, ಸಮಾನ ಸಂವಾಸಕನಾಗಿದ್ದ ಭಿಕ್ಷುವಾಗಿದ್ದ ದೇವದತ್ತನೇ ಸಂಘಬೇಧ ಮಾಡಿದನು.
ಹೀಗೆ ಸಂಘಬೇಧ ಮಾಡುವವನಿಗೆ ಯಾವ ಕಮ್ಮವಿಪಾಕ ದೊರೆಯುವುದು?
ಅದರ ಕಮ್ಮವಿಪಾಕವು ಒಂದು ಕಲ್ಪದವರೆಗೆ ಸಿಗುವುದು.
ಹಾಗಾದರೆ ಭಂತೆ ನಾಗಸೇನರವರೆ, ಬುದ್ಧರಿಗೆ ದೇವದತ್ತನು ಸಂಘಕ್ಕೆ ಸೇರಿದರೆ ಸಂಘಬೇಧ ಮಾಡುವನು ಎಂದು ತಿಳಿದಿತ್ತೆ? ಹಾಗು ಹಾಗೆ ಮಾಡಿದರೆ ಆತನು ಒಂದು ಕಲ್ಪದವರೆಗೆ ಅವೀಚಿ ನರಕದಲ್ಲಿ ನರಳುವನು ಎಂದು ತಿಳಿದಿತ್ತೇ?
ಹೌದು ತಥಾಗತರಿಗೆ ತಿಳಿದಿತ್ತು.
ಆದರೆ ನಾಗಸೇನರವರೇ, ಇದು ತಿಳಿದಿದ್ದೇ ಆಗಿದ್ದರೆ ಭಗವಾನರನ್ನು ಕಾರುಣಿಕರು, ಅನುಕಂಪವುಳ್ಳವರು, ಹಿತೈಷಿಗಳು, ಪರಹಿತ ಬಯಸುವವರು ಮತ್ತು ಪರರ ನೋವುಗಳನ್ನು ತೆಗೆಯುವವರು, ಹಿತವನ್ನುಂಟು ಮಾಡುವವರು ಎಂಬುದು ಸುಳ್ಳೇ. ಹಾಗಿಲ್ಲದಿದ್ದರೆ ಅವರು ದೇವದತ್ತನು ಸಂಘಕ್ಕೆ ಸೇರಿದ ಮೇಲೆ ಸಂಘಬೇಧ ಮಾಡುತ್ತಾನೆ ಎಂಬುದು ತಿಳಿದಿರಲಿಲ್ಲ. ಈ ರೀತಿಯಾಗಿ ಪರಿಸ್ಥಿತಿ ಇದ್ದಿದ್ದರೆ ಅವರು ಸರ್ವಜ್ಞರಾಗಿರಲಿಲ್ಲ. ಈ ಬಗೆಯ ದ್ವಂದ್ವ ಪ್ರಶ್ನೆಯ ಸಮಸ್ಯೆಯನ್ನು ನಿಮಗೆ ಹಾಕಿದ್ದೇನೆ, ದಾರದ ಉಂಡೆಯ ಗೋಜಿನಂತೆ ಸಮಸ್ಯೆ ನಿಮ್ಮ ಮುಂದೆ ಹಾಕಿದ್ದೇನೆ. ಈ ವಿರೋಧವನ್ನು ಮುರಿಯಿರಿ, ಭವಿಷ್ಯದಲ್ಲೂ ನಿಮ್ಮಷ್ಟು ಪ್ರಜ್ಞಾವಾನ್ ಭಿಕ್ಷುಗಳು ಸಿಗುವುದು ಕಷ್ಟಕರ, ನಿಮ್ಮ ಕೌಶಲ್ಯವನ್ನು ತೋರಿಸಿರಿ. (92)
ಮಹಾರಾಜ, ಭಗವಾನರು ಕಾರುಣಿಕರು ಆಗಿದ್ದರು. ಹಾಗೆಯೇ ಸರ್ವಜ್ಞರೂ ಆಗಿದ್ದರು. ಅವರು ಯಾವಾಗಲೂ ಕರುಣಾಸಂಪನ್ನರಾಗಿದ್ದರು ಮತ್ತು ಸರ್ವಜ್ಞ ಪ್ರಜ್ಞಾಸಂಪನ್ನರೂ ಆಗಿದ್ದರೆಂಬುದು ದೇವದತ್ತನ ಜೀವನ ಗಮನಿಸಿದರೆ ತಿಳಿಯುತ್ತದೆ. ದೇವದತ್ತನು ಎಂತಹ ಕರ್ಮ ಮಾಡಿದರೆ ಆತನು ಕಲ್ಪದವರೆಗೆ ಅವೀಚಿ ನರಕದಲ್ಲಿ ಬೀಳುವನೆಂದು ಭಗವಾನರು ಅನೇಕಬಾರಿ ಎಚ್ಚರಿಸಿದ್ದರು. ಅಷ್ಟೇ ಅಲ್ಲದೆ ಅಪರಿಮಿತ ಕರ್ಮವುಳ್ಳವನು ಸಂಘಕ್ಕೆ ಸೇರಿದರೆ ಆತನ ಕರ್ಮವು ಪರಿಮಿತವಾಗುವುದು ಎಂದು ಅವರಿಗೆ ತಿಳಿದಿತ್ತು. ಆದರೆ ಆ ಮೂರ್ಖನು ಸಂಘಕ್ಕೆ ಸೇರದೇ ಇದ್ದಿದ್ದರೆ ಸಾಮಾನ್ಯ ಮನುಷ್ಯನಾಗಿರುವಾಗ ತನ್ನ ಅಕುಶಲ ಕರ್ಮಗಳನ್ನು ಇನ್ನಷ್ಟು ರಾಶಿಯನ್ನಾಗಿಸುವ ಸಾಧ್ಯತೆಯಿತ್ತು. ಹಾಗಾದಾಗ ಆತನು ಕಲ್ಪಗಳಷ್ಟು ಕಾಲ ದುಃಖದಲ್ಲಿ ನರಳುವ ಸಾಧ್ಯತೆಯಿತ್ತು. ಇದನ್ನೆಲ್ಲಾ ಗಮನಿಸಿದಾಗ ಆತನು ಸಂಘಕ್ಕೆ ಸೇರಿದರೆ (ಕೆಲಕಾಲ ಶೀಲ, ಸಮಾಧಿ ವೃದ್ಧಿಯಾಗುವ ಸಾಧ್ಯತೆ ಗಮನಿಸಿ) ಒಳಿತಾಗುವುದನ್ನು ಗಮನಿಸಿ ಅನುಕಂಪದಿಂದ ಆತನನ್ನು ಸಂಘಕ್ಕೆ ಸೇರಿಸಿಕೊಂಡರು.
ಹಾಗಾದರೆ ನಾಗಸೇನ, ಬುದ್ಧರು ಮೊದಲು ಮಾನವನಿಗೆ ಗಾಯವನ್ನು ಮಾಡಿ ನಂತರ ಗಾಯಕ್ಕೆ ಎಣ್ಣೆಯನ್ನು ಸವರುತ್ತಾರೆಯೇ? ಮೊದಲು ಒಬ್ಬನನ್ನು ಪ್ರಪಾತಕ್ಕೆ ದೂಡಿ ನಂತರ ಸಹಾಯಕ್ಕಾಗಿ ಕೈಹಾಕುವರೇ? ಮೊದಲು ಕೊಂದು ನಂತರ ಜೀವ ಕೊಡಲು ಮುಂದೆ ಬರುವರೇ? ಮೊದಲು ನೋವನ್ನು ನೀಡಿ ನಂತರ ಆನಂದವನ್ನು ನೀಡುತ್ತಾರೆಯೇ?
ಓ ಮಹಾರಾಜ, ತಥಾಗತರು ಜನರನ್ನು ಗಾಯಗೊಳಿಸುವುದು ಅವರ ಒಳಿತಿಗಾಗಿಯೇ, ಅವರ ಹಿತಕ್ಕಾಗಿಯೆ ಅವರನ್ನು ಬೀಳಿಸುವರು. ಈ ರೀತಿಯೆಲ್ಲಾ ಮಾಡುವುದು ಅವರ ಉದ್ಧಾರಕ್ಕಾಗಿಯೇ ಹೌದು. ಹೇಗೆ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಬೀಳಿಸಿ ನೋವನ್ನು ನೀಡುತ್ತಾರೆಯೋ, ಹಾಗೆಯೇ ಅವರ ಒಳಿತಿಗಾಗಿ ಹೇಗೆ ತಿದ್ದುವರೋ ಹಾಗೆಯೇ ಅವರ ಒಳಿತಿಗಾಗಿಯೇ ಅನೇಕ ವಿಧಗಳಿಂದ ಅವರಲ್ಲಿ ಶೀಲದ ವೃದ್ಧಿ ಮಾಡುವರು. ಓ ರಾಜ, ದೇವದತ್ತ ಸಂಘಕ್ಕೆ ಸೇರದಿದ್ದರೆ, ಗೃಹಸ್ಥನಾಗಿಯೇ ಇದ್ದಿದ್ದರೆ ಆತನು ದುಃಖಕ್ಕೆ ದೀರ್ಘಕಾಲ ತಲುಪುವಂತಹ ಅನೇಕ ಕರ್ಮಗಳನ್ನು ಮಾಡುತ್ತಿದ್ದನು. ಆತನು ಒಂದು ನರಕದಿಂದ ಇನ್ನೊಂದಕ್ಕೆ ನಿರಂತರ ನರಕ ಲೋಕಗಳಲ್ಲಿ ದುಃಖಿಸಬೇಕಾಗಿತ್ತು. ಇದನ್ನೆಲ್ಲಾ ಗಮನಿಸಿಯೇ ಭಗವಾನರು ದೇವದತ್ತನನ್ನು ಸಂಘಕ್ಕೆ ಸೇರಿಸಿಕೊಂಡರು. ಈ ರೀತಿಯಾಗಿ ದೇವದತ್ತನ ದುಃಖವು ಪರಿಮಿತವಾಯಿತು. ಈ ರೀತಿ ಮಾಡಿದ್ದು ಆತನ ಭಾರವಾದ ದುಃಖವನ್ನು ಹಗುರವಾಗಿ ಮಾಡಿದ್ದಾರೆ. ಅವರು ಕರುಣೆಯಿಂದಲೇ ಹೀಗೆ ಮಾಡಿದ್ದಾರೆ.
ಓ ರಾಜ, ಹೇಗೆ ವ್ಯಕ್ತಿಯೊಬ್ಬನು ತನ್ನ ಐಶ್ವರ್ಯದ ಬಲದಿಂದಾಗಿ ಅಥವಾ ಖ್ಯಾತಿಯ ಬಲದಿಂದಾಗಿ ಅಥವಾ ಉನ್ನತಿಯ ಬಲದಿಂದಾಗಿ ಅಥವಾ ವಂಶದ ಬಲದಿಂದಾಗಿ, ಪ್ರಭಾವದಿಂದಾಗಿ ಆತನು ರಾಜನಿಂದಲೊ ಅಥವಾ ಬಂಧು-ಮಿತ್ರರಿಂದಲೊ ಹೊರಿಸಲ್ಪಟ್ಟ ಆರೋಪ ಅಥವಾ ತಲೆದಂಡದಿಂದ ಆತನು ಪಾರಾಗುತ್ತಾನೋ ಅದೇರೀತಿ ಭಗವಾನರ ಸಂಘಕ್ಕೆ ಆತನು ಸೇರಿದುದರಿಂದಾಗಿ ಆತನಿಗೆ ಧಮ್ಮದ ಪ್ರಭಾವ ಮತ್ತು ಧ್ಯಾನ ಹಾಗು ಪ್ರಜ್ಞಾದ ಹಾಗು ವಿಮುಕ್ತಿಯ ಪ್ರಭಾವದಿಂದಾಗಿ ದೇವದತ್ತನು ತನ್ನ ದುಃಖವನ್ನು ಹಗುರವಾಗಿಸಿಕೊಳ್ಳುತ್ತಾನೆ. ಆತನು ಲಕ್ಷ ಕಲ್ಪಗಳಷ್ಟು ಕಾಲದ ದುಃಖದಿಂದ ಪಾರಾಗುತ್ತಾನೆ. ಹೇಗೆ ಚಾಣಾಕ್ಷ ವೈದ್ಯನು ಹಾಗು ಶಸ್ತ್ರಚಿಕಿತ್ಸಕನು ರೋಗಿಯನ್ನು ತನ್ನ ಶಕ್ತಿಯುತ ಔಷಧದಿಂದ ಭೀಕರವಾದ ರೋಗವನ್ನು ಹಗುರು ಮಾಡುವನೋ, ಹಾಗೆಯೇ ಭಗವಾನರು ಸಹಾ ದೇವದತ್ತನನ್ನು ತಮ್ಮ ಧಮ್ಮದ ಔಷಧದಿಂದ ಕರುಣಾಬಲದಿಂದ ಆತನ ಮಹಾಪಾಪದ ದುಃಖವನ್ನು ಹಗುರಗೊಳಿಸಿದ್ದಾರೆ. ಈಗ ಹೇಳಿ ರಾಜ, ಆತನನ್ನು ಭಾರವಾದ ದುಃಖದಿಂದ ಹಗುರವಾದ ದುಃಖದೆಡೆಗೆ ಪರಿವತರ್ಿಸಿದ್ದು ತಪ್ಪೇ?
ಖಂಡಿತ ಇಲ್ಲ ಭಂತೆ, ಅವರು ತಪ್ಪೇನೂ ಮಾಡಿಲ್ಲ, ಅಣುವಿನಷ್ಟು ತಪ್ಪು ಮಾಡಿಲ್ಲ.
ಹಾಗಾದರೆ ಮಹಾರಾಜ, ಭಗವಾನರು ದೇವದತ್ತನಿಗೆ ಪಬ್ಬಜ್ಜ ನೀಡಿದ್ದು ಸರಿಯೆಂದು ಒಪ್ಪಿಕೊಳ್ಳಿ.
ಓ ಮಹಾರಾಜ, ಭಗವಾನರು ದೇವದತ್ತನನ್ನು ಸಂಘಕ್ಕೆ ಸೇರಿಸಿದ್ದಕ್ಕೆ ಮತ್ತೊಂದು ಕಾರಣವನ್ನು ಕೇಳಿ. ಈಗ ಊಹಿಸಿ, ಒಬ್ಬ ಕಳ್ಳನನ್ನು ಹಿಡಿದು ರಾಜನ ಮುಂದೆ ನಿಲ್ಲಿಸಿ ಹೀಗೆ ಹೇಳುತ್ತಾರೆ ಈತನೇ ಆ ಮಹಾ ಚೋರ ಮಹಾಪ್ರಭು. ಈತನಿಗೆ ನಿಮಗೆ ಸರಿ ಎನಿಸಿದ ಶಿಕ್ಷೆ ನೀಡಿ. ಆಗ ರಾಜನು ಆಜ್ಞಾಪಿಸುತ್ತಾನೆ, ನಗರದ ಹೊರಗೆ ಕರೆದೊಯ್ದು ಶಿರಚ್ಛೇದನ ಮಾಡಿರಿ. ಆಗ ಅದರಂತೆ ಭಟರು ಆ ಸ್ಥಳಕ್ಕೆ ಕರೆದೊಯ್ಯುತ್ತಾರೆ. ಅದೇ ಸಮಯದಲ್ಲಿ ಅತ್ಯಂತ ಪ್ರಭಾವಶಾಲಿಯಾದ ಶ್ರೀಮಂತನು ಹಾಗು ಆತನ ಮಾತಿಗೆ ಮನ್ನಣೆ ಪಡೆಯುವಂತಹ ವ್ಯಕ್ತಿಯು ಕಳ್ಳನನ್ನು ನೋಡಿ ಕರುಣೆಬೀರಿ ಭಟರಿಗೆ ಹೀಗೆ ಹೇಳುತ್ತಾನೆ ಅಲ್ಲೇ ಇರಿ ಭಟರೆ, ಏತಕ್ಕಾಗಿ ಈತನನ್ನು ಕರೆದೊಯ್ಯುವಿರಿ? ಆತನಿಗೆ ಜೀವದಾನ ಮಾಡಿರಿ, ಬೇಕಾದರೆ ಆತನ ಕೈ ಅಥವಾ ಕಾಲನ್ನು ಕತ್ತರಿಸಿ, ಆತನ ಪರವಾಗಿ ರಾಜನ ಬಳಿ ನಾನು ಮಾತನಾಡುತ್ತೇನೆ. ಆಗ ಅದರಂತೆಯೇ ಆಗುತ್ತದೆ. ಈಗ ಹೇಳಿ ಆ ವ್ಯಕ್ತಿಯು ಕಳ್ಳನಿಗೆ ಹಿತೈಷಿಯೋ ಅಥವಾ ಅಲ್ಲವೋ?
ಆತನು ಹಿತೈಷಿಯೇ ಭಂತೆ, ಆತನು ಜೀವದಾನ ಮಾಡಿದ್ದಾನೆ, ಹಾಗೆ ಮಾಡಿ ಈ ರೀತಿಯಾಗಿ ಆತನು ಮಾಡಬೇಕಾದುದನ್ನೆಲ್ಲಾ ಮಾಡಿದ್ದಾನೆ.
ಆದರೆ ಹೀಗೆ ಮಾಡಿದಾಗ, ಆತನು ಕೈ ಅಥವಾ ಕಾಲನ್ನು ಕಳೆದುಕೊಂಡಾಗ ಆತನು ನೋವಿನಿಂದ ದುಃಖಿಸುತ್ತಾನಲ್ಲವೇ?
ಭಂತೆ, ಆತನು ನೋವಿನಿಂದ ನರಳಬಹುದು, ಅದಕ್ಕೆ ಆತನೇ ಹೊಣೆ, ಆದರೆ ಯಾವ ವ್ಯಕ್ತಿಯು ಆತನಿಗೆ ಜೀವದಾನ ಮಾಡಿದನೋ ಆತನಂತು ಯಾವ ನೋವನ್ನೂ ನೀಡಲಿಲ್ಲ.
ಅದೇರೀತಿಯಾಗಿ ಮಹಾರಾಜ, ಕರುಣೆ ಬೀರಿ ಭಗವಾನರು ದೇವದತ್ತನನ್ನು ಸಂಘಕ್ಕೆ ಸೇರಿಸಿಕೊಂಡರು ಹಾಗು ಅವರ ಸರ್ವಜ್ಞತೆಯಿಂದಲೇ ದೇವದತ್ತನ ದುಃಖವು ಕ್ಷೀಣವಾಯಿತು.
ಓ ರಾಜ, ದೇವದತ್ತನ ದುಃಖವು ತಗ್ಗಿತು. ಅಷ್ಟೇ ಅಲ್ಲ, ದೇವದತ್ತನು ಅಂತ್ಯಕಾಲದಲ್ಲಿ ಬುದ್ಧರಲ್ಲಿ ಶರಣಾಗತಿ ಕೋರಿಕೊಂಡನು. ಆಗ ಆತನು ಹೀಗೆ ಹೇಳಿಕೊಂಡನು.
ಯಾರು ಶ್ರೇಷ್ಠರಲ್ಲಿ ಶ್ರೇಷ್ಠರೊ, ದೇವಾದಿದೇವತೆಗಳಿಗೆ ಹಾಗು ಮಾನವರಿಗೆ ಧಮ್ಮ ಸಾರಥಿಯೋ, ಸಮಂತಚಕ್ಷುವೋ, ಶತಪುಣ್ಯ ಲಕ್ಷಣವುಳ್ಳವರೋ, ಅಂತಹ ಬುದ್ಧರಲ್ಲಿ ನಾನು ಪ್ರಾಣವಿರುವತನಕ ಶರಣು ಹೋಗುತ್ತೇನೆ. ಹಾಗು ಮುಂದಿನ ಸರ್ವ ಜನ್ಮಗಳಲ್ಲೂ ಶರಣು ಹೋಗುತ್ತೇನೆ.
ಓ ಮಹಾರಾಜ, ನೀವು ಕಲ್ಪವನ್ನು ಆರು ಭಾಗಗಳಾಗಿ ವಿಭಾಗಿಸಿದರೆ, ಆ ಕಲ್ಪದ ಮೊದಲನೆಯ-ಕೊನೆಯ ಭಾಗದಲ್ಲಿ ದೇವದತ್ತ ಸಂಘಬೇಧ ಮಾಡಿದನು. ನಂತರದ ಐದು ಭಾಗಗಳ ಅಂತ್ಯದಲ್ಲಿ ಆತನು ಅದರಿಂದ ಪಾರಾಗಿ ನಂತರದ ಮಾನವ ಜನ್ಮದಲ್ಲಿ ಪಚ್ಚೇಕಬುದ್ಧನಾಗುತ್ತಾನೆ. ಆಗ ಆತನ ಹೆಸರು ಅತ್ಥಿಸ್ಸರ ಎಂದು ಇರುತ್ತದೆ.
ಭಂತೆ ನಾಗಸೇನ, ಭಗವಾನರಿಂದ ದೇವದತ್ತನಿಗೆ ಶ್ರೇಷ್ಠವಾದ ಉಡುಗೊರೆ ಲಭಿಸಿತು. ತಥಾಗತರ ಕಾರಣದಿಂದಲೇ ಮುಂದೆ ಆತನು ಪಚ್ಚೇಕ ಬೋಧಿ ಪಡೆದು ಪಚ್ಚೇಕ ಬುದ್ಧನಾಗುತ್ತಾನೆ.
ಓ ಮಹಾರಾಜ, ದೇವದತ್ತನಿಂದಲೇ ಸಂಘ ಬೇಧವಾಗಿ, ಆತನು ನರಕಗಳಲ್ಲಿ ನರಳುತ್ತಿದ್ದಾನೆ. ಇದರಲ್ಲಿ ಭಗವಾನರ ತಪ್ಪಿದೆಯೇ?
ಇಲ್ಲ ಭಂತೆ, ಅದು ದೇವದತ್ತನದೇ ಪಾಪವಾಗಿದೆ ಮತ್ತು ಭಗವಾನರು ಆತನಿಗೆ ಯಾವ ಹಾನಿ ಮಾಡದೆ ಆತನ ದುಃಖವನ್ನು ಕ್ಷೀಣಿಸಿದ್ದಾರೆ.
ಹಾಗಾದರೆ ಓ ಮಹಾರಾಜ, ಭಗವಾನರು ದೇವದತ್ತನಿಗೆ ಸಂಘಕ್ಕೆ ಸೇರಿಸಿಕೊಂಡಿದ್ದರಲ್ಲಿ ಅಪಾರ ಹಿತ, ದೂರದೃಷ್ಟಿಯಿದೆ ಎಂದು ಒಪ್ಪಿಕೊಳ್ಳಿ.
ಓ ಮಹಾರಾಜ, ಇನ್ನೊಂದು ಕಾರಣವನ್ನು ಕೇಳಿರಿ. ಊಹಿಸಿ, ಗಾಯಾಳುವೊಬ್ಬನಿಗೆ ಗಾಯವಾಗಿ ರಂಧ್ರವು ಬಿದ್ದಿರುತ್ತದೆ. ಆ ಭಾಗದಲ್ಲಿ ಮಾಂಸವು ಕೊಳೆತು, ಕೀವು ತುಂಬಿ ನೋವು ಹೆಚ್ಚಾಗಿರುತ್ತದೆ. ನಿರಂತರ ಪರಿಸ್ಥಿತಿ ಕೆಡುತ್ತಿರುತ್ತದೆ. ವಾತಾವರಣದ ಉಷ್ಣತೆಯಿಂದಲೂ, ವಾತ, ಪಿತ, ಕಫ, ದೋಷದಿಂದಲೂ ಕೆಟ್ಟಿರುತ್ತದೆ. ಆಗ ಅರ್ಹ ಶಸ್ತ್ರ ಚಿಕಿತ್ಸಕನು, ವೈದ್ಯನು ಆ ಗಾಯಕ್ಕೆ ಒರಟಾದ, ಹರಿತವಾದ, ಕಹಿಯಾದ, ನೋವಿನ ಮುಲಾಮನ್ನು ಹಚ್ಚುತ್ತಾನೆ. ನಂತರ ಕೊನೆಗೆ ಆ ನೋವು ಉರಿಯು ಕಡಿಮೆಯಾಗುತ್ತದೆ. ಆಗ ಗಾಯ, ಹರಿತವಾದ ಶಸ್ತ್ರದಿಂದ ಕತ್ತರಿಸುತ್ತಾನೆ. ತೀಕ್ಷ್ಣವಾದ ದ್ರವದಿಂದ ಸುಡಿಸುತ್ತಾನೆ, ನಂತರ ಗಾಯವನ್ನು ಕ್ಷಾರದಿಂದ ತೊಳೆಯುತ್ತಾನೆ. ನಂತರ ಮುಲಾಮನ್ನು ಪಟ್ಟಿ ಕಟ್ಟುತ್ತಾನೆ. ನಂತರ ಆ ಗಾಯವು ಗುಣಮುಖವಾಗುತ್ತದೆ. ಈಗ ಹೇಳಿ ಓ ರಾಜನೇ ಆ ಶಸ್ತ್ರವೈದ್ಯನು ಶಸ್ತ್ರದಿಂದ ಕೊಯ್ದು, ಸುಡುವಂತಹ ದ್ರವವನ್ನು ಹಾಕಿ ತೀಕ್ಷ್ಣವಾದ ಕ್ಷಾರವನ್ನು ಹಾಕಿ ತೊಳೆದದ್ದು ಕ್ರೂರತ್ವವೇ?
ಖಂಡಿತವಾಗಿ ಇಲ್ಲ ಭಂತೆ, ಮನದಲ್ಲಿ ಕರುಣೆ ತುಂಬಿ, ರೋಗಿಯ ಕ್ಷೇಮ ಬಯಸಿ, ವೈದ್ಯನು ಆ ರೀತಿಯೆಲ್ಲಾ ಮಾಡಬೇಕಾಗುತ್ತದೆ.
ತನ್ನ ಕಾರ್ಯದಿಂದಾಗಿ ನೋವು ಉಂಟಾದರೂ, ಗಾಯ ವಾಸಿಯಾಗುವಾಗ, ಆ ಶಸ್ತ್ರಚಿಕಿತ್ಸಕನಿಗೆ ಅಪರಾಧಿ ಭಾವನೆ ಕಾಡುವುದೇ?
ಹೇಗೆ ಸಾಧ್ಯ? ಕರುಣಾ ಮನೋಭಾವ ಇಡುವುದು ಹೇಗೆ ತಪ್ಪು? ಅದು ದಿವ್ಯವಾದ ಆನಂದವೇ ಹೊರತು ಬೇರೆ ಅಲ್ಲ. ಅಂತಹ ಕರುಣಾಳು ಗೌರವಕ್ಕೆ ಅರ್ಹನಾಗಿದ್ದಾನೆ.
ಅದೇರೀತಿಯಲ್ಲಿ ಮಹಾರಾಜ, ದೇವದತ್ತರ ಮೇಲೆ ಭಗವಾನರಿಗೆ ಅನುಕಂಪವಿತ್ತು. ಆತನು ದುಃಖದಿಂದ ಪಾರಾಗಲೆಂದು ಯತ್ನಿಸಿದ್ದರು.
ಓ ಮಹಾರಾಜ, ಇನ್ನೊಂದು ಸಾದೃಶ್ಯವನ್ನು ಕೇಳಿರಿ. ಊಹಿಸಿ, ಒಬ್ಬ ಮನುಷ್ಯನಿಗೆ ಮುಳ್ಳು ಚುಚ್ಚಿರುತ್ತದೆ, ಆಗ ಮತ್ತೊಬ್ಬನು ಕರುಣೆಯಿಂದ ಆ ಮುಳ್ಳು ತೆಗೆಯಲೆಂದು ಹರಿತವಾದ ಶಸ್ತ್ರದಿಂದ ಅಥವಾ ಇನ್ನೊಂದು ಮುಳ್ಳಿನಿಂದ ಚುಚ್ಚಿ ಗಾಯಮಾಡಿ ಆಳವಾಗಿ ಹುದುಗಿರುವ ಆ ಮುಳ್ಳನ್ನು ತೆಗೆಯುತ್ತಾನೆ. ಆಗ ರಕ್ತವು ಹರಿಯಬಹುದು, ಈ ಕೃತ್ಯವು ಕ್ರೂರತ್ವವೇ?
ಖಂಡಿತ ಇಲ್ಲ ಭಂತೆ, ಆತನು ಕರುಣೆಯಿಂದಲೇ, ಹಿತದೃಷ್ಟಿಯಿಂದಲೇ ಮಾಡಿದ್ದಾನೆ. ಆತನು ಆ ರೀತಿ ಮಾಡದಿದ್ದರೆ ಆ ವಿಷ ಮುಳ್ಳಿನಿಂದ ಆತನು ಸಾವನ್ನು ಅಪ್ಪುತ್ತಿದ್ದನು, ಅಥವಾ ವಿಕಲಾಂಗನಾಗುತ್ತಿದ್ದನು ಅಥವಾ ಭಾರಿ ನೋವನ್ನು ಅನುಭವಿಸುತ್ತಿದ್ದನು, ಅದರಿಂದಾಗಿ ಆತನು ಸಾವಿಗೆ ಸಮೀಪವಾಗುತ್ತಿದ್ದನು.
ಹಾಗೆಯೇ ಮಹಾರಾಜ, ತಥಾಗತರು ಕರುಣೆಯಿದ್ದುದರಿಂದಲೇ ದೇವದತ್ತನಿಗೆ ಸಂಘಕ್ಕೆ ಸೇರಿಸಿಕೊಂಡರು. ಅದಕ್ಕೆ ಕಾರಣವೇನೆಂದರೆ ಅತೀವ, ದೀರ್ಘಕಾಲಿನ ದುಃಖವನ್ನು ತಡೆಗಟ್ಟುವುದೇ ಆಗಿತ್ತು. ಇಲ್ಲದಿದ್ದಲ್ಲಿ ದೇವದತ್ತನು ಶತಸಹಸ್ರ ಕಲ್ಪಗಳವರೆಗೆ ನರಕಗಳಲ್ಲಿ ಇರಬೇಕಿತ್ತು.
ಹೌದು ನಾಗಸೇನರವರೇ, ತಥಾಗತರು ದೇವದತ್ತನನ್ನು ಕಾಪಾಡಿದ್ದಾರೆ, ದೇವದತ್ತನು ತಲೆ ಮುಂದು ಮಾಡಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದನು. ಭೀಕರ ಕಾಡಿನಲ್ಲಿ ಕಳೆದುಹೋಗಿದ್ದ ಆತನನ್ನು ರಕ್ಷಿಸಿದರು, ಪ್ರಪಾತದಲ್ಲಿ ಬೀಳುತ್ತಿದ್ದವನನ್ನು ದೃಢವಾದ ಆಸರೆ ನೀಡಿದರು, ಆತನಿಗೆ ಶಾಂತಿ ಉಂಟುಮಾಡಲು ಪ್ರಯತ್ನಿಸಿದರು. ಓ ನಾಗಸೇನರವರೆ, ನಿಮ್ಮ ಹೊರತು ಬೇರ್ಯಾರು ಸಹಾ ಇದಕ್ಕೆ ತರ್ಕಬದ್ಧವಾಗಿ, ಅರ್ಥಬದ್ಧವಾಗಿ ಸತ್ಯವನ್ನು ಪ್ರಕಾಶಿಸುತ್ತಿರಲಿಲ್ಲ.


4. ಪಥವಿಚಲನ ಪನ್ಹೊ (ಭೂಕಂಪನದ ಪ್ರಶ್ನೆ)

ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದರು ಓ ಭಿಕ್ಖುಗಳೆ, ಬೃಹತ್ ಭೂಕಂಪಗಳಿಗೆ ತಕ್ಷಣದ ಅಥವಾ ದೂರದ ಎಂಟು ಕಾರಣಗಳಿವೆ ಇದು ಎಲ್ಲವನ್ನು ಒಳಗೊಂಡ ಹೇಳಿಕೆಯಾಗಿದೆ. ಈ ಹೇಳಿಕೆಯಿಂದಾಗಿ ಬೇರೇನೂ ಸೇರಿಸಲಾಗದು. ಅದಕ್ಕೆ ಅವಕಾಶವೇ ಇಲ್ಲದಂತಾಗಿದೆ. ಇದರಿಂದಾಗಿ ಭೂಕಂಪಕ್ಕೆ ಒಂಭತ್ತನೇ ಕಾರಣವೇ ಇಲ್ಲ, ಅಂತಹುದು ಇದ್ದಿದ್ದರೆ ಭಗವಾನರು ಹೇಳಿರುತ್ತಿದ್ದರು. ಆದರೆ ಒಂಭತ್ತನೇ ಕಾರಣವನ್ನು ನಾವು ಗಮನಿಸಿದ್ದೇವೆ. ಅದೆಂದರೆ ವೆಸ್ಸಂತರ ದಾನವನ್ನು ನೀಡುವಾಗ ಭೂಮಿಯು ಏಳು ಬಾರಿ ಕಂಪಿಸಿತು. ಈಗ ಹೇಳಿ ನಾಗಸೇನ, ಭೂಕಂಪಕ್ಕೆ ಎಂಟು ಕಾರಣಗಳೇ ಆಗಿದ್ದಲ್ಲಿ ವೆಸ್ಸಂತರ ದಾನ ಮಾಡಿದ್ದಾಗ ಭೂಕಂಪವಾಗಿದ್ದು ಸುಳ್ಳಾಗುತ್ತದೆ. ಹಾಗಿಲ್ಲದೆ ಆಗೇನಾದರೂ ಭೂಕಂಪ ಆಗಿದ್ದರೆ ಮೇಲಿನ ಎಂಟು ಕಾರಣಗಳು ಸುಳ್ಳಾಗುತ್ತದೆ. ಈ ಇಕ್ಕಳದ ಪ್ರಶ್ನೆಯನ್ನು ಬಿಡಿಸಿ, ಇದು ಅತ್ಯಂತ ಸೂಕ್ಷ್ಮವಾಗಿದೆ, ಗೋಜು ಬಿಡಿಸಲು ಕಠಿಣವಾಗಿದೆ, ಕಗ್ಗತ್ತಲೆಯಿಂದ ಕೂಡಿದೆ ಮತ್ತು ಗಂಭೀರವಾಗಿದೆ, ಇದೇ ಅಲ್ಪಜ್ಞರಿಂದ ಪರಿಹರಿಸಲಾಗದು. ಇದನ್ನು ಪ್ರಾಜ್ಞರಾದ ತಾವೇ
ಬಿಡಿಸಬಲ್ಲಿರಿ. (93)
ಓ ಮಹಾರಾಜ, ಈ ಎರಡು ಹೇಳಿಕೆಗಳು ಸರಿಯಾಗಿಯೇ ಇವೆ. ವೆಸ್ಸಂತರದ ದಾನವನ್ನು ಅಲ್ಲಿ ಏತಕ್ಕೆ ತೆಗೆದುಕೊಂಡಿಲ್ಲ ಎಂದರೆ ಅದು ಅತ್ಯಂತ ಅತಿವಿರಳ ಸಂಗತಿಯಾಗಿದ್ದರಿಂದಾಗಿ, ಅದನ್ನು ಅಲ್ಲಿ ಸೇರಿಸಲಾಗದು. ಆದ್ದರಿಂದಾಗಿ ಅದು ಅಲ್ಲಿ ಅಡಕವಾಗದು. ಇದು ಹೇಗೆಂದರೆ ಓ ಮಹಾರಾಜ, ಮೂರು ರೀತಿಯ ಮಳೆಗಳು ಬೀಳುತ್ತವೆ, ಅದೆಂದರೆ ಮಳೆಗಾಲದಲ್ಲಿ, ಚಳಿಗಾಲದಲ್ಲಿ ಹಾಗು ಆಷಾಢ ಮತ್ತು ಶ್ರಾವಣ ತಿಂಗಳಲ್ಲಿ ಬೀಳುತ್ತವೆ. ಇದನ್ನು ಬಿಟ್ಟು ಬೇರೆ ಯಾವಾಗಲಾರದೂ ಮಳೆ ಬಿದ್ದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಅದನ್ನು ಅಕಾಲಿಕ ಮಳೆ ಎನ್ನುತ್ತಾರೆ. ಮತ್ತೆ ಓ ರಾಜ, ಹಿಮಾಲಯದಿಂದ ಐದುನೂರು ನದಿಗಳು ಹರಿಯುತ್ತವೆ. ಆದರೂ ಸಹಾ ಹತ್ತನ್ನು ಮಾತ್ರ ಗುರುತಿಸುತ್ತಾರೆ. ಅದೆಂದರೆ ಗಂಗಾ, ಜಮುನಾ, ಶಚಿರಾವತಿ, ಸರಭೂ, ಮಾಹೀ, ಇಂದೂ, ಸರಸ್ವತಿ, ವೆತ್ರವತಿ, ವಿತಂಸ ಮತ್ತು ಚಂದಭದ್ರ, ಮಿಕ್ಕವು ಈ ಪಟ್ಟಿಯಲ್ಲಿ ಬರುವುದಿಲ್ಲ. ಏಕೆಂದರೆ ಅವು ಬಿಟ್ಟು ಬಿಟ್ಟು ಬರುತ್ತದೆ. ಮತ್ತೆ ಮಹಾರಾಜ, ರಾಜನ ಬಳಿಯಲ್ಲಿ ನೂರು ಅಥವಾ ಇನ್ನೂರು ಅಧಿಕಾರಿಗಳು ಕೆಲಸ ಮಾಡುತ್ತಾರೆ. ಆದರೂ ಸಹಾ ಆರು ಜನರನ್ನು ಮಾತ್ರ ಪ್ರಮುಖ ಅಧಿಕಾರಿಗಳೆಂದು ತೆಗೆದುಕೊಳ್ಳುತ್ತಾರೆ. ಅವರೆಂದರೆ ಸೇನಾಧಿಕಾರಿ, ಪ್ರಧಾನಮಂತ್ರಿ, ಮುಖ್ಯ ನ್ಯಾಯಾಧೀಶ, ಮುಖ್ಯ ಖಜಾಂಚಿ, ಪುರೋಹಿತ, ಛತ್ರದಾರಿ ಮತ್ತು ಖಡ್ಗದಾರಿ ಮತ್ತು ಏಕೆ? ಏಕೆಂದರೆ ಅವರೆಲ್ಲರೂ ರಾಜ್ಯ ಯೋಗ್ಯವಾದ ವಿಶೇಷ ಅಧಿಕಾರ ಹೊಂದಿದ್ದರು. ಮಿಕ್ಕವರು ಆ ರೀತಿ ಗಮನಕ್ಕೆ ತೆಗೆದುಕೊಳ್ಳದೆ ಕೇವಲ ಅಧಿಕಾರಿಗಳಾಗಿದ್ದರು. ಅದೇರೀತಿಯಲ್ಲಿ ಮಹಾರಾಜ, ವೆಸ್ಸಂತರರವರ ದಾನದ ವೇಳೆಯಲ್ಲಿ ಏಳುಬಾರಿ ಭೂಕಂಪವಾದುದು ಅತಿ ವಿರಳ ಸಂಗತಿ ಹೊರತು, ಅದು ಮುಖ್ಯ ಎಂಟು ವಿಧದ ಭೂಕಂಪಗಳಲ್ಲಿ ಸೇರದು.
ಓ ಮಹಾರಾಜ, ನೀವು ಬುದ್ಧ ಇತಿಹಾಸದಲ್ಲಿ ಬರುವಂತಹ ದಾನಿಗಳಲ್ಲಿ ವರ್ತಮಾನದಲ್ಲೇ ಫಲ ಕಂಡಂತಹವರನ್ನು, ಅಂತಹವರ ಖ್ಯಾತಿ ದೇವಲೋಕದವರೆಗೂ  ಹಬ್ಬಿದಂತಹವರನ್ನು ನೀವು ಬಲ್ಲಿರಾ?
ಹೌದು ಭಂತೆ, ಅಂತಹವರ ಬಗ್ಗೆ ಕೇಳಿದ್ದೇನೆ. ಅಂತಹ ಏಳು ಮಹಾನುಭಾವರ ದಾನಗಳ ಬಗ್ಗೆ ಕೇಳಿದ್ದೇನೆ.
ಯಾರವರು, ಅವರು ಏನು ಮಾಡಿದರು.
ಸುಮನನೆಂಬ ಹೂಗಾರ, ಏಕಸಾಟಕ ಬ್ರಾಹ್ಮಣ, ಪುಣ್ಣನೆಂಬ ಸೇವಕ, ರಾಣಿ ಮಲ್ಲಿಕಾ, ಗೋಪಾಲಮಾತ ಎಂಬ ರಾಣಿ, ಶ್ರದ್ಧಾಳು ಸುಪ್ಪಿಯಾ ಮತ್ತು ಪುಣ್ಣಾ ಎಂಬ ಗುಲಾಮ ಹುಡುಗಿ. ಇವರುಗಳು ಮಾಡಿದ ದಾನದಿಂದಾಗಿ ಅವರಿಗೆ ಆ ಜನ್ಮದಲ್ಲೇ ಪ್ರತಿಫಲ ದೊರೆಯಿತು. ಹಾಗು ಅವರ ಖ್ಯಾತಿಯು ದೇವಲೋಕದವರೆಗೂ ಹಬ್ಬಿತು.
ಓ ಮಹಾರಾಜ, ಮಾನವ ಶರೀರಧಾರಿಯಾಗಿಯೇ ತಾವತಿಂಸ ಲೋಕಕ್ಕೆ (ತಿದಶಭವನಕ್ಕೆ) ಹೋಗಿರುವುದು ತಿಳಿದಿದೆಯೇ?
ಹೌದು ಭಂತೆ, ಅಂತಹವರ ಬಗ್ಗೆ ಕೇಳಿದ್ದೇನೆ.
ಯಾರವರು ?
ಸಂಗೀತಗಾರ ಗುಟ್ಟಿಲಾ, ಸಾಧಿನ ರಾಜ, ನಿಮಿರಾಜ ಮತ್ತು ರಾಜ ಮಾಂಧಾತ. ಈ ನಾಲ್ವರು ಬಹಳ ಕಾಲದ ಹಿಂದೆ ಅತ್ಯಂತ ಕಠಿಣವಾದ ಪುಣ್ಯಕಾರ್ಯ ಮಾಡಿ ಹಾಗೆ ಹೋಗಿದ್ದರು ಎಂದು ಕೇಳಿದ್ದೇನೆ.
ಆದರೆ ಓ ಮಹಾರಾಜ, ಈ ಎಲ್ಲಾ ದಾನಿಗಳು ಹಾಗೆ ಮಾಡುವಾಗ ಹಿಂದಾಗಲಿ ಅಥವಾ ಈಗಾಗಲೀ ಪೃಥ್ವಿಯು ಒಮ್ಮೆಯಾಗಲಿ, ಎರಡುಬಾರಿಯಾಗಲಿ, ಮೂರುಬಾರಿ ಯಾಗಲಿ ಕಂಪಿಸಿದೆಯೇ?
ಇಲ್ಲ ಭಂತೆ, ನಾನು ಹಾಗೆ ಕೇಳಿಲ್ಲ.
ನಾನು ಸಹಾ ಕೇಳಿಲ್ಲ. ಓ ರಾಜ, ನಾನು ಸಂಪ್ರದಾಯದಲ್ಲಿ ಶಿಕ್ಷಣ ಪಡೆದಿದ್ದೇನೆ. ಅಧ್ಯಯನದಲ್ಲಿ ಆಳವಾಗಿ ತೊಡಗಿದ್ದೇನೆ, ಶ್ರವಣಿಸಿದ್ದೇನೆ, ಕಂಠಪಾಠ ಮಾಡಿದ್ದೇನೆ, ಶಿಷ್ಯತ್ವ ಪರಿಪಾಲಿಸಿದ್ದೇನೆ, ಕಲಿಯಲು ಸಿದ್ಧನಿದ್ದೇನೆ, ಕೇಳಲು ಉತ್ತರಿಸಲು ಮತ್ತು ಗುರುಗಳ ಪಾದದ ಅಡಿಯಲ್ಲಿ ಕಾಲ ಕಳೆದಿದ್ದೇನೆ. ಆದರೂ ಸಹಾ ಅಂತಹ ಸಂಗತಿ ನಾನು ಸಹಾ ಕೇಳಿಲ್ಲ. ಅದು ವೆಸ್ಸಂತರ ಮಹಾರಾಜರ ಆ ದಾನದಲ್ಲೇ ಆಯಿತು. ಮತ್ತು ಆ ಕಾಲವು ಕಸ್ಸಪ ಮತ್ತು ಗೋತಮ ಬುದ್ಧರ ಕಾಲದ ಮಧ್ಯದಲ್ಲಿ ಆಯಿತು. ಹಾಗು ಬೋಧಿಸತ್ತರು ಶತಸಹಸ್ರ ವರ್ಷಗಳನ್ನು ಕಳೆದರೂ ಅಂತಹ ಘಟನೆಯನ್ನು ನಾನು ಕೇಳಿಲ್ಲ. ಅದು ಸಾಮಾನ್ಯವಾದ ಶ್ರಮವಲ್ಲ. ಓ ಮಹಾರಾಜ, ಅದು ಸಾಮಾನ್ಯ ಪರಿಶ್ರಮವಲ್ಲ, ಆ ಮಹಾ ಕಾರ್ಯದಿಂದಾಗಿ ಪರಾಕ್ರಮದಿಂದಾಗಿ ಮಹಾನ್ ಪೃಥ್ವಿಯೇ ಚಲಿಸಿದೆ, ಕಂಪಿಸಿದೆ. ಅದು ಪುಣ್ಯರಾಶಿಯ ಗುಣ ಭಾರದಿಂದಾಗಿದೆ. ಮಹಾರಾಜ, ಅದು ದಾನಶೀಲಾದಿ ಪುಣ್ಯಬಾರದಿಂದಾಗಿ ಪರಿಶುದ್ಧತೆಯ ಪರೀಕ್ಷೆಯ ಫಲಿತಾಂಶವಾಗಿ ಕಂಪಿಸಿವೆ. ಹೇಗೆ ಬಂಡಿಯಲ್ಲಿ ಅತಿಯಾದ ಭಾರದ ಸಾಮಗ್ರಿಗಳನ್ನು ತುಂಬಿದಾಗ ಆ ಭಾರಕ್ಕೆ ಚಕ್ರಗಳ ಕಡ್ಡಿಗಳು ಮುರಿಯುವವೋ ಬಂಡಿಯು ಕೂರುವುದೋ, ಹೇಗೆ ಚಂಡಮಾರುತದ ಗಾಳಿಯಿಂದಾಗಿ, ಮಳೆಗಾಳಿಗಳು ಮೋಡಗಳು ಎದ್ದು ಸ್ವರ್ಗದಲ್ಲೂ ನೀರನ್ನು ತರುತ್ತದೆಯೋ ಹಾಗೆಯೇ ರಾಜ ವೆಸ್ಸಂತರವರ ಪುಣ್ಯರಾಶಿಯ ಫಲದಿಂದಾಗಿ, ಅವರ ಪರಿಶುದ್ಧತೆಯಿಂದಾಗಿ ಭೂಮಿಯು ಕಂಪಿಸಿತ್ತು, ನಡುಗಿತ್ತು. ಆಗ ವೆಸ್ಸಂತರ ಚಿತ್ತದಲ್ಲಿ ಯಾವುದೇ ರಾಗವಿರಲಿಲ್ಲ, ದ್ವೇಷವಿರಲಿಲ್ಲ, ಮೋಹವಿರಲಿಲ್ಲ, ಅಹಂಕಾರವಿರಲಿಲ್ಲ, ಪಾಪವಿರಲಿಲ್ಲ, ಅತೃಪ್ತಿಯಿರಲಿಲ್ಲ, ವಿರೋಧವಿರಲಿಲ್ಲ. ಕೇವಲ ದಾನ ಹೃದಯವಿತ್ತು. ಆಗ ಅವರ ಚಿಂತನೆ ಹೀಗಿತ್ತು ಯಾರಿಗೆ ಏನೆಲ್ಲಾ ಬೇಕೋ ಪಡೆಯುವಂತಾಗಲಿ, ಹಾಗು ಅವರೆಲ್ಲರೂ ಸಂತೃಪ್ತರಾಗಲಿ. ಅವರ ಮನಸ್ಸಿನಲ್ಲಿ ದಾನವು ನಿರಂತರವಾಗಿ ನೆಲೆಸಿತ್ತು ಮತ್ತು ಈ 10 ಸ್ಥಿತಿಗಳಿಂದ ಹೃದಯವಿದ್ದಾಗ ಓ ಮಹಾರಾಜ, ಅವರ ಮನಸ್ಸು ಸ್ವನಿಯಂತ್ರಣದಲ್ಲಿ ಕೇಂದ್ರೀಕೃತವಾಗಿತ್ತು ಮತ್ತು ಆಂತರಿಕ ಶಾಂತಿಯಲ್ಲಿ ಸ್ಥಿರವಾಗಿತ್ತು. ಈ ರೀತಿಯಾದ ಸ್ವನಿಯಂತ್ರಿತ, ದಾನತ್ವ, ಶೀಲ, ದ್ವೇಷ ಹಾಗು ಹಿಂಸೆಯಿಂದ ವಿಮುಖತೆ, ಸತ್ಯಶೀಲತೆ, ಪರಿಶುದ್ಧತೆವುಳ್ಳವರಾಗಿದ್ದರು. ಅವರು ಸರ್ವಜೀವಿಗಳ ಸುಖ ಸಂತೃಪ್ತಿಗಾಗಿ ಎಲ್ಲವನ್ನೂ ತ್ಯಜಿಸಿದ್ದರು. ಎಲ್ಲಾ ಬಯಕೆಗಳನ್ನು ಮೀರಿದ್ದರು, ಅವರ ಪರಾಕ್ರಮವು ಕೇವಲ ಉನ್ನತ ಜೀವನಕ್ಕೆ ಕ್ರಿಯಾಬದ್ಧವಾಗಿತ್ತು. ಅವರಿಗೆ ತಮ್ಮ ಬಗೆಗಿಂತ ಪರರಲ್ಲೇ ಕಾಳಜಿ ಉಳ್ಳವರಾಗಿದ್ದರು. ಸದಾ ಪರಹಿತ ಚಿಂತನೆಯಲ್ಲಿ ತಲ್ಲೀನರಾಗಿದ್ದರು. ಅವರ ಮನಸ್ಸೆಲ್ಲಾ ಕೇವಲ ಈ ಚಿಂತನೆಯಲ್ಲಿ ಸ್ಥಿರವಾಗಿತ್ತು. ಅದೆಂದರೆ ನಾನು ಹೇಗೆ ಈ ಜೀವಿಗಳಿಗೆಲ್ಲಾ ಐಶ್ವರ್ಯವನ್ನು, ಆಯಸ್ಸನ್ನು, ಆರೋಗ್ಯವನ್ನು ಮತ್ತು ಶಾಂತಿಯನ್ನು ನೀಡಲಿ? ಮತ್ತು ಓ ಮಹಾರಾಜ, ಯಾವಾಗ ಅವರು ದಾನ ಮಾಡಿದರೋ ಅದು ಸ್ವರ್ಗಕ್ಕಾಗಿ ಮಾಡಲಿಲ್ಲ, ಐಶ್ವರ್ಯಕ್ಕಾಗಿ ಮಾಡಲಿಲ್ಲ, ಪ್ರತಿಫಲಕ್ಕಾಗಿ ಮಾಡಲಿಲ್ಲ, ಪ್ರಶಂಸೆಗೆ ಮಾಡಲಿಲ್ಲ, ದೀಘರ್ಾಯಸ್ಸಿಗಾಗಿ ಮಾಡಲಿಲ್ಲ. ಉನ್ನತ ಜನ್ಮಕ್ಕಾಗಿ ಮಾಡಲಿಲ್ಲ, ಸುಖಕ್ಕಾಗಿ ಮಾಡಲಿಲ್ಲ, ಅಧಿಕಾರಕ್ಕಾಗಿ ಮಾಡಲಿಲ್ಲ, ಕೀತರ್ಿಗಾಗಿ ಮಾಡಲಿಲ್ಲ, ಪುತ್ರಾಪೇಕ್ಷೆಯಿಂದಾಗಿ ಮಾಡಲಿಲ್ಲ. ಬದಲಾಗಿ ಕೇವಲ ಸಮ್ಮಾಸಂಬೋಧಿ ಪ್ರಾಪ್ತಿಗಾಗಿ, ಪರಹಿತ ಪೂರ್ಣ ಕಲ್ಯಾಣಕ್ಕಾಗಿ ಮಾಡಿದರು ಹಾಗು ಅವರು ನೀಡಿದಂತಹ ಉಡುಗೊರೆಗಳು ಅಪರಿಮಿತ, ಅಳೆಯಲಾಗದ, ಹಾಗು ಅನುತ್ತರ ದಾನವಾಗಿತ್ತು. ಸರ್ವಜ್ಞತೆಗಾಗಿ ಅವರು ಈ ದಾನ ಮಾಡಿದ್ದು ಎಂಬುದಕ್ಕೆ ಅವರ ಈ ಉದ್ಗಾರ ಸಾಕ್ಷಿಯಾಗಿದೆ.
ಜಾಲಿ ನನ್ನ ಪುತ್ರ, ಕಪ್ಪು ಜಿಂಕೆ, ಪುತ್ರಿ, ಮಾದ್ರಿದೇವಿ (ಪತ್ನಿ) ಇದೆಲ್ಲವನ್ನು ನಾನು ಮರು ಯೋಚಿಸದೆ ದಾನ ಮಾಡಿದೆನು. ಏಕೆಂದರೆ ಬೋಧಿಯ ಏಕಮೇವ ಕಾರಣದಿಂದಾಗಿ ಹಾಗೆ ಮಾಡಿದೆನು.
ಮಹಾರಾಜ, ವೆಸ್ಸಂತರ ರಾಜರು ಅಕ್ರೋಧದಿಂದ ಕ್ರೋಧವನ್ನು ಜಯಿಸಿದ್ದರು. ಸಾಧುವಲ್ಲದವ (ಕೆಟ್ಟವರನ್ನು) ರನ್ನು ಸಾಧುತನದಿಂದ (ಒಳ್ಳೆಯತನದಿಂದ) ಜಯಿಸಿದ್ದರು, ಲೋಭಿಗಳನ್ನು ದಾನದಿಂದ ಜಯಿಸಿದ್ದರು ಮತ್ತು ಸುಳ್ಳುಗಾರರನ್ನು ಸತ್ಯದಿಂದ ಜಯಿಸಿದರು ಹಾಗು ಸರ್ವ ಅಕುಶಲಗಳನ್ನು ಕುಶಲದಿಂದ ಜಯಿಸಿದ್ದರು.
ಯಾವಾಗ ಅವರು ಹೀಗೆ ದಾನ ಮಾಡುತ್ತಿರುವರೋ, ಸದಾ ಧಮ್ಮದ (ಸತ್ಯದ) ಹುಡುಕಾಟದಲ್ಲಿರುವರೋ ಯಾರ ಗುರಿಯು ಸತ್ಯವೇ ಆಗಿದೆಯೋ ಆಗ ಯಾವ ಗಾಳಿಯಿಂದ ಪೃಥ್ವಿಯು ವಿಶ್ರಾಂತಿಸುತ್ತಿದೆಯೋ, ಆ ಗಾಳಿಯು ಈ ದಾನದ ಪ್ರಭಾವಕ್ಕೆ ಒಳಗಾಗಿ ಚಾಂಚಲ್ಯಕ್ಕೀಡಾಗುತ್ತದೆ. ಸ್ವಲ್ಪ ಸ್ವಲ್ಪವಾಗಿ, ಒಂದರ ನಂತರ ಒಂದಾಗಿ ಮಹತ್ತರವಾದ ವಾತವು ಚಲಿಸಲು ಆರಂಭಿಸುತ್ತದೆ. ಮೇಲೆ ಕೆಳಗೆ ಪೃಥ್ವಿಯ ಪ್ರತಿ ಭಾಗದಲ್ಲಿ ಚಲಿಸಲು ಆರಂಭಿಸಿದ್ದರಿಂದ ಕೆಲವು ವೃಕ್ಷಗಳು ಬುಡಮೇಲಾಗುತ್ತದೆ. ಮೋಡಗಳ ರಾಶಿಯು ಆಕಾಶದಲ್ಲಿ ಸೇರುತ್ತವೆ. ಭಯಾನಕ ಬಿರುಗಾಳಿಯು ಎದ್ದು ಧೂಳಿನಿಂದ ಆವೃತವಾಗುತ್ತದೆ. ದೇವಲೋಕಗಳು ಒಂದಾಗುತ್ತದೆ. ಚಂಡಮಾರುತಗಳು ಹಿಂಸಾತ್ಮಕವಾಗಿ ಬೀಸುತ್ತದೆ. ಆ ಬೃಹತ್ ಶಬ್ದವು ಕೇಳಿಬರುತ್ತದೆ. ಆ ಭಯಾನಕ ವಾಯು ಉದ್ವಿಗ್ನತೆಗೆ ಜಲವು ಚಲಿಸಲಾರಂಭಿಸುತ್ತದೆ. ಜಲದ ವೇಗದ ಚಲನೆಗೆ ಹೆದರಿ ಜಲಜೀವಿಗಳಾದ ಮೀನು, ತಿಮಿಂಗಿಲಗಲು ಕ್ಷೊಭೆಗೆ ಒಳಗಾಗುವುದು. ಅಲೆಗಳು ಎರಡು ದಡಗಳಲ್ಲಿಯೂ ಅಪ್ಪಳಿಸುತ್ತಿರುತ್ತದೆ. ಜಲಜೀವಿಗಳು ತತ್ತರಿಸಿ ಘೀಳಿಡುತ್ತವೆ. ನೊರೆಯ ರಾಶಿ ಎದ್ದೇಳುತ್ತದೆ. ಮಹಾಸಮುದ್ರವು ಅಗಲವಾಗಿ ತೆಗೆದುಕೊಳ್ಳುತ್ತದೆ. ನೀರು ಬೃಹದಾಕಾರವಾಗಿ ನುಗ್ಗುತ್ತದೆ. ಅಲೆಗಳ ಅಪ್ಪಳಿಸುವಿಕೆ ಹೆಚ್ಚಾಗುತ್ತದೆ. ಅಸುರರು, ಗರುಡ, ಯಕ್ಷರು ಮತ್ತು ನಾಗರುಗಳು ಭಯಭೀತರಾಗುತ್ತಾರೆ.
ಏನು ಈಗ ಮಾಡುವುದು? ಹೇಗೆ ಈಗ ಜೀವನ! ಸಮುದ್ರವು ತಲೆಕೆಳಗಾಗಿ ತಿರುಗುವುದೇ? ಎಂದು ಚಿಂತೆಪಡುತ್ತಿರುತ್ತಾರೆ. ಅವರ ಹೃದಯಗಳು ಭೀತಿಯಿಂದ ಆವೃತವಾಗುತ್ತವೆ. ಎಲ್ಲೆಡೆ ಭೀತಿ ಚಲನೆ ಉದ್ವಿಗ್ನತೆ, ಇದರ ಪರಿಣಾಮವಾಗಿ ಭೂಕಂಪನವಾಗುತ್ತದೆ. ದೃಢವಾದ ಪರ್ವತಗಳೂ ಹಾಗೆಯೇ ಸಾಗರವೂ ಸಹಾ ಅಲುಗಾಡುತ್ತದೆ. ಸಿನೆರೂ ಪರ್ವತ ಕಂಪನಮಯವಾಗುತ್ತದೆ ಮತ್ತು ಅದರ ಶಿಲಾಪರ್ವತ ಶ್ರೇಣಿಯು ತಿರುವಲ್ಪಡುತ್ತದೆ. ಈ ಭೂಕಂಪನದಿಂದಾಗಿ, ಸರ್ಪಗಳು, ಮುಂಗುಸಿಗಳು, ಬೆಕ್ಕುಗಳು, ನರಿಗಳು, ಕರಡಿಗಳು, ಜಿಂಕೆಗಳು, ಪಕ್ಷಿಗಳು ಅತಿಯಾಗಿ ಭೀತಿಗೊಳಲ್ಪಡುವವು ಮತ್ತು ಯಕ್ಷರಲ್ಲಿನ ದುರ್ಬಲರು ಸಹಾ ಅಳುತ್ತಾರೆ. ಆದರೆ ಬಲಶಾಲಿಗಳಾದ ಯಕ್ಷರು ಮೋದಗೊಳ್ಳುತ್ತಾರೆ.
ಓ ಮಹಾರಾಜ, ಹೇಗೆ ಒಂದು ದೊಡ್ಡದಾದ, ಅಗಲವಾದ ಪಾತ್ರೆ ತೆಗೆದುಕೊಂಡು ಒಲೆಯ ಮೇಲಿಟ್ಟು ಅದರಲ್ಲಿ ನೀರು, ಧಾನ್ಯಗಳು, ಅಕ್ಕಿಯನ್ನು ಹಾಕಿ ಬೇಯಿಸಲು ಆರಂಭಿಸಬೇಕು. ಬಿಸಿ ಏರುತ್ತಿದ್ದಂತೆ, ನೀರು ಚಲಿಸಲಾರಂಭಿಸುತ್ತದೆ. ಆಗ ಜೊತೆಯಲ್ಲಿ ಆ ಧಾನ್ಯಗಳೆಲ್ಲವೂ ಚಲಿಸಲಾರಂಭಿಸುತ್ತವೆ, ಆಗ ಗುಳ್ಳೆಗಳು ಎದ್ದು, ನೊರೆಯ ರಾಶಿಯೇ ನಿಮರ್ಿತವಾಗುತ್ತದೆ. ಅದೇರೀತಿಯಲ್ಲಿ ಮಹಾರಾಜ, ವೆಸ್ಸಂತರ ರಾಜರು ಯಾವುದೆಲ್ಲವೂ ಪರರಿಗೆ ತ್ಯಜಿಸಲು ಕಡುಕಷ್ಟಕರವೋ, ಅಂತಹುದನ್ನು ದಾನ ಮಾಡಿದಾಗ, ವಾಯುವು ಆಗ ತನ್ನನ್ನು ನಿಯಂತ್ರಿಸಲಾಗದೆ ಚಲಿಸಿ, ಅದರ ಪರಿಣಾಮದಿಂದಾಗಿ ಜಲವು ಚಲಿಸಿ, ಜಲದ ಜೀವಿಗಳು ಕ್ಷೊಭೆಗೆ ಒಳಗಾಗಿ ವಿಶಾಲ ಪೃಥ್ವಿಯು ಕಂಪಿಸಲಾರಂಭಿಸುತ್ತದೆ ಮತ್ತು ಆಗ ವಾಯುವು ಮತ್ತು ಜಲವು ಮತ್ತು ಪೃಥ್ವಿಯು ಒಂದಾಗುತ್ತದೆ. ಇವೆಲ್ಲವೂ ದಾನದ ಪರಿಣಾಮವಾಗಿದೆ. ಇದಕ್ಕೆ ಸಮನಾದ ದಾನ ಇನ್ನೊಂದಾಗಿರಲಿಲ್ಲ. ಓ ರಾಜನೇ, ರಾಜ ವೆಸ್ಸಂತರರ ದಾನದ ಶಕ್ತಿಯು ಅಷ್ಟು ಬಲಯುತವಾಗಿತ್ತು.
ಓ ರಾಜನೇ, ಈ ಪೃಥ್ವಿಯಲ್ಲಿ ಹೇರಳವಾಗಿ ರತ್ನಗಳು ದೊರೆಯುತ್ತದೆ. ಅವೆಂದರೆ: ಇಂದ್ರನೀಲ, ಮಹಾನೀಲೊ, ಜ್ಯೋತಿರಸ ವೇಳುರಿಯೋ (ಬೆಕ್ಕಿನ ಕಣ್ಣು), ಉಮ್ಮಪುಷ್ಪ, ಮನೋಹರ, ಸೂರ್ಯಕಾಂತ, ಚಂದ್ರಕಾಂತ, ವಜ್ರ, ಖಜ್ಜೋಪನಕ, ಪುಸ್ಸರಾಗ, ಮಾಣಿಕ್ಯ (ಲೋಹಿತಂಗೊ), ಮಸಾರಕಲ್ಲು ಇತ್ಯಾದಿ ಇದ್ದರೂ ಸಹ ಚಕ್ರವತರ್ಿಯ ಬಳಿ ಇರುವ ಚಕ್ರವತರ್ಿ ಮಣಿಯು ಇವೆಲ್ಲಕ್ಕಿಂತ ಶ್ರೇಷ್ಠವೆಂದು ಪರಿಗಣಿಸಲ್ಪಡುತ್ತದೆ. ಅದೇರೀತಿಯಲ್ಲಿ ಭೂಮಿಯ ಮೇಲಿದ್ದ ಯಾರು ಏನೇ ದಾನ ಮಾಡಿದ್ದರೂ ವೆಸ್ಸಂತರ ದಾನಕ್ಕೆ ಸಾಟಿಯೇ ಇಲ್ಲ, ವೆಸ್ಸಂತರರು ಅವರನ್ನೆಲ್ಲಾ ಮೀರಿಸುತ್ತಾರೆ. ಆದ್ದರಿಂದಾಗಿ ಅವರ ದಾನಕ್ಕೆ ಪೃಥ್ವಿಯೇ ಏಳುಬಾರಿ ಕಂಪಿಸಿತ್ತು.
ಇದು ಆಶ್ಚರ್ಯವಾಗಿದೆ ಭಂತೆ ನಾಗಸೇನ, ಬುದ್ಧರು ಮಹಾ ಅದ್ಭುತ ಸಂಪನ್ನರು, ಅವರು ಬೋಧಿಸತ್ವರಾಗಿದ್ದಾಗಲೂ (ವೆಸ್ಸಂತರ), ಅವರು ಜಗತ್ತಿನಲ್ಲಿ ಅಸಮಾನರಾಗಿದ್ದರು. ಅಷ್ಟೇ ಮೃದುವಾಗಿದ್ದರು, ಅಷ್ಟೇ ಕರುಣಾಭರಿತರಾಗಿದ್ದರು. ಅವರು ತಮ್ಮ ಗುರಿಯ ಆದರ್ಶವನ್ನು ಎತ್ತಿಹಿಡಿದಿದ್ದರು ಮತ್ತು ಅವರ ವೀರ್ಯ ಪರಾಕ್ರಮವು ಸಹಾ ಶ್ರೇಷ್ಠಮಟ್ಟದ್ದೇ ಆಗಿತ್ತು. ನೀವು ನಾಗಸೇನರವರೇ, ಬೋಧಿಸತ್ವರ ಬೃಹತ್ ಶಕ್ತಿಯನ್ನು ಸ್ಪಷ್ಟವಾಗಿ ಪ್ರಕಾಶಪಡಿಸಿದಿರಿ, ನೀವು ಅವರು ಹೇಗೆ ಪಾರಾಮಿತ (ಪಾರಮಿ)ಗಳನ್ನು ಪರಿಪೂರ್ಣಗೊಳಿಸಿದಿರೆಂದು ತಿಳಿಸಿದಿರಿ. ನೀವು ತಥಾಗತರು ಹೇಗೆ ತಮ್ಮ ಉದಾತ್ತ ಜೀವನವನ್ನು ಹಿಂದಿನ ಜನ್ಮದಲ್ಲೂ ಪಾಲಿಸಿದ್ದರು ಎಂದು ತೋರಿಸಿದಿರಿ. ನಿಜಕ್ಕೂ ಭಗವಾನರ ಜೀವನ ಉತ್ಕೃಷ್ಟ ಹಾಗು ಅತ್ಯುತ್ತಮವಾಗಿತ್ತು. ಚೆನ್ನಾಗಿ ವಿವರಿಸಿದಿರಿ ನಾಗಸೇನ, ಭಗವಾನರ ಧಮ್ಮವು ಸಹಾ ಪರಮ ಉತ್ಕೃಷ್ಟವಾದುದು, ಅವರ ಪರಿಪೂರ್ಣತೆ ಸ್ತುತಿಗೆ ಅರ್ಹವಾದುದು, ವಾದಕ್ಕಿದ್ದ ಕಗ್ಗಂಟುಗಳನ್ನೆಲ್ಲಾ ಬಿಡಿಸಿದಿರಿ, ಪ್ರತಿಬಾರಿಯ ಸಿದ್ಧಾಂತದ ಮಡಿಕೆಯು ಚೂರಾಯಿತು. ಈ ದ್ವಂದ್ವ ಪ್ರಶ್ನೆಯನ್ನು ಸ್ಪಷ್ಟವಾಗಿ ಪರಿಹರಿಸಿದಿರಿ,  ಕಾಡಾಗಿದ್ದುದ್ದು ತೆರೆದ ನಗರವಾಯಿತು, ಅಗಹನವಾದುದನ್ನು ಗಹನ ಮಾಡಿದಿರಿ. ಜಿನಪುತ್ತರಿಗೆ ನಿಬ್ಬಾಣ ದೊರೆಯಲಿ, ಓ ಭಿಕ್ಷು ಪರಿವಾರದ ನಾಯಕರೇ ನೀವು ಹೇಳಿದ್ದನ್ನು ನಾನು ಒಪ್ಪಿದ್ದೇನೆ, ಸ್ವೀಕರಿಸಿದ್ದೇನೆ.


5. ಸಿವಿರಾಜ ಚಕ್ಷುದಾನ ಪ್ರಶ್ನೆ

ಭಂತೆ ನಾಗಸೇನ, ನೀವು (ಬೌದ್ಧರು) ಹೇಳುವಿರಿ: ಸಿವಿ ರಾಜರು ದಾನ ಕೇಳಿದ ವ್ಯಕ್ತಿಗೆ ಕಣ್ಣುಗಳನ್ನು ಕೊಟ್ಟನೆಂದು. ಆದರೆ ನಂತರ ಆತನು ಅಂಧನಾದ ಮೇಲೆ, ಆತನಿಗೆ ದಿವ್ಯಚಕ್ಷುವು ಉದಯಿಸಿತು ಎಂದು ಕೇಳಿದ್ದೇನೆ. ಈ ವಾಕ್ಯವನ್ನು ಒಪ್ಪುವಂತಿಲ್ಲ ಎಂದು ಹೇಳುತ್ತೇನೆ, ತಪ್ಪೆಂದು ಹೇಳುತ್ತೇನೆ. ಏಕೆಂದರೆ ಸುತ್ತವೊಂದರಲ್ಲಿ ಹೀಗೆ ಕೇಳಿದ್ದೇನೆ: ಯಾವಾಗ ಕಾರಣವು ನಾಶವಾಗುವುದೋ, ಆಗ ಯಾವ ಕಾರಣವಿಲ್ಲದೆ ಯಾವ ಆಧಾರವೂ ಇಲ್ಲದೆ, ಯಾವ ಇದ್ದಿಯಿಲ್ಲದೆ ದಿವ್ಯಚಕ್ಷುವು ಉದಯಿಸಲಾಗದು. ಹೀಗಿರುವಾಗ, ಈ ಸುತ್ತ ವಾಕ್ಯವು ನಿಜವಾದಾಗ ಆತನಲ್ಲಿ ದಿವ್ಯಚಕ್ಷುವು ಉದಯಿಸಿದ್ದು ಸುಳ್ಳಾಗುತ್ತದೆ, ಇದಲ್ಲದೆ ಆತನಿಗೆ ದಿವ್ಯಚಕ್ಷುವು ಉದಯಿಸಿದ್ದು ನಿಜವಾದರೆ, ಆಗ ಆತನು ಚಕ್ಷುದಾನ ಮಾಡಿದ್ದು ಸುಳ್ಳಾಗುತ್ತದೆ. ಈ ದ್ವಂದ್ವಮಯ ದ್ವಿಅಂಶಿಕ ಪ್ರಶ್ನೆಯನ್ನು, ಕಗ್ಗಂಟನ್ನು, ಬಾಣಕ್ಕಿಂತ ಹರಿತವಾದ, ಕಾಡಿಗಿಂತಲೂ ಗಹನವಾದ ಈ ಸಮಸ್ಯೆ ಹೇಗೆ ಪರಿಹರಿಸುವಿರಿ? (94)
ಓ ಮಹಾರಾಜ, ಸಿವಿ ಮಹಾರಾಜ ಚಕ್ಷುದಾನ ಮಾಡಿದ್ದು ನಿಜವೇ ಆಗಿದೆ. ಇದರಲ್ಲಿ ಯಾವ ಸಂದೇಹವೂ ಇಲ್ಲ ಮತ್ತು ಹಾಗೆಯೇ ಅವರಿಗೆ ದಿವ್ಯಚಕ್ಷುವು ಸಹಾ ಉಂಟಾಗಿದ್ದು ಸಹಾ ನಿಜವೇ ಆಗಿದೆ. ಇದರಲ್ಲಿಯೂ ಸಹಾ ಯಾವ ಸಂಶಯ ಬೇಡ.
ಆದರೆ ಭಂತೆ ನಾಗಸೇನ, ಯಾವುದರ ಕಾರಣವು ನಾಶವಾಗಿದೆಯೋ, ಯಾವುದೇ ಆಧಾರವಿಲ್ಲದೆ, ಕಾರಣವಿಲ್ಲದೆ, ಅವಲಂಬನೆಯಿಲ್ಲದೆ ದಿವ್ಯಚಕ್ಷು ಹೇಗೆ ಉದಯಿಸಲು ಸಾಧ್ಯ?
ಓ ರಾಜ ಹಾಗಲ್ಲ.
ಭಂತೆ ಹಾಗಾದರೆ ಇಲ್ಲಿ ದಿವ್ಯಚಕ್ಷು ಉದಯಿಸಲು ಕಾರಣವಾದರೂ ಏನು? ಆಧಾರವಾಗಿದ್ದುದು (ಕಣ್ಣು) ನಾಶವಾಯಿತು. ಯಾವ ಆಧಾರವೂ ಈಗ ಇಲ್ಲ, ಓಹ್ ನನಗೆ ಇದರ ಬಗ್ಗೆ ಸ್ಪಷ್ಟವಾಗಿ ತಿಳಿಯಪಡಿಸಿ.
ಓ ಮಹಾರಾಜ, ಈ ಲೋಕದಲ್ಲಿ ಸತ್ಯ ಇರುವುದಾದರೂ ಏಕೆ? ಸತ್ಯವಾದಿಗಳು ಸತ್ಯದ ಹೆಸರಿನಲ್ಲಿ ಸತ್ಯಕ್ರಿಯೆಗಳನ್ನು ಮಾಡುತ್ತಾರೆ.
ಹೌದು ಭಂತೆ, ಲೋಕದಲ್ಲಿ ಸತ್ಯಬಲವಿದೆ, ಸತ್ಯವಾದಿಗಳು ಸತ್ಯಕ್ರಿಯೆಗಳನ್ನು ಮಾಡಿ ವರ್ಷಗಳನ್ನು (ಮಳೆ) ತರಿಸುತ್ತಾರೆ, ಅಗ್ನಿಗಳನ್ನು ಆರಿಸುತ್ತಾರೆ, ವಿಷವನ್ನು ದುರ್ಬಲಗೊಳಿಸಿ ಹಾನಿಯಿಲ್ಲದಂತೆ ಮಾಡುತ್ತಾರೆ. ಅನ್ಯ ನಾನಾರೀತಿಯ ಕ್ರಿಯೆಗಳನ್ನು ಮಾಡುತ್ತಾರೆ.
ಹಾಗಾದರೆ ಮಹಾರಾಜ, ಸರಿಹೋಯಿತು, ಅದು ಸಿವಿ ಮಹಾರಾಜರ ಸತ್ಯಕ್ರಿಯೆಯಿಂದ ದಿವ್ಯಚಕ್ಷುವು ಉಂಟಾಗಿದೆ. ಅಲ್ಲಿ ಬೇರ್ಯಾವ ಕಾರಣ ಅಡಗಿಲ್ಲ. ಅಲ್ಲಿ ಸತ್ಯವೇ ಕಾರ್ಯಕರ್ತವಾಗಿದೆ. ಊಹಿಸಿ ಮಹಾರಾಜ, ಯಾವುದಾದರೂ ಸಿದ್ಧ ಸತ್ಯ ಮಂತ್ರಿಸಿದ್ಧಿಯಿಂದ ಬೃಹತ್ ಮಳೆ ಬೀಳಲಿ ಎಂದೊಡನೆಯೇ ಆ ಸತ್ಯ ಮಂತ್ರಬಲದಿಂದ ಬೃಹತ್ ಮಳೆಯು ಬೀಳುವಂತೆ ಆಗಿದೆ, ಹೇಳಿ ಅಲ್ಲಿ ಮಳೆಗೆ ಬೇರೆ ಕಾರಣವಿದೆಯೇ?
ಇಲ್ಲ ಭಂತೆ, ಸತ್ಯ ಮಂತ್ರವೇ ಕಾರಣವಾಗಿದೆ.
ಅದೇರೀತಿಯಲ್ಲಿ ಮಹಾರಾಜ, ಇಲ್ಲಿ ಬೇರೆ ಯಾವ ಸಾಧಾರಣ ಕಾರಣ ಇಲ್ಲವಾಗಿದೆ. ಸತ್ಯಕ್ರಿಯೆಯಿಂದಲೇ ದಿವ್ಯಚಕ್ಷು ಉತ್ಪನ್ನವಾಗಿದೆ.
ಊಹಿಸಿ ಮಹಾರಾಜ, ಸಿದ್ಧನೊಬ್ಬನು ಸತ್ಯಕ್ರಿಯೆಯಿಂದ ಈ ಜ್ವಲಿತ, ಪ್ರಜ್ವಲಿತ, ಮಹಾ ಅಗ್ನಿರಾಶಿಯೇ ಹಿಂದೆ ಹೋಗು ಎಂದೊಡನೆಯೇ ಅದು ಹಾಗೇ ಆಗುವುದು, ಅಲ್ಲಿ ಸತ್ಯಕ್ರಿಯೆಯ ವಿನಃ ಬೇರೆ ಯಾವುದಾದರೂ ಕಾರಣವು ಕ್ರಿಯೆ ಮಾಡಿತೇ?
ಇಲ್ಲ ಭಂತೆ, ಅಲ್ಲಿ ಸತ್ಯಮಂತ್ರವೊಂದೇ ಕ್ರಿಯೆ ಮಾಡಿತು.
ಹಾಗೆಯೇ ಮಹಾರಾಜ, ಅಲ್ಲಿ ಸಾಧಾರಣ ಕಾರಣವು ಕ್ರಿಯೆ ವ್ಯಕ್ತಪಡಿಸಿಲ್ಲ. ಅಲ್ಲಿ ಸತ್ಯಬಲದಿಂದ ದಿವ್ಯಚಕ್ಷು ಉತ್ಪನ್ನವಾಯಿತು.
39. ಊಹಿಸಿ ಮಹಾರಾಜ, ಸಿದ್ಧನೊಬ್ಬನು ತನ್ನ ಮಂತ್ರ ಸತ್ಯ ಕ್ರಿಯೆಯಿಂದ ವಿಷವೂ, ಹಾಲಾಹಲವೂ ಆದ ಇದು ಔಷಧಿಯಾಗಲಿ ಎಂದೊಡನೆಯೇ ಅದು ಹಾಗೇ ಆಗುವುದು. ಅಲ್ಲಿ ಸತ್ಯಕ್ರಿಯೆಯ ವಿನಃ ಬೇರೆ ಯಾವುದಾದರೂ ಕಾರಣವೂ ಕ್ರಿಯೆ ಮಾಡಿತೇ?
ಇಲ್ಲ ಭಂತೆ, ಅಲ್ಲಿ ಸತ್ಯಮಂತ್ರವೊಂದೇ ಕೆಲಸ ಮಾಡಿತು.
ಹಾಗೆಯೇ ಮಹಾರಾಜ, ಶಿವಿ ಚಕ್ರವತರ್ಿಯ ವಿಷಯದಲ್ಲಿ ಸಾಧಾರಣ ಕಾರಣದಿಂದ ದಿವ್ಯಚಕ್ಷು ಉದಯಿಸಲಿಲ್ಲ. ಅಲ್ಲಿ ಸತ್ಯಬಲದಿಂದಲೇ ದಿವ್ಯಚಕ್ಷು ಉತ್ಪನ್ನವಾಯಿತು.
ಓ ಮಹಾರಾಜ, ನಾಲ್ಕು ಆರ್ಯಸತ್ಯಗಳಿಗೆ ಬೇರ್ಯಾವ ಕಾರಣವಿಲ್ಲ. ಅದು ಸತ್ಯಗಳ ಸಾಕ್ಷಾತ್ಕಾರಗಳಿಂದಾಗಿಯೇ ಪ್ರಾಪ್ತಿಯಾಗಿದೆ, ಚೀನಾದ ಭೂಮಿಯಲ್ಲಿ ಚೀನಿ ರಾಜನಿದ್ದನು. ಆತನು ಮಹಾಸಾಗರಕ್ಕೆ ಮೋಡಿ ಹಾಕಲು ನಿರ್ಧರಿಸಿದನು. ಆತನು ನಾಲ್ಕು ತಿಂಗಳಲ್ಲಿ ಒಮ್ಮೆ ಸತ್ಯಕ್ರಿಯೆಗಳನ್ನು ಮಾಡುತ್ತಿದ್ದನು. ನಂತರ ಅತನು ಸಿಂಹಗಳಿಂದ ಆವೃತವಾದ ರಥದಲ್ಲಿ ಸಾಗರಕ್ಕೆ ಒಂದು ಯೋಜನದ ದೂರದಲ್ಲಿ ಪ್ರವೇಶಿಸಿದನು. ನಂತರ ರಥದ ಮುಂಭಾಗದಲ್ಲಿರುವ ಅಲೆಗಳು ಹಿಂತಿರುಗಿದವು ಮತ್ತು ಆತನು ಹಿಂತಿರುಗಿದಾಗ ಅವು ಅದೇ ಸ್ಥಳಕ್ಕೆ ಹರಿದವು. ಆದರೆ ಎಲ್ಲಾ ಮಾನವರು ಮತ್ತು ದೇವತೆಗಳ ಬಾಹುಬಲಕ್ಕೆ ಆ ಸಮುದ್ರವನ್ನು ಎಳೆಯಲು ಆಗುತ್ತಿತ್ತೇ?
ಭಂತೆ, ಚಿಕ್ಕ ಕೆರೆಯನ್ನು ಸಹಾ ಹಿಮ್ಮೆಟ್ಟಲು ಸಾಧ್ಯವಿಲ್ಲ, ಇನ್ನು ಮಹಾ ಸಮುದ್ರವನ್ನು ಮಾಡಲಾದೀತೆ?
ಹಾಗಾದರೆ ಸತ್ಯಬಲವನ್ನು ಅರಿಯಿರಿ, ಅದು ಮುಟ್ಟದಂತಹ ಸ್ಥಳವಿಲ್ಲ.
ಓ ಮಹಾರಾಜ, ಒಮ್ಮೆ ಧಮ್ಮರಾಜನಾಗಿದ್ದಂತಹ ಅಶೋಕನು ಪಾಟಲಿಪುತ್ರ ನಗರದ ಮಧ್ಯದಲ್ಲಿ ನಿಂತನು. ತನ್ನ ನಾಗರಿಕರು, ಸೇವಕರು, ಅಧಿಕಾರಿಗಳು ಸಹಾ ಇದ್ದರು. ಹಿಮಾಲಯದಿಂದ ಗಂಗೆಯು ಹರಿಯುತ್ತ 500 ಯೋಜನ ದೂರದ ಉದ್ದಗಲಕ್ಕೂ ಹರಿಯುತ್ತಿತ್ತು. ಆಗ ಅಶೋಕನು ತನ್ನ ಅಧಿಕಾರಿಗಳಿಗೆ ಹೀಗೆ ಹೇಳಿದನು: ಓ ನನ್ನ ಅಧಿಕಾರಿಗಳೇ, ಯಾರಾದರೂ ಒಬ್ಬರು ಈ ಮಹಾಗಂಗೆಯನ್ನು ಹಿಮ್ಮುಖವಾಗಿ ಮತ್ತು ಹಿಂದೆ ಹರಿಯುವಂತೆ ಮಾಡುವರೇ?
ಇಲ್ಲ ಪ್ರಭು ಅಸಾಧ್ಯ ಎಂದು ಅವರು ಹೇಳಿದರು. ಆಗ ಬಿಂದುಮತಿ ಎಂಬ ನರ್ತಕಿಯೊಬ್ಬಳು, ನದಿಯ ಪಕ್ಕದ ಗುಂಪಿನಲ್ಲಿದ್ದಳು, ಆಕೆ ರಾಜನ ಪ್ರಶ್ನೆಯನ್ನು ಪ್ರಜೆಗಳಿಂದ ಕೇಳಿದ್ದಳು. ಆಗ ಆಕೆ ತನ್ನಲ್ಲೇ ಹೀಗೆ ಹೇಳಿಕೊಂಡಳು ನಾನು ಇಲ್ಲಿದ್ದೇನೆ, ಪಾಟಲಿಪುತ್ತದ ವೇಶ್ಯೆ, ದೇಹವನ್ನು ಮಾರಿ ತನ್ನ ಜೀವನ ಸಾಗಿಸುತ್ತಿದ್ದೇನೆ, ಅತಿ ತುಚ್ಚ ಜೀವನ ನಡೆಸುತ್ತಿದ್ದೇನೆ, ನನ್ನಂತಹ ತುಚ್ಚಳಿಂದಲೂ ಸಹಾ ಸಾಧ್ಯವಾಗುವಂತಹ ಸತ್ಯಕ್ರಿಯೆಯ ಬಲವನ್ನು ರಾಜನು ಕಾಣಲಿ ಎಂದು ಆಕೆ ಸತ್ಯಕ್ರಿಯೆ ಮಾಡಿದಳು. ಆ ಕ್ಷಣದಿಂದಲೇ ಗಂಗಾನದಿಯು ಹಿಮ್ಮುಖವಾಗಿ ಹರಿಯುತ್ತ ಹಿಂದಕ್ಕೆ ಹರಿಯಿತು. ಅದನ್ನು ಕಂಡು ಜನರು ಆಶ್ಚರ್ಯಪಟ್ಟರು! ಆಗ ರಾಜನು ಸಹಾ ಮಹಾ ಗಂಗೆಯ ಸುಳಿಗಳ, ಅಲೆಗಳ ಶಬ್ದವನ್ನು ಕಂಡನು, ಆಶ್ಚರ್ಯಪಟ್ಟನು. ನಂತರ ಹೇಗಾಯಿತೆಂದು ಅಧಿಕಾರಿಗಳಿಗೆ ಕೇಳಿದನು ಗಂಗೆಯು ಹಿಮ್ಮುಖವಾಗಿ ಹೇಗೆ ಹರಿಯುತ್ತಿದೆ?
ಆಗ ಅವರೆಲ್ಲರೂ ನಡೆದ ವಿಷಯವನ್ನು ತಿಳಿಸಿದರು. ರಾಜನು ಆಶ್ಚರ್ಯಚಕಿತನಾಗಿ ಬಿಂದುಮತಿಯ ಬಳಿಗೆ ಬಂದು ಹೀಗೆ ಕೇಳಿದರು. ನಿನ್ನ ಸತ್ಯಕ್ರಿಯೆಯಿಂದ ಮಹಾ ಗಂಗಾನದಿಯು ಹಿಮ್ಮುಖವಾಗಿ ಹರಿಯುತ್ತಿದೆ ಎನ್ನಿತ್ತಿದ್ದಾರೆ, ಇದು ನಿಜವೇ?
ಹೌದು ಪ್ರಭು.
ಆಗ ರಾಜನು ಹೀಗೆ ಪ್ರಶ್ನಿಸಿದನು ನಿನ್ನಲ್ಲಿ ಅಂತಹ ಶಕ್ತಿ ಸಾಮಥ್ರ್ಯವಿದೆಯೇ? ಅಥವಾ ನಿನ್ನ ಮನಸ್ಸನ್ನು ಓದಿದ ಯಾರಾದರೂ ಮಾಡಿದರೆ? ಯಾವ ಅರ್ಹತೆಯಿಂದಾಗಿ, ಕ್ಷುಲ್ಲುಕಳಾದ ನಿನ್ನಲ್ಲಿ ಗಂಗೆಯನ್ನು ಹಿಮ್ಮುಖವಾಗಿ ಹರಿಸಲು ಸಾಧ್ಯವಾಯಿತು?
ಅದು ಸತ್ಯದ ಬಲದಿಂದಾಗಿ ಆಯಿತು ಮಹಾರಾಜ.
ರಾಜನು ಕೇಳಿದನು ಅಂತಹ ಶಕ್ತಿಯು ನಿನ್ನಲ್ಲಿದೆಯೇ? ನೀನಾದರೂ ವಕ್ರ ಮತ್ತು ಸಡಿಲ ಚಾರಿತ್ರ್ಯದವಳು. ಶೀಲವಿಲ್ಲದವಳು, ಸಂಯಮವಿಲ್ಲದವಳು, ಪಾಪಿಯು, ಎಲ್ಲಾ ರೇಖೆಗಳನ್ನು ದಾಟಿದವಳು, ಮಿತಿಮೀರಿದವಳು, ಮೂರ್ಖರ ಜೊತೆ ವಾಸಿಸುವವಳು ಆಗಿರುವೆಯಲ್ಲಾ?
ನೀವು ಹೇಳುವ ಮಾತೆಲ್ಲ ನಿಜವೇ ಮಹಾರಾಜ, ನಾನು ಅಂತಹವೇ ಆಗಿದ್ದರೂ ಸಹಾ ನಾನು ಸತ್ಯಕ್ರಿಯೆಯನ್ನು ಮಾಡಿದರೆ ಇಡೀ ದೇವಮಾನವರ, ಇಡೀ ಲೋಕಗಳನ್ನು ಬುಡಮೇಲು ಮಾಡಬಲ್ಲೆ.
ಆಗ ರಾಜರು ಏನು ಸತ್ಯಕ್ರಿಯೆಯ ಬಲವೇ? ಎಲ್ಲಿ ಹೇಳು ನೋಡೋಣ, ನಾನು ಒಮ್ಮೆ ಆಲಿಸುವಂತಾಗಲಿ.
ಓ ಮಹಾರಾಜ, ನನಗೆ ಯಾರೇ ಆಗಲಿ, ಚಿನ್ನವನ್ನು ನೀಡಿದಾಗ, ಆತನು ಕ್ಷತ್ರಿಯನೇ ಆಗಲಿ, ಬ್ರಾಹ್ಮಣನೇ ಆಗಲಿ, ವ್ಯಾಪಾರಿಯೇ ಆಗಲಿ, ಅಥವಾ ಸೇವಕನೇ ಆಗಲಿ, ಅವರೆಲ್ಲರನ್ನು ನಾನು ಸಮವಾಗಿ ಕಾಣುತ್ತೇನೆ, ಕ್ಷತ್ರಿಯನು ಆದ ಮಾತ್ರಕ್ಕೆ ಅತಿ ಆದರವಾಗಲಿ ಅಥವಾ ಗುಲಾಮನಾದ ಮಾತ್ರಕ್ಕೆ ಕೀಳಾಗಿ ಕಾಣುವುದಿಲ್ಲ, ಸರ್ವರಿಗೂ ನಾನು ಅಸಹ್ಯಪಡದೆ ಸೇವೆ ಮಾಡುತ್ತೇನೆ, ಸಂತೋಷಪಡಿಸುತ್ತೇನೆ, ಇದೇ ನನ್ನಲ್ಲಿರುವ ಸತ್ಯಬಲವಾಗಿದೆ. ಇದನ್ನು ನುಡಿದು ನಾನು ಸತ್ಯಕ್ರಿಯೆ ಮಾಡಿದ್ದೇನೆ. ಇದರಿಂದಾಗಿಯೇ ಗಂಗೆಯು ಹಿಮ್ಮುಖವಾಗಿ ಹರಿದಿದೆ.
ಆದ್ದರಿಂದ ಓ ಮಹಾರಾಜ, ಸತ್ಯಕ್ಕಿಂತಲು ಸರಿಸಮಾನವಾದುದಿಲ್ಲ ಮತ್ತು ಹೀಗಾಗಿಯೇ ಸಿವಿಯು ಯಾಚಕನಿಗೆ ಕಣ್ಣುಗಳನ್ನು ಕೊಟ್ಟನು ಮತ್ತು ಸತ್ಯಕ್ರಿಯೆಯಿಂದ ದಿವ್ಯಚಕ್ಷು ಪಡೆದನು. ಸುತ್ತದಲ್ಲಿ ಏನು ಹೇಳಿದೆಯೆಂದರೆ, ಯಾವಾಗ ಮಾಂಸ ಚಕ್ಷು ನಾಶವಾಯಿತೋ, ಅದಕ್ಕೆ ಕಾರಣವಾಗಿರುವ, ಆಧಾರವಾಗಿರುವುದು ತೆಗೆಯಲ್ಪಟ್ಟಿದೆ. ಆಗ ದಿವ್ಯಚಕ್ಷುವು ಉದಯಿಸಲಾರದು, ಆದರೆ ಅದು ಹೇಳಿರುವುದು ಕೇವಲ ಚಕ್ಷುವಿಗೆ. ಆದರೆ ಪ್ರಜ್ಞಾಚಕ್ಷುವು, ಚಿಂತನೆಯಿಂದಲೇ ಉದಯಿಸುವುದು. ಇದನ್ನು ಹೀಗೆ ಪರಿಗಣಿಸಬೇಕು.
ತುಂಬಾ ಒಳ್ಳೆಯದು ನಾಗಸೇನ, ನೀವು ಈ ಸಮಸ್ಯೆಯನ್ನು ಸರ್ವರೂ ಮೆಚ್ಚುವಂತೆ ಪರಿಹರಿಸಿದಿರಿ, ಸರಿಯಾಗಿ ವಿವರವಾಗಿ ವಿವರಿಸಿದಿರಿ, ನೀವು ದಾಟಿದ್ದೀರಿ, ನೀವು ಹೇಳಿದ್ದನ್ನೆಲ್ಲಾ ನಾನು ಒಪ್ಪುತ್ತೇನೆ.


6. ಗಚ್ಛಾವಕ್ಕಂತಿ ಪನ್ಹೊ (ಗಭರ್ಿಣಿಯ ಪ್ರಶ್ನೆ)

43-52. ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು. ಗರ್ಭಕ್ಕೆ ಮೂರು ಕಾರಣಗಳಿವೆ. ಅದೆಂದರೆ ತಂದೆ-ತಾಯಿಗಳ ಮಿಲನ, ತಾಯಿಯು ಋತುಮತಿ ಯಾಗಿರುವಿಕೆ ಮತ್ತು ಜನ್ಮಿಸಲಿರುವ ಜೀವಿಯ ಇರುವಿಕೆ, ಹಾಗಿರುವಾಗಲು ಅವರು ಋಷಿ ದುಕಾಲನ ಬಗ್ಗೆ ವಿವರಿಸುವಾಗ, ಋಷಿ ದುಕಾಲ ತಮ್ಮ ಪತ್ನಿಯಾದ ಪಾರಿಕಳ ಹೊಕ್ಕಳನ್ನು ಹೆಬ್ಬೆರಳಿನಿಂದ ಸ್ಪಶರ್ಿಸಿದಾಗ ಆಕೆಯು ಗಭರ್ಿಣಿಯಾಗಿ ಬಾಲಕ ಸಾಮನನ್ನು ಹೆರುತ್ತಾಳೆ. ಇಲ್ಲಿ ಮೊದಲನೆಯ ವಾಕ್ಯವು ಸರಿಯಾದರೆ, ನಂತರದ್ದು ಸುಳ್ಳಾಗುತ್ತದೆ, ಇದನ್ನು ಹೇಗೆ ಪರಿಹರಿಸುವಿರಿ? (95)
ಎರಡು ಹೇಳಿಕೆಗಳು ಸರಿಯಾಗಿವೆ ಓ ಮಹಾರಾಜ, ಎರಡನೆಯ ಸಂದರ್ಭದಲ್ಲಿ ಉಲ್ಲಂಘನೆಯಾಗಿದೆ ಎಂದು ತಿಳಿಯಬಾರದು. ದೇವೇಂದ್ರ ಸಕ್ಕನಿಗೆ ಋಷಿ ದಂಪತಿಗಳು ಅಂಧರಾಗಿರುವರು ಮತ್ತು ಅಂತಹ ಸಂಕಷ್ಟದಲ್ಲಿ ಅವರು ಮಗುವಿಗಾಗಿ ಬ್ರಹ್ಮಚರ್ಯ ಭಂಗ ಮಾಡಲು ಇಚ್ಛಿಸಲಿಲ್ಲ. ಆದ್ದರಿಂದ ಸಕ್ಕನ ಸಲಹೆಯಂತೆ ಈ ಪಯರ್ಾಯ ವಿಧಾನ ಅನುಸರಿಸಿ ಸಾಮನನ್ನು ಪಡೆದರು, ಬ್ರಹ್ಮಚಾರಿಗಳಾಗಿಯು ಉಳಿದರು.
ಭಂತೆ ನಾಗಸೆನ, ಅಂಧಕಾರದಲ್ಲಿರುವವನಿಗೆ ಬೆಳಕನ್ನು ನೀಡುವಂತೆ, ಜಟಿಲವಾದುದನ್ನು ಸರಳಗೊಳಿಸುವಂತೆ, ಚೆನ್ನಾಗಿ ವಿವರಿಸಿದಿರಿ. ನೀವು ಹೇಳಿರುವುದನ್ನು ಒಪ್ಪುತ್ತೇನೆ.


7. ಸಧಮ್ಮಾಂತರಧಾನ ಪನ್ಹೊ (ಸಧಮ್ಮದ ಮರೆಯಾಗುವಿಕೆಯ ಪ್ರಶ್ನೆ)

ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದರು ಓ ಆನಂದ, ಈಗಿನಿಂದ ಸಧಮ್ಮವು 500 ವರ್ಷಗಳ ಕಾಲ ಮಾತ್ರ ಇರುತ್ತದೆ ಆದರೆ ಇನ್ನೊಂದೆಡೆ ಭಗವಾನರು ಪರಿನಿಬ್ಬಾಣ ಪಡೆಯುವಾಗ ಸುಭದ್ದನಿಗೆ ಹೀಗೆ ಹೇಳಿ ಘೋಷಿಸಿದ್ದಾರೆ: ಸಂಘವು ಪರಿಶುದ್ಧವಾಗಿ ಜೀವನಗಳನ್ನು ನಡೆಸಿದ್ದೇ ಆದರೆ ಈ ಜಗತ್ತು ಎಂದಿಗೂ ಅರಹಂತರಿಂದ ಬರಿದಾಗುವುದಿಲ್ಲ.
ಈಗ ನೀವೇ ಹೇಳಿ, ಮೊದಲ ವಾಕ್ಯ ಸರಿಯಾದರೆ, ಎರಡನೆಯದು ಅಪಾರ್ಥಕ್ಕೆ ಕರೆದೊಯ್ಯುತ್ತದೆ, ಎರಡನೆಯದು ಸರಿಯಾಗಿದ್ದರೆ, ಮೊದಲನೆಯದು ಸುಳ್ಳಾಗುತ್ತದೆ. ಇದು ಸಹಾ ದ್ವೀ-ಹರಿತ ಅಂಶವುಳ್ಳ ಪ್ರಶ್ನೆಯಾಗಿದೆ, ಕಾಡಿಗಿಂತಲೂ ಗೊಂದಲ ಹುಟ್ಟಿಸಬಲ್ಲ ಪ್ರಶ್ನೆಯಾಗಿದೆ, ಬಲಿಷ್ಠ ಮಾನವನಿಗಿಂತ, ಬಲಿಷ್ಠವಾದ ಪ್ರಶ್ನೆಯಾಗಿದೆ. ಜಟಿಲವಾದುದರಲ್ಲಿ ಜಟಿಲವಾಗಿದೆ. ಇದನ್ನು ನಿಮಗೆ ಹಾಕಿದ್ದೇನೆ. ನಿಮ್ಮ ಜ್ಞಾನಬಲವನ್ನು ಬಳಸಿ, ಸಾಗರ ಗರ್ಭದಲ್ಲಿ ಮಕರವು ತನ್ನ ಪ್ರತಾಪ ತೋರಿಸುವಂತೆ ತೋರಿಸಿ. (96)
ಓ ಮಹಾರಾಜ, ನೀವು ಹೇಳಿದಂತಹ ಎರಡು ವಾಕ್ಯಗಳು ಸಹಾ ಭಗವಾನರೇ ನುಡಿದಿದ್ದಾರೆ. ಆದರೆ ಅವರೆಡು ಸಹಾ ಅಕ್ಷರ ಮತ್ತು ಅರ್ಥದಲ್ಲಿ ವಿಭಿನ್ನವಾಗಿವೆ. ಮೊದಲನೆಯ ವಾಕ್ಯವು ಸಧಮ್ಮದ ಸಾಧನೆಯ ಬಗ್ಗೆ ಸೂಚಿಸಿದ್ದಾರೆ, ಎರಡು ವಿಷಯಗಳು ತೀರ ವ್ಯತಿರಿಕ್ತವಾಗಿದೆ. ಒಂದರಿಂದ ಮತ್ತೊಂದು ಪ್ರತ್ಯೇಕಿಸುವಷ್ಟು ಭಿನ್ನವಾಗಿದೆ. ಭೂಮಿಯಿಂದ ತುತ್ತತುದಿಯವರೆಗೆ ಅಥವಾ ನರಕದಿಂದ ಸ್ವರ್ಗದಷ್ಟು, ಪಾಪದಿಂದ ಪುಣ್ಯದಷ್ಟು, ನೋವಿಗಿಂತ ಸುಖದಷ್ಟು ಅಂತರವುಳ್ಳದ್ದಾಗಿದೆ. ಅದು ಹಾಗಿದ್ದರೂ ಸಹಾ ನಿಮ್ಮ ಪರಿಶೋಧನೆ ವ್ಯರ್ಥವಲ್ಲ, ಇದರ ಬಗ್ಗೆ ವಿವರವಾಗಿ ಹೇಳುವೆ ಆಲಿಸಿ.
ಯಾವಾಗ ಭಗವಾನರು ಪರಿಶುದ್ಧವಾದ ಸಧಮ್ಮವು 500 ವರ್ಷಗಳ ಕಾಲ ಮಾತ್ರ ಇರುವುದು ಎಂದರೊ, ಆಗ ಅವರು ಅವರ ಅಳಿಯುವಿಕೆ ಮತ್ತು ಉಳಿದ ಕಾಲವನ್ನು ಹೇಳಿದ್ದರು. ಆನಂದ, ಸಂಘಕ್ಕೆ ಸ್ತ್ರೀಯರ ಪ್ರವೇಶ ಅಗದಿದ್ದರೆ ಸಾವಿರ ವರ್ಷಗಳ ಕಾಲ ಪರಿಶುದ್ಧವಾದ ಸಧಮ್ಮವು ಉಳಿಯುತ್ತಿತ್ತು. ಆದರೆ ಈಗ ಆನಂದ, ಇದು ಕೇವಲ 500 ವರ್ಷಗಳಿಗೆ ಸೀಮಿತವಾಗಿದೆ. ಆದರೆ ಓ ರಾಜ ಹೀಗೆ ಹೇಳಿ, ಸಧಮ್ಮದ ಮರೆಯಾಗುವಿಕೆ ಬಗ್ಗೆಯು ಭವಿಷ್ಯವಾಣಿಯನ್ನು ತಿಳಿಸಿದ್ದಾರೆಯೇ? ಅಥವಾ ಸ್ಪಷ್ಟವಾದ ನಿಲುವು ತಿಳಿಸಿದ್ದಾರೆಯೇ?
ಇಲ್ಲ ಭಂತೆ.
ಹಾಗೆಯೇ, ಅದು ಕೇವಲ ಗಾಯವಾದುದರ ಬಗ್ಗೆ ಸ್ಪಷ್ಟನೆಯಾಗಿದೆ. ಮಿತಿಯ ಬಗ್ಗೆ ಘೋಷಣೆ ಹಾಗೇ ಉಳಿದಿದೆ. ಹೇಗೆಂದರೆ ಯಾವ ಮನುಷ್ಯನ ಆದಾಯವು ಕುಗ್ಗುತ್ತದೆಯೋ ಆತನು ಅದನ್ನು ಬಹಿರಂಗವಾಗಿ ಪೋಷಿಸಬಹುದು, ಹೇಗೆಂದರೆ: ಇಷ್ಟು ಆಸ್ತಿಯು ನಾನು ಕಳೆದುಕೊಂಡಿದ್ದೇನೆ ಮತ್ತು ಇಷ್ಟು ಉಳಿದಿದೆ. ಅದೇರೀತಿಯಾಗಿ ಭಗವಾನರು ಆತನು ಸಧಮ್ಮವು 500 ವರ್ಷಗಳ ಕಾಲ ನಿಲ್ಲುವುದು ಎಂದಿದ್ದಾರೆ. ಈ ರೀತಿ ಅವರು ಹೇಳುವಾಗ ಅವರು ಕೇವಲ ಸಧಮ್ಮಕ್ಕೆ ಮಾತ್ರ ಕೇಂದ್ರೀಕೃತವಾಗಿದ್ದಾರೆ. ಆದರೆ ಅವರು ಸುಭದ್ಧನನಲ್ಲಿ ಮಾತನಾಡುವಾಗ, ನಿಜವಾದ ಸಮಣರ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಹೀಗೆ ಇಲ್ಲಿ (ಸಧಮ್ಮದಲ್ಲಿ) ಪರಿಶುದ್ಧವಾಗಿ ಪರಿಪೂರ್ಣವಾಗಿ ಜೀವಿಸಿದರೆ, ಆಗ ಜಗತ್ತಿನಲ್ಲಿ ಅರಹಂತರ ಕೊರತೆಯಾಗುವುದಿಲ್ಲ. ಹೀಗೆ ಹೇಳುವುದರಿಂದಾಗಿ ಅವರು ಧಮ್ಮದಲ್ಲಿ ಏನಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಷಯದ ಮಿತಿಯ ಬಗ್ಗೆ ಏನೆಂದು ನೀವು ಗೊಂದಲಕ್ಕೀಡಾಗಿದ್ದೀರಿ ಅಷ್ಟೆ. ಆದರೆ ನೀವು ಇಷ್ಟಪಡುವುದಾದರೆ ಇವೆರಡರ ನಡುವಿನ ಸಂಪರ್ಕವನ್ನು ನಾನು ವಿವರಿಸುವೆ, ನಾನು ಹೇಳುವುದನ್ನು ಗಮನವಿಟ್ಟು ಕೇಳಿ.
ಓ ಮಹಾರಾಜ, ಊಹಿಸಿ, ಒಂದೆಡೆ ಸ್ವಚ್ಛವಾದ, ತಂಪಾದ ನೀರಿನ ಕಲ್ಯಾಣಿಯು ಇರುತ್ತದೆ. ಅದು ತುಂಬಿ ಅಂಚಿನವರೆಗೂ ಕಾಣಿಸುತ್ತಿರುತ್ತದೆ. ಆದರೆ ಅದರ ಗಾತ್ರ ಚಿಕ್ಕದಾಗಿರುವುದರಿಂದಾಗಿ, ಅದು ಹಿಂಗದೆ ಇರುತ್ತದೆ. ಅಂತಹ ಸಮಯದಲ್ಲಿ ಮಳೆ ಬಿದ್ದು, ಹೆಚ್ಚು ನೀರು ಸೇರುತ್ತದೆ, ಈಗ ಹೇಳಿ ಆ ಕಲ್ಯಾಣಿಯು ಕ್ಷೀಣವಾಗುವುದೇ ಅಥವಾ ಅದರ ಅಂತ್ಯವಾಗುವುದೇ?
ಖಂಡಿತ ಇಲ್ಲ ಭಂತೆ.
ಏಕಿಲ್ಲ ರಾಜ?
ಏಕೆಂದರೆ ನಿರಂತರ ಮಳೆಯು ಬೀಳುವುದರಿಂದಾಗಿ.
ಓ ರಾಜ, ಅದೇರೀತಿಯಲ್ಲಿ ಸಧಮ್ಮವು ದಿವ್ಯವಾದ ಕಲ್ಯಾಣಿಯ ರೀತಿ. ಅದು ಸದಾ ಸ್ವಚ್ಛ, ತಂಪಾದ, ಸಿಹಿಯಾಗಿರುತ್ತದೆ. ಇಲ್ಲಿ ಸಾಧಕರು ಶೀಲದಿಂದಾಗಿ, ಧ್ಯಾನದಿಂದ, ಜ್ಞಾನದಿಂದ ಆಚರಣೆ ಮಾಡುವುದರಿಂದಾಗಿ ಅದೇ ಮಳೆಯ ರೀತಿ, ಹೇಗೆ ಮಳೆಯ ನೀರು ಬೀಳುವುದರಿಂದಾಗಿ ಕಲ್ಯಾಣಿಯು ಬರಿದಾಗುವುದಿಲ್ಲವೋ ಅದೇರೀತಿ ಭಿಕ್ಷುಗಳು ಆಚರಣೆಯಲ್ಲಿರುವದರಿಂದಾಗಿ ಈ ಜಗತ್ತಿನಲ್ಲಿ ಅರಹಂತರ ಕೊರತೆ ಯಾಗುವುದಿಲ್ಲ. ಇದೇ ಅರ್ಥದಲ್ಲಿ ಅವರು ಸುಭದ್ದನಿಗೆ ಹೀಗೆ ತಿಳಿಸಿದ್ದಾರೆ. ಆದರೆ ಸುಭದ್ಧ ಈ ಸಧಮ್ಮದಲ್ಲಿ ಭಿಕ್ಷುಗಳು ಪರಿಶುದ್ಧವಾಗಿ ಜೀವಿಸಿದರೆ, ಲೋಕದಲ್ಲಿ ಅರಹಂತರ ಕೊರತೆಯಾಗುವುದಿಲ್ಲ.
ಮತ್ತೆ ಓ ಮಹಾರಾಜ, ಊಹಿಸಿ ಜನರು ಮೃದುವಾದ ಕೆಂಪು ಪುಡಿಯಿಂದ ಶ್ರೇಷ್ಠಮಟ್ಟದ ಕನ್ನಡಿಗೆ ಮೆರಗನ್ನು ನೀಡುತ್ತಿದ್ದರೆ, ಹೊಳಪು ನೀಡುತ್ತಿದ್ದರೆ, ಆಗ ಅದರ ಮೇಲ್ಮೈಯಲ್ಲಿ ಧೂಳಾಗಲಿ, ಕೆಸರಾಗಲಿ ಉದಯಿಸುತ್ತದೆಯೇ?
ಇಲ್ಲ ಭಂತೆ, ಬದಲಾಗಿ ಅದು ಇನ್ನಷ್ಟು ಹೊಳಪಾಗಿ ಕಂಗೊಳಿಸುತ್ತದೆ.
ಓ ಮಹಾರಾಜ, ಅದೇರೀತಿ ಭಗವಾನರ ಸಧಮ್ಮವು ಕಲೆರಹಿತವಾದುದು, ಈಗಾಗಲೇ ಪಾಪದ ಧೂಳು ಅಥವಾ ಕಸದಿಂದ ಮುಕ್ತವಾಗಿರುವಂತಹುದು. ಬುದ್ಧರ ಅನುಯಾಯಿಗಳು ಭಿಕ್ಷುಗಳು ನಿರಂತರ ಶೀಲಪಾಲನೆ, ಸಂಯಮದಿಂದ ಜೀವಿಸುವುದೇ ಇಲ್ಲಿ ಕನ್ನಡಿಗೆ ಹೊಳಪನ್ನು ನೀಡುವಂತೆ, ಹೀಗಾದಾಗ ಮಾತ್ರ ಜಗವು ಅರಹಂತರಿಂದ ಬರಿದಾಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆಯೇ ಭಗವಾನರು ಸುಭದ್ಧನಿಗೆ ಹೀಗೆ ಹೇಳಿದ್ದಾರೆ. ಆದರೆ ಸುಭದ್ಧ, ಈ ಸಧಮ್ಮದಲ್ಲಿ ಭಿಕ್ಷುಗಳು ಸಮ್ಯಕ್ ಜೀವನದಿಂದ ಜೀವಿಸಿದಾಗ, ಲೋಕದಲ್ಲಿ ಅರಹಂತರ ಕೊರತೆಯಾಗುವುದಿಲ್ಲ. ಓ ಮಹಾರಾಜ, ಭಗವಾನರ ಬೋಧನೆಯಲ್ಲಿ ಆಚರಣೆಯ (ಶೀಲವೇ) ಸಧಮ್ಮದ ಬೇರಾಗಿದೆ, ಸಾರಯುಕ್ತವಾಗಿದೆ. ಎಲ್ಲಿಯವರೆಗೂ (ಆಚರಣೆಯು) ಶೀಲವಂತರು ಇರುತ್ತಾರೆಯೋ ಅಲ್ಲಿಯವರೆಗೆ ಸಧಮ್ಮ ಕ್ಷೀಣಿಸುವುದಿಲ್ಲ.
ಪೂಜ್ಯ ನಾಗಸೇನ, ನೀವು ಸಧಮ್ಮದ ಮರೆಯಾಗುವಿಕೆ ಬಗ್ಗೆ ಹೇಳಿದಿರಿ, ಅದರರ್ಥವೇನು? (97)
ಓ ಮಹಾರಾಜ, ಮೂರು ರೀತಿಯ ಶಾಸನದ ಅಂತದರ್ಾನಗಳಿವೆ (ಮರೆಯಾಗುವಿಕೆ), ಯಾವುವವು? ಅಧಿಗಮಂತದರ್ಾನ, ಪಟಿಪತ್ತಂತದರ್ಾನ ಮತ್ತು ಲಿಂಗಾಂತದರ್ಾನ. ಅಂದರೆ (1) ಆರ್ಯಫಲಗಳನ್ನು ಪಡೆಯುವಿಕೆಯ ಸಧಮ್ಮ ಗ್ರಹಿಕೆಯಲ್ಲಿ ಕ್ಷೀಣತೆೆ (2) ಸಧಮ್ಮಪಾಲನೆಯಲ್ಲಿ ಕ್ಷೀಣತೆ ಮತ್ತು (3) ಬಾಹ್ಯ ಆಕಾರಗಳ ಕ್ಷೀಣತೆ. ಯಾವಾಗ ಪ್ರಾಪ್ತಿಯು ಕ್ಷೀಣಿಸುವುದೋ, ಆಗ ಪಾಲನೆಗಾರನಿಗೂ ಸಹಾ ಅದರ ಸಾರ ಅರ್ಥವಾಗುವುದಿಲ್ಲ ಮತ್ತು ಎರಡನೆಯ ಹಂತದಲ್ಲಿ ಶೀಲಗಳ, ಪಾತಿಮೋಕ್ಖಗಳ ಪಾಲನೆಯು ಕ್ಷೀಣವಾಗಿ, ಕೇವಲ ಬಾಹ್ಯ ಆಚರಣೆ, ಸಂಸ್ಕಾರವಿಧಿಗಳ ಧಮ್ಮವು ಮಾತ್ರ ಉಳಿಯುತ್ತದೆ. ಯಾವಾಗ ಬಾಹ್ಯಾಚರಣೆಗಳ ಧಮ್ಮವು ಅಳಿಯುತ್ತದೋ ಆಗ ಸಂಪ್ರದಾಯವು ಕತ್ತರಿಸಿಹೋಗುತ್ತದೆ. ಇವು ಮೂರು ಹಂತದ ಸಧಮ್ಮದ ಅಂತದರ್ಾನವಾಗಿದೆ.
ಭಂತೆ ನಾಗಸೇನ, ನೀವು ಚೆನ್ನಾಗಿ ವಿವರಿಸಿದ್ದೀರಿ, ಸರಳಗೊಳಿಸಿ ತಿಳಿಸಿರುವಿರಿ. ಗಂಟುಗಳನ್ನು ಬಿಡಿಸಿದ್ದೀರಿ, ವಿರೋಧಿಯ ವಾದಗಳನ್ನೆಲ್ಲಾ ನಾಶಗೊಳಿಸಿದ್ದೀರಿ, ನೀವು ನಿಜಕ್ಕೂ ಸಕಲ ಗಣಗಳಿಗೂ ನಾಯಕರಾಗಿರುವಿರಿ.


8. ಅಕುಸಲಚ್ಛೇದನ ಪನ್ಹೊ

ಭಂತೆ ನಾಗಸೇನ, ಭಗವಾನರು ಬುದ್ಧರಾದ ಮೇಲೆ ಎಲ್ಲಾ ಅಕುಶಲಗಳನ್ನು ನಾಶಗೊಳಿಸಿದ್ದಾರೆಯೇ? ಅಥವಾ ಅವರಲ್ಲಿ ಇನ್ನೂ ಅಕುಶಲಗಳು ಉಳಿದಿದೆಯೇ?(98)
ಭಗವಾನರಲ್ಲಿ ಎಲ್ಲಾ ಅಕುಶಲಗಳು ನಾಶವಾಗಿವೆ, ಅವರಲ್ಲಿ ಯಾವ ಅಕುಶಲಗಳು ಉಳಿದಿಲ್ಲ.
ಆದರೆ ಹೇಗೆ ಭಂತೆ? ತಥಾಗತರಲ್ಲಿ ಕಾಯ ವೇದನೆಗಳು ಉದಯಿಸಲಿಲ್ಲವೆ?
ಮಹಾರಾಜ, ರಾಜಗೃಹದಲ್ಲಿ ಬಂಡೆಯ ಚೂರೊಂದು ಕಾಲಿಗೆ ತಾಗಿ ಗಾಯದ ನೋವು ಅನುಭವಿಸಿದರು. ಮತ್ತೊಮ್ಮೆ ಅವರು ಆಮಶಂಕೆಯಿಂದಾದ ಅಪ್ರಿಯ ವೇದನೆ ಅನುಭವಿಸಿದರು, ಮತ್ತೊಮ್ಮೆ ವಾಯುವಿಕಾರದಿಂದಾಗಿ ಅಪ್ರಿಯವೇದನೆ ಉಂಟಾದಾಗ ಆನಂದರವರು ಬಿಸಿನೀರನ್ನು ನೀಡಿದ್ದರು ಮತ್ತು ಕಾಯದಲ್ಲಿನ ದ್ರವಗಳ ಏರುಪೇರಿನಿಂದಾಗಿ ಜೀವಕರು ವಿರೇಕಾ ಚಿಕಿತ್ಸೆ ಮಾಡಿದರು. ಹೀಗೆ ನಾಲ್ಕುಬಾರಿ ಅವರು ಅಪ್ರಿಯ ಶಾರೀರಿಕ ವೇದನೆ ಅನುಭವಿಸಿದ್ದರು.
ಹಾಗಾದರೆ ಭಂತೆ, ತಥಾಗತರು ಬುದ್ಧರಾದ ಮೇಲೆ, ತಮ್ಮಲ್ಲಿನ ಎಲ್ಲಾ ಅಕುಶಲಗಳನ್ನು ನಾಶಗೊಳಿಸಿದ್ದಾರೆ ಎಂದರೆ ಈ ಮೇಲಿನ ನೋವುಗಳೆಲ್ಲಾ ಸುಳ್ಳಾಗಿರುತ್ತದೆ. ಆದರೆ ಈ ನೋವುಗಳು ನಿಜವಾಗಿದ್ದರೆ ಅವರು ಅಕುಶಲಗಳಿಂದ ಪಾರಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಕರ್ಮವಿಲ್ಲದೆ ನೋವಿಲ್ಲ. ಎಲ್ಲಾ ನೋವುಗಳಿಗೆ ಕರ್ಮವೇ ಮೂಲ. ಕರ್ಮದಿಂದಲೇ ದುಃಖ ಉದಯಿಸುತ್ತದೆ. ಈ ಎರಡು ಕೋಡಿನ ದ್ವಂದ್ವ ಪ್ರಶ್ನೆಯನ್ನು ಹೇಗೆ ನಿವಾರಿಸುವಿರೋ ನಿವಾರಿಸಿಕೊಳ್ಳಿ.
ಇಲ್ಲ ಓ ಮಹಾರಾಜ, ಎಲ್ಲಾ ದುಃಖಗಳು ಕರ್ಮದಿಂದಲೇ ಆಗುವುದಿಲ್ಲ. ದುಃಖಗಳ ಉತ್ಪತ್ತಿಗೆ ಎಂಟು ಕಾರಣಗಳಿವೆ. ಆದ್ದರಿಂದಾಗಿಯೇ ನೋವು-ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಯಾವುವು ಆ ಎಂಟು? ಅತಿವಾತ, ಅತಿಪಿತ್ತ, ಮತ್ತು ಅತಿಕಫ. ಕಾಯದಲ್ಲಿರುವ ಮೂರು ದ್ರವಗಳ ದೋಷಗಳ ಸಂಗಮದಿಂದಾಗಿ, ತಾಪದ ಏರುಪೇರಿನಿಂದಾಗಿ, ಪರಿಸರದ ಒತ್ತಡದಿಂದಾಗಿ ಬಾಹ್ಯವತರ್ಿಯಿಂದಾಗಿ ಮತ್ತು ಕರ್ಮದಿಂದಾಗಿ, ಈ ಎಲ್ಲದರಿಂದಾಗಿ ಕೆಲವು ದುಃಖಗಳು ಉಂಟಾಗುತ್ತದೆ. ಈ ಎಂಟು ಕಾರಣಗಳಿಂದಾಗಿಯೇ ಜೀವಿಗಳು ದುಃಖಿಸುತ್ತವೆ ಮತ್ತು ಇದಕ್ಕೆ ಪ್ರತಿಯಾಗಿ ಕರ್ಮವೊಂದರಿಂದಲೇ ದುಃಖವೆಂದು ಯಾರಾದರೂ ಜೀವಿಗಳಿಗೆ ಹಿಂಸಿಸಿದರೆ ಮತ್ತು ದುಃಖಕ್ಕೆಲ್ಲಾ ಕರ್ಮವೇ ಕಾರಣ ಎಂದು ಬಗೆದರೆ ಆತನ ಅಭಿಪ್ರಾಯ ಸುಳ್ಳಾಗಿರುತ್ತದೆ.
ಆದರೆ ಭಂತೆ, ಈ ಉಳಿದ ಏಳುಬಗೆಯ ನೋವುಗಳಿಗೂ ಕರ್ಮವೇ ಮೂಲವಲ್ಲವೇ? ಅವು ಕರ್ಮದಿಂದಾಗುವುದಿಲ್ಲವೆ?
ಓ ಮಹಾರಾಜ, ಎಲ್ಲಾ ರೋಗಗಳಿಗೂ ಕರ್ಮವೇ ಕಾರಣವಾದರೇ, ಆಗ ಒಂದರಿಂದ ಮತ್ತೊಂದರ ಲಕ್ಷಣಗಳನ್ನು ಕಂಡುಹಿಡಿಯುವುದಕ್ಕೆ ಲಕ್ಷಣಗಳೇ ಸಿಗುತ್ತಿರಲಿಲ್ಲ. ಯಾವಾಗ ಪಾಪವು ಪೀಡಿಸುತ್ತದೆಯೋ ಆಗ 10 ಕಾರಣಗಳಲ್ಲಿ ಒಂದಾಗಿರುತ್ತದೆ. ಅವೆಂದರೆ ಶೀತ, ಉಷ್ಣ, ಹಸಿವು, ಬಾಯಾರಿಕೆ, ಅತಿ ಆಹಾರ, ತುಂಬಾ ನಿಂತಿರುವುದು, ಅತಿಶ್ರಮ, ಅತಿವೇಗದ ನಡಿಗೆ, ಔಷಧ ಅಥವಾ ಕರ್ಮ. ಈ ಹತ್ತರಲ್ಲಿ ಒಂಭತ್ತು ಭೂತದಲ್ಲಾಗಲಿ ಅಥವಾ ಭವಿಷ್ಯದಲ್ಲಾಗಲಿ ಪಾತ್ರ ವಹಿಸುವುದಿಲ್ಲ. ಕೇವಲ ವರ್ತಮಾನದಲ್ಲೇ ಕ್ರಿಯೆ ವಹಿಸುತ್ತದೆ. ಆದ್ದರಿಂದ ಕರ್ಮದಿಂದಲೇ ದುಃಖವೆನ್ನುವುದು ಸರಿಯಲ್ಲ. ಓ ಮಹಾರಾಜ, ಪಿತ್ತವು ವಿಕ್ಷಿಪ್ತವಾದಾಗ ಅದು ಮೂರು ಕಾರಣಗಳಿಂದಾಗಿ ಆಗುತ್ತದೆ. ಅದೆಂದರೆ ಶೀತದಿಂದ, ಉಷ್ಣದಿಂದ ಅಥವಾ ಅಯೋಗ್ಯ ಆಹಾರದಿಂದ ಮತ್ತು ಯಾವಾಗ ಕಫವು ಕ್ಷೊಭೆಗೆ ಒಳಗಾಗುತ್ತದೆ ಆಗ ಅದು ಶೀತದಿಂದ, ಉಷ್ಣದಿಂದ ಅಥವಾ ಆಹಾರದಿಂದ ಅಥವಾ ಪಾನೀಯದಿಂದ ಆಗಿರುತ್ತದೆ. ಯಾವಾಗ ಈ ಮೂರು ದೋಷಗಳು ಕ್ಷೊಭೆಗೆ ಒಳಗಾಗುತ್ತದೋ ಅಥವಾ ಮಿಶ್ರಿತವಾಗುತ್ತದೋ, ಆಗ ಅದು ತನ್ನದೇ ಆದ ನೋವನ್ನು ನೀಡುತ್ತದೆ. ಆವಾಗ ಈ ವಿಶೇಷ ನೋವುಗಳು, ತಾಪದಿಂದ, ಅಸಾಮ್ಯತೆಯ ನಿರೋಧದಿಂದ ಮತ್ತು ಬಾಹ್ಯಪತರ್ಿಯಿಂದ ಆಗುತ್ತದೆ ಮತ್ತು ಯಾವ ಕ್ರಿಯೆಗೆ ಕರ್ಮಫಲ ಸಿಗುವುದೋ, ಅದಕ್ಕೆ ಕರ್ಮದಿಂದಲೇ ನೋವು ಉದಿಸುವುದು. ಅದಕ್ಕೆ ಅದು ಈ ಎಲ್ಲಾ ಕಾರಣಗಳಿಂದ ನೋವು ಉದಯಿಸದು, ಕೇವಲ ಅಜ್ಞಾನಿಗಳು ಮಾತ್ರ ಪ್ರತಿ ನೋವು ಕರ್ಮಫಲ ಎಂದು ಹೇಳುವರು. ಬುದ್ಧರ ಜ್ಞಾನದ ವಿನಃ ಯಾರೊಬ್ಬರು ಸಹಾ ಇದು ಕರ್ಮದಿಂದಾಗಿದೆ ಎಂದು ಹೇಳಲಾರರು.
ಯಾವಾಗ ಬುದ್ಧರಿಗೆ ಬಂಡೆಯ ಸಿಡಿತದಿಂದಾಗಿ ಉಂಟಾದ ನೋವು ಮೇಲಿನ ಎಂಟು ಕಾರಣಗಳಿಂದಾಗಿ ಆಗಲಿಲ್ಲ. ಕೇವಲ ಬಾಹ್ಯವತರ್ಿಯ (ದೇವದತ್ತನ) ಕಾರಣದಿಂದಾಯಿತು. ಏಕೆಂದರೆ ದೇವದತ್ತನು ತಥಾಗತರ ಬಗ್ಗೆ ಶತಸಹಸ್ರ ಜನ್ಮಗಳಿಂದಾಗಿ ದ್ವೇಷಿಸುತ್ತ ಬಂದಿದ್ದಾನೆ. ಆತನು ದ್ವೇಷದಿಂದಾಗಿ ಬೃಹತ್ ಬಂಡೆಯನ್ನು ತಥಾಗತರ ತಲೆಯ ಮೇಲೆ ಬೀಳಲೆಂದು ತಳ್ಳಿದ್ದಾನೆ. ಆದರೆ ಆ ಬಂಡೆಯು ಮಾರ್ಗ ಮಧ್ಯದಲ್ಲೇ ಬಂಡೆಗಳಿಂದ ತಡೆಯಲ್ಪಟ್ಟು ಘರ್ಷಣೆಯಿಂದಾಗಿ ಚೂರು ಸಿಡಿದು ಭಗವಾನರ ಕಾಲಿಗೆ ತಾಗಿ ರಕ್ತ ಹರಿಯಿತು. ಈ ನೋವು ಭಗವಾನರಿಗೆ ತಮ್ಮ ಕರ್ಮದಿಂದ ತಂದಿದ್ದಲ್ಲ. ಅಥವಾ ಪರರದ್ದಲ್ಲ, ಇವಕ್ಕೆ ಮೀರಿದ್ದ ಬೇರೆ ನೋವು ಇಲ್ಲ. ಇದು ಹೇಗೆಂದರೆ ಚಿಗುರು ಒಡೆಯದ ಬೀಜದಂತೆ, ಫಲವತ್ತಾದ ಭೂಮಿಯ ಕೊರತೆಯೋ ಬೀಜದ ದೋಷವೋ ಅಥವ ಆ ಸಮಸ್ಯೆಯು ಆಹಾರದ ಅಜೀರ್ಣದಂತೆ. ಅದು ಹೊಟ್ಟೆಯ ದೋಷವೋ ಅಥವಾ ಆಹಾರದ ತಪ್ಪೋ ಎಂದಾಗುತ್ತದೆ.
ಆದರೂ ಭಗವಾನರು ತಮ್ಮ ಕರ್ಮದಿಂದಾಗಿ ನೋವು ಅನುಭವಿಸಲಿಲ್ಲ ಅಥವಾ ವಿಷಮ ಪರಿಹಾರಜವಾಗಿಯೂ ನೋವು ಅನುಭವಿಸಿಲ್ಲ. ಆದರೂ ಸಹಾ ಅವರು ಈ ಆರು ಕಾರಣಗಳಿಂದಾಗಿ ನೋವು ಪಟ್ಟಿರುವರು ಮತ್ತು ನಮ್ಮಂತೆ ಅವರಿಗೆ ನೋವಿನಿಂದ ಜೀವಾಪಹರಣವಾಗುವುದಿಲ್ಲ. ಓ ರಾಜ, ನಾಲ್ಕು ಧಾತುಗಳಿಂದಾದ ಈ ಶರೀರಕ್ಕೆ ಪ್ರಿಯ ವೇದನೆಗಳು, ಅಪ್ರಿಯ ವೇದನೆಗಳ ಮತ್ತು ತಟಸ್ಥ ವೇದನೆಗಳು ಆಗುತ್ತವೆ. ಊಹಿಸಿ ಓ ರಾಜ, ಮೇಲೆ ಎಸೆದ ಮಣ್ಣಿನ ಹೆಂಟೆ ಮರಳಿ ಭೂಮಿಗೆ ಬೀಳಲೇಬೇಕು, ಅದು ಯಾವುದಾದರೂ ಹಿಂದಿನ ಕರ್ಮದ ಫಲವೇ?
ಇಲ್ಲ ಭಂತೆ, ಈ ವಿಶಾಲ ಪೃಥ್ವಿಯು ಕರ್ಮಫಲಗಳನ್ನು ಅನುಭವಿಸುವುದಿಲ್ಲ, ಅದಕ್ಕೆ ಕಾರಣ ವರ್ತಮಾನದ ಕಾರಣವಾಗಿದೆ. ಅದರಿಂದಾಗಿ ಮಣ್ಣಿನ ಹೆಂಟೆಯು ಭೂಮಿಗೆ ಬಿದ್ದಿದೆ.
ಒಳ್ಳೆಯದು ರಾಜ, ತಥಾಗತರು ಸಹಾ ಈ ವಿಶಾಲ ಪೃಥ್ವಿಯ ಹಾಗೇ ಇದ್ದಾರೆ. ಹೇಗೆ ಮಣ್ಣಿನ ಹೆಂಟೆ, ಹಿಂದಿನ ಕರ್ಮವಲ್ಲದೆ ಕೆಳಗೆ ಬೀಳುವುದೋ ಅದೇರೀತಿಯಲ್ಲಿ ಬಂಡೆಯ ಚೂರು ಸಿಡಿದು ಭಗವಾನರಿಗೆ ಚುಚ್ಚಿತ್ತು.
ಮತೆ ಓ ರಾಜ, ಜನರು ಭೂಮಿಯನ್ನು ಹರಿದು ಊಳುತ್ತಾರೆ. ಅದು ಪೃಥ್ವಿಗೆ ಆಗಿರುವ ಹಿಂದಿನ ಕರ್ಮಪಲವೇ?
ಇಲ್ಲ ಭಂತೆ.
ಅದೇರೀತಿಯಲ್ಲಿಯೇ ಬಂಡೆಯ ಚೂರು ಸಹಾ ಸಿಡಿದಿದೆ ಮತ್ತು ಯಾವಾಗ ಅವರಿಗೆ ಆಮಶಂಕೆಯಾಗಿತ್ತೊ ಅದು ಸಹಾ ಕರ್ಮಫಲವಾಗಿರಲಿಲ್ಲ. ಅದು ತ್ರಿದೋಷದಿಂದಾಗಿತ್ತು ಮತ್ತು ಯಾವಾಗೆಲ್ಲಾ ಅವರಿಗೆ ರೋಗವಾಗಿತ್ತೋ ಅದೆಲ್ಲ ಕರ್ಮಫಲವಾಗಿರಲಿಲ್ಲ. ಅವು ಆರು ಕಾರಣಗಳಿಂದಾಗಿತ್ತು. ಓ ರಾಜ, ಭಗವಾನರು ದೇವತೆಗಳಿಗೆ ಸಂಯುಕ್ತ ನಿಕಾಯದಲ್ಲಿ ಹೀಗೆ ಹೇಳಿದ್ದಾರೆ. ಅದಕ್ಕೆ ಮೋಲಿಯ ಸಿವಕ ಎನ್ನುತ್ತಾರೆ: ಓ ಸಿವಕ, ಈ ಜಗತ್ತಿನಲ್ಲಿ ಕೆಲವು ನೋವುಗಳು ಪಿತ್ತದೋಷದಿಂದ ಉಂಟಾಗುತ್ತದೆ ಮತ್ತು ನೀವು ಅವು ಯಾವುದೆಂದು ಅರಿಯಬೇಕು, ಇದು ಸಾಮಾನ್ಯಜ್ಞಾನವಾಗಿದೆ. ಆದರೆ ಕೆಲವು ಸಮಣ, ಬ್ರಾಹ್ಮಣರು, ಪ್ರಿಯವೇದನೆಯಾಗಲಿ, ಅಪ್ರಿಯ ವೇದನೆಯಾಗಲಿ ಅಥವಾ ತಟಸ್ಥ ವೇದನೆಯಾಗಲಿ ಉಂಟಾಗಲು ಕಾರಣ ಹಿಂದಿನ ಜನ್ಮದ ಕರ್ಮಫಲ ಎನ್ನುತ್ತಾರೆ. ಅದು ಸತ್ಯವಲ್ಲ, ಅವರು ಜ್ಞಾನದಿಂದ ಪಕ್ಕಕ್ಕೆ ಸರಿದಿದ್ದಾರೆ. ಅವರು ತಪ್ಪಾಗಿದ್ದಾರೆ ಮತ್ತು ಈ ನೋವುಗಳು ಕಫ ದೋಷದಿಂದ, ವಾತದೋಷದಿಂದ, ಪಿತ್ತದೋಷದಿಂದ ಅಥವಾ ಈ ಮೂರರ ಮಿಶ್ರಣದಿಂದ, ತಾಪದ ವ್ಯತಿರಿಕ್ತತೆಯಿಂದ ಅಥವಾ ವಿಷಯ ಪರಿಹಾರಜವಾಗಿ ಅಥವಾ ಬಾಹ್ಯವತರ್ಿಯಿಂದ ಅಥವಾ ಕರ್ಮದಿಂದ ಉಂಟಾಗುತ್ತದೆ. ಈ ಎಲ್ಲಾ ಪರಿಸ್ಥಿತಿಗಳಲ್ಲಿ ನೀವು ಇದು ಯಾವುದು ಎಂದು ಸ್ಪಷ್ಟವಾಗಿ ತಿಳಿಯಬೇಕು. ಇದು ಸಾಮಾನ್ಯ ಜ್ಞಾನವಾಗಿದೆ. ಆದರೆ ಕೆಲವು ಸಮಣ ಬ್ರಾಹ್ಮಣರು ಎಲ್ಲದಕ್ಕು ಹಿಂದಿನ ಕರ್ಮಫಲ ಎನ್ನುವುದು ಸತ್ಯಕ್ಕೆ ದೂರಾದ ಮಾತಾಗಿದೆ. ಅವರು ತಪ್ಪು ಗ್ರಹಿಕೆಯಲ್ಲಿದ್ದಾರೆ. ಆದ್ದರಿಂದ ಓ ರಾಜ, ಎಲ್ಲಾ ನೋವುಗಳು ಕರ್ಮಫಲಗಳಲ್ಲ. ಹೀಗಾಗಿ ಭಗವಾನರು ಬುದ್ಧರಾದ ಮೇಲೆ ಎಲ್ಲಾ ಅಕುಶಲಗಳನ್ನು ನಾಶಪಡಿಸಿದ್ದರೆಂದು ನೀವು ತಿಳಿದು ಒಪ್ಪಲೇಬೇಕು.
ತುಂಬಾ ಒಳ್ಳೆಯದು ನಾಗಸೇನ, ಸತ್ಯ ಹೀಗಿರುವುದರಿಂದ ನಾನು ನೀವು ಹೇಳಿದ್ದನ್ನು ಖಂಡಿತ ಒಪ್ಪುತ್ತೇನೆ.


9. ಉತ್ತರಿಕರಣೀಯ ಪನ್ಹೋ (ಬುದ್ಧರ ಧ್ಯಾನದ ಬಗ್ಗೆ ಪ್ರಶ್ನೆ)

ಭಂತೆ ನಾಗಸೇನ, ನೀವುಗಳು ಹೇಳುವಿರಿ, ತಥಾಗತರು ಸರ್ವವನ್ನು ಬೋಧಿವೃಕ್ಷದ ಬುಡದಲ್ಲೇ ಪ್ರಾಪ್ತಿ ಮಾಡಿದ್ದಾರೆಂದು. ಅವರಿಗೆ ಮಾಡಬೇಕಾದ್ದು ಏನೂ ಇಲ್ಲೆಂದು, ಸಾಧಿಸಬೇಕಾದ್ದು ಏನೂ ಇಲ್ಲೆಂದು, ಆದರೂ ಸಹಾ ನಾನು ಹೀಗೂ ಕೇಳಿದ್ದೇನೆ. ಅವರು 3 ತಿಂಗಳ ಕಾಲಾನಂತರವೂ ಸಮಾಧಿಯಲ್ಲಿದ್ದರು. ಇಲ್ಲಿ ಮೊದಲನೆಯ ವಾಕ್ಯ ಸರಿಯಾಗಿದ್ದರೆ ಎರಡನೆಯ ಹೇಳಿಕೆಯು ಸುಳ್ಳಾಗಿರುತ್ತದೆ. ಹಾಗಲ್ಲದೆ ಎರಡನೆಯ ಹೇಳಿಕೆಯು ಸುಳ್ಳಾಗಿರುತ್ತದೆ. ಹಾಗಲ್ಲದೆ ಎರಡನೆಯ ಹೇಳಿಕೆ ಸರಿಯಾಗಿದ್ದರೆ, ಮೊದಲನೆಯ ಹೇಳಿಕೆ ತಪ್ಪಾಗಿರುತ್ತದೆ. ಯಾರು ಪರಿಪೂರ್ಣವಾಗಿ ಸಾಧಿಸಿದ್ದಾರೋ ಅವರಿಗೆ ಧ್ಯಾನದ ಅವಶ್ಯಕತೆ ಇರುವುದಿಲ್ಲ. ಯಾರು ಮಾಡಬೇಕಾದ್ದನ್ನು ಮಾಡಬೇಕಾಗಿದೆಯೋ ಅವರು ಚಿಂತನೆ ಮಾಡಬೇಕಾಗುತ್ತದೆ. ರೋಗಿಗೆ ಔಷಧ ಬೇಕಾಗಿರುತ್ತದೆ. ಆರೋಗ್ಯವಂತನಿಗಲ್ಲ, ಹಸಿದವನಿಗೆ ಆಹಾರ ಬೇಕಾಗಿರುತ್ತದೆ. ಹೊಟ್ಟೆ ತುಂಬಿದಾತನಿಗಲ್ಲ. ಇದು ಸಹಾ ಎರಡು ತಲೆಯ ದ್ವಂದ್ವ ಪ್ರಶ್ನೆಯಾಗಿದೆ ಮತ್ತು ಇದನ್ನು ನೀವು ಪರಿಹರಿಸಬೇಕಾಗಿದೆ. (99)
ಓ ಮಹಾರಾಜ, ಎರಡು ಹೇಳಿಕೆಗಳು ಸಹಾ ಸರಿಯಾಗಿಯೇ ಇವೆ. ಸಮಾಧಿಗೆ ಅಪಾರ ಗುಣಗಳಿವೆ, ಲಾಭಗಳಿವೆ. ಎಲ್ಲಾ ತಥಾಗತರು, ಸಮಾಧಿಯನ್ನು ಪ್ರಾಪ್ತಿ ಮಾಡಿದ್ದಾರೆ, ಬುದ್ಧತ್ವ ಪಡೆದಿದ್ದಾರೆ ಹಾಗು ಅವರೆಲ್ಲ ಆ ಉದಾತ್ತ ಸ್ಥಿತಿಗಳ ಸ್ಮೃತಿಯನ್ನು ಮಾಡಿದ್ದಾರೆ, ಅವರೆಲ್ಲ ಇದನ್ನು ಹೇಗೆ ಮಾಡಿದ್ದಾರೆಂದರೆ, ಅಧಿಕಾರಿಯೊಬ್ಬ ರಾಜನಿಂದ ಅಧಿಕಾರ, ಕಛೇರಿಗಳನ್ನು ಪಡೆದು ಅದರ ಲಾಭ ಚಿಂತಿಸಿ, ಪುನಃ ಅದರಲ್ಲೇ ತಲ್ಲೀನನಾಗುತ್ತಾನೆ. ಅಥವಾ ರೋಗಿಯೊಬ್ಬ ವೈದ್ಯನಿಂದ ಔಷಧ ಪಡೆದು ರೋಗಮುಕ್ತನಾಗಿಯು ಸಹಾ ಆ ಔಷಧಿಯ ಮೌಲ್ಯ ಅರಿತು ಮತ್ತೆ ಮತ್ತೆ ಬಳಸುತ್ತಾನೆ. ಆದರೆ ಸದ್ಗುಣ ಚಿಂತನೆ ಮಾಡುತ್ತಾನೆ.
ಓ ಮಹಾರಾಜ, ಸಮಾಧಿಗೆ 28 ಅತ್ಯುನ್ನತ ಗುಣಗಳಿವೆ. ಆದ್ದರಿಂದಲೇ ತಥಾಗತರು ಅದರಲ್ಲಿ ತಲ್ಲೀನರಾಗುತ್ತಾರೆ. ಅವು ಯಾವುವು? ಧ್ಯಾನವು ಸಂರಕ್ಷಣೆ ಮಾಡುತ್ತದೆ, ದೀಘರ್ಾಯು ನೀಡುತ್ತದೆ, ಶಕ್ತಿಬಲಗಳನ್ನು ನೀಡುತ್ತದೆ, ಪರಿಶುದ್ಧಿ ನೀಡುತ್ತದೆ. ಕುಖ್ಯಾತಿಯಿಂದ ಸುಖ್ಯಾತಿ ತರುತ್ತದೆ. ಅತೃಪ್ತಿ ತೊಡೆದು ತೃಪ್ತಿ ನೀಡುತ್ತದೆ, ಭಯ ಕಿತ್ತೆಸೆದು ಶ್ರದ್ಧೆ ನೀಡುತ್ತದೆ, ಜಡತ್ವ ಕಿತ್ತೊಗೆದು ಉತ್ಸಾಹ ನೀಡುತ್ತದೆ. ರಾಗ, ದ್ವೇಷ ಮತ್ತು ಮೋಹಗಳಿಂದ ಬಿಡುಗಡೆ ಮಾಡಿಸುತ್ತದೆ. ಅಹಂಕಾರದ ಅಂತ್ಯ ಮಾಡುತ್ತದೆ. ಎಲ್ಲಾ ಸಂದೇಹಗಳನ್ನು ಮುರಿದು ಹಾಕುತ್ತದೆ. ಹೃದಯಕ್ಕೆ ಶಾಂತಿ ನೀಡುತ್ತದೆ, ಚಿತ್ತವನ್ನು ಮೃದು ಮಾಡುತ್ತದೆ, ಆನಂದ ಪ್ರಾಪ್ತಿಗೈಯುತ್ತದೆ, ಗಂಭೀರತೆಯನ್ನು ನೀಡುತ್ತದೆ, ಅತ್ಯುನ್ನತ ಲಾಭವನ್ನು ನೀಡುತ್ತದೆ. ಗೌರವಯುತನನ್ನಾಗಿರಿಸುತ್ತದೆ, ಆಹ್ಲಾದತೆಯನ್ನು ತುಂಬಿಸುತ್ತದೆ, ಸುಖಾವೃತನನ್ನಾಗಿಸುತ್ತದೆ. ಅನಿತ್ಯತೆಯ ಸಾಕ್ಷಾತ್ಕಾರ ತರುತ್ತದೆ, ಪುನರ್ಜನ್ಮವನ್ನು ತಡೆಯುತ್ತದೆ. ತ್ಯಾಗದ ಎಲ್ಲಾ ಲಾಭಗಳನ್ನು ನೀಡುತ್ತದೆ. ಇವೇ ಓ ರಾಜ, ಧ್ಯಾನದ 28 ಮಹತ್ತರ ಗುಣಗಳಾಗಿವೆ. ಆದ್ದರಿಂದಲೇ ತಥಾಗತ ಅವುಗಳ ಉತ್ಕೃಷ್ಟತೆ ಅರಿತು ಅದರಲ್ಲೇ ತಲ್ಲೀನರಾಗುತ್ತಾರೆ. ಏಕೆಂದರೆ ಓ ರಾಜ, ಧ್ಯಾನವು ತಥಾಗತರಿಗೆ ಪರಮಸುಖ ನೀಡುವುದರಿಂದ ನಿಬ್ಬಾಣದ ಪರಮಸುಖ ಸಿಗುವುದರಿಂದಾಗಿ, ಅವರು ಸಮಾಧಿಯಲ್ಲೇ ತಲ್ಲೀನರಾಗುತ್ತಾರೆ. ಅದರಲ್ಲೇ ಕೇಂದ್ರೀಕೃತರಾಗುತ್ತಾರೆ.
63. ಓ ಮಹಾರಾಜ, ನಾಲ್ಕು ಕಾರಣಗಳಿಂದ ತಥಾಗತರು ಧ್ಯಾನದಲ್ಲಿ ನಿಷ್ಠಾವಂತ ರಾಗುತ್ತಾರೆ ಮತ್ತು ಯಾವುದವು ನಾಲ್ಕು ಕಾರಣಗಳು? ಅವರು ಸುಖಕರವಾಗಿ ವಿಹರಿಸುತ್ತಾರೆ. ಓ ಮಹಾರಾಜ, ಏಕೆಂದರೆ ಧ್ಯಾನದಲ್ಲಿ ವಿಫುಲವಾದ ಲಾಭಗಳಿವೆ. ಅದು ನ್ಯೂನತೆಯಿಲ್ಲದ ಲಾಭಗಳಾಗಿವೆ ಮತ್ತು ಧ್ಯಾನವು ಎಲ್ಲಾ ಶ್ರೇಷ್ಠ ವಿಷಯಗಳಿಗೆ ಸರಿಸಾಟಿಯಿಲ್ಲದ ಹಾದಿಯಾಗಿದೆ ಮತ್ತು ಧ್ಯಾನವು ಸರ್ವ ಬುದ್ಧರಿಂದ ಪ್ರಶಂಸಿಸಲ್ಪಟ್ಟಿದೆ, ಸ್ತುತಿಸಲ್ಪಟ್ಟಿದೆ, ಸ್ತೋತ್ರಿಸಲ್ಪಟ್ಟಿದೆ. ಇವೆಲ್ಲಾ ಕಾರಣಗಳಿಂದಲೂ ಬುದ್ಧರು ಸದಾ ಧ್ಯಾನದಲ್ಲಿ ತಲ್ಲೀನರಾಗುತ್ತಾರೆ. ಓ ಮಹಾರಾಜ ಬುದ್ಧರು ಧ್ಯಾನಿಸುವುದು ಯಾವುದೇ ಕೊರತೆ ನೀಗಿಸಲು ಅಲ್ಲ. ಅಥವಾ ಏನನ್ನಾದರೂ ಸಾಧಿಸಲು ಸಹಾ ಅಲ್ಲ, ಅವನ್ನೆಲ್ಲಾ ಅವರು ಬೋಧಿವೃಕ್ಷದಡಿಯಲ್ಲೇ ಸಿದ್ಧಿಸಿದ್ದಾರೆ. ಆದರೆ ಧ್ಯಾನದಲ್ಲಿರುವ ವೈವಿಧ್ಯತೆಯ ಲಾಭಗಳನ್ನು ಅರಿತಿರುವುದರಿಂದಾಗಿ ಅವರು ಧ್ಯಾನದಲ್ಲಿ ತಲ್ಲೀನರಾಗುತ್ತಾರೆ.
ತುಂಬಾ ಒಳ್ಳೆಯದು ಭಂತೆ ನಾಗಸೇನ, ಆದ್ದರಿಂದಲೇ ನಾನು ನೀವು ಹೇಳಿದ್ದನ್ನು ಒಪ್ಪುತ್ತೇನೆ.


10. ಇದ್ದಿಬಲದರ್ಶನ ಪ್ರಶ್ನೆ

ಭಂತೆ ನಾಗಸೇನ, ಭಗವಾನರಿಂದ ಹೀಗೆ ಹೇಳಲ್ಪಟ್ಟಿದೆ: ಆನಂದ, ತಥಾಗತರು ನಾಲ್ಕು ಇದ್ದಿಪಾದಗಳನ್ನು ಚೆನ್ನಾಗಿ ಅಭ್ಯಸಿಸಿದ್ದಾರೆ, ವೃದ್ಧಿಗೊಳಿಸಿದ್ದಾರೆ, ಸಂಗ್ರಹಿಸಿದ್ದಾರೆ ಮತ್ತು ನಾಲ್ಕು ಇದ್ದಿಗಳ ಅಗ್ರಸ್ಥಿತಿಗೆ ತಲುಪಿದ್ದಾರೆ. ಹೇಗೆ ಪ್ರಾವಿಣ್ಯತೆ ಪಡೆದಿದ್ದಾರೆ ಎಂದರೆ ಚಿತ್ತದ ಅಭಿವೃದ್ಧಿ ಹೊಂದಿದ್ದಾರೆ ಮತ್ತು ಪ್ರತಿಯೊಂದರ ವಿಕಾಸವಾಗಿದೆ. ಆನಂದ ಅದರಿಂದಾಗಿ ತಥಾಗತರು ಇಚ್ಛಿಸಿದರೆ ಕಲ್ಪದಷ್ಟು ಕಾಲ ಜೀವಿಸಬಹುದು ಅಥವಾ ಉಳಿದ ಕಲ್ಪಕಾಲ ಜೀವಿಸಬಹುದು ಮತ್ತು ಭಗವಾನರು ಹೀಗೂ ಹೇಳಿದ್ದಾರೆ  ಇಂದಿನಿಂದ ಮೂರು ತಿಂಗಳ ಮುಕ್ತಾಯದಂದು ತಥಾಗತರು ಪರಿನಿಬ್ಬಾಣ ಪಡೆಯುವರು.
ಈಗ ಹೇಳಿ, ಮೊದಲ ಹೇಳಿಕೆ ನಿಜವಾಗಿದ್ದರೆ ಮೂರು ತಿಂಗಳ ಗಡಿಯ ಹೇಳಿಕೆ ಸುಳ್ಳಾಗುತ್ತದೆ ಅಥವಾ ಎರಡನೆಯ ಹೇಳಿಕೆ ನಿಜವಾಗಿದ್ದರೆ, ಮೊದಲನೆಯದು ಸುಳ್ಳಾಗುತ್ತದೆ. ತಥಾಗತರು ಸನ್ನಿವೇಶವಿಲ್ಲದೆ ಹೀಗೆ ಹೇಳುವುದಿಲ್ಲ, ಭಗವಾನರು ದಾರಿ ತಪ್ಪುವಂತಹ ಮಾತುಗಳನ್ನು ಹೇಳುವವರಲ್ಲ. ಅವರು ಸದಾ ಸತ್ಯವನ್ನೇ, ಹಿತವನ್ನೇ ನುಡಿಯುವರು. ಇದು ಸಹಾ ದ್ವಿಮುಖ ಇಕ್ಕಟ್ಟಿನ ಪ್ರಶ್ನೆಯಾಗಿದೆ. ಆದರೆ ಸೂಕ್ಷ್ಮಾತಿಸೂಕ್ಷ್ಮ ವಾಗಿದೆ, ವಿವರಿಸಲು ಕಷ್ಟಕರವಾಗಿದೆ. ಇದನ್ನು ನಿಮಗೆ ಹಾಕಿದ್ದೇನೆ, ಈ ಬಲೆಯನ್ನು ಕತ್ತರಿಸಿ, ವಾದವನ್ನು ಮುರಿಯಿರಿ. (100)
ಓ ಮಹಾರಾಜ, ಈ ಎರಡೂ ಹೇಳಿಕೆಗಳು ಸಹಾ ಭಗವಾನರೇ ನುಡಿದಿದ್ದಾರೆ. ಆದರೆ ಇಲ್ಲಿ ಕಲ್ಪವೆಂದರೆ ಮಾನವನ ಜೀವನದ ಮಿತಿಯಾಗಿದೆ ಮತ್ತು ಭಗವಾನರು ಈ ರೀತಿ ಹೇಳುವಾಗ ತಮ್ಮನ್ನು ಪ್ರಶಂಸಿಸಿಕೊಂಡಿಲ್ಲ. ಬದಲಾಗಿ ಇದ್ದಿಬಲದ ಮಹೋನ್ನತೆಯನ್ನು ವಿವರಿಸಿದ್ದಾರೆ ಅಷ್ಟೇ. ಹೇಗೆಂದರೆ ಒಬ್ಬ ರಾಜನ ಬಳಿ ಅತ್ಯಂತ ವೇಗಯುತ ಕುದುರೆಯಿರುತ್ತದೆ. ಅದು ವಾಯು ವೇಗದಲ್ಲಿ ಚಲಿಸುವಂತಹದ್ದಾಗಿರುತ್ತದೆ. ರಾಜನು ತನ್ನ ಸಭೆಯಲ್ಲಿ ಎಲ್ಲರ ಮುಂದೆ ನಗರವಾಸಿಗಳು, ಗ್ರಾಮವಾಸಿಗಳು, ಸೇವಕರು, ಕ್ಷತ್ರಿಯರು, ಬ್ರಾಹ್ಮಣರು, ಅಧಿಕಾರಿಗಳ ಮುಂದೆ ಹೀಗೆ ನುಡಿಯುತ್ತಾನೆ: ಈತನು ಇಚ್ಛಿಸಿದರೆ ಈ ಉದಾತ್ತ ಕುದುರೆಯ ಸಹಾಯದಿಂದ ಭೂ, ಸಾಗರಗಳ ಗಡಿಗಳನ್ನು ದಾಟಿ ಕ್ಷಣದಲ್ಲಿ ಹಿಂತಿರುಗುವನು. ಹಾಗೆಯೇ ಆ ಅಶ್ವರತ್ನವನ್ನು ಸಭಿಕರ ಮುಂದೆ ಪರೀಕ್ಷಿಸುತ್ತಾರೆ. ಆದರೆ ಆ ಅಶ್ವರತ್ನವು ರಾಜರು ಹೇಳಿದಂತೆಯೇ ವಾಯುವೇಗದಲ್ಲಿ ಭೂಮಂಡಲದ ಸಾಗರದ ಗಡಿಯನ್ನು ದಾಟಿ ಕ್ಷಣದಲ್ಲಿ ಹಿಂದಿರುಗಿತು. ಅದೇರೀತಿಯಲ್ಲಿ ಓ ಮಹಾರಾಜ, ಭಗವಾನರು ಸಹಾ ಇದ್ದಿಯ ಬಲವನ್ನು ಪ್ರಶಂಸಿಸಿದ್ದಾರೆ. ಮತ್ತು ಹೀಗೆ ದೇವತೆಗಳ, ಮಾನವರ ಮಧ್ಯೆ ಕುಳಿತು ಹೇಳಿದ್ದಾರೆ. ಅವರಿಗೆ ತ್ರಿವಿಧ ಜ್ಞಾನವಿದೆ ಮತ್ತು ಷಟಅಭಿಜ್ಞಾ ಪ್ರಾಪ್ತಿ ಮಾಡಿರುವರು. ಅವರು ಕಲೆರಹಿತ ಅರಹಂತರಾಗಿದ್ದಾರೆ. ಯಾವಾಗ ಅವರು ಹೀಗೆ ಹೇಳಿದ್ದಾರೋ ಆನಂದ, ತಥಾಗತರು ನಾಲ್ಕು ಇದ್ದಿಪಾದವನ್ನು ಬಹುವಾಗಿ ಅಭ್ಯಸಿಸಿದ್ದಾರೆ, ವೃದ್ಧಿಗೊಳಿಸಿದ್ದಾರೆ, ಸಂಗ್ರಹಿಸಿದ್ದಾರೆ, ಅತ್ಯುಗ್ರವಾಗಿ ಸಾಧಿಸಿದ್ದಾರೆ. ಶ್ರೇಷ್ಠವಾಗಿ ಪ್ರಾವಿಣ್ಯತೆ ಗಳಿಸಿದ್ದಾರೆ, ಚಿತ್ತ ವಿಕಾಸಿಸಿದ್ದಾರೆ ಮತ್ತು ಆನಂದ ಇದರಿಂದಾಗಿ ತಥಾಗತರು ಇಚ್ಛಿಸಿದರೆ ಇಡೀ ಕಲ್ಪ ಜೀವಿಸಬಲ್ಲರು ಅಥವಾ ಉಳಿದ ಕಲ್ಪಕಾಲ ಬದುಕಬಲ್ಲರು. ಇಂತಹ ಶಕ್ತಿಯನ್ನು ಅವರು ಪಡೆದಿದ್ದರು ಮಹಾರಾಜ, ಆದರೂ ಸಹಾ ಅವರು ಶಕ್ತಿಪ್ರದರ್ಶನ ಮಾಡುತ್ತಿರಲಿಲ್ಲ. ಏಕೆಂದರೆ ಅವರು ಎಲ್ಲಾಬಗೆಯ ಬಯಕೆಗಳನ್ನು ಮೀರಿದ್ದರು. ಅವರು ಬದುಕುವ ಬಯಕೆಯನ್ನು ಸಹಾ ಹೊಂದಿರಲಿಲ್ಲ. ಭವಿಷ್ಯದ ಜೀವಿಸುವಿಕೆಯ ಬಯಕೆಯನ್ನು ಅವರು ಹೊಂದಿರಲಿಲ್ಲ. ಅದನ್ನು ಖಂಡಿಸುತ್ತ ಅವರೇ ಒಂದೆಡೆ ಹೇಳಿರುವಂತೆ ಓ ಭಿಕ್ಷುಗಳೇ, ಹೇಗೆ ಸ್ವಲ್ಪ ಮಲವು ಸಹಾ ದುನರ್ಾತ ಬೀರುವುದೋ, ಹಾಗೆಯೇ ಭವಿಷ್ಯದ ಜೀವನದಲ್ಲಿ (ದೀಘರ್ಾಯುವಿನಲ್ಲಿ) ನಾನು ಅಣುವಿನಷ್ಟು ಸುಂದರತೆ ಕಾಣಲಿಲ್ಲ. ಚಿಟಿಕೆ ಮುರಿಯುವಷ್ಟು ಕಾಲವು ಸಹಾ ಚೆನ್ನಾಗಿ ಕಾಣುವುದಿಲ್ಲ. ಓ ಮಹಾರಾಜ, ಹೀಗೆ ಬಯಕೆಗಳಿಂದ ರಹಿತರಾದ ಭಗವಾನರು ಹೀಗೆ ದೀಘರ್ಾಯುವನ್ನು ಭವಿಷ್ಯವನ್ನು ಕಂಡಂತಹ ಭಗವಾನರು ಜೀವಿಸಲು ಇಚ್ಛಿಸುವರೇ?
ಖಂಡಿತ ಇಲ್ಲ ಭಂತೆ.
ಹಾಗಾದರೆ ಅವರು ಪ್ರಶಂಸಿಸಿದ್ದು ಇದ್ದಿಬಲವನ್ನು ಹೊರತು, ಅದು ಪ್ರಶಂಸೆಯಾಗಲಿ ಅಥವಾ ಜೀವಿಸುವ ಬಯಕೆಯಾಗಲಿ ಅಲ್ಲ ಎಂದು ಒಪ್ಪುವಿರೋ.
ಖಂಡಿತ ಭಂತೆ ನಾಗಸೇನ, ಚೆನ್ನಾಗಿ ವಿವರಿಸಿದಿರಿ, ನೀವು ಈಗ ಹೇಳಿದ್ದನ್ನೆಲ್ಲಾ ನಾನು ಒಪ್ಪಿದ್ದೇನೆ. 

No comments:

Post a Comment