Wednesday 27 December 2017

ಮಿಲಿಂದ ಪನ್ಹ 5. ಸಂಥವ ವಗ್ಗೋ milinda panha santhava vaggo

                                       5. ಸಂಥವ ವಗ್ಗೋ



ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ಸ್ನೇಹದಿಂದ ಭಯವು ಜನಿಸುತ್ತದೆ. ಗೃಹ ಜೀವನದಿಂದ ರಜೋ ಉದಯಿಸುತ್ತದೆ. ಅನಿಕೇತನವು (ಮನೆಯಿಲ್ಲದಿರುವಿಕೆಯು) ಹಾಗು ಸ್ನೇಹ ಮೀರುವಿಕೆಯೇ ಇದೇ ಮುನಿಗಳ ದರ್ಶನವಾಗಿದೆ. ಹಾಗೆಯೇ ಭಗವಾನರು ಹೀಗೂ ಹೇಳಿದ್ದಾರೆ: ಬುದ್ಧಿವಂತನು ರಮ್ಯವಾದ ವಿಹಾರಗಳನ್ನು ನಿಮರ್ಿಸಿ, ಬಹುಶೃತರೊಂದಿಗೆ ವಾಸಿಸಲಿ. ಭಂತೆ ನಾಗಸೇನ, ಒಂದುವೇಳೆ ಭಗವಾನರ ಮೊದಲ ಹೇಳಿಕೆಯು ಸತ್ಯವಾಗಿದ್ದರೆ, ಎರಡನೆಯ ಹೇಳಿಕೆ ಸುಳ್ಳಾಗಿರುತ್ತದೆ. ಆದರೆ ಭಗವಾನರು ಎರಡನೆಯ ಹೇಳಿಕೆಯಾದ ವಿಹಾರಗಳಲ್ಲಿ ಬಹುಶೃತರೊಂದಿಗೆ ವಾಸಿಸಲಿ ಇದು ಸತ್ಯವಾಗಿದ್ದ ಪಕ್ಷದಲ್ಲಿ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಸಮಸ್ಯೆಯಾಗಿದೆ. ಇದನ್ನು ನಿಮಗೆ ಹಾಕುತ್ತಿದ್ದೇನೆ. ಇದನ್ನು ನೀವೇ ಬಿಡಿಸಬೇಕು. (133)

ನೀವು ಹೇಳಿದಂತಹ 2 ಹೇಳಿಕೆಗಳು ತಥಾಗತರಿಂದಲೇ ಬಂದುದ್ದಾಗಿದೆ. ಮೊದಲ ಹೇಳಿಕೆ ವಸ್ತುವಿಷಯಗಳ ಸ್ವಭಾವವನ್ನು ಕುರಿತು ಹೇಳಿದಂತಹದ್ದಾಗಿದೆ. ಇದು ಎಲ್ಲವನ್ನೂ ಒಳಗೊಂಡ ವಾಕ್ಯ. ಅದು ಯಾವುದರಿಂದಲೂ ಅನುಬಂಧವಾಗುವ ಹಾಗಿಲ್ಲ. ಅದಕ್ಕೆ ಹೆಚ್ಚಿಗೆ ಏನೂ ಹಾಕುವ ಹಾಗಿಲ್ಲ. ಯಾವುದೇ ಯೋಗ್ಯ ಭಿಕ್ಷುವಿಗೆ ಏನೆಲ್ಲಾ ಅಗತ್ಯವಿದೆಯೋ ಅದೆಲ್ಲಾ ಅದರಲ್ಲಿದೆ. ಮತ್ತು ಜೀವನದಲ್ಲಿ ಯಾವುದನ್ನು ಭಿಕ್ಷುವು ಹೊಂದಾಣಿಕೆ ಮಾಡಿಕೊಳ್ಳಬೇಕೋ, ಹಾದಿಯುದ್ದಕ್ಕೂ ಪರಿಪಾಲಿಸಬೇಕೋ, ಸಾಧಿಸಬೇಕೋ ಅವೆಲ್ಲಾ ಅದರಲ್ಲಿದೆ. ಹೇಗೆಂದರೆ ಓ ಮಹಾರಾಜ, ಜಿಂಕೆಯೊಂದು ಕಾಡಿನಲ್ಲಿ ಅಡ್ಡಾಡಿ, ಇಷ್ಟಬಂದಕಡೆ ಮಲಗುವಂತೆ, ತನಗಾಗಿ ಎಂಬಂತಹ ಯಾವುದೇ ವಾಸಸ್ಥಳವಿಲ್ಲದೆ ಇರುವುದೋ ಹಾಗೆಯೇ ಭಿಕ್ಷು ಈ ಅಭಿಪ್ರಾಯವುಳ್ಳವನಾಗುತ್ತಾನೆ. ಸ್ನೇಹದಿಂದ ಭಯವು ಉದಯಿಸುತ್ತದೆ, ಗೃಹ ಜೀವನದಿಂದ ರಜೋ (ಧೂಳು) ತುಂಬಿಕೊಳ್ಳುತ್ತದೆ. ಆದರೆ ಭಗವಾನರು ರಮ್ಯವಾಸದಲ್ಲಿ ಬಹುಶೃತರೊಂದಿಗೆ ನೆಲೆಸಲಿ ಎಂದು ಏತಕ್ಕೆ ಹೇಳಿರುವರು ಎಂದರೆ ಎರಡು ಕಾರಣಗಳಿಂದಾಗಿ. ಯಾವುದದು ಎರಡು? ವಾಸಸ್ಥಳ (ವಿಹಾರ) ದಾನಗಳನ್ನು ಎಲ್ಲಾ ಬುದ್ಧರುಗಳು ಅತಿಯಾಗಿ ಪ್ರಶಂಸಿಸಿರುವರು ಮತ್ತು ಯಾರು ಅಂತಹ ದಾನಗಳನ್ನು ನೀಡುವರೋ ಅವರು ಜನ್ಮ, ಜರೆ, ಜರಾ ಮತ್ತು ಮೃತ್ಯುಗಳಿಂದ ಪಾರಾಗಲು ಸಹಾಯ ಸಿಗುತ್ತದೆ. ಇದು ವಿಹಾರ ದಾನದಿಂದಾಗುವ ಮೊದಲ ಲಾಭವಾಗಿದೆ, ಮತ್ತೆ ಭಿಕ್ಷುಣಿಯರಿಗೂ ನಿಗಧಿತ ವಾಸಸ್ಥಳ ಅಂದರೆ ವಿಹಾರಗಳು ಇದ್ದರೆ ಅವರಿಗೂ ಸಹಾ ವಾಸಿಸಲು ಪರರು ಭೇಟಿಯಾಗಲು ಸುಲಭವಾಗುತ್ತದೆ. ಈ ಎರಡು ಕಾರಣಗಳಿಂದಾಗಿಯೇ ಭಗವಾನರು ಈ ಗಾಥೆ ನುಡಿದಿದ್ದರು ರಮ್ಯವಾದ ವಿಹಾರಗಳನ್ನು ನಿಮರ್ಿಸಿ ಬಹುಶ್ರುತರು ನೆಲೆಸಲಿ. ಮತ್ತು ಎಂದಿಗೂ ಜಿನಪುತ್ತರು (ಭಿಕ್ಷುಗಳು) ಗೃಹಸ್ಥರು ಹೊಂದಿರುವಂತಹ ವಾಸಸ್ಥಳದ ಬಯಕೆಗಳನ್ನು ಹೊಂದಿದ್ದಾರೆ ಎಂದು ತಿಳಿಯಬಾರದು, ಅವರು ಅರಿತು ಬಳಸುತ್ತಾರೆ, ಅಂಟುವುದಿಲ್ಲ.

ಭಂತೆ ನಾಗಸೇನ, ಬಹುಚೆನ್ನಾಗಿ ವಿವರಿಸಿದಿರಿ, ನೀವು ಹೇಳಿದ್ದನ್ನು ನಾನು ಒಪ್ಪುತ್ತೇನೆ.


2. ಉದರ ಸಂಯಮದ ಪ್ರಶ್ನೆ


ಭಂತೆ ನಾಗಸೇನ, ಭಗವಾನರು ಹೀಗೂ ಹೇಳಿರುವರು: ಜಾಗೃತನಾಗು (ನಿಯಮಗಳಲ್ಲಿ) ಅಲಕ್ಷಬೇಡ, ಹೊಟ್ಟೆಯ (ಉದರದ) ವಿಷಯದಲ್ಲಿ ಸಂಯಮಿಯಾಗು. ಆದರೆ ಮತ್ತೊಂದೆಡೆ ಹೀಗೆ ಹೇಳಿದ್ದಾರೆ ಕೆಲವುವೇಳೆ ಉದಾಯಿ, ನಾನು ಪಿಂಡಪಾತ್ರೆಯ ತುಂಬ ಆಹಾರ ತಿಂದಿರುವೆನು. ಈಗ ಮೊದಲ ನಿಯಮ ಸರಿಯಾಗಿದ್ದರೆ, ಎರಡನೆಯದು ಮಿಥ್ಯವಾಗುತ್ತದೆ. ಹಾಗಲ್ಲದೆ ಎರಡನೆಯದೇ ಸತ್ಯವಾಗಿದ್ದ ಪಕ್ಷದಲ್ಲಿ ಮೊದಲನೆಯದು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಮೊನೆಯ ಇಕ್ಕಟ್ಟಿನ ಸಮಸ್ಯೆಯಾಗಿದೆ. ಈಗ ನಿಮಗೆ ಹಾಕಿದ್ದೇನೆ, ಅದನ್ನು ನೀವೇ ಪರಿಹರಿಸಬೇಕು. (134)

ಓ ಮಹಾರಾಜ, ಈ ಎರಡು ಹೇಳಿಕೆಗಳು ಭಗವಾನರಿಂದಲೇ ಬಂದಿರುವುದ್ದಾಗಿದೆ. ಮೊದಲ ಹೇಳಿಕೆಯು ವಸ್ತು ವಿಷಯದ ಸ್ವಭಾವಗಳ ಕುರಿತದ್ದಾಗಿದೆ. ಇದು ಎಲ್ಲವನ್ನೂ ಒಳಗೊಂಡ ವಾಕ್ಯವಾಗಿದೆ. ಅದಕ್ಕೆ ಬೇರೇನೂ ಸೇರಿಸಬೇಕಾಗಿಲ್ಲ. ಅದು ವಾಸ್ತಾವಾಂಶ ಗಳಿಗೆ, ಸತ್ಯಕ್ಕೆ ಅನುಗುಣವಾದದ್ದು. ಅದನ್ನು ಸುಳ್ಳಾಗಿಸಲು ಸಾಧ್ಯವಿಲ್ಲ. ಅದು ಸಭಾವ ವಚನವಾಗಿದೆ, ಈಶತ್ವ ಸಾಧಿಸುವ ವಚನವಾಗಿದೆ, ಮುನಿ ವಚನವಾಗಿದೆ, ಭಗವಾನರ ವಚನವಾಗಿದೆ, ಪಚ್ಚೇಕಬುದ್ಧರ ವಚನವಾಗಿದೆ, ಜಿನವಚನವಾಗಿದೆ, ಸರ್ವಜ್ಞಸಂಪನ್ನರ ವಚನವಾಗಿದೆ. ಅದು ತಥಾಗತರು ಅರಹಂತರು ಹಾಗು ಸಮ್ಮಾಸಂಬುದ್ಧರು ಆಗಿರುವವರ ವಚನವಾಗಿದೆ.

ಓ ಮಹಾರಾಜ, ಯಾರು ಹೊಟ್ಟೆಯ ಬಗ್ಗೆಯ ಸಂಯಮಿಯಾಗಿರುವುದಿಲ್ಲವೋ ಆತನು ಪ್ರಾಣಗಳನ್ನು ತೆಗೆಯುವನು, ಕೊಡದಿರುವುದನ್ನು ತೆಗೆದುಕೊಳ್ಳುವನು, ಪರನಾರಿ ಗಮನ ಮಾಡುತ್ತಾನೆ, ಸುಳ್ಳು ಹೇಳುತ್ತಾನೆ, ಮದ್ಯಪಾನ ಮಾಡುತ್ತಾನೆ, ಮಾತಾಪಿತರ ಹತ್ಯೆ ಮಾಡುತ್ತಾನೆ, ಅರಹಂತರ ಜೀವ ತೆಗೆಯುತ್ತಾನೆ, ಸಂಘಬೇಧ ಮಾಡುವನು, ದುಷ್ಟಚಿತ್ತದಿಂದ ತಥಾಗತರಿಗೆ ಗಾಯ ಮಾಡುವನು, ಓ ಮಹಾರಾಜ, ದೇವದತ್ತನು ಹೊಟ್ಟೆಯನ್ನು ನಿಯಂತ್ರಿಸದಿದ್ದುದರಿಂದಲೇ ಅಲ್ಲವೆ ಆತನು ಸಂಘಬೇಧವನ್ನು ಮಾಡಿದ್ದು. ಇನ್ನಿತರ ಪಾಪಕರ್ಮ ಮಾಡಿದ್ದು, ಅದರಿಂದಾಗಿ ಇಡೀ ಕಲ್ಪಕಾಲ ನರಕದಲ್ಲಿ ಬೀಳುವಂತಾಗಲಿಲ್ಲವೆ? ಇದನ್ನು ನೆನೆಸಿಕೊಂಡಲ್ಲಿ ಭಗವಾನರು ಇಂತಹವುಗಳ ಬಗ್ಗೆಯೇ ಹೀಗೆ ಹೇಳಿದ್ದಾರೆ ಜಾಗೃತನಾಗು, ಪ್ರಮಾದನಾಗಬೇಡ, ಉದರದೊಂದಿಗೆ ಸಂಯಮಿತನಾಗು.

ಮತ್ತು ಯಾರು ಉದರದೊಂದಿಗೆ ಸಂಯಮಿತನಾಗುವನೋ ಆತನಿಗೆ ನಾಲ್ಕು ಆರ್ಯಗಳ ಜ್ಞಾನವು ಸ್ಪಷ್ಟವಾಗಿ ದೊರೆತು ಜೀವನದ ಸಮಞ್ಞದ ನಾಲ್ಕು ಪಲಗಳನ್ನು ಪಡೆಯುತ್ತಾನೆ ಮತ್ತು ನಾಲ್ಕು ಪಟಿಸಂಬಿದಾ ಜ್ಞಾನಗಳಲ್ಲಿ ಪ್ರಾವಿಣ್ಯತೆ ಪಡೆಯುತ್ತಾನೆ. ಅಷ್ಟಸಮಾಪತ್ತಿಗಳನ್ನು ಪಡೆಯುತ್ತಾನೆ. ಷಟಾಭಿಜ್ಞಾಗಳನ್ನು ಪ್ರಾಪ್ತಿ ಮಾಡುತ್ತಾನೆ ಮತ್ತು ಸಮಣ ಜೀವನದ ಎಲ್ಲವನ್ನು ಪೂರ್ಣಗೊಳಿಸುತ್ತಾನೆ. ಇದು ಕೇವಲ ಗಿಳಿಯ ಹಾಗಲ್ಲ, ಓ ಮಹಾರಾಜ, ಉದರ ನಿಯಂತ್ರಣವು ಸಾಮಾನ್ಯವಾದುದಲ್ಲ. ಅದರಿಂದಾಗಿ ತಾವತಿಂಸ ಲೋಕವನ್ನೇ ಕಂಪಿಸುವಂತಾಗಿಸಬಹುದು. ಅದರೊಡೆಯನಾದ ಶಕ್ರನನ್ನು ಕೆಳಕ್ಕೆ ತರಿಸಬಹುದು. ಈ ರೀತಿಯಾಗಿ ಬಹುವಿಧ ಕಾರಣಗಳಿಂದಾಗಿ ಭಗವಾನರು ಈ ರೀತಿ ಘೋಷಿಸಿದ್ದರು:

ಜಾಗೃತನಾಗು, ಪ್ರಮಾದಿತನಾಗಬೇಡ ಉದರದೊಂದಿಗೆ ಸಂಯಮಿತನಾಗಿರು.

ಆದರೆ ಓ ಮಹಾರಾಜ, ಯಾವಾಗ ಅವರು ಉದಾಯಿಯೊಂದಿಗೆ ಕೆಲವೊಮ್ಮೆ ಉದಯಿ, ಪಿಂಡಪಾತ್ರೆ ತುಂಬಾ ತಿಂದಿರುವುದುಂಟು. ಹೀಗೆ ಹೇಳಿದ್ದರೋ, ಆಗ ಅವರು ಮಾಡಬೇಕಾದುದನ್ನು ಮಾಡಿಯಾಗಿತ್ತು, ಪೂರ್ಣಗೊಳಿಸಬೇಕಾದುದನ್ನು ಪೂರ್ಣಗೊಳಿಸಿಯಾಗಿತ್ತು, ಅಂತ್ಯಗೊಳಿಸಬೇಕಾಗಿರುವುದನ್ನು ಅಂತ್ಯಗೊಳಿಸಿಯಾಗಿತ್ತು. ಸಿದ್ಧಿಸಬೇಕಾಗಿರುವುದನ್ನು ಸಿದ್ಧಿಸಿ ಆಗಿತ್ತು. ಪ್ರತಿ ತಡೆಗಳನ್ನು ದಾಟಿಯಾಗಿತ್ತು. ಸ್ವ-ಅವಲಂಬನೆ, ಸ್ವ-ನಿಯಂತ್ರಿತರಾಗಿದ್ದರು.

ಓ ಮಹಾರಾಜ, ಯಾರು ವಾಂತಿ ರೋಗಿಯೋ, ಭೇದಿವುಳ್ಳ ರೋಗಿಯೋ, ಬಸ್ತಿ ರೋಗಿಯೋ ಆತನಿಗೆ ಔಷಧ ಪಾನಿಯಗಳೊಂದಿಗೆ ಸೇವೆ ಮಾಡಬೇಕಾದ ಅವಶ್ಯಕತೆಯಿದೆ. ಅದೇರೀತಿಯಲ್ಲಿ ಓ ಮಹಾರಾಜ, ಯಾರು ಪಾಪಗಳಿಂದ ತುಂಬಿರುವನೊ, ಯಾರು ನಾಲ್ಕು ಆರ್ಯಸತ್ಯಗಳನ್ನು ಗ್ರಹಿಸಿಲ್ಲವೋ, ಆತನಿಗೆ ಮಿತಾಹಾರ ಅತ್ಯವಶ್ಯಕವಾಗಿದೆ. ಓ ಮಹಾರಾಜ, ಹೇಗೆ ಪರಿಪೂರ್ಣ ಮಣಿರತ್ನಕ್ಕೆ ಹೊಳಪು ನೀಡುವ ಅಗತ್ಯವಿಲ್ಲವೋ, ಉಜ್ಜುವಿಕೆಯ ಅಗತ್ಯವಿಲ್ಲವೋ, ಅದಕ್ಕೆ ತನ್ನದೇ ಆದ ದಿವ್ಯ ಪ್ರಕಾಶವಿರುತ್ತದೋ ಅದೇರೀತಿಯಲ್ಲಿ ಮಹಾರಾಜ, ತಥಾಗತರ ಎಲ್ಲಾ ಕ್ರಿಯೆಗಳು ಸ್ವಾಭಾವಿಕವಾಗಿ ಸಂಯಮಿತ ಆಗಿರುತ್ತವೆ. ಅವರು ಸಂಯಮಪಡಬೇಕಿಲ್ಲ. ತಥಾಗತರ, ಬುದ್ಧರ ವಿಷಯದಲ್ಲಿ ಪಾರಮಿಗಳು ಎಂದೋ ಪೂರ್ಣಗೊಳಿಸಲ್ಪಟ್ಟಿವೆ. ಅವರಿಗೆ ಕ್ರಿಯಾ ಕಾರಣದ ಆವರಣ ಇರುವುದಿಲ್ಲ. (ಅವರ ಪಿಂಡಪಾತ್ರೆಯು ತುಂಬಿತ್ತೇ ಹೊರತು ಅವರ ಹೊಟ್ಟೆಯು ತುಂಬಿರಲಿಲ್ಲ. ಅದು ಮಿತಹಾರದಿಂದಲೇ ಇತ್ತು. ಅವರು ಉದರದಲ್ಲಿ ಸ್ವಾಭಾವಿಕವಾಗಿ ಸಂಯಮಿತರಾಗಿದ್ದರು. ಅವರ ಬಾಹ್ಯ ಶರೀರದ 32 ಮಹಾಪುರುಷ ಲಕ್ಷಣಗಳಲ್ಲಿ ತೆಳುಹೊಟ್ಟೆ ಸಿಂಹಕಟಿಯನ್ನು ಹೊಂದಿದ್ದರು).

ಬಹುಚೆನ್ನಾಗಿ ವಿವರಿಸಿದಿರಿ ನಾಗಸೇನ ! ಖಂಡಿತವಾಗಿಯು ವಾಸ್ತವ ಹೀಗಿರುವುದರಿಂದಾಗಿ ನೀವು ಹೇಳಿದ್ದನ್ನು ನಾನು ಒಪ್ಪುವೆ.


3. ಬುದ್ಧ ಅಪ್ಪಾಬಾಧ ಪನ್ಹೋ (ಆರೋಗ್ಯ ಶರೀರದ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ಓ ಭಿಕ್ಷುಗಳೇ ನಾನು ಬ್ರಾಹ್ಮಣನಾಗಿದ್ದೇನೆ, ಯೋಗದಲ್ಲಿ ಸದಾ ತಲ್ಲೀನನಾಗಿರುತ್ತೇನೆ, ಸದಾ ಶುದ್ಧ ಹಸ್ತದವನಾಗಿದ್ದೇನೆ, ಇದು ನನ್ನ ಅಂತಿಮ ಶರೀರವಾಗಿದೆ, ನಾನು ಶ್ರೇಷ್ಠ ವೈದ್ಯನಾಗಿದ್ದೇನೆ.

ಆದರೆ ಇನ್ನೊಂದೆಡೆ ಭಗವಾನರು ಹೀಗೂ ಹೇಳಿದ್ದಾರೆ: ಓ ಭಿಕ್ಷುಗಳೇ, ನನ್ನ ಶಿಷ್ಯರಲ್ಲಿ, ಆರೋಗ್ಯಕರವಾಗಿರುವವರಲ್ಲಿ ಬಕ್ಕುಲ ಶ್ರೇಷ್ಠನಾಗಿದ್ದಾನೆ.

ಭಂತೆ ನಾಗಸೇನ, ಹಲವುಸಾರಿ ಭಗವಾನರ ಶರೀರದಲ್ಲಿ ರೋಗಗಳು ಉದಯಿಸಿವೆ, ಹೀಗಿರುವಾಗ ಭಗವಾನರ ಶರೀರವು ಶ್ರೇಷ್ಠವೆನ್ನುವುದಾದರೆ, ಬಕ್ಕಲನ ಶರೀರ ಆರೋಗ್ಯಕರರಲ್ಲಿ ಶ್ರೇಷ್ಠ ಎನ್ನುವುದು ತಪ್ಪಾಗುತ್ತದೆ. ಆದರೆ ಆರೋಗ್ಯಕರರಲ್ಲಿ ಬಕ್ಕುಲನೇ ಶ್ರೇಷ್ಠ ಎನ್ನುವುದೇ ಸರಿಯಾದರೆ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ಎರಡುಕಡೆ ಮೊನಚಾಗಿರುವಂತಹ ಪ್ರಶ್ನೆಯಾಗಿದೆ, ನಿಮಗೆ ಈಗ ಹಾಕಲಾಗಿದೆ, ಅದನ್ನು ನೀವೇ ಬಿಡಿಸಬೇಕಾಗಿದೆ. (135)

ಓ ಮಹಾರಾಜ, ನಿಮ್ಮ ಹೇಳಿಕೆಗಳೆರಡು ಸರಿಯಾಗಿಯೇ ಇವೆ. ಆದರೆ ಬಕ್ಕಲನ ಬಗ್ಗೆ ಯಾವ ಭಿಕ್ಖುಗಳ ಮುಂದೆ ಹೇಳಿದರೊ ಅವರೆಲ್ಲ ಬಹುಶ್ರುತರಾಗಿದ್ದರು, ನೆನಪಿನ ಶಕ್ತಿಯುಳ್ಳವರಾಗಿದ್ದರು, ಅಪಾರ ಪ್ರಜ್ಞಾವಂತರಾಗಿದ್ದರು, ಸತ್ಸಂಪ್ರದಾಯ ಪಾಲಿಸುವವರಾಗಿದ್ದರು, ಅವರೆಲ್ಲರಲ್ಲೂ ವಿಶೇಷ ಗುಣಗಳು ಇದ್ದವು. ಆ ವಿಧವಾದ ವಿಶೇಷಗಳು ಅನ್ಯರಲ್ಲಿ ದುರ್ಲಭವಾಗಿತ್ತು. ಅಂತಹ ಕೆಲವು ಶಿಷ್ಯರಿಗೆ ನಡಿಗೆಯ ಧ್ಯಾನಿಗಳು ಎಂದು ಕರೆಯಲ್ಪಟ್ಟಿದ್ದರು. ಅವರು ಇಡೀ ರಾತ್ರಿ ಮತ್ತು ಇಡೀ ಹಗಲು ನಡಿಗೆಯ ಧ್ಯಾನದಲ್ಲೇ ತಲ್ಲೀನರಾಗಿರುತ್ತಿದ್ದರು. ಆದರೆ ಭಗವಾನರು ಅಹೋರಾತ್ರಿ ಧ್ಯಾನದಲ್ಲೇ ತಲ್ಲೀನರಾಗಿರುತ್ತಿದ್ದರು. ಅವರು ನಡಿಗೆಯ ಧ್ಯಾನದಲ್ಲಿ ಅಷ್ಟೇ ಅಲ್ಲ, ಪದ್ಮಾಸನ, ಸಿಂಹಾಶಯ್ಯಾಸನ (ತಥಾಗತ ಶಯ್ಯಾಸನ) ಅಂದರೆ ಕುಳಿತು ಹಾಗು ಮಲಗಿಯೂ ಧ್ಯಾನಿಸುತ್ತಿದ್ದರು. ಈ ರೀತಿಯ ನಡಿಗೆಯ ಧ್ಯಾನಿಗಳು ಬಕ್ಕುಲನನ್ನು ಆ ಧ್ಯಾನದಲ್ಲಿ ಮೀರಿಸಿಬಿಡುತ್ತಿದ್ದರು. ಮತ್ತೆ ಕೆಲವು ಭಿಕ್ಷುಗಳಿದ್ದರು, ಅವರು ಒಂದೇಕಡೆ ಕುಳಿತು, ಒಂದು ಹೊತ್ತಿನ ಊಟ ಸೇವಿಸಿ ಸಾಧನೆ ಮಾಡುತ್ತಿದ್ದರು. ಅವರು ಕುಳಿತೇ ನಿದ್ರಿಸುತ್ತಿದ್ದರು. ಆ ವಿಷಯದಲ್ಲಿ ಅವರು ಪರರನ್ನು ಮೀರಿಸಿಬಿಡುತ್ತಿದ್ದರು. ಈ ರೀತಿಯಾಗಿ ಪ್ರತಿ ಶಿಷ್ಯನು ತಮ್ಮ ತಮ್ಮ ವಿಶೇಷ ಗುಣದಿಂದ ಮಿಕ್ಕವರನ್ನೆಲ್ಲಾ ಮೀರಿಸುತ್ತಿದ್ದರು. ಆದರೆ ಓ ಮಹಾರಾಜ, ತಥಾಗತರು ತಮ್ಮ ಶ್ರೇಷ್ಠಶೀಲದಿಂದಾಗಿ, ಶ್ರೇಷ್ಠ ಸಮಾಧಿಯಿಂದಾಗಿ ಮತ್ತು ಅನುಪಮ ಪ್ರಜ್ಞಾದಿಂದಾಗಿ, ಅಸಮಾನ ವಿಮುಕ್ತಿಯಿಂದಾಗಿ ಅನುಪಮಸಂಪನ್ನ ರಾಗಿದ್ದರು. ಹಾಗು ವಿಮುಕ್ತಿಯ ಜ್ಞಾನ, ಈ ಎಲ್ಲವೂ ಬುದ್ಧರಲ್ಲಿ ಮಾತ್ರ ಪರಿಧಿಗೆ ಬರುವ ವಿಷಯಗಳಾಗಿವೆ. ಇದಕ್ಕೆ ಸಂಬಂಧಿಸಿದಂತೆ ಹೀಗೆ ಹೇಳಲಾಗಿದೆ.

ಓ ಭಿಕ್ಷುಗಳೇ, ಸದಾ ವರನೀಡುವ, ಸದಾ ಪರೋಪಕಾರ ಮಾಡುವ ಹಸ್ತದವರಾದ, ಈ ಶರೀರವು ಅಂತಿಮದ್ದಾಗಿದೆ, ನಾನು ಶ್ರೇಷ್ಠ ವೈದ್ಯನಾಗಿದ್ದೇನೆ.

ಓ ಮಹಾರಾಜ, ಒಬ್ಬನು ಜನ್ಮದಿಂದ ಉತ್ತಮ ವಂಶಜನಾಗಿರಬಹುದು, ಇನ್ನೊಬ್ಬ ಭಾರಿ ಶ್ರೀಮಂತನಾಗಿದ್ದಿರಬಹುದು, ಇನ್ನೊಬ್ಬ ಪ್ರಜ್ಞಾವಂತನಾಗಿರಬಹುದು, ಮತ್ತೊಬ್ಬ ವಿದ್ಯಾವಂತನಾಗಿರಬಹುದು, ಮಗದೊಬ್ಬ ಧೈರ್ಯಶಾಲಿಯಾಗಿರಬಹುದು ಮತ್ತು ಬೇರೊಬ್ಬ ಕುಶಲಿಯಾಗಿರಬಹುದು, ಆದರೆ ಮಹಾರಾಜ, ಇವೆಲ್ಲವನ್ನು ಅತಿಶಯಿಸುವುದು ಗಮನಾರ್ಹ. ಪರಮಶ್ರೇಷ್ಠತೆಯಾಗಿದೆ. ಅದೇರೀತಿಯಲ್ಲಿ ಓ ಮಹಾರಾಜ, ಭಗವಾನರು ಪರಮಶ್ರೇಷ್ಠರಾಗಿದ್ದಾರೆ, ಗೌರವಕ್ಕೆ ಪೂಜ್ಯತೆಗೆ ಅತ್ಯಂತ ಅರ್ಹದವರಾಗಿದ್ದಾರೆ. ಸರ್ವಜೀವಿಗಳಲ್ಲೇ ಶ್ರೇಷ್ಠರಾಗಿದ್ದಾರೆ. ಹಾಗು ಬಕ್ಕುಲನು ಆರೋಗ್ಯಕರ ಶರೀರ ಹೊಂದಿರುವುದು ಹಿಂದಿನ ಜನ್ಮದಲ್ಲಿ ಪ್ರಬಲ ಇಚ್ಛೆ ಹೊಂದಿ ಪುಣ್ಯ ಮಾಡಿದ್ದರಿಂದಾಗಿಯೇ.  ಓ ಮಹಾರಾಜ, ಹಿಂದೆ ಅನೋಮದಸ್ಸಿ ಭಗವಾನ್ ಬುದ್ಧರಿಗೆ ರೋಗ ಉಂಟಾಗಿತ್ತು. ಅವರಿಗೆ ಹೊಟ್ಟೆಯಲ್ಲಿ ವಾತದೋಷವಿತ್ತು. ಮತ್ತೆ ವಿಪಸ್ಸಿ ಭಗವಾನ್ ಬುದ್ಧರು 68000 ಭಿಕ್ಷು ಶಿಷ್ಯರನ್ನು ಹೊಂದಿದ್ದರೂ ಅವರಿಗೂ ತಿನಾಪುಷ್ಪಕ ರೋಗ (ರಕ್ತ ಹರಿದ್ವರ್ಣ ರೋಗ) ಉಂಟಾಗಿತ್ತು. ಆಗ ಬಕ್ಕುಲನು ಋಷಿಯಾಗಿದ್ದನು, ಆತನು ಹಲವಾರು ಔಷಧಿಗಳನ್ನು ಬಳಸಿ ರೋಗವನ್ನು ನಿವಾರಿಸಿದ್ದನು. ಆ ಕರ್ಮದಿಂದಲೇ ಆತನಿಗೆ ಈ ಜನ್ಮದಲ್ಲಿ ಇಂತಹ ಆರೋಗ್ಯಕರ ಶರೀರ ಹೊಂದಿದ್ದಾನೆ.

ಆದ್ದರಿಂದಲೇ ಅವನ ಬಗ್ಗೆ ಹೀಗೆ ಹೇಳಲಾಗಿದೆ, ಓ ಭಿಕ್ಷುಗಳೇ, ಆರೋಗ್ಯಕರ ಶರೀರದ ವಿಷಯದಲ್ಲಿ ನನ್ನ ಶಿಷ್ಯರಲ್ಲೇ ಶ್ರೇಷ್ಠನಾಗಿರುವವನು ಬಕ್ಕುಲನಾಗಿದ್ದಾನೆ.

ಆದರೆ ಓ ಮಹಾರಾಜ, ಭಗವಾನರು ರೋಗದಿಂದ ದುಃಖಿಸುವುದಿಲ್ಲ, ಅವರು ತಾವಾಗಿಯೇ ದುತಂಗಗಳನ್ನು (ವಿಶೇಷ ವಿನಯ ನಿಯಮಗಳನ್ನು) ಪರಿಪಾಲಿಸಿದ್ದಾರೆ. ಅವರಂತಹ ಜೀವಿಯೇ ಇಲ್ಲ. ಓ ಮಹಾರಾಜ, ಸಂಯಕ್ತನಿಕಾಯದಲ್ಲಿ ಭಗವಾನರು ದೇವಾಧಿದೇವತೆಗಳಿಗೆ ಹೀಗೆ ಹೇಳಿದ್ದಾರೆ. ಓ ಭಿಕ್ಷುಗಳೇ (ದೇವತೆಗಳೇ) ದ್ವಿಪಾದಿಗಳಲ್ಲಿ ಅಥವಾ ಚತುಷ್ಪಾದಿಗಳಲ್ಲಿ, ಸಶರೀರಿಗಳಲ್ಲಿ ಅಥವಾ ಅಶರೀರಿಗಳಲ್ಲಿ ಅಸನ್ಯಾ ಜೀವಿಗಳಲ್ಲಿ ಅಥವಾ ಸನ್ಯಾಯುಕ್ತ ಜೀವಿಗಳಲ್ಲಿ ಅಥವಾ ನೇವಸನ್ಯಾನಸನ್ಯಾ ಜೀವಿಗಳಲ್ಲೇ ಆಗಲಿ ತಥಾಗತರು ಶ್ರೇಷ್ಠರಾಗಿದ್ದಾರೆ, ನಾಯಕರಾಗಿದ್ದಾರೆ. ತಥಾಗತರು ಅರಹಂತರು, ಸಮ್ಮಾಸಂಬುದ್ಧರು ಆದ ಅವರೇ ಪರಮಶ್ರೇಷ್ಠರಾಗಿದ್ದಾರೆ.

ಬಹುಚೆನ್ನಾಗಿದೆ ಭಂತೆ ನಾಗಸೇನ ! ಹೀಗಿರುವುದರಿಂದ ನೀವು ಹೇಳಿದ್ದನ್ನು ನಾನು ಒಪ್ಪುವೆ.


4. ಮಾಗ್ಗುಪ್ಪಾದನ ಪನ್ಹೊ (ಮಾರ್ಗದ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು : ಓ ಭಿಕ್ಷುಗಳೇ, ತಥಾಗತರು, ಅರಹಂತರು ಆದ ಸಮ್ಮಾಸಂಬುದ್ಧರು ತಿಳಿಯದಿರುವಂತಹ ಅಜ್ಞಾತವಾದಂತಹ ಮಾರ್ಗವನ್ನು ಸಂಶೋಧಿಸಿದ್ದಾರೆ. ಆದರೆ ಇನ್ನೊಂದೆಡೆ ಹೀಗೆ ಹೇಳಿದ್ದಾರೆ: ಓ ಭಿಕ್ಷುಗಳೇ, ಈಗ ನಾನು ಸನಾತನ ಹಾದಿಯನ್ನು ಹಿಂದಿನ ಬುದ್ಧರು ನಡೆದಂತಹ ಹಾದಿಯನ್ನು ಅರಿತಿದ್ದೇನೆ. ಈಗ ಹೇಳಿ ಭಂತೆ ನಾಗಸೇನ, ಭಗವಾನರು ಈ ಹಿಂದೆ ಸಂಶೋಧಿಸದ ಮಾರ್ಗವನ್ನು ಸಂಶೋಧಿಸಿದ್ದಾರೆ ಅಂದರೆ ಅವರು ಹಿಂದಿನ ಬುದ್ಧರ ಮಾರ್ಗವನ್ನು ಅರಿತಿದ್ದಾರೆ ಎನ್ನುವುದು ಸುಳ್ಳಾಗುತ್ತದೆ. ಆದರೆ ಅವರು ಅರಿತಿದ್ದು ಹಿಂದಿನ ಬುದ್ಧರ ಮಾರ್ಗವೇ ಆಗಿದ್ದ ಪಕ್ಷದಲ್ಲಿ ಅವರು ಅಜ್ಞಾತ, ಯಾರಿಗೂ ತಿಳಿಯದಿರುವ ಮಾರ್ಗ ಕಂಡುಹಿಡಿದಿದ್ದೇನೆ ಎಂಬುದು ಸುಳ್ಳಾಗುತ್ತದೆ. ಇದು ಸಹಾ ಎರಡುಕಡೆ ಚೂಪಾಗಿರುವ ಪೇಚಿನ ಪ್ರಶ್ನೆಯಾಗಿದೆ, ನಿಮಗೆ ಹಾಕಿದ್ದೇನೆ, ಬಿಡಿಸಿ.(136)

ಓ ಮಹಾರಾಜ, ನೀವು ಹೇಳಿದ ಹೇಳಿಕೆಗಳು ಸರಿಯಾಗಿಯೇ ಇವೆ. ಮತ್ತು ಎರಡು ಹೇಳಿಕೆಗಳು ಸತ್ಯದಿಂದ ಕೂಡಿವೆ. ಓ ಮಹಾರಾಜ, ಯಾವಾಗ ಹಿಂದಿನ ತಥಾಗತರು ಮರೆಯಾದರೋ ಆನಂತರ ಯಾವ ಗುರುಗಳು ಉಳಿದಿಲ್ಲ. ಹಾಗು ಅವರ ಮಾರ್ಗವು ಮರೆಯಾಯಿತು, ಇಲ್ಲದೇ ಹೋಯಿತು. ಈ ರೀತಿಯಾಗಿ ಮುರಿಯಲ್ಪಟ್ಟ, ಈ ರೀತಿ ಕ್ರಮವಾಗಿ ನಾಶಹೊಂದಿದ, ಶಿಥಿಲಗೊಂಡ, ಮುಗಿದ, ಉಳಿದಿಲ್ಲದ, ಮರೆಯಾದುದ್ದನ್ನು ತಥಾಗತರು ಸರ್ವಜ್ಞತ ಚಕ್ಷುವಿನಿಂದ ಕಂಡಿದ್ದಾರೆ ಮತ್ತು ಆದ್ದರಿಂದಲೇ ಅವರು ಹೀಗೆ ಹೇಳಿದ್ದಾರೆ.
ಓ ಭಿಕ್ಷುಗಳೇ, ಸನಾತನ ಮಾರ್ಗವನ್ನು, ಯಾವುದನ್ನು ಹಿಂದಿನ ಬುದ್ಧರು ಹಾದು ಹೋದರೋ ಅದನ್ನು ಅರಿತಿದ್ದೇನೆ.

ಮತ್ತೆ ಯಾವ ಮಾರ್ಗವು ಹಿಂದಿನ ಬುದ್ಧರಿಂದ ಸಂಶೋಧಿಸಲ್ಪಟ್ಟಿತ್ತೋ, ಅದು ಬುದ್ಧರಿಲ್ಲದೆ, ಗುರುಗಳಿಲ್ಲದೆ ತುಂಡಾಗಿ, ಶಿಥಿಲಗೊಂಡು, ಕ್ರಮವಾಗಿ ನಾಶಹೊಂದಿ ಮುಗಿದು, ಮರೆಯಾಗಿ ಹೋಯಿತೋ, ಅದನ್ನು ಭಗವಾನರು ಪುನಃ ಸಂಶೋಧಿಸಿದರು, ಮತ್ತೆ ಅಸಾಧ್ಯವಾದುದನ್ನು, ಸಾಧ್ಯವನ್ನಾಗಿಸಿದರು. ಆದ್ದರಿಂದಲೇ ಹೀಗೆ ಹೇಳಿದರು: ಓ ಭಿಕ್ಷುಗಳೇ, ತಥಾಗತರು ಅರಹಂತರು ಆದ ಸಮ್ಮಾಸಂಬುದ್ಧರು ಅಜ್ಞಾತವಾಗಿದ್ದ, ಗೊತ್ತಿಲ್ಲದಿರುವ ಮಾರ್ಗವನ್ನು ಸಂಶೋಧಿಸಿದ್ದಾರೆ.

ಊಹಿಸಿ ಓ ಮಹಾರಾಜ, ಸಾರ್ವಭೌಮ, ಚಕ್ರವತರ್ಿಯು ಅಂತ್ಯವಾದ ನಂತರ, ಮಣಿರತ್ನವು ಗಿರಿಶಿಖರಗಳ ಆಂತರ್ಯದಲ್ಲಿ ಮಾಯವಾಗುವುದು, ಮತ್ತೆ ಕಾಲನಂತರ ಇನ್ನೋರ್ವ ಚಕ್ರವತರ್ಿ ಸಾರ್ವಭೌಮ ಗಾಂಭಿರ್ಯದಿಂದ ಬರುವಾಗ ಅದು ಆತನಿಗೆ ಪ್ರತ್ಯಕ್ಷವಾಗಿ ಕಾಣುವುದು. ಈಗ ಹೇಳಿ ಮಹಾರಾಜ, ಆ ಮಣಿರತ್ನವು ಆತನಿಂದ ಸೃಷ್ಠಿಯಾಯಿತೇ?

ಖಂಡಿತವಾಗಿ ಇಲ್ಲ ಭಂತೆ, ಆ ರತ್ನವು ತನ್ನ ಮೊದಲಿನ ಸ್ಥಿತಿಯಲ್ಲೇ ಇತ್ತು. ಆದರೆ ಹೊಸ ಜನ್ಮದಂತೆ ಅದು ಸ್ವೀಕಾರವಾಯಿತು.

ಓ ಮಹಾರಾಜ, ಅದೇರೀತಿಯಲ್ಲೇ ಭಗವಾನರು ತಮ್ಮ ಬುದ್ಧ ಚಕ್ಷುವಿನಿಂದ ಸರ್ವಜ್ಞಾನವನ್ನು ಪಡೆದರು. ಪುನಃಶ್ಚೇತನವನ್ನುಂಟು ಮಾಡಿ, ಆರ್ಯ ಅಷ್ಟಾಂಗದ ಮಧ್ಯಮ ಮಾರ್ಗವನ್ನು ನಿಜಸ್ಥಿತಿಯಲ್ಲೇ, ಹಿಂದಿನ ಬುದ್ಧರ ರೀತಿಯಲ್ಲೇ ಪ್ರಕಟಪಡಿಸಿದರು. ಹೀಗೆ ಅವರು ಹಿಂದಿನ ಬುದ್ಧರು ಮರೆಯಾದರು, ಅವರ ಬೋಧನೆಯು ಮರೆಯಾದರೂ, ಶಿಥಿಲವಾದರೂ, ಅಂತ್ಯವಾದರೂ, ಸಹಾ ಸಂಶೋಧಿಸಿದರು ಮತ್ತು ಆದ್ದರಿಂದಲೇ ಅವರು ಹೀಗೆ ಹೇಳಿದರು: ಓ ಭಿಕ್ಷುಗಳೇ, ತಥಾಗತರು ಅರಹಂತರು, ಸಮ್ಮಾಸಂಬುದ್ಧರಾಗಿ ಅಜ್ಞಾತವಾದ, ತಿಳಿದಿಲ್ಲದ ಅತ್ಯುತ್ತಮ ಮಾರ್ಗವನ್ನು ಸಂಶೋಧಿಸಿದ್ದಾರೆ.

ಓ ಮಹಾರಾಜ, ಇದು ಹೇಗೆಂದರೆ ತಾಯಿಯು ಗರ್ಭದಲ್ಲಿದ್ದ ಶಿಶುವನ್ನು ಹಡೆದರೆ, ಜನರು ಮಾತ್ರ ತಾಯಿಯು ಶಿಶುವಿಗೆ ಜನ್ಮ ನೀಡಿದಳು ಎನ್ನುತ್ತಾರೆ. ಅದೇರೀತಿಯಲ್ಲಿ ಓ ಮಹಾರಾಜ, ತಥಾಗತರು ತಮ್ಮ ಸಮಂತ ಚಕ್ಷುವಿನಿಂದ ಸಂಪೂರ್ಣ ಬೋಧಿ ಪಡೆದರು. ಅದಕ್ಕೆ ಜೀವನೀಡಿ, ಮುರಿದಂತಹ, ಪುಡಿಪುಡಿಯಾಗಿದ್ದ, ಶಿಥಿಲವಾಗಿದ್ದ, ಅಂತ್ಯಗೊಂಡಂತಹ, ಮರೆಯಾಗಿದ್ದಂತಹ ಮಾರ್ಗವನ್ನು ಮತ್ತೆ ಅರಿತು ಬೋಧಿಸಿದರು.

ಇದು ಹೇಗೆಂದರೆ ಓ ಮಹಾರಾಜ, ಒಬ್ಬ ಮನುಷ್ಯ ಕಳೆದುಹೋಗಿದ್ದಂತಹ ವಸ್ತುವನ್ನು ಹುಡುಕಿದಾಗ, ಆತನಿಗೆ ಹೀಗೆ ಹೇಳುವರು, ಆತನು ಅದಕ್ಕೆ ಪುನಃ ಜೀವ ನೀಡಿದ ಮತ್ತು ಇದು ಹೇಗೆಂದರೆ ಒಬ್ಬನು ಅರಣ್ಯವನ್ನು ತೆರವುಗೊಳಿಸಿ, ವಾಸಮಾಡತಕ್ಕದಾದ ಭೂಮಿ ರಚಿಸಿದಾಗ, ಜನರು ಆತನಿಗೆ ಓಹ್ ಇದು ಆತನ ಭೂಮಿ. ಆದರೆ ಆ ಭೂಮಿಯು ಆತನಿಂದ ಸೃಷ್ಠಿಯಾಗಲಿಲ್ಲ. ಆದರೆ ಆತನು ಬಳಕೆಯುಕ್ತ ಭೂಮಿಯಾಗಿ ಪರಿವತರ್ಿಸಿದ್ದರಿಂದಾಗಿ ಆತನಿಗೆ ಭೂಮಾಲಿಕ ಎಂದು ಘೋಷಿಸುತ್ತಾರೆ.

ಅದೇರೀತಿಯಾಗಿ ತಥಾಗತರು ತಮ್ಮ ಪನ್ಯಾ ಚಕ್ಷುವಿನಿಂದ ಆ ಮರೆಯಾಗಿದ್ದ ಜ್ಞಾನವನ್ನು ಸಂಶೋಧಿಸಿದ್ದರಿಂದಾಗಿ ಅದಕ್ಕೆ ಪುನಃಶ್ಚೇತನ ನೀಡಿದಾಗ ಆ ಮಾರ್ಗವು ಅಲ್ಲೇ ಇತ್ತು. ಆದರೆ ಮುರಿದಿತ್ತು, ಶಿಥಿಲವಾಗಿತ್ತು, ಪುಡಿಪುಡಿಯಾಗಿತ್ತು. ಹೋಗಲು ಸಾಧ್ಯವಿಲ್ಲದಂತಹ ರೀತಿಯಲ್ಲಿ ಮರೆಯಾಗಿತ್ತು. ಆದರೆ ತಥಾಗತರು ಮತ್ತೆ ಅದನ್ನು ಸಂಶೋಧಿಸಿದ್ದಾರೆ, ಆದ್ದರಿಂದಲೇ ಅವರು ಹೀಗೆ ಹೇಳಿದ್ದಾರೆ: ಓ ಭಿಕ್ಷುಗಳೇ, ತಥಾಗತರು ಅರಹಂತರು, ಸಮ್ಮಾಸಂಬುದ್ಧರಾದಂತಹ ಅವರು ಅಜ್ಞಾತವಾಗಿದ್ದಂತಹ ಮಾರ್ಗವನ್ನು ಸಂಶೋಧಿಸಿದ್ದಾರೆ.

ಬಹು ಚೆನ್ನ ಭಂತೆ ನಾಗಸೇನ, ಅದು ಹೀಗೆಯೇ ಇದೆ ಮತ್ತು ನಾನು ಸಹಾ ನೀವು ಹೇಳಿದ್ದನ್ನು ಒಪ್ಪುತ್ತೇನೆ.


5. ಬುದ್ಧ ಅವಿಹೆರಕ ಪನ್ಹೋ (ಅಹಿಂಸೆಯ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದರು: ನಾನು ಹಿಂದಿನ ಜನ್ಮಗಳಲ್ಲಿಯೂ ಸಹಾ ಜೀವಿಗಳಿಗೆ ಹಿಂಸಿಸದಿರುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೆನು. ಆದರೆ ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಯಾವಾಗ ಋಷಿ ಲೋಮಸ ಕಸ್ಸಪರಾಗಿ ಬೋಧಿಸತ್ತರು ಜನಿಸಿದ್ದರೋ ಆಗ ಅವರು ನೂರಾರು ಪ್ರಾಣಿಗಳನ್ನು ಕಡಿದು ಬಲಿ ಅಪರ್ಿಸಿ ವಾಜಪೇಯ ಎಂಬ ಮಹಾಯಗ್ನವನ್ನು ಮಾಡಿದ್ದರು.

ಈಗ ಹೇಳಿ ನಾಗಸೇನ, ಭಗವಾನರು ಹೇಳಿರುವಂತೆ ಅವರು ಹಿಂದಿನ ಜನ್ಮಗಳಲ್ಲಿ ಜೀವಿಗಳನ್ನು ಹಿಂಸಿಸಿಲ್ಲವಾದರೆ ಲೋಮನ ಕಸ್ಸಪರವರ ಘಟನೆಯು ಸುಳ್ಳಾಗುತ್ತದೆ. ಆದರೆ ಆ ಘಟನೆಯೇ ಸತ್ಯವಾದರೆ, ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಪ್ರಶ್ನೆಯಾಗಿದೆ. ನಿಮಗೆ ಹಾಕಿದ್ದೇನೆ, ನೀವೇ ಪರಿಹರಿಸಬೇಕು.(137)

ಓ ಮಹಾರಾಜ, ಭಗವಾನರು ಆಗಲೇ ಹೇಳಿದ್ದಾರೆ, ಅವರು ಹಿಂದಿನ ಜನ್ಮಗಳಲ್ಲಿ ಅಹಿಂಸೆಯಿಂದ ಜೀವಿಸಿದ್ದಾರೆಂದು ಮತ್ತು ಲೋಮಸ್ಸ ಕಸ್ಸಪರವರು ನೂರಾರು ಜೀವಿಗಳ ಹತ್ಯೆಯಿಂದ ವಾಜಪೇಯ ಯಗ್ನವನ್ನು ಮಾಡಿದ್ದು ಸತ್ಯವಾದರೂ, ಆಗ ಅವರ ಮನಸ್ಸು ರಾಗಕ್ಕೆ ವಶವಾಗಿ, ಅನಿಯಂತ್ರಿತವಾಗಿತ್ತು. ಅವರು ಆ ಕಾರ್ಯವನ್ನು ಅರಿವಿದ್ದು ಮಾಡಲಿಲ್ಲ.

ಭಂತೆ ನಾಗಸೇನ, ಜನರಲ್ಲಿ ಎಂಟು ವರ್ಗಗಳಿವೆ. ಈ ಎಂಟು ವರ್ಗದವರು ಜೀವಹತ್ಯೆಗಳನ್ನು ಮಾಡುತ್ತಾರೆ, ಅವರೆಂದರೆ ರಾಗಯುಕ್ತನು ರಾಗದಿಂದ, ಕ್ರೂರಿಯು ತನ್ನ ಕೋಪದಿಂದ, ಮೋಹಿಯು ತನ್ನ ಮೂರ್ಖತ್ವದಿಂದಾಗಿ, ಅಹಂಕಾರಿಯು ತನ್ನ ಅಹಂಕಾರದಿಂದಾಗಿ, ಲೋಭಿಯು ತನ್ನ ಲೋಭದಿಂದ ಮತ್ತು ಏನೂ ಇಲ್ಲದವ ಜೀವನೋಪಾಯಕ್ಕಾಗಿ, ಮೂರ್ಖನು ಹಾಸ್ಯಕ್ಕಾಗಿ, ರಾಜನು ಶಿಕ್ಷಾಕಾಂಕ್ಷಿಯಾಗಿ ಜೀವ ಹತ್ಯೆಗಳನ್ನು ಮಾಡುವರು. ಭಂತೆ ನಾಗಸೇನ, ಈ ಎಂಟು ವಿಧದವರು ಜೀವಹತ್ಯೆ ಮಾಡುತ್ತಾರೆ. ಭಂತೆ ನಾಗಸೇನ, ಭೋಧಿಸತ್ವರು ಸಹಾ ತಮ್ಮ ಸ್ವಭಾವ ಪ್ರವೃತ್ತಿಯಿಂದಾಗಿ ಹಾಗೆ ಮಾಡಿರಬಹುದೇ?

ಓ ಮಹಾರಾಜ, ಅದು ಹಾಗಲ್ಲ. ಬೋಧಿಸತ್ವರು ಸ್ವಭಾವ ಪ್ರವೃತ್ತಿಯಿಂದಾಗಿ ಹಾಗೆ ಮಾಡಲಿಲ್ಲ. ಅವರ ಸ್ವಭಾವ ಅಂತಹದಲ್ಲ, ಅದು ಆಕಸ್ಮಿಕವಾಗಿತ್ತು. ಬೋಧಿಸತ್ವರು ಸ್ವಭಾವಕ್ಕೆ ಅನುಗುಣವಾಗಿ ಹಾಗೆ ಮಾಡಿದ್ದರೆ ಅವರು ಈ ಗಾಥೆಯನ್ನು ಹೇಳುತ್ತಿರಲಿಲ್ಲ: ಸಾಗರ ಪರಿವೃತವಾದ ಸಮುದ್ರಸಹಿತ ಇಡೀ ಭೂಮಂಡಲದ ನಿಂದೆಗೆ ಒಳಗಾಗಿ ನಾನು ಇದನ್ನು ಇಚ್ಛಿಸುವುದಿಲ್ಲ, ಹೇ ಸಹ್ಯ ಅರಿತುಕೋ.

ಓ ಮಹಾರಾಜ, ಬೋಧಿಸತ್ವರು ಹಾಗೆ ಹೇಳಿದ್ದರೂ ಸಹಾ ಯಾವಾಗ ಅವರು ಚಂದಾವತಿ ರಾಜಕುಮಾರಿಯ ಸೌಂದರ್ಯ ನೋಡಿದರೋ, ಆಗ ಅವರಲ್ಲಿ ಪ್ರೇಮವುಕ್ಕಿ, ಮನಸ್ಸಿನಲ್ಲಿ ನಿಯಂತ್ರಣ ತಪ್ಪಿದರು. ಈ ರೀತಿಯಾದ ಕ್ಷೊಭೆಯಿಂದ, ಚದುರುವಿಕೆಯ ಮನದಿಂದಾಗಿ ಅವರು ವಾಜಪೇಯ ಯಗ್ನವನ್ನು ಮಾಡಿ ನೂರಾರು ಪ್ರಾಣಿಗಳ ಬಲಿಗೆ ಕಾರಣರಾದರು.

ಓ ಮಹಾರಾಜ, ಹೇಗೆ ಹುಚ್ಚನೊಬ್ಬನು ಬುದ್ಧಿಹೀನನಾಗಿ, ಧಗದಹಿಸುತ್ತಿರುವ ಕುಲುಮೆಗೆ ಧುಮುಕುವನೋ ಅಥವಾ ವಿಷಪೂರಿತ ಕುಪಿತ ಸರ್ಪವನ್ನು ಕೈಯಲ್ಲಿ ಹಿಡಿಯುತ್ತಾನೋ, ಅಥವಾ ಮದೋನ್ಮತ್ತ ಆನೆಯ ಕಡೆಗೆ ಧಾವಿಸುತ್ತಾನೋ ಮಹಾ ಪ್ರವಾಹಕ್ಕೆ ಧುಮುಕುವನೋ, ಆ ಕಡೆಯ ತೀರವನ್ನು, ಕಾಣಲಾರನೊ, ಕೆಸರಿನಲ್ಲಿ ಬಿದ್ದು ಸಿಕ್ಕಿಹಾಕಿಕೊಳ್ಳುವನೋ ಅಥವಾ ಮುಳ್ಳುಗಳ ಬೇಲಿಯಲ್ಲಿ ವೇಗವಾಗಿ ನುಗ್ಗುವನೊ, ಅಥವಾ ಕಡಿದಾದ ಪ್ರಪಾತದಲ್ಲಿ ಬೀಳುವನೊ, ಅಥವಾ ಮಲವನ್ನು ತಿನ್ನುತ್ತಾನೊ, ನಗ್ನವಾಗಿ ಬೀದಿಗಳಲ್ಲಿ ತಿರುಗಾಡುತ್ತಾನೋ, ಅಂತಹ ಇನ್ನಿತರ ಅಸಮಂಜಸ ಕೃತ್ಯಗಳನ್ನು ಮಾಡುವನೋ, ಅದೇರೀತಿಯಲ್ಲಿ ಚಂದಾದೇವಿಯ ದರ್ಶನ ಮಾತ್ರದಿಂದಲೇ ಬೋಧಿಸತ್ತರು ಮನದಿಂದ ನಿಯಂತ್ರಣ ತಪ್ಪಿದರು ಹಾಗು ಅಂತಹ ಸ್ಥಿತಿಯಲ್ಲಿ ಮಾತ್ರ ಅವರು ಹಾಗೆ ಮಾಡಿದರು.

ಓ ಮಹಾರಾಜ, ಮನ ನಿಯಂತ್ರಣ ತಪ್ಪಿದವರನ್ನು ಜಗತ್ತು ಸಹಾ ಅವರ ಕೃತ್ಯವನ್ನು ಪಾಪವೆಂದು ಪರಿಗಣಿಸುವುದಿಲ್ಲ. ಹಾಗೆಯೇ ಅಂತಹವರಿಗೆ ಭವಿಷ್ಯದಲ್ಲಿ ಪಾಪಫಲವು ದೊರೆಯುವುದಿಲ್ಲ. ಹೇಳಿ ಮಹಾರಾಜ, ಹುಚ್ಚನೊಬ್ಬನು ಮಹಾ ಅಪರಾಧ ಮಾಡಿದಾಗ ಯಾವ ಶಿಕ್ಷೆಯನ್ನು ಆತನಿಗೆ ನೀವು ನೀಡುವಿರಿ?

ಹುಚ್ಚನಿಗೆ ಯಾವ ಶಿಕ್ಷೆ? ನಾವು ಆತನಿಗೆ ಹೊಡೆಯಲು ಆಜ್ಞೆನೀಡಿ ನಂತರ ಬಿಟ್ಟುಬಿಡುವೆವು, ಅಷ್ಟೇ ಆತನಿಗೆ ಶಿಕ್ಷೆ.

ಓ ಮಹಾರಾಜ, ಹಾಗಾದರೆ ಹುಚ್ಚನ ಅಪರಾಧಕ್ಕೆ ಯಾವ ಶಿಕ್ಷೆಯೂ ಇಲ್ಲ, ಇದರಿಂದಾಗಿ ಹುಚ್ಚನ ಕೃತ್ಯವು ಪಾಪವಲ್ಲವೆಂದಾಯಿತು. ಅದು ಕ್ಷಮಾರ್ಹ ಕೃತ್ಯವಾಗಿದೆ. ಓ ರಾಜ, ಅದೇರೀತಿಯಲ್ಲಿ ಲೋಮಸ ಕಸ್ಸಪ ವಿಷಯವು ಸಹಾ ಇದೆ. ಅವರು ಚಂದಾದೇವಿಯ ಮೇಲಿನ ಪ್ರೇಮದಿಂದಾಗಿ ಚಿತ್ತನಿಯಂತ್ರಣ ತಪ್ಪಿದರು. ಗೊಂದಲದಲ್ಲಿ ಸಿಲುಕಿದರು, ಅವರ ಚಿತ್ತವು ಚದುರಿ, ಕ್ಷೊಭೆಗೆ ಒಳಗಾಗಿದ್ದರು. ಇಂತಹ ಸ್ಥಿತಿಯಲ್ಲೇ ಅವರು ವಾಜಪೇಯ ಯಗ್ನ ಮಾಡಿದರು. ಮತ್ತೆ ಯಾವಾಗ ಅವರು (ಆನೆಯ ಶಿರಸ್ಸು ಕತ್ತರಿಸಲು ಹೋದಾಗ ಅದು ಭಯದಿಂದ ಘೀಂಕರಿಸಿತು, ಅದರ ಕೂಗನ್ನು ಕೇಳಿ, ತನ್ನ ಜಟಾದಿಗಳ ಕಡೆನೋಡಿ) ಹತ್ಯೆ ಮಾಡದೆ ಸಹಜಸ್ಥಿತಿಗೆ ಬಂದಾಗ, ತಮ್ಮ ಚಿತ್ತನಿಯಂತ್ರಣ ಪಡೆದರು. ಆಗ ಅವರು ಚಂದಾದೇವಿಯ, ಲೌಕಿಕತೆಯ ಎಲ್ಲಾ ಆಸೆಗಳನ್ನು ವಿಸಜರ್ಿಸಿ, ಮತ್ತೆ ಅಭಿನಿಷ್ಕ್ರಮಣ ಮಾಡಿದ ಕೂಡಲೇ ಅವರು ಪಂಚ ಅಭಿಜ್ಞಾಗಳನ್ನು ಮರಳಿಪಡೆದರು, ನಂತರ ಅವರು ಬ್ರಹ್ಮಲೋಕದಲ್ಲಿ ಪುನರ್ಜನ್ಮ ತಾಳಿದರು.

ಬಹುಚೆನ್ನಾಗಿ ವಿವರಿಸಿದಿರಿ ನಾಗಸೇನ, ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ.


6. ಛದ್ಧಂತ ಹಾಗು ಜ್ಯೋತಿಪಾಲರ ಬಗ್ಗೆ ಪ್ರಶ್ನೆ


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ: ಹಿಂದೆ ಬೋಧಿಸತ್ತರು ಛದ್ಧಂತ ಆನೆಗಳ ನಾಯಕನಾಗಿದ್ದಾಗ, ನೀಚಬುದ್ಧಿಯ ಬೇಟೆಗಾರನಿಗೆ ಕೊಲ್ಲಲು ಸೊಂಡಿಲನ್ನು ಎತ್ತಿಕೊಂಡು ನುಗ್ಗಿತು. ಆದರೆ ಆತನು ಕಾಷಾಯವಸ್ತ್ರ ಧರಿಸಿರುವುದನ್ನು ಕಂಡು, ತನಗೆ ಬಾಣವು ನುಗ್ಗಿದ ನೋವು ಬಾಧಿಸುತ್ತಿದ್ದರೂ ಸಹಾ, ಅದು ಹೀಗೆ ಚಿಂತಿಸಿತು: ಈ ಕಾಷಾಯ ವಸ್ತ್ರವು ಅಹರಂತರ ಗುರುತು, ಧ್ವಜವಾಗಿದೆ, ಅರಹಂತರು ಧರಿಸುವಂತಹುದ್ದಾಗಿದೆ, ಅಹಿಂಸೆವಾದಿಗಳು, ಪವಿತ್ರರು ಧರಿಸುವಂತಹದ್ದಾಗಿದೆ ಎಂದು ಯೋಚಿಸಿ ಅದು ತನಗೆ ಪ್ರಾಣಹಾನಿ ಉಂಟುಮಾಡಿದಂತಹ ಬೇಟೆಗಾರನಿಗೆ ಹಿಂಸೆ ಮಾಡಲಿಲ್ಲ.

ಆದರೆ ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಹಿಂದೆ ಬೋಧಿಸತ್ವರು ಜ್ಯೋತಿಪಾಲ ಬ್ರಾಹ್ಮಣರಾಗಿದ್ದಾಗ, ಅವರು ಕಸ್ಸಪ ಬುದ್ಧಭಗವಾನರನ್ನು ನಿಂದಿಸಿದರು ಹಾಗು ದೂಷಿಸಿದರು, ಅದೂ ಕಹಿಯಾದ ಪದಗಳನ್ನು ಬಳಸಿದರು.

ಈಗ ಭಂತೆ ನಾಗಸೇನ, ಅವರು ಪ್ರಾಣಿಯಾಗಿರುವಾಗಲೂ ಕಾಷಾಯವಸ್ತ್ರಕ್ಕೆ ಗೌರವಿಸುವವರಾಗಿದ್ದರೆ, ಅವರು ಜ್ಯೋತಿಪಾಲ ಬ್ರಾಹ್ಮಣರಾಗಿದ್ದಾಗ ಶ್ರೇಷ್ಠ ಕಸ್ಸಪ ಸಮ್ಮಾಸಂಬುದ್ಧರಿಗೆ ನಿಂದಿಸುತ್ತಿರಲಿಲ್ಲ, ಈ ರೀತಿಯಲ್ಲಿ ಎರಡನೆಯ ಹೇಳಿಕೆ ಸುಳ್ಳಾಗುತ್ತದೆ. ಆದರೆ ಅವರು ನಿಂದಿಸಿದ್ದೇ ನಿಜವಾಗಿದ್ದರೆ, ಮೊದಲ ಹೇಳಿಕೆಯಾದ ಪ್ರಾಣಿಯಾಗಿದ್ದರೂ ಕಾಷಾಯ ವಸ್ತ್ರಕ್ಕೆ ಗೌರವಿಸಿತು ಎನ್ನುವುದು ಸುಳ್ಳಾಗುತ್ತದೆ. ಯೋಚಿಸಿ, ಅವರು ಪ್ರಾಣಿಯಾಗಿರುವಾಗ, ನೋವಿನಿಂದಲೂ ಕೂಡಿರುವಾಗ ಕಾಷಾಯವಸ್ತ್ರ ಕಂಡು ಬೇಟೆಗಾರನಿಗೆ ಜೀವತೆಗೆಯದೆ, ಜೀವದಾನ ಮಾಡಿತು. ಅಂತಹುದರಲ್ಲಿ ಬೋಧಿಸತ್ವರು ಜ್ಯೋತಿಪಾಲ ಬ್ರಾಹ್ಮಣರಾಗಿದ್ದಾಗ, ದಶಬಲಧಾರಿಗಳು, ಲೋಕಶ್ರೇಷ್ಠರು, ಲೋಕನಾಥರು, ಸರ್ವಸುಖ್ಯಾತಿವುಳ್ಳವರು, ಅರಹಂತರು, ಸಮ್ಮಾಸಂಬುದ್ಧರು ಆಗಿರುವ ಕಸ್ಸಪ ಬುದ್ಧರಿಗೆ ಗೌರವಿಸುವುದಿರಲಿ, ಅವರನ್ನು ನಿಂದಿಸಿದರು. ಹೀಗೇಕಾಯಿತು? ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಪ್ರಶ್ನೆಯಾಗಿದೆ, ನಿಮಗೆ ಹಾಕಿದ್ದೇನೆ, ಬಿಡಿಸಿ. (138)

ಓ ಮಹಾರಾಜ, ನೀವು ಈವರೆಗೆ ಹೇಳಿದ್ದು ಭಗವಾನರಿಂದಲೇ ಬಂದಿದೆ ಮತ್ತು ಜ್ಯೋತಿಪಾಲ ಬ್ರಾಹ್ಮಣರು ಕಹಿಯಾದ ಮಾತುಗಳಿಂದ ವ್ಯರ್ಥ ಭಿಕ್ಷು ಎಂದು ಕಸ್ಸಪ ಬುದ್ಧ ಭಗವಾನರಿಗೆ ನುಡಿದರು. ಆದರೆ ಅವರು ಹಾಗೆ ಮಾಡಿದ್ದಕ್ಕೆ ಕಾರಣವೇನೆಂದರೆ ಅವರ ಹುಟ್ಟು ಮತ್ತು ಕುಲದ ಪರಿಸರವೇ ಕಾರಣವಾಗಿತ್ತು. ಅವರ ವಂಶವು ಅಶ್ರದ್ಧಾಳುಗಳಿಂದ ಕೂಡಿತ್ತು. ಅವರಿಗೆ ಶ್ರದ್ಧೆಯಿರಲಿಲ್ಲ, ಅವರ ತಾಯಿ-ತಂದೆ, ಸೋದರ ಸೋದರಿಯರು, ಸೇವಕ, ಸೇವಕಿಯರು ಇವರೆಲ್ಲರೂ ಸಹಾ ಬ್ರಹ್ಮನ ಆರಾಧಕರಾಗಿದ್ದರು. ಹಾಗಿದ್ದ ಅವರ ಕುಲದಲ್ಲಿ ಬ್ರಾಹ್ಮಣರೇ ಶ್ರೇಷ್ಠರು ಹಾಗು ಗೌರವಾರ್ಹ ವ್ಯಕ್ತಿಗಳಾಗಿದ್ದರು. ಹೀಗಾಗಿ ಅವರು ಗೃಹಸ್ಥ ಜೀವನವನ್ನು ತೊರೆದವರನ್ನು ಕಂಡರೆ ನಿಂದಿಸುತ್ತಿದ್ದರು. ಘಟಿಕಾರನೆಂಬ ಕುಂಬಾರನು ಜ್ಯೋತಿಪಾಲನಿಗೆ ಭಗವಾನರಿಗೆ ಬೇಟಿಯಾಗುವಂತೆ ಆಹ್ವಾನಿಸಿದಾಗ ಆ ಬೋಳುತಲೆಯವರನ್ನು ನಿಷ್ಪ್ರಯೋಜಕ ಭಿಕ್ಖುಗಳ ಭೇಟಿಯಲ್ಲಿ ಏನು ಒಳಿತಿದೆ? ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.

ಓ ಮಹಾರಾಜ, ಅಮೃತವನ್ನು ಸಹಾ ವಿಷದೊಂದಿಗೆ ಬೆರೆಸಿದಾಗ ಅದು ಹುಳಿಯಾಗುತ್ತದೆ, ಹಾಗೆಯೇ ತಂಪಾದ ನೀರು ಸಹಾ ಅಗ್ನಿಯ ಸಂಪರ್ಕಕ್ಕೆ ಬಂದಾಗ ಅದು ಬಿಸಿಯಾಗುತ್ತದೆ. ಹೀಗಿರುವಾಗ ಜ್ಯೋತಿಪಾಲ ಬ್ರಾಹ್ಮಣ, ಬ್ರಾಹ್ಮಣರ, ಅಶ್ರದ್ಧಾಳುಗಳ ಕುಟುಂಬದಲ್ಲಿ ಹುಟ್ಟಿ, ಬೆಳೆದುದರಿಂದಲೇ ಹಾಗೆ ವತರ್ಿಸಿದರು. ಮತ್ತೆ ಮಹಾರಾಜ, ಹೇಗೆ ಬೃಹತ್ ಪ್ರಜ್ವಲಿಸುವ ಅಗ್ನಿಯು ಸಹಾ ನೀರಿನ ಸಂಪರ್ಕಕ್ಕೆ ಬಂದಾಗ ಹೇಗೆ ಶಾಂತವಾಗುವುದೋ, ಅದರ ದಿವ್ಯ ಪ್ರಕಾಶತೆ ಕುಂದಿಹೋಗುವುದೋ, ಕರಕಲಾಗಿ ಹೋಗುವುದೋ, ಹಾಗೆಯೇ ಜ್ಯೋತಿಪಾಲರು ಅಪಾರ ಪುಣ್ಯಶಾಲಿಗಳಾಗಿದ್ದರೂ, ಶ್ರದ್ಧೆಯಿಂದಿದ್ದರು, ಅಪಾರ ಜ್ಞಾನಿಗಳಾಗಿದ್ದರೂ ಸಹಾ ಅಶ್ರದ್ಧಾಳುಗಳ ವಂಶದಲ್ಲಿ, ಹುಟ್ಟಿದ್ದರಿಂದಾಗಿ ಶ್ರದ್ಧಾರಹಿತರಾಗಿ, ಅಂಧರಾಗಿ ತಥಾಗತರಿಗೆ ಹೀಗೆ ಹೇಳಿದರು. ಆದರೆ ಅವರು ಹೊರಟನಂತರ, ಜ್ಯೋತಿಪಾಲರಿಗೆ ಬುದ್ಧರ ಸದ್ಗುಣಗಳು ಅರಿವಾಗಿ ಅವರ ಆಪ್ತಸೇವಕರಾದರು ಹಾಗು ಅನಿಕೇತನರಾಗಿ, ಸಂಘವನ್ನು ಸೇರಿ, ಪಂಚಅಭಿಜ್ಞಾವನ್ನು ಹಾಗು ಅಷ್ಟಸಮಾಪತ್ತಿಗಳನ್ನು ಸಹಾ ಪ್ರಾಪ್ತಿಮಾಡಿ ಬ್ರಹ್ಮಲೋಕಗಾಮಿಯಾದರು.

ಬಹು ಚೆನ್ನಾಗಿ ಪರಿಹರಿಸಿದಿರಿ ನಾಗಸೇನ, ಅದು ಹೀಗೆ ಇದೆ ಮತ್ತು ನಿಮ್ಮ ಹೇಳಿಕೆಯನ್ನು ನಾನು ಒಪ್ಪುತ್ತೇನೆ.


7. ಘಟಿಕಾರನ ಬಗ್ಗೆ ಪ್ರಶ್ನೆ


ಭಂತೆ ನಾಗಸೇನ, ಇದು ಸಹಾ ಭಗವಾನರಿಂದಲೇ ಹೇಳಲಾಗಿದೆ: ಘಟಿಕಾರ ಕುಂಬಾರನ ಸ್ಥಳ ಮಾತ್ರ ಮೂರು ಮಾಸದ ತನಕ ತೆರೆದ ಆಕಾಶವಾಗಿತ್ತು ಮತ್ತು ಯಾವುದೇ ಮಳೆ ಬೀಳಲಿಲ್ಲ. ಆದರೆ ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಕಸ್ಸಪ ತಥಾಗತರ ಕುಟಿಯ ಮೇಲೆ ಮಳೆಯು ಬಿತ್ತು. ಭಂತೆ ನಾಗಸೇನ, ತಥಾಗತರ ಕುಟಿಯ ಮೇಲೆ ಮಳೆ ಹೇಗೆ ತಾನೆ ಬಿತ್ತು! ಅವರ ಪುಣ್ಯವು ಅಳೆಯಲಾಗದ್ದು, ಆದರೂ ಆ ಕುಟೀರವು ನೆನೆದಿದ್ದೇಕೆ? ತಥಾಗತರಿಗೆ ಅದನ್ನು ತಡೆಯುವ ಶಕ್ತಿಯಿದೆಯಲ್ಲವೆ? ಎಂದು ಒಬ್ಬರು ಯೋಚಿಸಬಹುದು. ಈಗ ಹೇಳಿ ನಾಗಸೇನರವರೇ, ಘಟಿಗಾರನ ಮನೆ ನೆನೆಯಲಿಲ್ಲವೆಂದರೆ, ತಥಾಗತರ ಕುಟೀರವು ನೆನೆಯಿತು ಎಂದರೆ ಅದು ಸುಳ್ಳಾಗುತ್ತದೆ. ಅದೇ ಸತ್ಯವಾದರೆ ಘಟಿಕಾರ ಮನೆ ನೆನೆಯದಿದ್ದುದು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಸಮಸ್ಯೆಯಾಗಿದೆ, ನಿಮಗೆ ಹಾಕಿದ್ದೇನೆ, ಅದನ್ನು ನೀವೇ
ಪರಿಹರಿಸಬೇಕು. (139)

ಓ ಮಹಾರಾಜ, ನಿಮ್ಮ ಎರಡೂ ಹೇಳಿಕೆಗಳು ಸರಿಯಾಗಿಯೇ ಇವೆ. ಘಟಿಗಾರನು ಒಳ್ಳೆಯ ಮನುಷ್ಯನಾಗಿದ್ದನು, ಸುಂದರ ಚಾರಿತ್ರ್ಯದವನು, ಆಳವಾದ ಪುಣ್ಯಶಾಲಿ, ಆತನು ತನ್ನ ವೃದ್ಧ ಹಾಗು ಅಂಧರಾಗಿದ ತಂದೆ-ತಾಯಿಯರಿಗೆ ಸಲಹುತ್ತಿದ್ದನು. ಆತನು ಹೊರಗೆ ಇದ್ದಾಗ, ಜನರು ಆತನಲ್ಲಿ ಕೇಳದೆ ಆತನ ವಾಸಸ್ಥಳದ ಛಾವಣಿ ತೆಗೆದುಕೊಂಡು ತಥಾಗತರ ಕುಟೀರ ನಿಮರ್ಿಸಿದರು. ನಂತರ ಅಚಲ, ಸ್ಥಿರವಾಗಿದ್ದ ಆತನ ಛಾವಣಿಯು ಹೀಗೆ ತೆರೆದು ಹಾಕಿದಾಗ ಅದನ್ನು ಆತನು ಈ ರೀತಿ ಯೋಚಿಸಿದನು: ತಥಾಗತರು, ಲೋಕನಾಯಕರು, ನನ್ನಲ್ಲಿ ನಂಬಿಕೆ ಇಟ್ಟಿದ್ದಾರೆ ಹೀಗೆ ಯೋಚಿಸಿ ಅಪಾರ ಪುಣ್ಯಗಳಿಸಿ ಅದರ ಫಲವನ್ನು ಆ ಜನ್ಮದಲ್ಲೇ ಪಡೆದನು.

ಓ ಮಹಾರಾಜ, ತಥಾಗತರು ತತ್ಕಾಲಿಕ ಅಸೌಕರ್ಯತೆಗಳಿಂದ ವಿಚಲಿತರಾಗುವುದಿಲ್ಲ (ಮಳೆ). ಓ ಮಹಾರಾಜ, ಹೇಗೆ ಸಿನೆರು ಪರ್ವತಗಳ ರಾಜ, ಚಲಿಸಲಾರನೊ, ಅಪಾರ ಚಂಡಮಾರುತಗಳಿಗೂ ಅಲುಗಾಡುವುದಿಲ್ಲವೋ, ಹೇಗೆ ಮಹಾ ಸಮುದ್ರವು ಮಹಾ ಜಲಕ್ಕೆ ವಾಸಸ್ಥಳವೋ, ಅದು ತುಂಬದಿರುವುದರಿಂದಾಗಿ ಕ್ಷೊಭೆ ತಾಳುವುದಿಲ್ಲವೋ, ಅದೇರೀತಿಯಾಗಿ ತಥಾಗತರು ಅಸೌಕರ್ಯಕ್ಕೆ ವಿಚಲಿತರಾಗುವುದಿಲ್ಲ.

ಮತ್ತು ಜನಸಮೂಹಕ್ಕೆ ತಥಾಗತರ ಕುಟೀರದ ಮೇಲೆ ಮಳೆ ಬೀಳುವುದು ಅಂತಹ ಪರಿಗಣನೀಯ ಅಂಶವಲ್ಲ, ಎರಡು ಪರಿಸ್ಥಿತಿಗಳಲ್ಲಿ ತಥಾಗತರು ತಮ್ಮ ಅತೀಂದ್ರಿಯ ಶಕ್ತಿಯನ್ನು ಸೌಕರ್ಯಕ್ಕೆ ಬಳಸಿಕೊಳ್ಳುವುದಿಲ್ಲ. ಯಾವುದದು ಎರಡು? ಮಾನವರಾಗಲಿ ಅಥವಾ ದೇವತೆಗಳಾಗಲಿ ತಮ್ಮ ಜನ್ಮಗಳಿಂದ ಅಥವಾ ದುಃಖದಿಂದ ಪಾರಾಗಲು ಬುದ್ಧರಿಗೆ ಪರಿಕರಗಳನ್ನು (ಆಹಾರ, ವಸತಿ) ನೀಡುವರು. ಅದಕ್ಕಾಗಿ ತಥಾಗತರು ಅತೀಂದ್ರಿಯ ಬಲಗಳನ್ನು ಪ್ರಯೋಗಿಸಿದರೆ ಜನರು ಈ ರೀತಿ ಹೇಳುವರು. ಅವರು ಪವಾಡಗಳನ್ನು ಪ್ರದಶರ್ಿಸಿ ತಮ್ಮ ಜೀವನೋಪಾಯ ನಡೆಸುತ್ತಿದ್ದಾರೆ. ಓ ಮಹಾರಾಜ, ಸಕ್ಕ ದೇವೇಂದ್ರ ಅಥವಾ ಬ್ರಹ್ಮ ಸಹಾ ಕುಟೀರವನ್ನು ಒಣಗಿಸಬಹುದು, ಆದರೆ ಆಗಲೂ ಸಹಾ ಜನರು ಹೀಗೆ ಹೇಳಬಹುದು ಈ ಬುದ್ಧರು ತಮ್ಮ ಕೌಶಲ್ಯದಿಂದ ಮರಳುಮಾಡಿ ಜಗತ್ತನ್ನು ಅಧಿಪತ್ಯ ನಡೆಸುತ್ತಿರುವರು. ಆದ್ದರಿಂದಲೇ ಅನವಶ್ಯಕವಾಗಿ ಅಂತಹ ಕ್ರಿಯೆಗಳನ್ನು ಅವರು ಮಾಡುವುದಿಲ್ಲ. ಓ ಮಹಾರಾಜ, ತಥಾಗತರು ಯಾವುದೇ ಲಾಭವನ್ನು ಕೇಳುವುದಿಲ್ಲ, ಆದ್ದರಿಂದಲೇ ಅವರು ಆಕ್ಷೇಪಣೆರಹಿತರಾಗಿ, ಅದನ್ನೇ ಎತ್ತಿಹಿಡಿದಿದ್ದಾರೆ.

ಬಹುಚೆನ್ನಾಗಿ ಪರಿಹರಿಸಿದಿರಿ ಭಂತೆ ನಾಗಸೇನ, ನಿಮ್ಮ ಅಭಿಪ್ರಾಯವನ್ನು ನಾನು ಸಹಾ ಒಪ್ಪುತ್ತೇನೆ.


8. ಬ್ರಾಹ್ಮಣ - ರಾಜ ಕುರಿತ ಪ್ರಶ್ನೆ


ಭಂತೆ ನಾಗಸೇನ, ತಥಾಗತರು ಹೀಗೆ ಹೇಳಿದ್ದಾರೆ: ಓ ಭಿಕ್ಷುಗಳೇ, ನಾನು ಬ್ರಾಹ್ಮಣನಾಗಿದ್ದೇನೆ, ಸದಾ ಯೋಗದಲ್ಲಿ ತಲ್ಲೀನನಾಗಿರುತ್ತೇನೆ. ಆದರೆ ಇನ್ನೊಂದೆಡೆ ಹೀಗೆ ಹೇಳಿದ್ದಾರೆ: ಸೇಲ ನಾನು ರಾಜನಾಗಿದ್ದೇನೆ. ಭಂತೆ ನಾಗಸೇನ, ಭಗವಾನರು ಬ್ರಾಹ್ಮಣರಾಗಿದ್ದಲ್ಲಿ ಅವರು ರಾಜನಾಗಿರುವುದು ಸುಳ್ಳಾಗುತ್ತದೆ, ಅವರು ರಾಜರೇ ಆಗಿದ್ದ ಪಕ್ಷದಲ್ಲಿ ಬ್ರಾಹ್ಮಣನೆನ್ನುವುದು ಸುಳ್ಳಾಗುತ್ತದೆ. ಅವರು ಬ್ರಾಹ್ಮಣರಾಗಿದ್ದಾರೆ ಅಥವಾ ಕ್ಷತ್ರಿಯರಾಗಿದ್ದಾರೆ, ಒಂದೇ ಜನ್ಮದಲ್ಲಿ ಎರಡು ಕುಲಕ್ಕೆ ಸೇರುವುದಿಲ್ಲ, ಇದು ಸಹಾ ದ್ವಿ-ಅಂಚಿನ ಪೇಚಿನ ಪ್ರಶ್ನೆಯಾಗಿದೆ. ನಿಮಗೆ ಹಾಕಿದ್ದೇನೆ, ನೀವೇ ಪರಿಹರಿಸಬೇಕು.(140)

ಓ ಮಹಾರಾಜ, ನೀವು ಹೇಳಿದ ಎರಡು ಹೇಳಿಕೆಗಳು ಸರಿಯಾಗಿಯೇ ಇವೆ. ಅವರು ಬ್ರಾಹ್ಮಣರು ಹಾಗು ಕ್ಷತ್ರಿಯರು ಹೇಗೆ ಆಗಿದ್ದಾರೆ ಎಂಬುದಕ್ಕೆ ಕಾರಣಗಳಿವೆ.

ಭಂತೆ ನಾಗಸೇನ, ಅದನ್ನು ತಿಳಿಸುವಿರಾ?

ಈ ಎಲ್ಲಾ ಅಕುಶಲ ಸ್ಥಿತಿಗಳು ಪುಣ್ಯವನ್ನು ಉತ್ಪಾದಿಸುವುದಿಲ್ಲ, ಅಂತಹವುಗಳನ್ನೆಲ್ಲಾ ತಥಾಗತರು ಧಮಿಸಿದ್ದಾರೆ, ತ್ಯಜಿಸಿದ್ದಾರೆ, ದೂರೀಕರಿಸಿದ್ದಾರೆ, ಬುಡಸಮೇತ ಕಿತ್ತುಹಾಕಿದ್ದಾರೆ, ನಾಶಗೊಳಿಸಿದ್ದಾರೆ, ಅಂತ್ಯಗೊಳಿಸಿದ್ದಾರೆ, ಇಲ್ಲದಂತೆ ಮಾಡಿದ್ದಾರೆ ಮತ್ತು ನಿರೋಧವನ್ನುಂಟು ಮಾಡಿದ್ದಾರೆ. ಆದ್ದರಿಂದಲೇ ಅವರು ತಮ್ಮನ್ನು ಬ್ರಾಹ್ಮಣ ಎನ್ನುತ್ತಾರೆ. ಓ ಮಹಾರಾಜ, ಬ್ರಾಹ್ಮಣನು ತಡವರಿಸುವಿಕೆಗೆ, ಸಂದೇಹಕ್ಕೆ, ಗೊಂದಲಕ್ಕೆ, ಮಿಥ್ಯಾಜ್ಞಾನಕ್ಕೆ ಅತೀತನಾಗಿದ್ದಾನೆ, ಇವೆಲ್ಲಾ ತಥಾಗತರು ಮಾಡಿರುವುದರಿಂದಾಗಿ ಅವರು ಬ್ರಾಹ್ಮಣರಾಗಿದ್ದಾರೆ. ಓ ಮಹಾರಾಜ, ಬ್ರಾಹ್ಮಣನು ಎಲ್ಲಾರೀತಿಯ ಎಲ್ಲಾ ವರ್ಗದ ಭವದಿಂದ (ಸಂಭವಿಸುವಿಕೆಯಿಂದ) ಪಾರಾಗಿದ್ದಾನೆ, ಪೂರ್ಣವಾಗಿ ಅಕುಶಲದಿಂದ ಪಾರಾಗಿ, ಕಲೆರಹಿತರಾಗಿದ್ದಾನೆ, ತನ್ನಲ್ಲೇ ಅವಲಂಬಿತನಾಗುತ್ತಾನೆ ಹಾಗು ತಥಾಗತರು ಇವೆಲ್ಲಾ ಸಾಧಿಸಿರುವುದರಿಂದಾಗಿ ಅವರು ಬ್ರಾಹ್ಮಣರಾಗಿದ್ದಾರೆ. ಓ ಮಹಾರಾಜ, ಬ್ರಾಹ್ಮಣ ಎಂದರೆ ಯಾರು ಪರಮೋಚ್ಛ ಸ್ಥಿತಿಯನ್ನು ವೃದ್ಧಿಗೊಳಿಸಿರುವನೋ ಅತ್ಯುನ್ನತೆಯನ್ನು ಮತ್ತು ಪರಮ ಉತ್ಕೃಷ್ಟವಾದುದರಲ್ಲಿ ಶ್ರೇಷ್ಠತೆಯನ್ನು ಮತ್ತು ಚಿತ್ತದಲ್ಲಿ ಅತ್ಯಂತ ಮಹತ್ವತೆಯನ್ನು ಪ್ರಾಪ್ತಿಗೊಳಿಸಿರುವರೋ, ಅವರೇ ತಥಾಗತರು. ಇವೆಲ್ಲಾ ಸಾಧಿಸಿರುವುದರಿಂದಾಗಿ ಅವರು ಬ್ರಾಹ್ಮಣರಾಗಿದ್ದಾರೆ. ಓ ಮಹಾರಾಜ, ಬ್ರಾಹ್ಮಣನೆಂದರೆ ಧಮ್ಮವಿನಯದ ಸನಾತನ ಸಂಪ್ರದಾಯ ಪಾಲಿಸುವುದು, ದಾನ, ಇಂದ್ರಿಯನಿಗ್ರಹ, ಸ್ವನಿಯಂತ್ರಣ, ಪ್ರಯತ್ನತತ್ಪರನಾಗಿರುವುದು. ತಥಾಗತರು ಇವೆಲ್ಲವನ್ನೂ ಪಾಲಿಸಿರುವುದರಿಂದಾಗಿ ಅವರು ಬ್ರಾಹ್ಮಣರಾಗಿದ್ದಾರೆ. ಓ ಮಹಾರಾಜ, ಬ್ರಾಹ್ಮಣನೆಂದರೆ ಧ್ಯಾನದ ಪರಮಸುಖದಲ್ಲಿ ತಲ್ಲೀನನಾಗಿರುವವನು ಹಾಗು ತಥಾಗತರು ಹೀಗಿರುವುದರಿಂದಾಗಿ ಅವರು ಬ್ರಾಹ್ಮಣರಾಗಿದ್ದಾರೆ. ಓ ಮಹಾರಾಜ, ಬ್ರಾಹ್ಮಣನೆಂದರೆ ಯಾರು ಜನ್ಮ, ಪುನರ್ಜನ್ಮಗಳ ಸರ್ವಜಾಲವನ್ನು ಅರಿತಿರುವರೋ ಅವರೇ ಭಗವಾನರು. ಅದನ್ನೆಲ್ಲಾ ಅರಿತಿರುವುದರಿಂದಾಗಿ ಅವರು ಬ್ರಾಹ್ಮಣರಾಗಿದ್ದಾರೆ. ಓ ಮಹಾರಾಜ, ತಥಾಗತರಿಗೆ ಬ್ರಾಹ್ಮಣನೆಂಬ ನಾಮಧೇಯವನ್ನು ತಂದೆ-ತಾಯಿಗಳಾಗಲಿ, ಸೋದರ ಸೋದರಿಯರಾಗಲಿ, ಬಂಧು-ಮಿತ್ರರಾಗಲಿ, ಯಾವುದೇ ಗಣದ ಧಾಮರ್ಿಕ ಗುರುಗಳಾಗಲೀ, ಅಥವಾ ದೇವತೆಗಳಾಗಲಿ ನೀಡಿಲ್ಲ. ಏಕೆಂದರೆ ಅವರ ಮುಕ್ತಿಯು ಬುದ್ಧಭಗವಾನರ ಹೆಸರಿನಲ್ಲೇ ಆಗುತ್ತದೆ. ಯಾವಾಗ ಅವರು ಬೋಧಿವೃಕ್ಷದ ಬುಡದಲ್ಲಿ ಮಾರಸೈನ್ಯವನ್ನು ದೂರೀಕರಿಸಿದರೊ, ಪಾಪಯುತ ಅಕುಶಲ ಧರ್ಮಗಳನ್ನು ಧಮಿಸಿದರೋ ಮತ್ತು ಸರ್ವಜ್ಞತೆಯನ್ನು ಪ್ರಾಪ್ತಿ ಮಾಡಿದರೋ ಆ ಪರಮಜ್ಞಾನದ ಪಡೆಯುವಿಕೆಯಿಂದ, ಆ ಸತ್ಯದ ಗುರುತೇ ಬ್ರಾಹ್ಮಣ. ಆದ್ದರಿಂದಲೇ ತಥಾಗತರಿಗೆ ಬ್ರಾಹ್ಮಣ ಎನ್ನುತ್ತಾರೆ.


ಮತ್ತೆ ಓ ಮಹಾರಾಜ, ಯಾವ ಕಾರಣದಿಂದಾಗಿ ತಥಾಗತರನ್ನು ರಾಜನೆಂದು ಕರೆಯುತ್ತಾರೆ? ಓ ಮಹಾರಾಜ, ರಾಜನೆಂದರೆ ಜಗತ್ತನ್ನು ಆಳುತ್ತ ಮಾರ್ಗದಶರ್ಿ ಯಾಗಿರುವವನು ಮತ್ತು ಭಗವಾನರು ಧಮ್ಮದಿಂದಾಗಿ ದಶಸಹಸ್ರ ಲೋಕ ವ್ಯವಸ್ಥೆಯನ್ನು ಆಳುತ್ತಿದ್ದಾರೆ, ಅವರು ಇಡೀ ಮಾನವ ಮತ್ತು ದೇವತೆಗಳಿಗೆ ಮಾರ್ಗದಶರ್ಿಯಾಗಿದ್ದಾರೆ, ಜೊತೆಗೆ ಬ್ರಹ್ಮ ಮಾರರಿಗೂ ಸಹಾ, ಹಾಗೆಯೇ ಎಲ್ಲಾ ಸಮಣ ಬ್ರಾಹ್ಮಣರಿಗೂ ಸಹಾ ಮಾರ್ಗದಶರ್ಿಯಾಗಿರುವರು. ಆದ್ದರಿಂದಲೇ ತಥಾಗತರಿಗೆ ರಾಜನೆಂದು ಕರೆಯುವರು. ಓ ಮಹಾರಾಜ, ರಾಜನೆಂದರೆ ಯಾರು ಸಾಮಾನ್ಯ ಜನರಿಂದ ಉನ್ನತಮಟ್ಟಕ್ಕೆ ಏರಿರುತ್ತಾನೆ, ತನಗೆ ಸಂಬಂಧಪಟ್ಟವರಿಗೆಲ್ಲಾ ರಂಜಿಸುತ್ತಾನೆ, ಯಾರು ವಿರೋಧಿಸುತ್ತಾರೋ ಅವರು ಶೋಕಿಸುತ್ತಾರೆ, ಸಮ್ರಾಜ್ಯದ ರವಿಕವಚವನ್ನು ಉಚ್ಛಮಟ್ಟದಲ್ಲಿ ಏರಿಸುತ್ತಾನೆ, ಪರಿಶುದ್ಧವಾದ, ಕಲೆರಹಿತ ಮತ್ತು ಅದರ ಹಿಡಿಯು ದೃಢವಾದ ಮರದಿಂದಾಗಿರುತ್ತದೆ ಮತ್ತು ಅದಕ್ಕೆ ನೂರಾರು ಸಲಾಕೆಗಳಿರುತ್ತವೆ. ಇದೇ ಆತನ ಬೃಹತ್ ವೈಭೋಗಕ್ಕೆ ಮತ್ತು ಸತ್ಕೀತರ್ಿಗೆ ಸಂಕೇತವಾಗಿದೆ. ಮತ್ತೆ ಓ ಮಹಾರಾಜ, ಭಗವಾನರು ಸಹಾ ಮಾರಸೈನ್ಯವನ್ನು ಹಾಗು ಮಿಥ್ಯಾ ಸಿದ್ಧಾಂತಗಳನ್ನೆಲ್ಲಾ ಗೆದ್ದಿರುವರು, ಯಾರೆಲ್ಲರು ಅತ್ಯುತ್ತಮ ಧರ್ಮದಲ್ಲಿ ಆನಂದಿಸುವರೋ, ಉತ್ತಮಾಕಾಂಕ್ಷಿಗಳಾದ ದೇವ ಮತ್ತು ಮನುಷ್ಯರುಗಳ ಹೃದಯದಲ್ಲಿ ಆನಂದವುಕ್ಕಿಸಿ ರಂಜಿಸಿದ್ದಾರೆ, ದಶಸಹಸ್ರ ಲೋಕ ವ್ಯವಸ್ಥೆಗಳಿಗೆ ಉನ್ನತಿಗೇರಿಸಿದ್ದಾರೆ ಅವರ ಸಾರ್ವಭೌಮತ್ವದ ಸೂರ್ಯಕವಚವು ಪರಿಶುದ್ಧವಾಗಿ ಮತ್ತು ಕಲೆರಹಿತವಾಗಿ ವಿಮುಕ್ತಿಯ ಶ್ವೇತತನದಿಂದ ಕೂಡಿದೆ. ಜೊತೆಗೆ ಅದರ ನೂರಾರು ಸಲಾಕೆಗಳು ಶ್ರೇಷ್ಠ ಪ್ರಜ್ಞಾವನ್ನು ಸೂಚಿಸುತ್ತದೆ ಮತ್ತು ಅದರ ಹಿಡಿಯು ದೃಢವಾಗಿ ಮತ್ತು ಬಲಿಷ್ಠವಾಗಿದೆ. ಇದು ಅವರ ಬೃಹತ್ ಸುಖ್ಯಾತಿಯ ಮತ್ತು ಮಹಾಭವ್ಯತೆಯ ಸಂಕೇತವಾಗಿದೆ. ಇದು ಸಹಾ ತಥಾಗತರು ರಾಜನೆನ್ನುವುದಕ್ಕೆ ಕಾರಣೀಯ ಅಂಶವಾಗಿದೆ. ಒಬ್ಬ ರಾಜನು ಸಮೂಹಗಳಿಂದ ಪೂಜ್ಯನಿಯತೆಗೆ ಒಳಪಡುತ್ತಾನೆ. ಅವರೆಲ್ಲರು ಆತನ ಬಳಿಗೆ ಬಂದು ಗೌರವಾರ್ಪಣೆ ಮಾಡುತ್ತಾರೆ. ಹಾಗೆಯೇ ಭಗವಾನರು ಸಹಾ ಅಸಂಖ್ಯಾತ ಜೀವಿಗಳಿಂದ ಪೂಜ್ಯನಿಯರಾಗಿದ್ದಾರೆ. ಅವರಲ್ಲಿ ದೇವತೆಗಳು ಹಾಗು ಮಾನವರೂ ಇದ್ದಾರೆ. ಯಾರೆಲ್ಲರೂ ಅವರ ಬಳಿಗೆ ಬರುತ್ತಾರೋ ಅವರೆಲ್ಲರೂ ಗೌರವ ಪೂಜೆ ಮಾಡುತ್ತಾರೆ. ಇದು ಸಹಾ ಅವರು ರಾಜನೆನ್ನುವುದಕ್ಕೆ ಸಾಕ್ಷಿಯಾಗಿದೆ. ರಾಜನು ಶ್ರಮ ಸೇವಕರಿಂದ ಸಂತುಷ್ಟನಾದರೆ ಅಮೂಲ್ಯವಾದ ಉಡುಗೊರೆಗಳನ್ನು ನೀಡಿ ಅವರಿಗೆ ಸಂತೋಷಪಡಿಸುತ್ತಾನೆ. ಅದೇರೀತಿಯಲ್ಲಿ ಭಗವಾನರು ಸಹಾ ತ್ರಿಕರಣಪೂರ್ವಕವಾಗಿ ಭಿಕ್ಷುಗಳು/ಉಪಾಸಕರು ಪ್ರಯತ್ನಶಾಲಿಗಳಾಗಿ ಇದ್ದರೆ, ಭಗವಾನರು ಆನಂದದಿಂದ ಪರಮಶ್ರೇಷ್ಠ ಉಡುಗೊರೆಯಾದ ದುಃಖವಿಮುಕ್ತಿ ನೀಡುತ್ತಿದ್ದರು. ಅದು ಪ್ರಾಪಂಚಿಕ ಉಡುಗೊರೆಗಳಿಂದ ಎಷ್ಟೋ ಆಚೆಗಿನದು. ಇದು ಸಹಾ ಅವರನ್ನು ರಾಜರೆನ್ನುವುದಕ್ಕೆ ಕಾರಣೀಯ ಅಂಶವಾಗಿದೆ. ರಾಜರು ಸಾಮಾನ್ಯವಾಗಿ ತಪ್ಪಿತಸ್ಥರಿಗೆ ಬಹಿಷ್ಕಾರ, ದಂಡ, ಮೊದಲಾದ ಶಿಕ್ಷೆಗಳನ್ನು ನೀಡುವರು. ಅದೇರೀತಿ ತಥಾಗತರು ಸಹಾ ವಿನಯದ ನಿಯಮ ಉಲ್ಲಂಘಿಸಿ ಪಾಪ ಅಥವಾ ತಪ್ಪು ಮಾಡಿದವರನ್ನು, ನಾಚಿಕೆ ಇಲ್ಲದವರನ್ನು, ಅತೃಪ್ತರನ್ನು ಕಡೆಗಣಿಸಲಾಗುತ್ತಿತ್ತು. ಅನುಗ್ರಹ ತಪ್ಪಿಸಲಾಗುತ್ತಿತ್ತು ಮತ್ತು ಹೊರಹಾಕಲಾಗುತ್ತಿತ್ತು. ಇದು ಸಹಾ ತಥಾಗತರು ರಾಜರೆನ್ನಲು ಸಾಕ್ಷಿಯಾಗಿದೆ. ರಾಜನು ತಲೆತಲಾಂತರದಿಂದ ಬಂದಂತಹ ನೀತಿ, ಕಟ್ಟಳೆಗಳನ್ನು, ಕಾನೂನುಗಳನ್ನು ಪಾಲಿಸುತ್ತ ಪರರಿಗೆ ಆ ಕಾಯಿದೆ ಕಾನೂನುಗಳನ್ನು ವಿಧಿಸುತ್ತಿರುತ್ತಾನೆ. ಹಾಗೆಯೇ ಜನರಿಗೆ ಪ್ರಿಯರಾಗಿ, ಸತ್ಯಧಮ್ಮದಿಂದ ರಾಜ್ಯಭಾರ ನಡೆಸುತ್ತಾರೆ. ತನ್ನ ಸಾಮ್ರಾಜ್ಯ ವಿಸ್ತರಿಸುತ್ತಾನೆ. ಅದೇರೀತಿಯಲ್ಲಿ ಓ ಮಹಾರಾಜ, ತಥಾಗತರು ಸಹಾ ಹಿಂದಿನ ಬುದ್ಧರ ಹಾಗೇ ಸನಾತನ ಕ್ರಮದಿಂದ, ಧಮ್ಮ, ವಿನಯಗಳ ನಿಯಮಗಳನ್ನು ಹಾಕುತ್ತಾರೆ ಮತ್ತು ಧಮ್ಮಚಕ್ರವತರ್ಿಯಾಗಿ ಈ ಲೋಕಗಳನ್ನು ಆಳುತ್ತಾರೆ. ಅವರು ಸಹಾ ಮಾನವರಿಗೆ ಮತ್ತು ದೇವತೆಗಳಿಗೆ ಪ್ರಿಯರಾಗಿ ತಮ್ಮ ಸತ್ಯತೆಯ ಪ್ರೇರಣ ಶಕ್ತಿಯಿಂದಾಗಿ, ಚಾಲನಾಬಲವಾಗಿ ಈ ಲೋಕದಲ್ಲಿ ದೀರ್ಘಕಾಲ ಧಮ್ಮ ಉಳಿಯುವಂತೆ ಮಾಡುತ್ತಾರೆ. ಇದು ಸಹಾ ತಥಾಗತರು ರಾಜನೆನ್ನಲು ಪ್ರಬಲ ಕಾರಣೀಯ ಅಂಶವಾಗಿದೆ.


ಓ ಮಹಾರಾಜ, ಹೀಗೆ ತಥಾಗತರು ರಾಜರೆನ್ನಲು ಹಾಗೆಯೇ ಬ್ರಾಹ್ಮಣರೆನ್ನಲು ಹಲವಾರು ಕಾರಣಗಳಿವೆ. ಅರ್ಹ ಭಿಕ್ಖುವು ಈ ಕಲ್ಪದಲ್ಲೇ ಏಣಿಕೆಗೆ ಸಿಗುವುದು ಕಷ್ಟಕರವಾಗಿದೆ. ಇದರ ಬಗ್ಗೆ ನಾನು ಇನ್ನೂ ಏಕೆ ವಿಸ್ತರಿಸಬೇಕು? ನನ್ನ ಸಂಕ್ಷಿಪ್ತ ವಿವರಣೆ ಒಪ್ಪಿಗೆಯೇ?
ಖಂಡಿತ ಭಂತೆ ನಾಗಸೇನ, ನಿಮ್ಮ ಅಭಿಪ್ರಾಯಗಳನ್ನು ನಾನು ಒಪ್ಪಿದ್ದೇನೆ.



9. ಗಾಥಾಭಿಗೀತ ಭೋಜನ ಪ್ರಶ್ನೆ


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ: ಗಾಥಾಭಿಗೀತೆಗೆ ಉಡುಗೊರೆಯೇ? ಅಂತಹ ದಾನ ನಾನು ಸ್ವೀಕರಿಸುವುದಿಲ್ಲ. ಯಾರೆಲ್ಲರೂ ಸತ್ಯವನ್ನು ಕಂಡಿರುವರೋ ಅವರು ಇದೇ ಅನುಷ್ಠಾನದಲ್ಲಿರುವರು, ಬುದ್ಧರು ಪ್ರತಿಫಲಕ್ಕಾಗಿ ಗಾಥೆ ನುಡಿಯುವುದಿಲ್ಲ. ಪ್ರತಿಕಾಲಕ್ಕೂ, ಪ್ರತಿಸಲವು ಸತ್ಯ ಪ್ರಕಟಿಸುವಾಗಲು ಇದೇ ಅವರ ಸ್ಥಿರಚಾರಿತ್ರ್ಯವಾಗಿರುತ್ತದೆ.

ಆದರೆ ಮತ್ತೊಂದೆಡೆ ಭಗವಾನರು ಧಮ್ಮ ಬೋಧಿಸುವಾಗ, ದಾನದ ಮಹತ್ವದಿಂದಲೇ ಪ್ರಾರಂಭಸುತ್ತಾರೆ. ನಂತರ ಶೀಲದ ಲಾಭಗಳನ್ನು ಹೇಳುತ್ತಾರೆ, ಹೀಗಾಗಿ ದೇವತೆಗಳು ಮತ್ತು ಮಾನವರು ಆ ಬೋಧನೆಗಳನ್ನು ಕೇಳಿ ಭಗವಾನರಿಗೆ ಮತ್ತು ಸಂಘಕ್ಕೆ ದಾನಗಳನ್ನು ನೀಡುತ್ತಾರೆ. ಈಗ ನಾಗಸೇನರವರೇ, ಭಗವಾನರು ಗಾಥೆಗಳನ್ನು ಧಮ್ಮ ಬೋಧನೆಗಳನ್ನು ನುಡಿದ ನಂತರ ದಾನ ಸ್ವೀಕರಿಸುವುದಿಲ್ಲವೆಂದರೆ, ಅವರು ದಾನದ ಬಗ್ಗೆಯ ಮೊದಲು ಬೋಧಿಸುವುದು ತಪ್ಪಾಗುತ್ತಾದೆ. ಹಾಗಲ್ಲದೆ ಅವರು ದಾನದ ಬಗ್ಗೆ ಒತ್ತಿ ಹೇಳುವುದು ತಪ್ಪಿಲ್ಲದಿದ್ದರೆ, ಅವರ ಬೋಧನೆಯ ನಂತರ ದಾನ ಸ್ವೀಕರಿಸುವುದಿಲ್ಲ ಎನ್ನುವುದು ಸುಳ್ಳಾಗುತ್ತದೆ. ಏಕೆಂದರೆ ಯಾರಾದರೂ ದಾನಕ್ಕೆ ಅರ್ಹರಾಗಿದ್ದು, ಉಪಾಸಕರಿಗೆ ಅದರ ಫಲಗಳನ್ನು ಹೇಳಿದರೆ, ಅವರು ಅದನ್ನು ಆಲಿಸಿ, ಸಂತಸಗೊಂಡು, ಮತ್ತೆ ಮತ್ತೆ ದಾನ ನೀಡುವರು ಮತ್ತು ಯಾರು ದಾನದಲ್ಲಿ ಅನಂದಿಸುವರೋ ಅವರು ಸಹಾ ತಮ್ಮ ಗಾಥೆಗಳಿಂದ ದಾನ ಸಂಪಾದಿಸುವುದರಲ್ಲಿ ಆನಂದಿಸುತ್ತಾರೆ. ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಪ್ರಶ್ನೆಯಾಗಿದೆ. ನಿಮಗೆ ಹಾಕಿದ್ದೇನೆ, ಇದನ್ನು ನೀವೇ ಪರಿಹರಿಸಬೇಕು. (141)

ಓ ಮಹಾರಾಜ, ನೀವು ಹೇಳಿದ ಹೇಳಿಕೆಗಳು ಭಗವಾನದಿಂದಲೇ ನುಡಿಯಲ್ಪಟ್ಟಿವೆ. ಮತ್ತು ಅವರು ತಮ್ಮ ಬೋಧನೆಯಲ್ಲಿ ದಾನಕ್ಕೆ ಮೊದಲ ಪ್ರಾಶಸ್ತ್ಯ ನೀಡಿದ್ದರು. ಏಕೆಂದರೆ ಅದು ಎಲ್ಲಾ ತಥಾಗತರ ಸಂಪ್ರದಾಯವಾಗಿದೆ. ಮೊದಲ ದಾನದ ಬೋಧನೆಯಿಂದ ಶ್ರೋತುಗಳ ಮನಸ್ಸು ಅದರಲ್ಲಿ ಬಾಗುತ್ತದೆ ಮತ್ತು ನಂತರ ಶೀಲಾದಿ ಸತ್ಯಗಳ ಕಡೆ ಅವರು ಒಲವು ತೋರಿಸುತ್ತಾರೆ. ಇದು ಹೇಗೆಂದರೆ ಓ ಮಹಾರಾಜ, ರಾಜನು ಮೊದಲು ತನ್ನ ಕುಮಾರರನ್ನು ಆಟವಾಡಲು ನಾನಾರೀತಿಯ ಆಟಿಕೆಗಳನ್ನು ನೀಡುತ್ತಾನೆ, ನೇಗಿಲ ಗೊಂಬೆ, ಘಟಿಕಂ ಗೊಂಬೆ (ಬೆಕ್ಕು), ಗಾಳಿಯಂತ್ರದ ಗೊಂಬೆ, ಎಲೆಗಳ ಅಳತೆಗಳು, ವಾಹನಗಳ ಗೊಂಬೆಗಳು, ಬಿಲ್ಲಬಾಣಗಳ ಗೊಂಬೆಗಳನ್ನು ನೀಡುತ್ತಾನೆ. ನಂತರ ಅವರಿಗೆ ಪ್ರತ್ಯೇಕವಾದ ಕೆಲಸಗಳಲ್ಲಿ ತೊಡಗಿಸುತ್ತಾನೆ. ಅಥವಾ ವೈದ್ಯನೊಬ್ಬನು ಮೊದಲು ರೋಗಿಗಳಿಗೆ ಮೊದಲು ಎಣ್ಣೆಯನ್ನು ಕುಡಿಸುತ್ತಾನೆ. ಹೀಗೆ ನಾಲ್ಕೈದು ದಿನಗಳ ನಂತರ ಅವರು ಬಲಿಷ್ಠರನ್ನಾಗಿಸಿ ಅವರ ಶರೀರವನ್ನು ಮೃದುವಾಗಿಸುತ್ತಾನೆ ಮತ್ತು ನಂತರ ಅವರಿಗೆ ಶುದ್ಧೀಕರಣ ಕ್ರಿಯೆ ಮಾಡಿಸುತ್ತಾನೆ. ಓ ಮಹಾರಾಜ, ಶ್ರದ್ಧಾನುಯಾಯಿಗಳು ಅಪಾರವಾಗಿ ದಾನ ನೀಡುತ್ತಾರೆ. ಹೀಗಾಗಿ ಅವರ ಹೃದಯವು ಮೃದುಗೊಳ್ಳುತ್ತದೆ. ಕೋಮಲವಾಗುತ್ತದೆ, ಪರಿಣಾಮಕಾರಿಯಾಗಿರುತ್ತದೆ. ತಾವು ನೀಡಿದ ದಾನಗಳ ಸಹಾಯದಿಂದಲೇ ಅವರು ಆಚೆಗಿನ ದಡವನ್ನು ದಾಟುತ್ತಾರೆ. ದಾನದಿಂದಲೇ ಸಹಾಯ ಪಡೆಯುತ್ತಾರೆ. ಈ ರೀತಿಯಾಗಿ ಬುದ್ಧರು ಯಾವುದೇ ತಪ್ಪು ಸಂದೇಶ ವ್ಯಕ್ತಪಡಿಸಲಿಲ್ಲ.


ಭಂತೆ ನಾಗಸೇನ, ನೀವು ವ್ಯಕ್ತಪಡಿಸುವಿಕೆ (ವಿಞ್ಞತ್ತಿ) ಬಗ್ಗೆ ಹೇಳಿದಿರಿ, ಏನಿದು ವಿಞ್ಞತ್ತಿ? (142)


ಓ ಮಹಾರಾಜ, ಎರಡು ಬಗೆಯ ವಿಞ್ಞತ್ತಿಗಳಿವೆ, ಕಾಯವಿನ್ನತ್ತಿ (ಶಾರೀರಿಕ ವ್ಯಕ್ತತೆ) ಮತ್ತು ವಚಿವಿಞ್ಞತ್ತಿ (ಮಾತಿನ ವ್ಯಕ್ತತೆ) ಮತ್ತು ಒಂದು ಶಾರೀರಿಕ ವಿಞ್ಞತಿಯಿದೆ, ಅದು ತಪ್ಪು ಮತ್ತು ಇನ್ನೊಂದು ಅದಲ್ಲ. ಹಾಗೆಯೇ ಒಂದು ವಚಿ ವಞ್ಞತಿಯಿದೆ ಅದು ತಪ್ಪು ಮತ್ತು ಇನ್ನೊಂದು ಅದಲ್ಲ. ಯಾವ ಕಾಯ ವಿಞ್ಞತ್ತಿಯು ತಪ್ಪಾದುದು? ಉದಾಹರಿಸುವುದಾದರೆ ಸಂಘದ ಸದಸ್ಯನು (ಭಿಕ್ಖು) ಆಹಾರಕ್ಕಾಗಿ ಹೊರಟಿರುವಾಗ, ಮನೆಯಿಲ್ಲದಿರುವ ಕಡೆ ನಿಂತು ಅದನ್ನು ಆಯ್ಕೆಮಾಡುತ್ತಾನೆ. ಇದು ಶಾರೀರಿಕ ತಪ್ಪು ವರ್ತನೆಯಾಗಿದೆ. ನಿಜ, ಭಿಕ್ಖುಗಳು ಎಂದಿಗೂ ಕೇಳಿ ಆಹಾರ ಪಡೆಯುವುದಿಲ್ಲ, ಹಾಗೆ ತಪ್ಪಾಗಿ ವತರ್ಿಸುವವರು ಕೀಳಾಗಿ ಕಾಣಲ್ಪಡುವರು, ಗೌರವಿಸಲ್ಪಡುವುದಿಲ್ಲ, ನಿಂದೆಗೆ ಒಳಗಾಗುತ್ತಾರೆ, ಪರಿಗಣಿಸಲ್ಪಡುವುದಿಲ್ಲ. ಆರ್ಯ ಧರ್ಮದಲ್ಲಿ ಚೆನ್ನಾಗಿ ಚಿಂತಿಸಿರುವುದಿಲ್ಲ. ಆತನು ನಿಯಮಭಂಗಿ ಎಂದು ಗುತರ್ಿಸಲ್ಪಡುತ್ತಾನೆ. ಮತ್ತೆ ಯಾವುದೇ ಸಂಘದ ಸದಸ್ಯನು ಭಿಕ್ಷಾಟನೆಗೆ ಹೊರಟಾಗ ಆತನು ಮನೆಯಿಲ್ಲದೆ ಕಡೆ ನಿಂತು ನವಿಲಿನಂತೆ ಕತ್ತನ್ನು ಚಾಚಿ ಈ ಜನರು ನನ್ನನ್ನು ಕಾಣುವರು ಎಂದು ವ್ಯಕ್ತಪಡಿಸುವ ಭಂಗಿಯು ಸಹಾ ತಪ್ಪಾದುದು. ನಿಜವಾದ ಭಿಕ್ಷುವು ಭಿಕ್ಷೆಯನ್ನು ಯಾಚಿಸುವುದಿಲ್ಲ, ಯಾರು ಈರೀತಿ ವತರ್ಿಸುವರೋ ಅವರು ಕೊನೆಯವರಂತೆ ಕಾಣಲ್ಪಡುತ್ತಾರೆ. ಮತ್ತೆ ಓ ರಾಜ, ಯಾರಾದರು ಭಿಕ್ಷು ದವಡೆಯಿಂದ ಅಥವಾ ಹುಬ್ಬಿನಿಂದ ಅಥವಾ ಬೆರಳಿನಿಂದ ಆತನು ದೇಹದಿಂದ (ಸನ್ನೆ) ವ್ಯಕ್ತಪಡಿಸಿದರೆ ಆ ದೈಹಿಕ ವ್ಯಕ್ತತೆ ತಪ್ಪಾದುದು, ನಿಜ ಭಿಕ್ಷುವು ಈ ರೀತಿಯಾಗಿ ಭಿಕ್ಷೆ ಯಾಚಿಸುವುದಿಲ್ಲ.

ಮತ್ತೆ ಯಾವರೀತಿಯ ಕಾಯಕ ವಿಞ್ಞತ್ತಿ (ವ್ಯಕ್ತತೆ) ತಪ್ಪಲ್ಲ? ಇಲ್ಲಿ ಭಿಕ್ಷುವು ಆಹಾರಕ್ಕೆ ಹೋಗಿರುವಾಗ, ಸ್ವ-ಜಾಗೃತಿವುಳ್ಳವನಾಗಿರುತ್ತಾನೆ, ಪ್ರಶಾಂತನಾಗಿರುತ್ತಾನೆ, ತನ್ನ ಕ್ರಿಯೆಗಳ ಬಗ್ಗೆ ಅರಿವನ್ನು ಹೊಂದಿರುತ್ತಾನೆ. ಆತನು ನಿಂತೇ ಇರಲಿ, ಅಥವಾ ಎಲ್ಲಿಯಾದರೂ ಯೋಗ್ಯ ಸ್ಥಳಕ್ಕೆ ಹೋಗಲಿ, ಎಲ್ಲಿ ಜನರು ಇಷ್ಟಪಟ್ಟು ನೀಡುವರೋ ಮತ್ತು ಎಲ್ಲಿ ಇಷ್ಟಪಟ್ಟು ನೀಡುವುದಿಲ್ಲವೋ ಅಲ್ಲೆಲ್ಲಾ ಆತನು ನಿಲ್ಲುತ್ತಾನೆ, ಹಾಗೆಯೇ ಆತನು ನಿಲ್ಲದೆ ಹೋದರೆ, ಆ ಕಾಯವಿನ್ನತಿ ತಪ್ಪಲ್ಲ. ಈ ರೀತಿ ಶುದ್ಧ ಸಂಘವು ಆಹಾರಕ್ಕಾಗಿ ನಿಲ್ಲುತ್ತದೆ. ಈ ರೀತಿಯಾಗಿ ಕಾಯದಿಂದಲೂ, ವಾಚಾದಿಂದಲೂ ಕೇಳದೆ ಕೇವಲ ನಿಲ್ಲುವಿಕೆಯನ್ನು ಆರ್ಯರು ಪ್ರಶಂಸಿಸುತ್ತಾರೆ, ಶ್ರೇಷ್ಠವೆಂದು ಭಾವಿಸುತ್ತಾರೆ, ಈ ರೀತಿಯ ಜೀವನೋಪಾಯವನ್ನು ಶುದ್ಧವೆಂದು ಹೇಳುತ್ತಾರೆ. ಇದರ ಬಗ್ಗೆ ದೇವಾಧಿದೇವರಾದ ಭಗವಾನರು ಹೀಗೆ ಹೇಳಿದ್ದಾರೆ.

ನಿಜಪ್ರಾಜ್ಞರು ಯಾಚಿಸುವುದಿಲ್ಲ, ಅರಹಂತರು ಯಾಚನೆಗೆ ತಾತ್ಸಾರ ಮಾಡುತ್ತಾರೆ, ಅವರು ಆಹಾರಕ್ಕಾಗಿ ಕೇವಲ ಮೌನವಾಗಿ ನಿಲ್ಲುತ್ತಾರೆ. ಈ ರೀತಿಯಾಗಿ ಆರ್ಯರು ಯಾಚಿಸುತ್ತಾರೆ.

ಮತ್ತು ಯಾವ ವಚಿವಿಞ್ಞತಿ (ಮಾತಿನಲ್ಲಿ ವ್ಯಕ್ತಪಡಿಸುವಿಕೆ) ತಪ್ಪಾದುದು? ಇಲ್ಲಿ ಓ ಮಹಾರಾಜ, ಸೋದರನು ಅಗತ್ಯ ವಸ್ತುಗಳಾದ ಚೀವರ, ಪಿಂಡಪಾತ್ರೆ, ಹಾಸಿಗೆ ಮತ್ತು ಔಷಧಿಗಳನ್ನು ಮಾತಿನಿಂದ ಯಾಚಿಸಿದರೆ ಆ ಮಾತಿನ ವ್ಯಕ್ತತೆ ತಪ್ಪಾಗಿದೆ. ಹಾಗೆ ಕೇಳುವವರನ್ನು ಆರ್ಯಸಂಘವು ಸ್ವೀಕರಿಸುವುದಿಲ್ಲ ಮತ್ತು ಹಾಗೆ ಮಾಡುವವರನ್ನು ಕೀಳಾಗಿ ಕಾಣಲ್ಪಡುವರು, ಗೌರವಿಸಲ್ಪಡುವುದಿಲ್ಲ. ನಿಂದೆಗೆ ಗುರಿಯಾಗುತ್ತಾರೆ. ಪರಿಗಣಿಸಲ್ಪಡುವುದಿಲ್ಲ. ಜೀವನೋಪಾಯಕ್ಕಾಗಿ ಭಂಗಗೊಂಡವನು ಎಂದೆನಿಸುತ್ತಾನೆ. ಮತ್ತೆ ಓ ಮಹಾರಾಜ, ಭಿಕ್ಷುವಿನೊಂದಿಗೆ, ಉಪಾಸಕರಿಗೆ ಕೇಳಿಸುವಂತೆ ಭಿಕ್ಷುವು ನನಗೆ ಇಂತಿಂಥಹ ವಸ್ತುಗಳ ಅಗತ್ಯವಿದೆ ಎಂದು ಹೇಳಿ ನಂತರ ಆ ವಸ್ತುಗಳನ್ನು ಪರೋಕ್ಷವಾಗಿ ಪಡೆದರೆ ಅದು ಸಹಾ ಮಾತಿನ ದೋಷವೆಂದು ಪರಿಗಣಿಸಲಾಗುವುದು. ನಿಜ ಭಿಕ್ಕುಗಳು ಹಾಗೆ ಪಡೆಯಲಾರರು, ಹಾಗೆ ಮಾಡುವವರು ಕೊನೆಯವರಂತೆ ಪರಿಗಣಿಸಲ್ಪಡುವರು ಮತ್ತು ಭಿಕ್ಷುವೇನಾದರೂ ತನ್ನ ಮಾತಿನಲ್ಲಿ ವಿಸ್ತರಿಸಿ ಮಾತನಾಡುವಾಗ ಅವರಿಗೆ ಅರ್ಥವಾಗುವಂತೆ ತನ್ನ ಅಗತ್ಯ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೇಳಿದಾಗ ಅದನ್ನು ಆಲಿಸಿ ಅವರು ಅದರಂತೆ ನಡೆದುಕೊಂಡರೆ ಅದು ಸಹಾ ಮಾತಿನ ತಪ್ಪಾಗುತ್ತದೆ. ನಿಜ ಭಿಕ್ಷುಗಳು ಈ ರೀತಿಯಾಗಿ ವಸ್ತುಗಳನ್ನು ಪಡೆಯಲಾರರು, ಅಂತಹವರನ್ನು ಕೊನೆಯವರೆಂದು ಪರಿಗಣಿಸಲ್ಪಡುತ್ತಾರೆ. ಓ ಮಹಾರಾಜ, ಮಹಾಥೇರರಾದ ಸಾರಿಪುತ್ತರು ಮೌನ ಮುರಿದರು ಮತ್ತು ಹೀಗೆ ಮೌನ ಭಂಗದಿಂದ ಔಷಧಿ ದೊರೆಯಿತು, ಆಗ ಸಾರಿಪುತ್ತರು ತಮ್ಮಲ್ಲಿ ಹೀಗೆ ಹೇಳಿಕೊಂಡರು ಈ ಔಷಧಿಯು ತನ್ನ ಮೌನಭಂಗದಿಂದ ದೊರೆಯಿತು, ನನ್ನ ಜೀವನೋಪಾಯ ನಿಯಮಗಳು ಭಂಗವಾಗದಿರಲಿ ಎಂದು ಅವರು ಆ ಔಷಧಿಯನ್ನು ಸ್ವೀಕರಿಸಲಿಲ್ಲ. ಏಕೆಂದರೆ ಅವರು ಮಾತಿನಿಂದ ದೋಷವಾಯಿತೆಂದು ಭಾವಿಸಿದರು. ಸಂಘದ ನಿಜ ಭಿಕ್ಖುಗಳು ಹಾಗೆ ಪಡೆಯಲಾರರು. ಹಾಗೆ ಮಾಡುವವರು ಕೊನೆಯವರೆಂದು ಪರಿಗಣಿಸಲ್ಪಡುವರು.

ಮತ್ತೆ ಯಾವರೀತಿಯ ವಾಚವಿಞ್ಞತ್ತಿಯು ಸರಿಯಾದುದು? ಓ ಮಹಾರಾಜ, ಭಿಕ್ಷುವಿಗೆ ಏನಾದರೂ ಅಗತ್ಯ ವಸ್ತುಗಳು ಬೇಕಾದಲ್ಲಿ ಆತನು ತನ್ನ ಸಾಮಿಪ್ಯದವರಾದ ಕುಟುಂಬದವರೊಡನೆ ಅಥವಾ ತನ್ನನ್ನು ವಷರ್ಾವಾಸ ಕಳೆಯಲೆಂದು ಆಹ್ವಾನಿಸಿದ ಸಹೃದಯರೊಂದಿಗೆ ಆತನು ಔಷಧಿ ಇನ್ನಿತರ ಅಗತ್ಯ ವಸ್ತುಗಳನ್ನು ಕೇಳಬಹುದು, ಅದು ತಪ್ಪಾಗಲಾರದು. ನಿಜ ಭಿಕ್ಷುಗಳು ಹೀಗೆಯೇ ಕೇಳಿಕೊಳ್ಳುತ್ತಾರೆ. ಅಂತಹವರಿಗೆ ಆರ್ಯರು ಪ್ರಶಂಸಿಸುತ್ತಾರೆ, ಶ್ರೇಷ್ಠರೆಂದು ಪರಿಗಣಿಸುತ್ತಾರೆ, ಶುದ್ಧ ಜೀವನದವರೆಂದು ಭಾವಿಸುತ್ತಾರೆ, ತಥಾಗತರು, ಅರಹಂತರು ಆದ ಸಮ್ಮಾಸಂಬುದ್ಧರಿಂದಲೂ ಸ್ವೀಕೃತರಾಗುತ್ತಾರೆ ಮತ್ತು ಓ ಮಹಾರಾಜ, ತಥಾಗತರು ಕಸಿಭಾರಧ್ವಜ ಬ್ರಾಹ್ಮಣನಿಂದ ಆಹಾರ ನಿರಾಕರಣೆಗೆ ಕಾರಣವಿದೆ. ಬಾರದ್ವಜನು ಪರೀಕ್ಷಿಸಲು ಜಟಿಲ ಪ್ರಶ್ನೆಯನ್ನು ಹಾಕಿ, ನಂತರ ಮಾಡಿದ್ದನ್ನು ನಿಲ್ಲಿಸಲು ಇಚ್ಛಿಸಿದನು, ಆತನನ್ನು ಸರಿಹಾದಿಗೆ ಎಳೆಯುವ ಕಾರಣದಿಂದ ದೋಷಿಯೆಂದು ಪ್ರಾಯಶ್ಚಿತ್ತ ಮಾಡಿಕೊಳ್ಳಲೆಂದು, ಹಾಗೆಯೇ ಆಹಾರಕ್ಕಾಗಿ ಬೋಧಿಸಲಿಲ್ಲ ಎಂದು ಅರಿವುಂಟು ಮಾಡಲು ಆತನ ಆಹಾರವನ್ನು ಸ್ವೀಕರಿಸಲಿಲ್ಲ.

ಭಂತೆ ನಾಗಸೇನ, ತಥಾಗತರು ಆಹಾರ ಸೇವಿಸುವಾಗ ದೇವತೆಗಳು ದೇವಲೋಕದ ಸತ್ವಸಾರವನ್ನು ಅವರ ಪಿಂಡಪಾತ್ರೆಗೆ ಸುರಿಯುತ್ತಿದ್ದರು, ಇದನ್ನು ಅವರು ಸದಾ ಮಾಡುತ್ತಿದ್ದರೆ ಅಥವಾ ಎರಡು ರೀತಿಯ ಆಹಾರಗಳಾದ ಸೂಕದ ಮದ್ದವ (ಹಣಬೆ ಅಥವಾ ಮೃದು ಮಾಂಸ) ಮತ್ತು ಮಧು ಪಾಯಸಕ್ಕೆ ಮಾತ್ರ ಅವರು ಸುರಿಯುತ್ತಿದ್ದರೆ?

ಓ ಮಹಾರಾಜ, ಭಗವಾನರು ಯಾವಾಗೆಲ್ಲ ಆಹಾರ ಸೇವಿಸುತ್ತಿದ್ದರೊ, ಆಗೆಲ್ಲಾ ದೇವತೆಗಳು ಸಹಾ ದೇವಲೋಕದ ಸತ್ವಸಾರವನ್ನು ಓಜಸ್ಸನ್ನು ಹಾಕುತ್ತಿದ್ದರು. ಹೇಗೆಂದರೆ ರಾಜನಿಗೆ ರಾಜ ಅಡುಗೆಗಾರನು ತಿನ್ನುವಾಗ ಪ್ರತಿ ತುತ್ತಿಗೆ ಸಾರನ್ನು ಸುರಿಯುವಂತೆ ಹಾಕುತ್ತಿದ್ದರು. ಮತ್ತು ವೇರಂಜಾದ ಬಳಿ ತಥಾಗತರು ಒಣಗಿದ ಬಾರ್ಲಿಯ ಫುಲಕವನ್ನು ತಿನ್ನಿತ್ತಿರುವಾಗ ದೇವತೆಗಳು ಓಜಸ್ಸಿನ ದ್ರವದಿಂದ ಅದನ್ನು ತೇವಗೊಳಿಸಿ ನೀಡುತ್ತಿದ್ದರು. ಹೀಗಾಗಿಯೇ ತಥಾಗತರ ಶರೀರವು ಪುನಃ ಪ್ರಫುಲ್ಲಿತರಾಗುತ್ತಿದ್ದರು.


ಭಂತೆ ನಾಗಸೇನರವರೆ, ನಿಜಕ್ಕೂ ಆ ದೇವತೆಗಳ ಸೌಭಾಗ್ಯವು ನಿಜಕ್ಕೂ ಶ್ರೇಷ್ಠವಾದುದ್ದೇ. ಏಕೆಂದರೆ ಅವರು ಸದಾ ತಥಾಗತರ ಶರೀರವನ್ನು ಉತ್ಸಾಹಭಕ್ತಿಯಿಂದ ಸಲಹುತ್ತಿದ್ದರು. ಬಹುಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ, ನಿಮ್ಮ ಉತ್ತರವನ್ನು ನಾನು ಒಪ್ಪುತ್ತೇನೆ.





10. ಧಮ್ಮದೇಸನಾಯ ಅಪ್ಪೋಸ್ಸುಕ ಪನ್ಹೋ (ಧಮ್ಮ ದೇಶನದ ಪ್ರಶ್ನೆ)



ಭಂತೆ ನಾಗಸೇನ, ನೀವು ಹೇಳುವಿರಿ: ತಥಾಗತರು ನಾಲ್ಕು ಅಸಂಖ್ಯೇಯ ಕಲ್ಪಗಳ ತರುವಾಯ ಸರ್ವಹಿತಕ್ಕಾಗಿ ಅವರ ಸರ್ವಜ್ಞತಾ ಜ್ಞಾನವು ಪರಿಪೂರ್ಣ ವಾಯಿತೆಂದು ಹೇಳುವಿರಿ. ಆದರೆ ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಯಾವಾಗ ಅವರು ಸಮ್ಮಾಸಂಭೋದಿ ಪ್ರಾಪ್ತಿ ಮಾಡಿದರೋ, ಅನಂತರ ಅವರ ಮನಸ್ಸು ಸತ್ಯಗಳ ಪ್ರಕಟನೆಗಳಿಗೆ ಬಾಗಲಿಲ್ಲ, ಬದಲಾಗಿ ವಿಶ್ರಾಂತಿಯಲ್ಲಿತ್ತು.


ಓ ನಾಗಸೇನ, ಇದು ಹೇಗಾಯಿತೆಂದರೆ ಒಬ್ಬ ಬಿಲ್ಲುಗಾರನು ಅಥವಾ ಬಿಲ್ಗಾರನ ಶಿಷ್ಯನು ಧನುವರ್ಿದ್ಯಾಭ್ಯಾಸವನ್ನು ಯುದ್ಧ ಉದ್ದೇಶದಿಂದ ಹಲವಾರು ದಿನಗಳವರೆಗೆ ಅಭ್ಯಾಸಿಸಿ, ಯಾವಾಗ ಯುದ್ಧಘೋಷಿತ ದಿನದಂದು ಬಂದಿತೋ ಆತನು ಯುದ್ಧಮಾಡದೆ ಹಿಂತಿರುಗುತ್ತಾನೆ. ಅದೇರೀತಿಯಲ್ಲಿ ತಥಾಗತರು ಸಹಾ ಅಸಂಖ್ಯಾತ ಕಲ್ಪಗಳವರೆಗೆ ಸರ್ವಜ್ಞತೆಗೆ ಪ್ರಯತ್ನಪಟ್ಟು, ಅದನ್ನು ಜನಗಳಿಗಾಗಿ ಪ್ರಾಪ್ತಿಮಾಡಿಯೂ ಸಹಾ ಅದನ್ನು ಹೇಳಲು ಹಿಂಜರಿದಿದ್ದುದು ಏಕೆ? ಇದು ಹೇಗೆಂದರೆ ಜಟ್ಟಿಯೊಬ್ಬನು ಕುಸ್ತಿಯಲ್ಲಿ ಗೆಲ್ಲಲೆಂದು ಹಲವಾರು ದಿನಗಳವರೆಗೆ ಸಾಧನೆ ಮಾಡಿ, ಪಂದ್ಯದ ದಿನದಂದು ಕುಸ್ತಿಮಾಡದೆ, ಹಿಂಜರಿಯುತ್ತಾನೆ, ಹಿಂತಿರುಗುತ್ತಾನೆ. ಅದೇರೀತಿಯಲ್ಲಿ ತಥಾಗತರು ಸಹಾ ಧಮ್ಮ ನುಡಿಯಲೆಂದು ಅಸಂಖ್ಯಾತ ಕಲ್ಪಗಳ ಕಾಲ ಪಾರಮಿಗಳನ್ನು ಪೂರ್ಣಗೊಳಿಸಿಯು ಸಹಾ ನಂತರ ಬೋಧಿಯನ್ನು ಪ್ರಾಪ್ತಿಗೊಳಿಸಿಯೂ ಸಹಾ ಧಮ್ಮವನ್ನು ಪ್ರಕಟಪಡಿಸಲಿಲ್ಲ.


ಓ ಭಂತೆ ನಾಗಸೇನರವರೇ, ಅವರು ಹಾಗೆ ಮಾಡಿದ್ದು ಭಯದಿಂದಲೇ ಅಥವಾ ದೌರ್ಬಲ್ಯದಿಂದಲೇ ಅಥವಾ ಅವರು ಸರ್ವಜ್ಞತೆಯನ್ನು ಪಡೆಯಲೇ ಇಲ್ಲವೇ? ಇದಕ್ಕೆಲ್ಲಾ ಕಾರಣಗಳೇನು? ದಯವಿಟ್ಟು ಇದಕ್ಕೆಲ್ಲಾ ಕಾರಣ ತಿಳಿಸಿ. ಅದರಿಂದ ನನ್ನ ಸಂಶಯಗಳೆಲ್ಲವೂ ತೆಗೆಯುವಂತಾಗಲಿ, ಅವರು ಪರಹಿತಕ್ಕಾಗಿಯೇ ಅಷ್ಟು ಕಲ್ಪಗಳ ಕಾಲ ಶ್ರಮಿಸಿದ್ದರೆ ಅದೇ ನಿಜವಾಗಿದ್ದರೆ ಬೋಧನೆ ನೀಡಲು ಹಿಂಜರಿದುದ್ದದು ಸುಳ್ಳಾಗುತ್ತದೆ. ಆದರೆ ಅವರು ಹಿಂಜರಿದುದ್ದದು ನಿಜವಾಗಿದ್ದ ಪಕ್ಷದಲ್ಲಿ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಜಟಿಲ ಪ್ರಶ್ನೆಯಾಗಿದೆ, ನಿಮಗೆ ಹಾಕಿದ್ದೇನೆ, ನೀವೇ ಇದನ್ನು ಪರಿಹರಿಸಬೇಕು. (143)


ಓ ಮಹಾರಾಜ, ನೀವು ಹೇಳಿದ ಎರಡು ಹೇಳಿಕೆಗಳು ಸರಿಯಾಗಿಯೇ ಇವೆ. ಆದರೆ ಭಗವಾನರು ಧಮ್ಮಬೋಧನೆಗೆ ಮನಸ್ಸನ್ನು ಬಾಗಿಸಲಿಲ್ಲ ಎಂಬುದು ಮಾತ್ರ ಸರಿಯಲ್ಲ. ಅವರು ಹಾಗೆ ಮಾಡಿದುದಕ್ಕೆ ಕಾರಣವಿದೆ. ಅದೆಂದರೆ ಅವರು ಪರಮಶ್ರೇಷ್ಠ ಸತ್ಯಗಳನ್ನು ಅರಿತಿದ್ದರು. ಅದು ಅರಿಯಲು ಅತ್ಯಂತ ಕ್ಲಿಷ್ಟಕರವಾಗಿತ್ತು, ಅತ್ಯಂತ ಸೂಕ್ಷ್ಮವಾಗಿತ್ತು, ಅರಿಯಲು ಕಠಿಣವಾಗಿತ್ತು. ಜೀವಿಗಳು ಹೇಗೆ ತಮ್ಮ ರಾಗಗಳಲ್ಲಿ ತೃಪ್ತರಾಗಿವೆ, ಹೇಗೆ ಮಿಥ್ಯಾದೃಷ್ಟಿಗಳಲ್ಲಿ ಬಿದ್ದು ಸಕ್ಕಾಯದಿಟ್ಟಿಯ ಬಂಧನಗಳಲ್ಲಿದ್ದಾರೆ ಎಂದು ಅರಿತರು. ಹಾಗು ಅವರು ಮೊದಲು ಯಾರಿಗೆ ಬೋಧಿಸಲಿ? ಯಾವರೀತಿ ಬೋಧಿಸಲಿ ಎಂಬ ಚಿಂತನೆಯಲ್ಲಿದ್ದರು ಹೊರತು ಬೋಧಿಸಬಾರದೆಂದು ನಿಶ್ಚಯಿಸಿರಲಿಲ್ಲ.


ಓ ಮಹಾರಾಜ, ಇದು ಹೇಗೆಂದರೆ ರಾಜನಾಗಿ, ರಾಜತ್ವದಿಂದ ಚಕ್ರವತರ್ಿಯಾಗಿದ್ದಾಗ, ಆತನು ತನಗೆ ಅವಲಂಬಿಸಿದವರ ಮೇಲೆ ಅಂದರೆ, ಕಾವಲುಗಾರ, ಅಂಗರಕ್ಷಕ, ರಾಜಪರಿವಾರ, ವ್ಯಾಪಾರಿಗಳು, ಸೈನಿಕರು, ರಾಜದೂತರು, ಮಂತ್ರಿಗಳು ಮತ್ತು ಕ್ಷತ್ರಿಯರು ಇವರಿಗೆಲ್ಲ ನಾನು ಹೇಗೆ ಒಲಿಸಿಕೊಳ್ಳಲಿ ಎಂದು ಚಿಂತಿಸುವಂತೆ ತಥಾಗತರು ಅತ್ಯಂತ ಕ್ಲಿಷ್ಟಕರವಾದ ಧಮ್ಮವನ್ನು ಹೇಗೆ ರಾಗಯುಕ್ತರಾದ ಮೋಹಯುಕ್ತರಾದ, ಸಕ್ಕಾಯದಿಟ್ಟಿಯಲ್ಲಿ ಬಿದ್ದಿರುವ ಜೀವಿಗಳಿಗೆ ಹೇಗೆ ಬೋಧಿಸಲಿ ಎಂದು ಹೀಗೆ ಯೋಚಿಸುತ್ತಿದ್ದರು. ಯಾರಿಗೆ ಬೋಧಿಸಲಿ? ಹೇಗೆ ಬೋಧಿಸಲಿ? ಎಂದು ಅವರ ಮನಸ್ಸು ವಾಲಿತ್ತೇ ಹೊರತು ಬೋಧಿಸಬಾರದೆಂದು ನಿಶ್ಚಯಿಸಿರಲಿಲ್ಲ.


ಮತ್ತೆ, ಇನ್ನೂ ಒಂದು ಕಾರಣವಿದೆ ಮಹಾರಾಜ, ಅದೆಂದರೆ ಎಲ್ಲಾ ತಥಾಗತರು ಬ್ರಹ್ಮನ ಯಾಚನೆಯವರೆಗೆ ಕಾಯುತ್ತಾರೆ. ಬ್ರಹ್ಮನು ಧಮ್ಮವನ್ನು ಬಹುಜನಹಿತಕ್ಕಾಗಿ, ಬಹುಜನಸುಖಕ್ಕಾಗಿ, ದೇವತೆ ಮಾನವರ ಹಿತಸುಖಕ್ಕಾಗಿ ಬೋಧಿಸಿ ಎಂದು ಯಾಚಿಸುತ್ತಾರೆ. ಏಕೆಂದರೆ ಆಗ ಎಲ್ಲಾ ಜನರು ಸಮಣ ಬ್ರಾಹ್ಮಣರು, ಸಂಚಾರಿ ಸಾಧಕರು ಇವರೆಲ್ಲರೂ ಬ್ರಹ್ಮನ ಆರಾಧಕರಾಗಿದ್ದರು. ಬ್ರಹ್ಮನನ್ನು ಪೂಜಿಸುವವರಾಗಿದ್ದರು. ಬ್ರಹ್ಮನ ಮೇಲೆಯೇ ನಂಬಿಕೆ ಇಟ್ಟಿರುವವರಾಗಿದ್ದರು ಮತ್ತು ಯಾವಾಗ ಇಂತಹ ಬಲಿಷ್ಠ ಮತ್ತು ಬೃಹತ್ ಭವ್ಯವುಳ್ಳವ ಬ್ರಹ್ಮನು ಧಮ್ಮಬೋಧನೆಗೆ ಒತ್ತಾಯಿಸಿದರೆ, ಆಗ ಇಡೀ ಲೋಕಗಳ ದೇವತೆಗಳು ಮತ್ತು ಮಾನವರು ಸಹಾ ಧಮ್ಮದ ಕಡೆ ಬಾಗುತ್ತಾರೆ, ಶ್ರದ್ಧೆಯಿಡುತ್ತಾರೆ. ಆದ್ದರಿಂದಲೇ ಓ ಮಹಾರಾಜ, ತಥಾಗತರು ಬ್ರಹ್ಮನ ಯಾಚನೆಯ ನಂತರ ಧಮ್ಮವನ್ನು ಬೋಧಿಸುತ್ತಾರೆ. ಇದು ಹೇಗೆಂದರೆ ಯಾವರೀತಿ ಚಕ್ರವತರ್ಿಯು ಅಥವಾ ಮಂತ್ರಿಯು ಶರಣು ಹೋಗುತ್ತಾರೋ ಅಥವಾ ಪೂಜಿಸುತ್ತಾರೋ ಅದೇರೀತಿ ಮಿಕ್ಕ ಮಾನವರು ಅನುಸರಿಸುತ್ತಾರೆ, ಈ ರೀತಿಯಾಗಿ ಓ ಮಹಾರಾಜ, ಯಾವಾಗ ಬ್ರಹ್ಮನು ತಥಾಗತರ ಅನುಪಮೇಯ ವ್ಯಕ್ತಿತ್ವ ಹಾಗು ಅವರ ಶ್ರೇಷ್ಠ ಧಮ್ಮವನ್ನು ಅರಿತನೋ ಆಗ ಆತನು ತಥಾಗತರಿಗೆ ಶರಣಾಗಿ ಪೂಜಿಸುತ್ತಾನೆ. ನಂತರ ಇಡೀ ಲೋಕಗಳ ದೇವತೆಗಳು ಮತ್ತು ಮಾನವರು ಅದರಂತೆಯೇ ಅನುಸರಿಸುತ್ತಾರೆ ಮತ್ತು ಆದ್ದರಿಂದಲೇ ಬ್ರಹ್ಮನು ಸಹಾ ತಥಾಗತರಿಗೆ ಧಮ್ಮಬೋಧಿಸುವಂತೆ ಯಾಚಿಸಿ, ಎಲ್ಲರಿಗೂ ಅರಿವಾಗುವಂತೆ ಮಾಡುತ್ತಾನೆ.

ಬಹುಚೆನ್ನಾಗಿದೆ ಭಂತೆ ನಾಗಸೇನ, ಈ ಜಟಿಲವಾದ ಇಕ್ಕಟ್ಟಿನ ಸಮಸ್ಯೆಯನ್ನು ಪರಿಹರಿಸಿದಿರಿ, ನಿಮ್ಮ ಉತ್ತರವನ್ನು ನಾನು ಒಪ್ಪುತ್ತೇನೆ.


11. ಆಚಾರ್ಯ ನಆಚಾರ್ಯ ಪ್ರಶ್ನೆ


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ನನಗೆ ಆಚಾರ್ಯರೂ ಯಾರೂ ಇಲ್ಲ ಮತ್ತು ನನಗೆ ಸರಿಸಮಾನರೂ ಸಹಾ ಅಸ್ತಿತ್ವದಲ್ಲಿ ಇಲ್ಲ, ದೇವತೆಗಳನ್ನು ಒಳಗೊಂಡ ಈ ಎಲ್ಲಾ ಲೋಕಗಳಲ್ಲಿ ನನ್ನಂಥವರಿಲ್ಲ (ನನಗೆ ಪ್ರತಿಸ್ಪಧರ್ಿ ಯಾರೂ ಇಲ್ಲ). ಆದರೆ ಪುನಃ ಮತ್ತೊಂದೆಡೆ ಹೀಗೆ ಹೇಳಿದ್ದಾರೆ: ಓ ಭಿಕ್ಷುಗಳೇ, ಆಲಾರಕಾಲಾಮರು ನನಗೆ ಆಚಾರ್ಯರಾಗಿದ್ದರು ಮತ್ತು ನಾನು ಅವರ ಶಿಷ್ಯನಾಗಿದ್ದೆನು. ಆಗ ಅವರು ನನಗೆ ತಮ್ಮ ಸಮಾನದಜರ್ೆಗೆ ಏರಿಸಿದರು ಮತ್ತು ಅತಿ ಗೌರವದಿಂದ ಗೌರವಿಸಿದರು.

ಈಗ ಇಲ್ಲಿ ಹಿಂದಿನ ಹೇಳಿಕೆ ಸತ್ಯವಾದರೆ ನಂತರದ್ದು ಸುಳ್ಳಾಗುತ್ತದೆ. ಹಾಗಲ್ಲದೆ ಎರಡನೆಯ ಹೇಳಿಕೆ ಸತ್ಯವಾದರೆ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ಇಕ್ಕಟ್ಟಿನ ಜಟಿಲ ಪ್ರಶ್ನೆಯಾಗಿದೆ. ಇದನ್ನು ನಿಮಗೆ ಹಾಕುತ್ತಿದ್ದೇನೆ, ನೀವೇ
ಪರಿಹರಿಸಬೇಕು. (144)

ಓ ಮಹಾರಾಜ, ನೀವು ಹೇಳಿರುವ ಹೇಳಿಕೆಗಳು ಸರಿಯಾಗಿಯೇ ಇವೆ. ಆದರೆ ನೀವು ಹೇಳಿರುವ ಅಲಾರಕಾಲಾಮರು ಅವರಿಗೆ ಆಚಾರ್ಯರೆನ್ನುವುದು ಅವರು ಬೋಧಿಸತ್ವರಾಗಿದ್ದಾಗ ಅದು ನಿಜವಾಗಿತ್ತು. ಅಂದರೆ ಆಗಿನ್ನು ಅವರಿಗೆ ಬುದ್ಧತ್ವ ಪ್ರಾಪ್ತಿಯಾಗಿರಲಿಲ್ಲ ಮತ್ತು ಅಂತಹ 5 ಗುರುಗಳು ಅವರಿಗಿದ್ದರು. ಓ ರಾಜ, ಅವರಿಂದ ಬೋಧಿಸತ್ವರು ಹಲವಾರು ಸ್ಥಳಗಳಲ್ಲಿ ಹಲವರಿಂದ ಲೌಕಿಕ ಶಿಕ್ಷಣ ಪಡೆದಿದರು. ಯಾರು ಅವರು?

ಎಂಟು ಬ್ರಾಹ್ಮಣರಿದ್ದರು, ಅವರು ಬೋಧಿಸತ್ವರ ಜನ್ಮವಾದ ತಕ್ಷಣ ಅವರ ದೇಹದ ಮಹಾಪುರುಷ ಲಕ್ಷಣಗಳನ್ನು ಗಮನಿಸಿದವರಾದ ರಾಮ, ಧಜ, ಲಕ್ಖಣ, ಮಂತಿ, ಯಞ್ಞ, ಸುಯಾಮ, ಸುಭೂಜೋ ಮತ್ತು ಸುದತ್ತರು. ಆಗ ಅವರೇ ಇವರ ಭವಿಷ್ಯದ ಬಗ್ಗೆ ತಿಳಿಸಿದ್ದರು. ಹಾಗು ಎಚ್ಚರಿಕೆಯಿಂದ ಪಾಲನೆ ಮಾಡಬೇಕೆಂದು ಹೇಳಿ ರಕ್ಷಿಸಿದವರಾದ ಪ್ರಥಮ ಗುರುಗಳಿವರು.

ಮತ್ತೆ ಓ ಮಹಾರಾಜ, ಬ್ರಾಹ್ಮಣ ಸಬ್ಬಮಿತ್ತ (ಸರ್ವಮಿತ್ರ)ರವರು ಉದಿಚ್ಚ ಜಾತಿವಂತರಾದ ಅಭಿಜಾನರು ಆಗಿದ್ದರು. ಅವರು ವ್ಯಾಕರಣದಲ್ಲಿ, ಭಾಷಾಶಾಸ್ತ್ರದಲ್ಲಿ ಆರು ವೇದಾಂಗಗಳಲ್ಲಿ, ಪರಿಣಿತರಾಗಿದ್ದರು. ಅವರಲ್ಲಿಗೆ ಬೋಧಿಸತ್ವರು ತಂದೆ, ರಾಜ  ಸುದ್ಧೋಧನರು ತಮ್ಮ ಪುತ್ತರನ್ನು ಅವರಿಗೆ ಒಪ್ಪಿಸಿ ಚಿನ್ನದ ಪಾತ್ರೆಯಿಂದ ನೀರನ್ನು ಹಾಕಿ ಸಮಪರ್ಿಸಿದ್ದರು. ಅವರೇ ಬೋಧಿಸತ್ವರಿಗೆ ಎರಡನೆಯ ಆಚಾರ್ಯರಾಗಿದ್ದರು.

ಮತ್ತೆ ಓ ಮಹಾರಾಜ, ಒಬ್ಬ ದೇವ ಬೋಧಿಸತ್ವರ ಹೃದಯದಲ್ಲಿ ಉದ್ವಿಗ್ನತೆಯನ್ನುಂಟು ಮಾಡಿ ಆ ಶಬ್ದದಿಂದ, ಆ ವಾಕ್ಯಗಳಿಂದ ಬೋಧಿಸತ್ವರು ಚಾಲನೆಗೆ ಒಳಪಟ್ಟು, ಆ ಕ್ಷಣದಿಂದಲೇ ಅವರು ಮಹಾಭಿನಿಷ್ಕ್ರಮಣ ಸಿದ್ಧರಾದರು. ಅವರೇ ಅವರ ಮೂರನೆಯ ಆಚಾರ್ಯರಾಗಿದ್ದರು.

ಮತ್ತೆ ಓ ಮಹಾರಾಜ, ಆಲಾರಕಾಲಾಮರು ಅವರಿಗೆ ನಾಲ್ಕನೆಯ ಆಚಾರ್ಯರಾಗಿದ್ದರು.

ಮತ್ತೆ ಓ ಮಹಾರಾಜ, ರಾಮರ ಪುತ್ರರಾದ ಉದ್ಧಕರು (ಉದ್ಧಕರಾಮಪುತ್ರ) ಅವರು ಐದನೆಯ ಆಚಾರ್ಯರಾಗಿದ್ದರು.

ಓ ಮಹಾರಾಜ, ಇವರೇ ಆ ಐದು ಆಚಾರ್ಯರು ಭಗವಾನರು ಇನ್ನೂ ಬೋಧಿಸತ್ವರಾಗಿದ್ದಾಗ, ಇನ್ನೂ ಸಂಬೋಧಿ ಪ್ರಾಪ್ರಿ ಮಾಡದಿದ್ದಾಗ ಆಚಾರ್ಯರಾಗಿದ್ದರು. ಆದರೆ ಅವರು ಪ್ರಾಪಂಚಿಕ ಜ್ಞಾನವನ್ನು ಬೋಧಿಸಿದರು. ಆದರೆ ಯಾವ ಧಮ್ಮವು ಲೋಕೋತ್ತರವೋ ಸರ್ವಜ್ಞತ ಜ್ಞಾನವೋ ಅಂತಹ ಸಮ್ಮಾಸಂಭೋಧಿಗೆ ಯಾರೂ ಆಚಾರ್ಯರು ಇರಲಿಲ್ಲ. ಅದನ್ನು ಯಾರು ತಥಾಗತರಿಗೆ ಕಲಿಸಿಲ್ಲ. ಸ್ವ-ಅವಲಂಬಿತರಾಗಿಯೇ ಯಾವುದೇ ಆಚಾರ್ಯರಿಲ್ಲದೆ ಅದನ್ನು ಪ್ರಾಪ್ತಿ ಮಾಡಿದರು. ಆದ್ದರಿಂದಲೇ ತಥಾಗತರು ಹೀಗೆ ಹೇಳಿದ್ದಾರೆ: ಆಚಾರ್ಯಾರು ನನಗೆ ಇಲ್ಲ, ನನಗೆ ಸರಿಸಮಾನರು ಯಾರೂ ಇಲ್ಲ. ದೇವತೆಗಳ ಸಹಿತ ಇಡೀ ಲೋಕಗಳಲ್ಲಿ ನನಗೆ ಪ್ರತಿಸ್ಪಧರ್ಿ ಇಲ್ಲ.

ಬಹುಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ, ನಿಮ್ಮ ವಿವರಣೆಯನ್ನು ನಾನು ಒಪ್ಪುತ್ತೇನೆ.

ಐದನೆಯ ಸಂಧವ ವರ್ಗ ಮುಗಿಯಿತು (ಇದರಲ್ಲಿ 11 ಪ್ರಶ್ನೆಗಳಿವೆ )

ಮಿಲಿಂದ ಪನ್ಹ 4. ಸಬ್ಬನ್ಯುತಜ್ಞಾನ ವಗ್ಗೋ milinda panha sabbanyutanana vaggo

4. ಸಬ್ಬನ್ಯುತಜ್ಞಾನ ವಗ್ಗೋ


1. ಇದ್ದಿ ಕರ್ಮ ವಿಪಾಕ ಪ್ರಶ್ನೆ ಕರ್ಮ ಪರಿಣಾಮದ ಪ್ರಶ್ನೆ)



ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ: ಓ ಭಿಕ್ಖುಗಳೇ, ನನ್ನ ಶಿಷ್ಯರಲ್ಲಿ ಇದ್ದಿಬಲಗಳಲ್ಲೇ (ಅತೀಂದ್ರಿಯ ಪವಾಡ ಶಕ್ತಿ) ಶ್ರೇಷ್ಠರು, ಪ್ರಧಾನರು ಇದ್ದಾರೆಂದರೆ ಅದು ಮೊಗ್ಗಲಾನ ಮಾತ್ರವೇ. ಆದರೆ ಇನ್ನೊಂದಡೆ ಗಮನಿಸುವುದಾದರೆ ಮೊಗ್ಗಲಾನ ಅವರನ್ನು ಶಸ್ತ್ರಾಸ್ತ್ರಗಳೊಂದಿಗೆ ಸಾಯುವವರೆಗೂ ಹೊಡೆದಿದ್ದು, ಇದರಿಂದಾಗಿ ಅವರ ತಲೆಯು ಒಡೆದು, ಮೂಳೆಗಳನ್ನು ಪುಡಿಪುಡಿಯಾಗುವಂತೆ ಹೊಡೆದು, ಮಾಂಸ, ರಕ್ತ, ನರ ಮೂಳೆಗಳು ಒಂದಾಗುವಂತೆ ಹೊಡೆದಿದ್ದರು. ಭಂತೆ ನಾಗಸೇನರವರೇ, ಮಹಾಥೇರರಾದ ಮೊಗ್ಗಲಾನರು ನಿಜಕ್ಕೂ ಇದ್ದಿಬಲಶಾಲಿಗಳಲ್ಲೇ ಅಗ್ರರಾಗಿದ್ದರೆ, ಅವರನ್ನು ಸಾಯುವವರೆಗೆ ಹೊಡೆದದ್ದು ಸುಳ್ಳಾಗುತ್ತದೆ. ಆದರೆ ಅವರ ಮರಣ ಹೀಗೆಯೇ ಸಂಭವಿಸಿದ್ದರೆ, ಅವರು ಇದ್ದಿಬಲಗಳಲ್ಲೇ ಅಗ್ರರೆನ್ನುವುದು ಸುಳ್ಳಾಗುತ್ತದೆ. ಹೇಗೆತಾನೆ ಇದ್ದಿಬಲಶಾಲಿಯು ತನ್ನ ರಕ್ಷಣೆ ಮಾಡಿಕೊಳ್ಳಲಾರ. ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಪ್ರಶ್ನೆಯಾಗಿದೆ. ನಿಮಗೆ ಇದನ್ನು ಹಾಕಿದ್ದೇನೆ, ನೀವೇ ಇದನ್ನು ಪರಿಹರಿಸಬೇಕು.(123)

ಓ ಮಹಾರಾಜ, ಭಗವಾನರೇ, ಮಹಾಮೊಗ್ಗಲಾನರವರನ್ನು ಇದ್ದಿಬಲಗಳಲ್ಲಿ ಅಗ್ರರು ಎಂದು ಘೋಷಿಸಿದ್ದಾರೆ. ಅದು ಸತ್ಯವೇ ಆಗಿದೆ, ಸುಳ್ಳಾಗಲಾರದು. ಮತ್ತೆ ಅವರು ಶಸ್ತ್ರಾಸ್ತ್ರಗಳಿಂದ ಸಾಯುವ ಸ್ಥಿತಿಗೆ ಹೋಗುವಂತೆ ಹೊಡೆಯಲ್ಪಟ್ಟಿದ್ದರೆ ಅದು ಹಿಂದಿನ ಜನ್ಮದ ಪ್ರಬಲ ಕರ್ಮವಿಪಾಕವೇ ಅದಕ್ಕೆ ಕಾರಣವಾಗಿದೆ.

ಆದರೆ ಭಂತೆ ನಾಗಸೇನ, ಅವರು ಇದ್ದಿಗಳಲ್ಲಿ ಅಗ್ರರೆನ್ನುವುದು ಹಾಗೆಯೇ ಪ್ರಬಲ ಕರ್ಮವಿಪಾಕವೆನ್ನುವುದು ಇವೆರಡು ಸಹಾ ಅಚಿಂತ್ಯ (ಚಿಂತನಾತೀತ) ಎಂದೆನಿಸುವುದಿಲ್ಲವೇ? ಹಾಗು ಈ ಅಚಿಂತ್ಯವನ್ನು ಅಚಿಂತ್ಯವು ಹೊರತರಬಲ್ಲದೆ? ಹೇಗೆಂದರೆ ಸೇಬನ್ನು ಸೇಬಿನಿಂದ ಹೊಡೆದು ಬೀಳಿಸುವಂತೆ, ಮಾವನ್ನು ಮಾವಿನಿಂದ ಬೀಳಿಸುವಂತೆ. ಈ ವಿಷಯವು ಹೊರತರಲಾಗುವುದೇ?

ಓ ಮಹಾರಾಜ, ಕೆಲವು ವಿಷಯಗಳು ಕಲ್ಪನೆಗೆ ಅತೀತವಾಗಿದ್ದರೂ, ಒಂದರಿಂದ ಇನ್ನೊಂದು ಹೆಚ್ಚಾಗಿರುತ್ತವೆ. ಹೇಗೆಂದರೆ ಚಕ್ರವತರ್ಿಗಳು ನೋಡಲು ಸಾಧಾರಣ ರಾಜರಂತೆ ಇದ್ದರೂ ಸಹಾ, ಅವರು ಮಿಕ್ಕವರನ್ನು ಮೀರಿಸಿರುತ್ತಾರೆ. ತಮಗೆ ಅಧೀನರಾಗಿ ಇರುವಂತೆ ನೋಡಿಕೊಳ್ಳುತ್ತಾರೆ. ಹಾಗೆಯೇ ಕೆಲವಿಷಯವು ನಮ್ಮ ಚಿಂತನೆಗೆ, ಕಲ್ಪನೆಗೆ ಅತೀತವಾಗಿದ್ದರೂ ಸಹಾ ಅವುಗಳಲ್ಲಿ ಕರ್ಮವು, ಮಿಕ್ಕ ಎಲ್ಲಕ್ಕಿಂತ ದಾಟಿರುತ್ತದೆ. ಅದರ ಅಧೀನದಲ್ಲೇ ಮಿಕ್ಕವನ್ನು ಇಟ್ಟುಕೊಳ್ಳುತ್ತದೆ. ಯಾವಾಗ ಕರ್ಮವು ಕಾರ್ಯ ಮಾಡುತ್ತದೆಯೋ ಆಗ ಬೇರೆ ಯಾವುದೂ ಪ್ರಭಾವ ಬೀರಲಾರದು. ಇದು ಹೇಗೆಂದರೆ ನ್ಯಾಯಕ್ಕೆ ವಿರುದ್ಧವಾಗಿ ಪಾಪ ಮಾಡಿದ್ದವನೊಬ್ಬನನ್ನು ಆತನ ತಾಯಿ-ತಂದೆಯರಾಗಲಿ, ಸೋದರ-ಸೋದರಿಯರಾಗಲಿ, ಬಂಧು-ಮಿತ್ರರಾಗಲಿ, ಕಾಪಾಡಲಾರರು. ಆತನು ಕಾನೂನಿನ ಬಲೆಗೆ ಪೂರ್ಣವಾಗಿ ಸಿಕ್ಕಿಕೊಂಡಿರುತ್ತಾನೆ ಮತ್ತು ಹೀಗೇಕೆ? ಏಕೆಂದರೆ ಹಿಂದೆ ಅತನು ಮಾಡಿದ ಕೃತ್ಯವೇ ಕಾರಣ. ಆದ್ದರಿಂದಾಗಿ ಕರ್ಮದ ಪ್ರಭಾವವು ಮಿಕ್ಕೆಲ್ಲಾ ಪ್ರಭಾವಗಳನ್ನು ದಾಟುತ್ತದೆ. ಕರ್ಮದ ಪ್ರಭಾವವು ತಡೆಯಲಾಗದ ಅಂತ್ಯವನ್ನು ತರುತ್ತದೆ. ಹೇಗೆ ಕಾಡ್ಗಿಚ್ಚು ಅರಣ್ಯದಲ್ಲಿ ಹಬ್ಬಿದಾಗ ಅದನ್ನು ಸಾವಿರ ಮಡಿಕೆಗಳಷ್ಟು ನೀರಿನಿಂದಲೂ ಆರಿಸಲಾಗದೋ, ಮಹಾಗ್ನಿಯೇ ಮಹಾ ಪ್ರಭಾವ ತೋರುವುದೋ, ಹಾಗೆಯೇ ಕರ್ಮದ ಪರಿಣಾಮವು, ಎಲ್ಲಾ ಇತರ ಪ್ರಭಾವಗಳಿಂದ ದಾಟಿರುತ್ತದೆ. ಕರ್ಮದ ಪ್ರಭಾವವು ತಡೆಯಲಾಗದಂತಹುದು. ಆದ್ದರಿಂದಲೆ ಮಹಾರಾಜ, ಪೂಜ್ಯ ಮಹಾ ಮೊಗ್ಗಲಾನರವರು ಮಹಾ ಇದ್ದಿ ಸಂಪನ್ನರಾಗಿದ್ದರೂ ಸಹಾ ಅದನ್ನು ಕರ್ಮದ ಪ್ರಭಾವದಿಂದಾಗಿ ಬಳಸಲು ಸಾಧ್ಯವಾಗಲಿಲ್ಲ.

ತುಂಬಾ ಚೆನ್ನಾಗಿ ಇದರ ಬಗ್ಗೆ ವಿವರಣೆ ನೀಡಿದ್ದೀರಿ ಭಂತೆ ನಾಗಸೇನ, ನಾನು ಇದನ್ನು ಒಪ್ಪುತ್ತೇನೆ.


2. ಧಮ್ಮವಿನಯ ಪಟಿಚ್ಛನ್ನ ಪನ್ಹೋ (ಧಮ್ಮವಿನಯದ ಪ್ರದರ್ಶನದ ಪ್ರಶ್ನೆ)


ಭಂತೆ ನಾಗಸೇನ, ಭಗವಾನರಿಂದ ಹೀಗೆ ಹೇಳಲ್ಪಟ್ಟಿದೆ: ತಥಾಗತರಿಂದ ನುಡಿಯಲ್ಪಟ್ಟ ಧಮ್ಮ ಮತ್ತು ವಿನಯವು ಪ್ರದಶರ್ಿಸಲ್ಪಟ್ಟಾಗ (ಹೇಳಿದಾಗ) ಮಾತ್ರ ಪ್ರಕಾಶಿಸುವುದು, ಗುಟ್ಟಾಗಿಟ್ಟರೆ ಇಲ್ಲ. ಆದರೆ ಇನ್ನೊಂದೆಡೆ ಪಾತಿಮೊಕ್ಖದ ಪಠಣೆಯಲ್ಲಿ ಹಾಗು ಇಡೀ ವಿನಯಪಿಟಿಕವು ರಹಸ್ಯವಾಗಿಯೇ ಇಡಲಾಗಿದೆ, ಅಡಗಿಸಿಡಲಾಗಿದೆ. ಹೀಗಿರುವಾಗ ಭಂತೆ ನಾಗಸೇನ, ನೀವು ಭಗವಾನರ ಬೋಧನೆಯನ್ನು ನ್ಯಾಯವಾಗಿಯೆ, ಯೋಗ್ಯವಾಗಿಯೆ, ಶ್ರದ್ಧೆಯಿಂದ ಪಾಲನೆ ಮಾಡುವವರಾಗಿದ್ದೀರಿ. ವಿನಯ ಪಿಟಕವನ್ನು ತೆರೆದ ವಿಷಯವನ್ನಾಗಿಸಿ, ಪ್ರಕಾಶಗೊಳಿಸಿ, ಹೀಗೆ ಮುಚ್ಚುಮರೆ ಏಕೆ? ಏಕೆಂದರೆ ಎಲ್ಲಾ ಬುದ್ಧಿವಾದಗಳು ಅದರಲ್ಲಿವೆ. ಶೀಲ, ಸಂಯಮ, ವಿಧೇಯತೆ, ನಿಯಮಗಳು, ಇವೆಲ್ಲಾ ಸತ್ಯದ ಸಾರಗಳಾಗಿವೆ ಹಾಗು ಚಿತ್ತವಿಶುದ್ಧಿ ನೀಡುವಂತಹದ್ದಾಗಿದೆ. ಆದರೆ ಭಗವಾನರು ಧಮ್ಮ, ವಿನಯವನ್ನು ತೆರೆದಿಡಿ ಆಗಲೇ ಅವು ಪ್ರಕಾಶಿಸುತ್ತವೆ ಎಂದು ಹೇಳಿರುವುದು ನಿಜವೇ ಆಗಿದ್ದರೆ, ಪಾತಿಮೊಕ್ಖದ ಪಠಣೆ ಮತ್ತು ಇಡೀ ವಿನಯಪಿಟಕದ ರಹಸ್ಯತೆಯು ಸುಳ್ಳಾಗುತ್ತದೆ. ಆದರೆ ಈ ರಹಸ್ಯತೆಯು ಸರಿ ಎಂದಾದ ಪಕ್ಷದಲ್ಲಿ ಭಗವಾನರ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಪೇಚಿನ ಪ್ರಶ್ನೆಯಾಗಿದೆ, ನಿಮಗೆ ಹಾಕಿದ್ದೇನೆ, ಬಿಡಿಸಿ. (124)

ಓ ಮಹಾರಾಜ, ಭಗವಾನರು ಧಮ್ಮ ವಿನಯಗಳನ್ನು ಪ್ರಕಟಪಡಿಸಬೇಕು, ಆಗಲೇ ಅವು ಪ್ರಕಾಶಿಸುವದು, ಅದವನ್ನು ರಹಸ್ಯವಾಗಿಟ್ಟರೆ ಪ್ರಕಾಶಿಸುವುದಿಲ್ಲ ಎಂದು ಹೇಳಿರುವುದು ಸತ್ಯವೇ ಆಗಿದೆ. ಆದರೆ ಮತ್ತೊಂದೆಡೆ ಪಾತಿಮೊಕ್ಖದ ಪಠನೆ ಹಾಗು ಇಡೀ ವಿನಯಪಿಟಕವು ಗೃಹಸ್ಥರಿಂದ ರಹಸ್ಯವಾಗಿಡಲಾಗಿದೆ. ಏಕೆಂದರೆ ಅದರಿಂದಾಗಿ ಗೃಹಸ್ಥರಿಗೆ ಅಂತಹ ಪ್ರಯೋಜನ ಏನೂ ಇಲ್ಲ. ಅದು ಎಲ್ಲರಿಗಾಗಿ ಅಲ್ಲ, ಅದು ಭಿಕ್ಖುಗಳಿಗಾಗಿ. ಅವರಿಗಾಗಿ ಅದು ತೆರೆದೇ ಇದೆ. ಈ ರಹಸ್ಯತೆಗೆ ಸ್ವಲ್ಪವೇ ಮಿತಿಯಿದೆ ಮತ್ತು ಪಾತಿಮೋಕ್ಖದ ಪಠನೆಯನ್ನು ಮೂರು ಕಾರಣಗಳಿಂದಾಗಿ ಕೆಲಹಂತದವರೆಗೆ ರಹಸ್ಯವಾಗಿ ಇಡಲಾಗಿದೆ. ಅವೆಂದರೆ: ಒಂದನೆಯ ಕಾರಣವೇನೆಂದರೆ ಅದು ಹಿಂದಿನ ತಥಾಗತರಿಂದ ಬಂದ ಸಂಪ್ರದಾಯವಾಗಿದೆ. ಎರಡನೆಯದು ಧಮ್ಮದ ಗೌರವಕ್ಕಾಗಿ ಮತ್ತು ಮೂರನೆಯ ಕಾರಣವೇನೆಂದರೆ ಸಂಘದ ಸದಸ್ಯರ ಮೇಲಿನ ಗೌರವಕ್ಕಾಗಿ ಹೀಗೆ ಮಾಡಲಾಗಿದೆ.

ಓ ಮಹಾರಾಜ, ಮೊದಲನೆಯದು ಸಾರ್ವತ್ರಿಕ ಸಂಪ್ರದಾಯವಾಗಿದೆ. ಹಿಂದಿನ ಬುದ್ಧರೆಲ್ಲಾ ಪಾತಿಮೋಕ್ಖವನ್ನು ಸಂಘದ ಮಧ್ಯದಲ್ಲೇ ಪಠಿಸುತ್ತಿದ್ದರು. ಅಲ್ಲಿ ಪರರ ಪ್ರವೇಶ ನಿಷಿದ್ಧವಾಗಿತ್ತು. ಓ ರಾಜ, ಹೇಗೆಂದರೆ ಕ್ಷತ್ರಿಯ ಕುಲಗಳಲ್ಲಿ ಕ್ಷತ್ರಿಯ ಮಧ್ಯೆಯೇ ಅವರಲ್ಲಿಯೇ ಕ್ಷಾತ್ರವಿದ್ಯೆ ಹರಿಯುವಂತೆ, ಅವರಲ್ಲಿಯೇ ರಹಸ್ಯವಿನಿಯವು ಸಂಪ್ರದಾಯ ಹರಿಯುವಂತೆ, ಹಿಂದಿನ ಬುದ್ಧರಿಂದ ಬಂದ ಸಂಪ್ರದಾಯದಂತೆ ಪಾತಿಮೋಕ್ಖವನ್ನು ಬಿಕ್ಖುಗಳ ಮಧ್ಯೆಯೇ ಪಠಿಸುತ್ತಾರೆ. ಅವರಲ್ಲಿಯೇ ರಹಸ್ಯ ಹಂಚುತ್ತಾರೆ, ಪರರೊಂದಿಗೆ ಅಲ್ಲ. ಮತ್ತೆ ಓ ರಾಜ ಜನರಲ್ಲಿ ಕೆಲ ಪಂಗಡಗಳಿವೆ. ಅವರು ತಮ್ಮ ವರ್ಗದ ಜನರಲ್ಲಿ ಮಾತ್ರ ತಮ್ಮಲ್ಲಿ ಮಾತ್ರ ರಹಸ್ಯ ಹಂಚಿಕೊಳ್ಳುತ್ತಾರೆ, ಪರರೊಂದಿಗೆ ಅಲ್ಲ. ಅವರೆಂದರೆ: ಜಟ್ಟಿಗಳು, ದೊಂಬರಾಟದವರು, ಗಾರುಡಿಗರು, ನಟರು, ನರ್ತಕರು, ಸೂರ್ಯಚಂದ್ರ ಆರಾಧಕರು, ರಹಸ್ಯಪಂಥಿಯರು, ರಹಸ್ಯ ಪೂಜಕರು, ಪಿಸಾಚಪಂತಿಯರು, ಮಣಿಬದ್ರ, ಪುಣ್ಣಭದ್ರ, ಸಿರಿದೇವತಾ, ರಾಶಿದೇವತಾ, ಸಿವಾ (ಶಿವ), ವಸುದೇವ, ಧನಿಕಾ, ಆಸಿಪಾನ, ಭದ್ದಿಪುತ್ರ ಇತರರು ತಮ್ಮ ರಹಸ್ಯಗಳನ್ನು ಇತರರಿಗೆ ಹೇಳುವುದಿಲ್ಲ. ತಮ್ಮಲ್ಲೇ ಹಂಚಿಕೊಳ್ಳುತ್ತಾರೆ. ಅದರಂತೆಯೇ ತಥಾಗತರು ಸಹಾ ಹಿಂದಿನ ಬುದ್ಧ ಸಂಪ್ರದಾಯದಂತೆ ಕೇವಲ ಸಂಘದ ಮಧ್ಯೆಯೇ ಪಾತಿಮೊಕ್ಖ ಪಠಿಸುತ್ತಾರೆ. ಇದು ಹಿಂದಿನ ತಥಾಗತರ ಸಂಪ್ರದಾಯಕ್ಕೆ ಅನುಸಾರವಾಗಿದೆ.

ಮತ್ತೆ ಧಮ್ಮಕ್ಕೆ ಗೌರವಿಸುವಂತೆ ಹೇಗೆ ಪಾತಿಮೋಕ್ಖವನ್ನು ಪಠಿಸುತ್ತಾರೆ? ಓ ಮಹಾರಾಜ, ಧಮ್ಮವು ಅತ್ಯಂತ ಪೂಜ್ಯಾರ್ಹವು ಹಾಗು ಘನವಾದುದು. ಯಾರು ಶ್ರೇಷ್ಠವಾದುದನ್ನು ಪ್ರಾಪ್ತಿ ಮಾಡಿರುವನೋ ಆತನು ಪರರಿಗೆ ಹೀಗೆ ಬುದ್ಧಿವಾದ ನೀಡಬಹುದು. ಹೇಗೆಂದರೆ : ಈ ಧಮ್ಮವು ಪೂರ್ಣಸತ್ಯದಿಂದ ಇರದಿದ್ದರೆ, ಮಹಾ ಶ್ರೇಷ್ಠರು ಅಲ್ಲದಿದ್ದರೆ, ಇದು ಅಕುಶಲದ, ಅಪಾರಂಗತರ ಕೈಗೆ ಬಿದ್ದು ಬಿಡುತ್ತಿತ್ತು. ನಂತರ ಕೀಳಾಗಿ ಕಾಣಲ್ಪಡುತ್ತಿತ್ತು, ನಿಂದಿಸಲ್ಪಡುತ್ತಿತ್ತು, ಲಜ್ಜೆಗೀಡಾಗುತ್ತಿತ್ತು, ಆಟವಾಗುತ್ತಿತ್ತು, ತಪ್ಪಾಗಿ ಪ್ರತಿಪಾದಿಸಲ್ಪಡುತ್ತಿತ್ತು. ಅಥವಾ ವಂಚಕರ ಕೈಗೆ ಸಿಲುಕಿ ಎಲ್ಲಾರೀತಿಯಲ್ಲಿಯೂ ಕೆಟ್ಟದಾಗಿ ವ್ಯವಹರಿಸಲ್ಪಡುತ್ತಿತ್ತು. ಆದ್ದರಿಂದ ಓ ಮಹಾರಾಜನೆ, ಪಾತಿಮೋಕ್ಖದ ಪಠಣೆಯು ಭಿಕ್ಖುಗಳಲ್ಲಿ ಮಾತ್ರ ನಡೆಯುತ್ತದೆ. ಏಕೆಂದರೆ ಧಮ್ಮವನ್ನು ಗೌರವಿಸುವುದಕ್ಕಾಗಿ, ಇಲ್ಲದಿದ್ದರೆ ಸಾವಕ ನಗರದಲ್ಲಿ ಕೆಂಪು ಶ್ರೀಗಂಧವು ಶ್ರೇಷ್ಠವಾಗಿದ್ದರೂ, ಮೌಲ್ಯಾಯುತ ವಾಗಿದ್ದರೂ ಕೀಳಾಗಿ, ನಿಂದನಿಯವಾಗಿ, ಲಜ್ಞೆಗೀಡಾಗುವಂತೆ, ಆಟದಂತೆ ವ್ಯವಹರಿಸುವಂತೆ ಆಗಿಹೋಗುತ್ತದೆ.

ಮತ್ತೆ ಹೇಗೆ ಪಾತಿಮೋಕ್ಖವು ಸಂಘದ ಸದಸ್ಯರ ಗೌರವಾರ್ಥಕವಾಗಿ, ರಹಸ್ಯವಾಗಿ, ಪಠಿಸುತ್ತಾರೆ? ಓ ಮಹಾರಾಜ, ಭಿಕ್ಖುವಿನ ಸ್ಥಿತಿಯು, ಭವ್ಯತೆಯು, ಯಾವುದೇ ಲೆಕ್ಕಾಚಾರಕ್ಕೆ ಅತೀತವಾಗಿದೆ. ಯಾವುದೇ ಅಳತೆಗೆ ಅತೀತವಾಗಿದೆ ಅಥವಾ ಯಾವುದೇ ಬೆಲೆಗೆ ಅತೀತವಾಗಿದೆ. ಯಾರು ಅವರನ್ನು ಮೌಲ್ಯ ಮಾಡಲಾರರು, ತೂಗಿಸಲಾರರು, ಅಳೆಯಲಾರರು ಮತ್ತು ಪಾತಿಮೋಕ್ಖವನ್ನು ಭಿಕ್ಖುಗಳ ನಡುವೆಯಲ್ಲಿ ಮಾತ್ರ ಪಠಿಸುವರು. ಇಲ್ಲದೇ ಹೋದರೆ ಸಾಧಾರಣ ವ್ಯಕ್ತಿ ಆ ಸ್ಥಿತಿಗೆ ಹೋದರೆ ಆತನು ಪ್ರಾಪಂಚಿಕರ ಕೆಳಹಂತಕ್ಕೆ ಅದು ತಂದುಬಿಡುತ್ತಾನೆ. ಓ ರಾಜ, ಇದು ಹೇಗೆಂದರೆ ಯಾವುದೇ ಅತ್ಯಮೂಲ್ಯ ವಸ್ತುವಾಗಲಿ, ವಸ್ತ್ರವಾಗಲಿ, ರತ್ನಗಂಬಳಿಯಾಗಲಿ, ಗಜವಾಗಲಿ, ಅಶ್ವವಾಗಲಿ, ಚಿನ್ನವಾಗಲಿ, ಬೆಳ್ಳಿಯಾಗಲಿ ಅಥವಾ ರತ್ನವಾಗಲಿ, ಮುತ್ತಾಗಲಿ, ಸ್ತ್ರೀಯಾಗಲಿ, ಪಾನಿಯವಾಗಲಿ, ಅಂತಹ ವಸ್ತುವಿಶೇಷಗಳೆಲ್ಲಾ ರಾಜನಿಗೆ ಮೀಸಲಾಗಿರುತ್ತದೆ. ಹಾಗೆಯೇ ಯಾವೆಲ್ಲಾ ಅತ್ಯಮೂಲ್ಯ ಶಿಕ್ಷಣವಾಗಲಿ, ಬುದ್ಧ ಸಂಪ್ರದಾಯವಾಗಲಿ, ಕಲಿಕೆಯಾಗಲಿ, ಚಾರಿತ್ರ್ಯವಾಗಲಿ, ಸದ್ಗುಣಗಳಾಗಲಿ, ಸಂಯಮವಾಗಲಿ, ಇವೆಲ್ಲಾ ಸಂಘಕ್ಕೆ ಮೀಸಲಾಗಿದೆ. ಆದ್ದರಿಂದಾಗಿಯೇ ಪಾತಿಮೋಕ್ಖವನ್ನು ರಹಸ್ಯವಾಗಿ ನಡೆಸಲಾಗುತ್ತದೆ.

ತುಂಬಾ ಚೆನ್ನಾಗಿ ವಿವರಿಸಿದಿರಿ ನಾಗಸೇನಾ! ಇದು ಹೀಗಿರುವುದರಿಂದಾಗಿ ನೀವು ಹೇಳಿದ್ದನ್ನು ನಾನು ಒಪ್ಪುವೆ.

3. ಮುಸುವಾದ ಗರೂಲಹುಬಾವ ಪನ್ಹೊ (ಸುಳ್ಳಿನ ಬಗ್ಗೆ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ, ಏನೆಂದರೆ ಇಚ್ಛಾಪೂರ್ವಕ ಸುಳ್ಳು ಪಾಚಿತ್ತಿಯಾ (ದೊಡ್ಡ) ತಪ್ಪಾಗುತ್ತದೆ. ಆದರೆ ಮತ್ತೆ ಅವರು ಹೀಗೂ ಹೇಳಿದ್ದಾರೆ: ಭಿಕ್ಷುವು ಇಚ್ಛಾಪೂರ್ವಕ ಸುಳ್ಳು ಹೇಳಿದರೂ ಆತನು ಸಂಘದ ಭಿಕ್ಷುಗಳೊಂದಿಗೆ ಅದನ್ನೊಪ್ಪಿ ಸಂಯಮ ತಾಳಿದರೆ ಅದು ಚಿಕ್ಕ ತಪ್ಪಾಗುತ್ತದೆ. ಈಗ ಹೇಳಿ ಭಂತೆ ನಾಗಸೇನ, ಇಲ್ಲಿ ಯಾವ ಭಿನ್ನತೆಯಿದೆ, ಯಾವ ಕಾರಣದಿಂದಾಗಿ ಇಲ್ಲಿ ಭಿಕ್ಖು ಸುಳ್ಳು ಹೇಳಿದರೆ ಅವನಿಗೆ ಸಂಘದಿಂದ ಹೊರಹಾಕಲಾಗುತ್ತದೆ. ಆದರೆ ಮತ್ತೊಂದೆಡೆ ಆತನು ಸುಳ್ಳು ಹೇಳಿದರೂ ಪ್ರಾಯಶ್ಚಿತ್ತದ ಪರಿಹಾರವಿದೆ. ಇಲ್ಲಿ ಮೊದಲ ನಿಧರ್ಾರ ಸರಿಯಾಗಿದ್ದರೆ, ಎರಡನೆಯದು ತಪ್ಪಾಗುತ್ತದೆ, ಆದರೆ ಎರಡನೆಯದು ಸರಿಯಾಗಿದ್ದರೆ, ಮೊದಲನೆಯದು ತಪ್ಪಾಗುತ್ತದೆ. ಇದು ಸಹಾ ದ್ವಿ-ಅಂಚಿನ ಪೇಚಿನ ಸಮಸ್ಯೆಯಾಗಿದೆ. ಇದನ್ನು ನಿಮಗೆ ಹಾಕುತ್ತಿದ್ದೇನೆ ಮತ್ತು ನೀವೇ ಇದನ್ನು ಪರಿಹರಿಸಬೇಕು. (125)

ಓ ಮಹಾರಾಜ, ನೀವು ಹೇಳಿದಂತಹ ಎರಡು ಹೇಳಿಕೆಗಳು ಸರಿಯಾಗಿಯೇ ಇವೆ. ಆದರೆ ಸುಳ್ಳು ಎನ್ನುವುದು ಹಗುರವಾದ ಅಥವಾ ಭಾರವಾದ ತಪ್ಪು ಎನ್ನುವುದು ವಸ್ತು ವಿಷಯದ ಮೇಲೆ ಅವಲಂಬಿತವಾಗುತ್ತದೆ. ಇದರ ಬಗ್ಗೆ ನೀವು ಏನು ಯೋಚಿಸುವಿರಿ ಮಹಾರಾಜ? ಒಬ್ಬನು ಮತ್ತೊಬ್ಬನಿಗೆ ಕೆನ್ನೆಗೆ ಹೊಡೆದರೆ ನೀವು ಯಾವ ಶಿಕ್ಷೆಯನ್ನು ಆತನಿಗೆ ನೀಡುವಿರಿ?

ಮತ್ತೊಬ್ಬನು ಉದಾಸೀನ ಮಾಡಿದಿದ್ದಾಗ, ಆತನಿಗೆ ಕ್ಷಮಿಸದೆ ಸ್ವಲ್ಪ ಹಣ ನೀಡುವಂತೆ ದಂಡ ಹಾಕುವೆವು.

ಮಹಾರಾಜ ಊಹಿಸಿ, ಆ ವ್ಯಕ್ತಿಯು ನಿಮಗೆ ಆ ಹೊಡೆತ ನೀಡಿದಾಗ ಆತನಿಗೆ ಯಾವ ಶಿಕ್ಷೆ ವಿಧಿಸುವಿರಿ?

ಆತನ ಕೈಗಳನ್ನು ಕತ್ತರಿಸುವೆವು, ಚರ್ಮ ಸುಲಿಯುವೆವು, ಮನೆಯನ್ನು ಮುಟ್ಟುಗೋಲು ಹಾಕಿ, ಆತನ ಮನೆಯವರ ಏಳು ತಲೆಮಾರಿನತನಕ ಮರಣ ಶಿಕ್ಷೆ ವಿಧಿಸುವೆವು.

ಓ ಮಹಾರಾಜ, ಈ ಭಿನ್ನತೆಯೇಕೆ? ಒಬ್ಬನಿಗೆ ಹೊಡೆದಾಗ ಪುಡಿಗಾಸು ನೀಡುವಂತೆ ಜುಲ್ಮಾನೆ, ನಿಮಗೆ ಹೊಡೆದಾಗ ಈ ಭೀಕರ ಶಿಕ್ಷೆಯೇಕೆ?

ಏಕೆಂದರೆ ಅದು ವ್ಯಕ್ತಿಗಳನ್ನು ಅವಲಂಬಿಸುತ್ತದೆ.

ಇದು ಸಹಾ ಹಾಗೆಯೇ ಮಹಾರಾಜ, ಸುಳ್ಳು ಹೇಳುವುದು ಹಗುರವಾದ ಅಥವಾ ಭಾರವಾದ ಪಾಪ ಎನ್ನುವುದು ವಸ್ತು ವಿಷಯದ ಮೇಲೆ, ಪರಿಸ್ಥಿತಿಯ ಮೇಲೆ ನಿರ್ಧರಿಸುತ್ತದೆ.

ಒಳ್ಳೆಯದು ನಾಗಸೇನ, ಇದು ಹೀಗೆಯೇ ಇದೆ, ನೀವು ಹೇಳಿದ್ದನ್ನು ನಾನು ಒಪ್ಪುವೆ.

4. ಬೋಧಿಸತ್ತ ಧಮ್ಮತಾ ಪನ್ಹೊ (ಬೋಧಿಸತ್ವರ ಧಮ್ಮದ ಬಗೆಗಿನ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಧಮ್ಮತಾ-ಧಮ್ಮ ಪರಿಯಾಯೆ (ಸಾರವಾದ ಸ್ಥಿತಿಗಳ) ಬಗ್ಗೆ ಹೀಗೆ ಪ್ರವಚನ ನೀಡಿದ್ದರು: ಬಹಳ ಕಾಲದ ಹಿಂದೆಯೇ ಪ್ರತಿ ಬೋಧಿಸತ್ವರ ತಂದೆ-ತಾಯಿಗಳು ನಿಗಧಿತಪಟ್ಟಿರುತ್ತಾರೆ, ಅವರೇ ಹಿಂದೆಯೇ ಯಾವ ಬೋಧಿವೃಕ್ಷ ಬೇಕು ಎಂದು ಆರಿಸಿರುತ್ತಾರೆ. ಹಾಗೆಯೇ ಪ್ರಧಾನ ಭಿಕ್ಖುಗಳು, ಪುತ್ರ, ಸಂಘದ ಸದಸ್ಯರಲ್ಲಿ ವಿಶೇಷ ಪರಿಚಾರಕ ಅನುಪರ, ಇವರೆಲ್ಲರೂ ಹಿಂದೆಯೇ ಖಚಿತಪಟ್ಟಿರುತ್ತಾರೆ. ಆದರೆ ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಬೋಧಿಸತ್ವರು ತುಸಿತಾ ದೇವಲೋಕದಲ್ಲಿ ಇದ್ದಾಗ ಎಂಟು ಮಹಾ ಅನ್ವೇಷಣೆಗಳನ್ನು ಕೈಗೊಳ್ಳುತ್ತಾರೆ. ಅದೆಂದರೆ, ಕಾಲದ ಅನ್ವೇಷಣೆ (ಮಾನವನಾಗಿ ಜನಿಸಲು ಯೋಗ್ಯಕಾಲ), ಖಂಡದ (ಸ್ಥಳದ) ಅನ್ವೇಷಣೆ, ವಂಶದ ಅನ್ವೇಷಣೆ, (ಜನ್ಮಿಸಲು ಯೋಗ್ಯ ಕುಲ), ತಾಯಿಯ ಅನ್ವೇಷಣೆ (ಜನ್ಮಿಸಲು ಯೋಗ್ಯ ತಾಯಿ), ಗಭರ್ಾವಸ್ಥೆಯಲ್ಲಿ ಉಳಿಯುವ ಕಾಲದ ನಿಧರ್ಾರ, ಹೊರಬರುವ ಮಾಸದ ನಿಧರ್ಾರ ಮತ್ತು ಮಹಾ ಅಭಿನಿಷ್ಕ್ರಮಣದ ಕಾಲದ ನಿಧರ್ಾರ. ಈಗ ಭಂತೆ ನಾಗಸೇನ, ಜ್ಞಾನವು ಪಕ್ವವಾಗುವ ಮುನ್ನ ಅರಿಯುವಿಕೆಯಿಲ್ಲ, ಆದರೆ ಯಾವಾಗ ಜ್ಞಾನ ಶಿಖರವೇರುವೆವೋ ಆ ವಿಷಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಏಕೆಂದರೆ ಸರ್ವಜ್ಞತಾ ದೃಷ್ಟಿ ವೈಶಾಲ್ಯತೆಗೆ ಹೊರತಾದುದು ಯಾವುದು ಇಲ್ಲ. ಹಾಗಿರುವಾಗ ಬೋಧಿಸತ್ವರು ಏಕೆ ಹೀಗೆ ಕಾಲದ ನಿರ್ಣಯ ಮಾಡಬೇಕು: ಯಾವಾಗ ಜನ್ಮಿಸಲಿ? ಆದೇರೀತಿಯಲ್ಲಿ ಏಕೆ ಅವರು ಕುಲದ ಬಗ್ಗೆ ಹೀಗೆ ಚಿಂತಿಸಬೇಕು: ಯಾವ ಕುಲದಲ್ಲಿ ನಾನು ಜನ್ಮಿಸಲಿ? ನಾಗಸೇನರವರೇ ಬೋಧಿಸತ್ವರ ತಂದೆ-ತಾಯಿಗಳು ಮೊದಲೇ ನಿಗದಿತಪಟ್ಟಿದ್ದರೆ, ಹೀಗೆ ಅವರು ತಂದೆ-ತಾಯಿಗಳ ಅನ್ವೇಷಣೆ ಮಾಡಬೇಕಿಲ್ಲ. ಹೀಗಾಗಿ ಇಲ್ಲಿ ಮೊದಲ ಹೇಳಿಕೆ ಸತ್ಯವಾಗಿದ್ದರೆ ಎರಡನೆಯ ಹೇಳಿಕೆ ಸುಳ್ಳಾಗುತ್ತದೆ. ಇಲ್ಲವೇ ಎರಡನೆಯ ಹೇಳಿಕೆ ಸತ್ಯವಾಗಿದ್ದರೆ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ದ್ವಿ-ಅಂಚಿನ ಪೇಚಿನ ಸಮಸ್ಯೆಯಾಗಿದೆ, ನಿಮಗೆ ಹಾಕುತ್ತಿದ್ದೇನೆ ಬಿಡಿಸಿ. (126)

ಓ ಮಹಾರಾಜ, ಇವೆರಡು ನೆಲೆಗೊಂಡ ವಿಷಯಗಳಾಗಿವೆ? ಯಾರು ಬೋಧಿಸತ್ವರ ತಂದೆ-ತಾಯಿಗಳು, ಯಾವ ಕುಲದಲ್ಲಿ ತಾನು ಹುಟ್ಟಬೇಕು? ಆದರೆ ಇದನ್ನು ಹೇಗೆ ಅವರು ಕಂಡುಹಿಡಿದರು? ಬೋಧಿಸತ್ವರು ಇದರ ಬಗ್ಗೆ ಗಮನಿಸುತ್ತಾರೆ. ತನ್ನ ತಾಯ್ತಂದೆಯರು ಕ್ಷತ್ರಿಯರೆ ಅಥವಾ ಬ್ರಾಹ್ಮಣರೇ? ಎಂಟು ವಿಷಯಗಳಿಗೆ ಅನುಗುಣವಾಗಿ ಈ ಅನ್ವೇಷಣೆ ನಡೆಯುವುದು. ಓ ಮಹಾರಾಜ, ಒಬ್ಬ ವರ್ತಕನು ತಾನು ಕೊಳ್ಳಲಿರುವ ವಸ್ತುಗಳನ್ನು ಪರೀಕ್ಷಿಸುತ್ತಾನೆ. ಅಥವಾ ಒಂದು ಆನೆಯು ತಾನು ಹೋಗಲಿರುವ ದಾರಿಯನ್ನು ಸೊಂಡಿಲಿನಿಂದ ಪರೀಕ್ಷಿಸುತ್ತದೆ ಅಥವಾ ಒಬ್ಬ ಬಂಡಿಗಾರನು ತಾನು ದಾಟುವ ಹೊಳೆಯನ್ನು ಮೊದಲು ಇಳಿದು ಪರೀಕ್ಷಿಸಿ ನಂತರ ಹೋಗುತ್ತಾನೆ. ಹಾಗೆಯೇ ನಾವಿಕನು ದಡವನ್ನು ದೂರದಿಂದಲೇ ಪರೀಕ್ಷಿಸಿ ನಂತರ ಎಲ್ಲರಿಗೂ ಇಳಿಯುವಂತೆ ಸೂಚಿಸಿ ದಡಕ್ಕೆ ಹಡಗನ್ನು ಸಾಗಿಸುತ್ತಾನೆ. ಅಥವಾ ಹಾಗೆಯೇ ವೈದ್ಯನು ರೋಗಿಯನ್ನು ಆರೈಕೆ ಮಾಡುವ ಮುನ್ನ ಆತನು ಎಷ್ಟುಕಾಲ ಜೀವದಿಂದಿರಬಲ್ಲ ಎಂದು ಅಂದಾಜು ಮಾಡುತ್ತಾನೆ ಅಥವಾ ದಾರಿಹೋಕನು ತಾನು ದಾಟುವ ಬಿದಿರಿನ ಶಕ್ತಿಯನ್ನು ಪರೀಕ್ಷಿಸುತ್ತಾನೆ. ಹಾಗೆಯೇ ಭಿಕ್ಷುವು ತನ್ನ ಆಹಾರಕ್ಕಾಗಿ ಎಷ್ಟು ದೂರ ನಡೆಯಬೇಕೆಂದು ಅಂದಾಜು ಮಾಡುತ್ತಾನೆ. ಅದೇರೀತಿಯಲ್ಲಿಯೇ ಬೋಧಿಸತ್ವರು ಸಹಾ ಯಾವಾಗ, ಯಾವ ಕುಲದಲ್ಲಿ ಜನಿಸಬೇಕೆಂದು ಪರೀಕ್ಷಿಸುತ್ತಾರೆ. ಇವೇ ಕಾರ್ಯ ಪೂರ್ವದಲ್ಲಿ ಅನ್ವೇಷಿಸತಕ್ಕ ಎಂಟು ಸಂದರ್ಭಗಳಾಗಿವೆ.
ತುಂಬಾ ಒಳ್ಳೆಯದು ಭಂತೆ ನಾಗಸೇನ, ಅದು ಹೀಗಿರುವುದರಿಂದ ನೀವು ಹೇಳಿದ್ದನ್ನು ನಾನು ಒಪ್ಪುವೆ.

5. ಅತ್ತನಿಪಾತನ ಪನ್ಹೊ (ಸ್ವ-ಹತ್ಯೆಯ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ಓ ಭಿಕ್ಷುಗಳೇ, ಯಾರು ಸಹಾ ಸ್ವ-ಹತ್ಯೆ ಮಾಡಿಕೊಳ್ಳಬಾರದು. ಯಾರಾದರೂ ಹಾಗೆ ಪ್ರಯತ್ನಿಸಿದರೆ, ಅವರು ನಿಯಮದಂತೆ ವ್ಯವಹರಿಸಬೇಕಾಗುವುದು. ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಭಗವಾನರು ಯಾವುದೆಲ್ಲಾ ವಿಷಯಗಳ ಬಗ್ಗೆ ಹೇಳಲಿ, ಹಲವಾರು ಉಪಮೆಗಳ ಮೂಲಕ ಸದಾ ಜನ್ಮ, ಜರಾ, ಚರೆ, ಮೃತ್ಯಗಳ ನಾಶದ ಬಗ್ಗೆಯೇ ಹೇಳುತ್ತಾರೆ ಮತ್ತು ಯಾರು ಜನ್ಮ, ಜರಾ, ಚರೆ, ಮೃತ್ಯುವನ್ನು ದಾಟಿರುವನೋ ಆತನು ಅತ್ಯಂತ ಶ್ರೇಷ್ಠಿತಮನಾಗಿ ಶ್ಲಾಘಿಸಲ್ಪಡುತ್ತಾನೆ. ಈಗ ಹೇಳಿ ಇಲ್ಲಿ ಭಗವಾನರು ಸ್ವ-ಹತ್ಯೆಯು ತಪ್ಪೆಂದು ಹೇಳಿ ನಿಷಿದ್ಧಗೊಳಿಸಿದ್ದಾರೆ, ಆದರೆ ಹೀಗಿಲ್ಲದಿದ್ದರೆ ಸ್ವ-ಹತ್ಯೆಯ ನಿಷೇಧ ತಪ್ಪಾಗುತ್ತದೆ. ಇದು ಸಹಾ ದ್ವಿ-ಅಂಚಿನ ಸಮಸ್ಯೆಯಾಗಿದೆ, ನಿಮಗೆ ಹಾಕಿದ್ದೇನೆ, ಬಿಡಿಸಿ. (127)

ಓ ಮಹಾರಾಜ, ಭಗವಾನರಿಂದ ನಿಯಮಿಸಲ್ಪಟ್ಟ ನಿಯಮ ಸರಿಯಾಗಿಯೇ ಇದೆ. ಹಾಗೆಯೇ ಜನ್ಮ-ಮರಣದಿಂದ ದಾಟಲಿ ಎಂದು ಹೇಳಿರುವುದು ಸರಿಯಾಗಿಯೇ ಇದೆ. ಇವೆರಡಕ್ಕೂ ಕಾರಣವಿದೆ.

ಭಂತೆ ನಾಗಸೇನ, ಇದಕ್ಕೆ ಕಾರಣವೇನು?

ಓ ಮಹಾರಾಜ, ಶೀಲವಂತನು, ಶೀಲಸಂಪನ್ನನು ಮಾನವರಿಗೆ ಔಷಧಿಯ ರೀತಿಯಾಗಿದ್ದಾನೆ. ಪಾಪವಿಷಕ್ಕೆ ಪ್ರತ್ಯೌಷಧವಾಗಿದ್ದಾನೆ. ಧೂಳಿನಲ್ಲಿ ಬಿದ್ದವರಿಗೆ ನೀರಿನಂತಿದ್ದಾನೆ, ಪಾಪಶುದ್ಧಕನಾಗಿದ್ದಾನೆ, ಸರ್ವಸಂಪತ್ತು ನೀಡುವ ಮಣಿರತನವಾಗಿದ್ದಾನೆ ಮತ್ತು ಪ್ರವಾಹದಿಂದ ದಾಟಿಸುವ ನಾವಿಕನಾಗಿದ್ದಾನೆ, ಮರುಭೂಮಿಯಿಂದ ಪಾರಾಗಿಸುವ ಮಾರ್ಗದಶರ್ಿಯಾಗಿದ್ದಾನೆ, ಜನರ ಹೃದಯಕ್ಕೆ ತೃಪ್ತಿನೀಡುವ ಮಹಾಮಳೆ ಮೋಡವಾಗಿದ್ದಾನೆ, ಸಕಲ ಒಳಿತು ನೀಡುವ ಗುರುವಾಗಿದ್ದಾನೆ, ಶಾಂತಿಪಥ ತೋರಿಸುವ ಮಾರ್ಗದಶರ್ಿಯಾಗಿದ್ದಾನೆ. ಹೀಗೆ ಸಂಘದಲ್ಲಿ ಬಹುಗುಣಗಳಿಂದ, ಅನೇಕ ಗುಣಗಳಿಂದ ಅಪ್ರಮಾಣ ಗುಣಗಳಿಂದ ಗುಣರಾಶಿ, ಗುಣಪುಂಜ, ಗುಣನಿಧಿಯು ಆಗಿರುವನು. ಹೀಗಾಗಿ ಆತನು ಬಹುಜನರ ಹಿತಸುಖಕ್ಕಾಗಿ ಹಾಗೆ ಮಾಡಿಕೊಳ್ಳಬಾರದು. ಆದ್ದರಿಂದ ಓ ರಾಜ, ಸರ್ವಜನ ಹಿತಕ್ಕಾಗಿಯೇ ಭಗವಾನರು ಹೀಗೆ ಹೇಳಿರುವರು.

ಓ ಭಿಕ್ಷುಗಳೆ, ಸೋದರನು ಸ್ವ-ಹತ್ಯೆ ಮಾಡಿಕೊಳ್ಳಬಾರದು. ಹಾಗೆ ಯಾರಾದರೂ ಮಾಡಿದರೆ, ನಿಯಮದಂತೆ ವ್ಯವಹರಿಸಬೇಕಾಗುವುದು.


ಇದರಿಂದಾಗಿ ಭಗವಾನರು ಸ್ವಹತ್ಯೆಯನ್ನು ನಿಷೇಧಿಸಿದರು ಮತ್ತು ಓ ಮಹಾರಾಜ, ಥೇರ ಕುಮಾರ ಕಸ್ಸಪರವರು ಪಾಯಾಸಿ ರಾಜನ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ: ಎಲ್ಲಿಯವರೆಗೆ ಸಮಣ ಬ್ರಾಹ್ಮಣರು ಶೀಲವಂತರಾಗಿ, ಕಲ್ಯಾಣಧಮ್ಮವನ್ನು ಚಿರಕಾಲ, ದೀರ್ಘವಾಗಿ ಆಚರಿಸುವರೋ ಅಲ್ಲಿಯವರೆಗೆ ಅವರು ಬಹುಜನಹಿತಕ್ಕಾಗಿ, ಬಹುಜನ ಸುಖಕ್ಕಾಗಿ ಲೋಕಾನುಕಂಪಕ್ಕಾಗಿ, ಅರ್ಥಕ್ಕಾಗಿ, ದೇವತೆಗಳ, ಮನುಷ್ಯರ ಸುಖ, ಹಿತಕ್ಕಾಗಿ ಒಳಿತನ್ನೇ ಮಾಡುವರು.

ಮತ್ತೆ ಓ ಮಹಾರಾಜ, ಯಾವ ಕಾರಣಕ್ಕಾಗಿ ಭಗವಾನರು ಜನನ-ಮರಣದ ಅಂತ್ಯಕ್ಕಾಗಿ ಪ್ರೇರಣೆ ನೀಡಿದರು? ಓ ಮಹಾರಾಜ, ಜನ್ಮವು ದುಃಖಕರ, ಹಾಗೆಯೇ ಜರೆ, ಜರಾ, ಮೃತ್ಯುವು ಸಹಾ ನೋವು, ಪ್ರಲಾಪ, ಖಿನ್ನತೆ, ವಿಷಾದ ಇವೆಲ್ಲವೂ ದುಃಖವಾಗಿದೆ. ಹಾಗೆಯೇ ಅಪ್ರಿಯವಾದುದರ ಸಮಾಗಮ, ಪ್ರಿಯವಾದುದರ ವಿಯೋಗವು ಸಹಾ ದುಃಖಕಾರಿಯೇ ಅಗಿದೆ. ತಾಯಿಯ ಮೃತ್ಯು ಅಥವಾ ತಂದೆಯ ಅಥವಾ ಸೋದರನ, ಸೋದರಿಯ, ಪುತ್ರನ ಅಥವಾ ಪುತ್ರಿಯ ಅಥವಾ ಪತ್ನಿಯ ಅಥವಾ ಬಂಧುವಿನ ಮೃತ್ಯುವು ದುಃಖವೇ ಆಗಿದೆ. ತನ್ನ ಕುಟುಂಬದ ಅವನತಿಯು ದುಃಖವೇ, ರೋಗದ ದುಃಖ, ಧನಹಾನಿಯ ದುಃಖ, ಒಳ್ಳೆಯತನ ಕ್ಷೀಣತೆ ದುಃಖ, ಬುದ್ಧಿನಾಶವು ದುಃಖ, ನಿರಂಕುಶ ರಾಜರಿಂದ ಅಥವಾ ಡಕಾಯಿತರಿಂದ ಅಥವಾ ಶತ್ರುಗಳಿಂದ ಅಥವಾ ಬರಗಾಲದಿಂದ ಅಥವಾ ಅಗ್ನಿಯಿಂದ ಅಥವಾ ಪ್ರವಾಹದಿಂದ ಅಥವಾ ಅಲೆಗಳಿಂದ ಅಥವಾ ಭೂಕಂಪದಿಂದ ಅಥವಾ ಮೊಸಳೆಗಳಿಂದ ಅಥವಾ ಮಕರಗಳಿಂದ ಉಂಟಾಗುವ ಭೀತಿಯು ದುಃಖವೇ. ಹಾಗೆಯೇ ನಿಂದಾಭಯ, ಪರನಿಂದಾಭಯ, ಶಿಕ್ಷೆಯ ಭಯ, ದೌಭರ್ಾಗ್ಯದ ಭಯಗಳು ಸಹಾ ದುಃಖವೇ. ಸಭಾಲಜ್ಜಾ ಭಯ, ಜೀವನೋಪಾಯದ ಚಿಂತಾಭಯ, ಮರಣಭಯ, ಅಪರಾಧಿಗಳ ಶಿಕ್ಷೆಯು ಬಾರಿ ದುಃಖವೇ ಆಗಿದೆ. ಅದೆಂದರೆ ಚಾಟಿಯ ಹೊಡೆತ, ದೊಣ್ಣೆಗಳ ಹೊಡೆತ, ಹೊಳು ಸಲಾಕಿಯ ಹೊಡೆತ, ಕೈಗಳನ್ನು ಕತ್ತರಿಸುವಿಕೆ, ಕಾಲುಗಳನ್ನು ಕತ್ತರಿಸುವಿಕೆ, ಕಿವಿಗಳನ್ನು, ಮೂಗನ್ನು ಕತ್ತರಿಸುವಿಕೆ, ಬಿಸಿಯಾದ ಗಂಜಿ ಸುರಿಯುವಿಕೆ, ಚರ್ಮ ಸುಲಿಯುವಿಕೆ, ರಾಹು ಮುಖ (ಬಾಯಲ್ಲಿ ಎಣ್ಣೆ ಸುರಿದು ಉರಿಸುವಿಕೆ), ಬೆಂಕಿಯಹಾರ, ಬೆಂಕಿಯ ಉಡುಪು, ಹಾವಿನ ಚರ್ಮದ ನಕ್ಷೆಯಂತೆ ಚರ್ಮ ಸುಲಿಯುವುದು, ಚರ್ಮ ಸುಲಿದು ತೊಗಟೆ ಮೆತ್ತಿಸುವುದು, ಜಿಂಕೆಯ ಮಚ್ಚೆಯಂತೆ ಚರ್ಮಕ್ಕೆ ಬರೆ ಎಳೆಯುವುದು, ಚರ್ಮಕ್ಕೆ ಉಕ್ಕಿನ ಕೊಂಡಿಗಳನ್ನು ಹಾಕುವುದು, ನಾಣ್ಯದಷ್ಟು ಮಾಂಸ ಕೀಳುವುದು, ಮಾಂಸ ತೆಗೆದು ಕ್ಷಾರ ಸುರಿಯುವುದು, ಕಿವಿಗೆ ಸಲಾಕೆ ಚುಚ್ಚಿ ತಿರುಗಿಸುವುದು, ಮೂಳೆಗಳನ್ನು ಮುರಿದು ಹುಲ್ಲಿನಂತೆ ಮಾಡುವುದು, ಬಿಸಿಯಾದ ಎಣ್ಣೆ ಹಾಕುವುದು, ನಾಯಿಗಳಿಂದ ಕಚ್ಚಿಸುವುದು, ಜೀವಂತವಾಗಿ ಹೂಳುವುದು, ಮರಣದಂಡನೆ, ಈ ರೀತಿಯ ದುಃಖ ನೋವುಗಳನ್ನು ಓ ಮಹಾರಾಜ, ಜನ್ಮದಿಂದ ಜನ್ಮಕ್ಕೆ ತಿರುಗಿ ತಿರುಗಿ ಅನುಭವಿಸಬೇಕಾಗುತ್ತದೆ. ಹೇಗೆಂದರೆ ಓ ಮಹಾರಾಜ, ಮಳೆಯ ನೀರು ಹಿಮಾಲಯದಿಂದ ಹರಿಯುತ್ತ, ಗಂಗೆಗೆ ಸೇರಿ, ಅಲ್ಲಿಂದ ಬಂಡೆಗಳು, ಕಲ್ಲುಗಳು, ಮರಳಿನಿಂದ ತೂರಿ, ಸರಳುಗಳು, ಜಲಾವೃತಗಳಿಂದ ತೀವ್ರವಾಗಿ ಹರಿಯುತ್ತ, ಕಾಂಡ, ಮರಗಳಿಂದ ತಡೆಯುತ್ತ, ಹರಿಯುತ್ತಿರುತ್ತದೆ. ಅದೇರೀತಿ ಜನ್ಮ ಪುನರ್ಜನ್ಮ ತಾಳುತ್ತ ನಾನಾರೀತಿಯ ನೋವು ದುಃಖಗಳನ್ನು ಮಾನವ ಪಡೆಯುತ್ತಿರುತ್ತಾನೆ. ಪೂರ್ಣ ನೋವು, ನಂತರ ನಿರಂತರ ಪುನರ್ಜನ್ಮಗಳು, ಅಲ್ಲಲ್ಲಿ ಸ್ವಲ್ಪ ಸುಖಗಳು, ಹೀಗೆಯೇ ಸಾಗುತ್ತಿರುತ್ತದೆ. ಓ ಮಹಾರಾಜ, ಭಗವಾನರು ಈ ಜನನ ಮರಣದ ವಲಯದಿಂದ ಆಚೆ ಹೋಗುವಂತೆ, ಪಾರಾಗುವಂತೆ ಪ್ರೇರಣೆ ನೀಡುತ್ತಾರೆ. ಹೇಗೆಂದರೆ ಅಂತಿಮ ಸಾಕ್ಷಾತ್ಕಾರ ಪಡೆದು ಜನ್ಮಗಳ ಅಂತ್ಯ ಮಾಡುವುದರಿಂದ, ಈ ರೀತಿಯಾಗಿ ಓ ಮಹಾರಾಜ, ಭಗವಾನರು ನಮಗೆ ಪ್ರೇರಣೆ ನೀಡುತ್ತಾರೆ.

ತುಂಬಾ ಒಳ್ಳೆಯದು ನಾಗಸೇನ, ನೀವು ಈ ಇಕ್ಕಟ್ಟಿನ ಪ್ರಶ್ನೆಯನ್ನು ಸುಲಭವಾಗಿ ನಿವಾರಿಸಿದಿರಿ, ನೀವು ಹೇಳಿದ್ದನ್ನು ನಾನು ಒಪ್ಪುವೆ.



6. ಮೆತ್ತಾಭಾವನ ನಿಸಂಸ ಪನ್ಹೊ (ಮೈತ್ರಿ ಧ್ಯಾನ ಫಲದ ಪ್ರಶ್ನೆ)


ಭಂತೆ ನಾಗಸೇನ, ಹೀಗೆ ಹೇಳಲ್ಪಟ್ಟಿದೆ: ಓ ಭಿಕ್ಷುಗಳೇ ಯಾರು ಮೆತ್ತಾವನ್ನು ಅಭ್ಯಸಿಸುವರೋ, ಅದನ್ನೇ ವ್ಯಕ್ತಿಗತ ಮಾಡಿಕೊಂಡಿರುವರೋ, ವಿಕಾಸಿಸುವರೋ, ವಾಹನದಂತೆ ಮಾಡಿಕೊಂಡಿರುವರೋ, ಉನ್ನತತೆ ಸಾಧಿಸಿರುವರೋ, ಅದನ್ನೇ ಚಾರಿತ್ರ್ಯವನ್ನಾಗಿಸಿರುವರೋ, ಅದರಲ್ಲಿ ತಲ್ಲೀನತೆ ಸಾಧಿಸಿರುವರೋ, ಅದನ್ನೇ ವಧರ್ಿಸುತ್ತಿರುವರೋ, ಅದರಿಂದಾಗಿ ಚಿತ್ತವಿಮುಕ್ತಿ ಸಾಧಿಸಿರುವರೋ ಸರ್ವರಲ್ಲೂ ಮೆತ್ತಾ ಭಾವನೆಯಿಂದಲೇ ಸದಾ ತುಂಬಿರುವರೋ, ಆಗ ಮೆತ್ತಾ ಧ್ಯಾನದಲ್ಲಿ ಹನ್ನೊಂದು ಮಹತ್ತರ ಲಾಭಗಳಿವೆ. ಅದೆಂದರೆ: ಆತನು ಸುಖಕರವಾಗಿ ನಿದ್ರಿಸುತ್ತಾನೆ, ಸುಖಕರವಾಗಿ ಏಳುತ್ತಾನೆ, ಆತನಿಗೆ ಕೆಟ್ಟ ಸ್ವಪ್ನಗಳು ಬೀಳುವುದಿಲ್ಲ, ಆತನು ಜನರಿಗೆ ಪ್ರಿಯನಾಗಿ ಜನಪ್ರಿಯನಾಗುತ್ತಾನೆ, ಅಮನುಷ್ಯರಿಗೂ ಪ್ರಿಯನಾಗುತ್ತಾನೆ, ದೇವತೆಗಳು ರಕ್ಷಿಸುವರು, ಅಗ್ನಿಯಿಂದಾಗಲಿ, ವಿಷದಿಂದಾಗಲಿ, ಶಸ್ತ್ರದಿಂದಾಗಲಿ ಆತನಿಗೆ ಯಾವ ಹಾನಿಯೂ ಆಗದು. ಚಿತ್ತವು ಕ್ಷಿಪ್ರವಾಗಿ ಸಮಾಧಿಯಲ್ಲಿ ತಲ್ಲೀನವಾಗುವುದು. ಮುಖವರ್ಣವು ತೇಜಸ್ಸಿನಿಂದ ಕೂಡಿರುತ್ತದೆ. ಭಯ ಭ್ರಾಂತಿಯಿಲ್ಲದೆ ಸಾವನ್ನಪ್ಪುತ್ತಾನೆ ಮತ್ತು ಆತನು ಅರಹತ್ವವನ್ನು ಪಡೆಯದಿದ್ದರೆ ಬ್ರಹ್ಮಲೋಕದಲ್ಲಿ ಖಂಡಿತವಾಗಿ ಉಗಮಿಸುತ್ತಾನೆ.

ಆದರೆ ಇನ್ನೊಂದೆಡೆ ನೀವು ಹೀಗೆ ಹೇಳಿರುವಿರಿ ಸಾಮ ರಾಜಕುಮಾರನು ಸರ್ವಜೀವಿಗಳಲ್ಲಿ ಮೆತ್ತ ಪ್ರಸರಿಸುತ್ತಿರುವಾಗ ಮತ್ತು ಆತನು ಕಾಡಿನಲ್ಲಿ ಜಿಂಕೆಗಳೊಂದಿಗೆ ಸುತ್ತಾಡುತ್ತಿರುವಾಗ ರಾಜ ಪಿಲಿಯಕ್ಖನಿಂದ ವಿಷಪೂರಿತ ಬಾಣದಿಂದ ಪೆಟ್ಟುತಿಂದು ಮೂಛರ್ಿತನಾಗಿ ಬಿದ್ದನು. ಈಗ ಹೇಳಿ ಭಂತೆ ನಾಗಸೇನರವರೇ, ಭಗವಾನರ ನುಡಿಗಳು ಸತ್ಯವಾಗಿದ್ದರೆ, ಈ ಘಟನೆಯು ಸುಳ್ಳಾಗುತ್ತದೆ, ಈ ಘಟನೆಯು ಸತ್ಯವಾಗಿದ್ದರೆ, ಭಗವಾನರ ನುಡಿಗಳು ಸುಳ್ಳಾಗುತ್ತದೆ. ಏಕೆಂದರೆ ಮೆತ್ತಾಧ್ಯಾನಿಯು ವಿಷದಿಂದಾಗಲೀ, ಅಗ್ನಿಯಿಂದಾಗಲಿ, ಶಸ್ತ್ರದಿಂದಾಗಲಿ, ಅಪಾಯಕ್ಕೆ ಒಳಗಾಗಲಾರ ಎಂದಿದೆ. ಇದು ಸಹಾ ದ್ವಿ-ಅಂಚಿನ ಪೇಚಿನ ಪ್ರಶ್ನೆಯಾಗಿದೆ, ಅತಿ ಸೂಕ್ಷ್ಮವಾಗಿದೆ, ಅತ್ಯಂತ ಗಹನತೆಯಿಂದಿದೆ, ಅತಿ ನವಿರಾಗಿದೆ, ಅತ್ಯಂತ ಗಂಭೀರವಾಗಿದೆ, ಪರಿಹರಿಸಲು ಸಿದ್ಧರಾದ ಸೂಕ್ಷ್ಮ ಜೀವಿಗಳಿಗೂ ಬೆವರಿಳಿಸುವಂತಿದೆ. ಇದನ್ನು ನಿಮಗೆ ಹಾಕಿದ್ದೇನೆ, ಈ ಕಗ್ಗಂಟನ್ನು ಬಿಡಿಸಿ. ಈ ವಿಷಯದ ಕಡೆ ಬೆಳಕು ತೋರಿ, ಮುಂದೆ ಉಗಮಿಸುವಂತಹ ಜಿನಪುತ್ತರ ಆಸೆಯನ್ನು
ಸಿದ್ಧಿಸಿ. (128)

ಓ ಮಹಾರಾಜರೇ, ನೀವು ಹೇಳಿದಂತೆಯೇ ಭಗವಾನರು ಹೇಳಿದ್ದಾರೆ ಮತ್ತು ಸಾಮ ರಾಜಕುಮಾರನು ಮೆತ್ತಾದಿಂದ ಕೂಡಿ ವಿಹರಿಸುತ್ತಿದ್ದಾಗಲೇ ಜಿಂಕೆಗಳು ಆತನನ್ನು ಹಿಂಬಾಲಿಸತೊಡಗಿದವು ಮತ್ತು ಹೀಗೆಯೇ ಅರಣ್ಯವನ್ನು ಸುತ್ತಾಡುತ್ತಿರುವಾಗ ರಾಜ ಪಿಲಿಯಕ್ಖನ ವಿಷಬಾಣದಿಂದ ಹೊಡೆಯಲ್ಪಟ್ಟನು ಮತ್ತು ಬಿದ್ದು ಮೂಛರ್ಿತನಾದನು. ಆದರೆ ಹಾಗಾಗುವುದಕ್ಕೆ ಕಾರಣವಿದೆ. ಏನದು ಕಾರಣ? ಸರಳವಾಗಿ ಹೇಳುವುದಾದರೆ ಯಾವೆಲ್ಲಾ ಸದ್ಗುಣಗಳು ಇವೆಯೋ ಅವೆಲ್ಲಾ ವ್ಯಕ್ತಿಯಲ್ಲಿ ಪ್ರತಿಕ್ಷಣವೂ ಇರುವುದಿಲ್ಲ. ಅಂದರೆ ಮೆತ್ತಾದ ಲಾಭಗಳು ಮೆತ್ತಧ್ಯಾನದ ಇರುವಿಕೆಯನ್ನು ಅವಲಂಬಿಸಿದೆಯೇ ಹೊರತು ಮೆತ್ತಾಭ್ಯಾಸಿಯನ್ನಲ್ಲ. ಆ ಲಾಭಗಳು ಮೆತ್ತಾದಲ್ಲಿ ಆನಂದಿಸುವ ವ್ಯಕ್ತಿಗೆ ಅಂಟಿರುವುದಿಲ್ಲ. ಬದಲಾಗಿ ಮೆತ್ತಾ ಭಾವನದಲ್ಲಿ ಆ ಕ್ಷಣದಲ್ಲಿ ತಲ್ಲೀನರಾಗಿದ್ದರೆ ಮಾತ್ರ ಕೆಲವು ಲಾಭಗಳು ಫಲಕಾರಿಯಾಗುತ್ತವೆ ಮತ್ತು ಯಾವಾಗ ರಾಜಕುಮಾರ ಸಾಮನು ಬಿಂದಿಗೆಯನ್ನು ಮುಗುಚಿ ಹಾಕಿದ್ದರೂ, ಆಗ ಅವರ ಮನಸ್ಸು ಮೆತ್ತಾದಿಂದ ಇರಲಿಲ್ಲ. ಮೆತ್ತಾದ ಹೊರತಾಗಿತ್ತು. ಅಂತಹ ಸಮಯದಲ್ಲಿ ಓ ಮಹಾರಾಜ, ಮೆತ್ತಾಭ್ಯಾಸಿಯಾಗಿಯೂ ಸಹಾ ಅಗ್ನಿಯಿಂದ, ವಿಷದಿಂದ, ಶಸ್ತ್ರದಿಂದ ಆತನಿಗೆ ಹಾನಿ ಸಾಧ್ಯವಿದೆ. ಹಾಗಿಲ್ಲದೆ ಆತನು ಮೆತ್ತಾಭ್ಯಾಸ ಮಾಡುತ್ತಿರುವಾಗ ಹಿಂಸಿಸಲು ಹೋದರೆ, ಆತನನ್ನು ಅವರು ಕಾಣಲಾರರು ಹಾಗು ಹಿಂಸಿಸುವ ಅವಕಾಶವು ಅವರಿಗೆ ಲಭಿಸದು, ಆದ್ದರಿಂದ ಓ ಮಹಾರಾಜ, ಇವೆಲ್ಲಾ ವ್ಯಕ್ತಿಯಲ್ಲಿ ಅಡಕವಾಗಿಲ್ಲ. ನಿಜವಾದ ಮೈತ್ರಿಯು ಆ ಕ್ಷಣದಲ್ಲಿ ಇದ್ದಾಗ ಮಾತ್ರ ಆತನಿಗೆ ಹಾನಿಯುಂಟು ಮಾಡಲಾರರು.

ಊಹಿಸಿ ಮಹಾರಾಜ, ಒಬ್ಬನಲ್ಲಿ ಮಾಯವಾಗುವ ಮೂಲಿಕೆಯಿದೆ, ಎಲ್ಲಿಯವರೆಗೆ ಅದು ಆತನ ಕೈಯಲ್ಲಿರುವುದೋ, ಯಾರು ಸಹಾ ಆತನಿಗೆ ನೋಡಲಾಗುತ್ತಿರಲಿಲ್ಲ. ಆತನು ಯಾರಿಗೂ ಕಾಣಿಸುತ್ತಿರಲಿಲ್ಲ. ಇದಕ್ಕೆ ಕಾರಣ ಆ ವ್ಯಕ್ತಿಯಲ್ಲ, ಬದಲಾಗಿ ಮಾಯಾ ಮೂಲಿಕೆಯದಾಗಿತ್ತು. ಅದೇರೀತಿ ಮಹಾರಾಜ, ಆ ಕ್ಷಣದಲ್ಲಿ ಮೆತ್ತಾದ ಇರುವಿಕೆಯುಳ್ಳವನಿಗೆ ಯಾರು ಏನು ಮಾಡಲಾರರೇ ಹೊರತು ಆ ವ್ಯಕ್ತಿಗಲ್ಲ.

ಅಥವಾ ಊಹಿಸಿ, ಒಬ್ಬ ವ್ಯಕ್ತಿಯು ಸುನಿಮರ್ಿತ ಬೃಹತ್ ಗುಹೆಯಲ್ಲಿ ಪ್ರವೇಶಿಸುತ್ತಾನೆ. ಆಗ ಯಾವ ಮಳೆಯಾಗಲಿ, ಬಿರುಗಾಳಿಯಾಗಲಿ ಅಲ್ಲಿ ಬೀಳಲಾರದು. ಆತನು ಅಲ್ಲಿರುವವರೆಗೆ ಆತನು ನೆನೆಯುವ ಸಾಧ್ಯತೆಯೇ ಇಲ್ಲ. ಈ ಲಾಭವು ಆ ವ್ಯಕ್ತಿಗಲ್ಲ. ಆತನು ಆಶ್ರಯಿಸಿದ ಗುಹೆಯಿಂದಾಗಿ ಆತನಿಗೆ ಅಲ್ಲಿರುವವರೆಗೆ ಲಭಿಸುತ್ತದೆ. ಅದೇರೀತಿಯಲ್ಲಿ ಇಲ್ಲಿ ಲಾಭವು ರಾಜಕುಮಾರ ಸಾಮನಿಗಲ್ಲ, ಆತನು ಆಶ್ರಯಿಸಿದ ಮೆತ್ತಾ ಭಾವನೆಯಿಂದಾಗಿ ಆತನು ಅದನ್ನು ಧ್ಯಾನಿಸುವವರೆಗೆ ಲಭಿಸುತ್ತದೆ.

ಅದ್ಭುತ ಭಂತೆ ನಾಗಸೇನ, ನಿಜಕ್ಕೂ ಮೆತ್ತವು ಎಲ್ಲಾ ಚಿತ್ತಕ್ಲೇಷಗಳನ್ನು ದೂರೀಕರಿಸುವ ಬಲಗಳನ್ನು ಹೊಂದಿದೆ. ನಿಜಕ್ಕೂ ಇದು ಅಪಾರ ಅಪರಿಚಿತವಾಗಿದೆ.


ಹೌದು ಮಹಾರಾಜ, ಮೆತ್ತಾ ಧ್ಯಾನದ ಅಭ್ಯಸಿಸುವಿಕೆಯು ಎಲ್ಲಾ ಜೀವಿಗಳ ಚಿತ್ತದಲ್ಲಿ ಕುಶಲಸ್ಥಿತಿಗಳನ್ನು ಉದಯಿಸುವಂತೆ, ಬೆಳೆಯುವಂತೆ ಮಾಡುತ್ತದೆ. ಯಾವೆಲ್ಲಾ ಜೀವಿಗಳು ಭವದ ಬಂಧನಗಳಿಂದ ಕೂಡಿರುವರೋ ಅವರಿಗೆಲ್ಲಾ ಮೆತ್ತಾ ಭಾವನವು ಮಹಾ ಲಾಭಕಾರಿಯಾಗಿದೆ. ಆದ್ದರಿಂದಾಗಿ ಇದನ್ನು ಪರಿಶ್ರಮಯುತವಾಗಿ ಬೆಳೆಸತಕ್ಕದ್ದು.


7. ಕುಶಲಾಕುಶಲ ಸಮ ವಿಷಮ ಪ್ರಶ್ನೆ


ಭಂತೆ ನಾಗಸೇನ, ಕುಶಲ ಮಾಡುವವನಿಗೆ ಮತ್ತು ಅಕುಶಲ ಮಾಡುವವನಿಗೆ ಅದರ ಪರಿಣಾಮ ಸಮವಾಗಿಯೇ ಇರುವುದೇ ಅಥವಾ ಇವೆರಡರಲ್ಲಿ ಭಿನ್ನತೆ (ವಿಷಮ) ಆಗುವುದೇ? (129)

ಓ ಮಹಾರಾಜ, ಅವುಗಳಲ್ಲಿ ವ್ಯತ್ಯಾಸವಿರುವುದು, ಕುಶಲಕ್ಕೂ ಮತ್ತು ಅಕುಶಲಕ್ಕೂ ಭಿನ್ನತೆಯಿದೆ. ಕುಶಲ ಕಾರ್ಯ ಮಾಡುವವನು ಸುಖವಾದ ಫಲ ಪಡೆಯುತ್ತಾನೆ ಮತ್ತು ಸುಗತಿ ಪಡೆಯುತ್ತಾನೆ. ಪಾಪಕಾರ್ಯ ಮಾಡಿದವನು ದುಃಖಯುಕ್ತ ಫಲ ಪಡೆದು ನಿರಯಕ್ಕೆ ಹೋಗುತ್ತಾನೆ.

ಆದರೆ ಭಂತೆ ನಾಗಸೇನ, ನೀವು ಹೇಳುವಿರಿ, ದೇವದತ್ತನು ವಿಕೃತನಾಗಿದ್ದನು, ಪಾಪಿಯಾಗಿದ್ದನು ಮತ್ತು ಬೋಧಿಸತ್ತರು ಪರಿಶುದ್ಧರಾಗಿದ್ದರು, ಪೂರ್ಣವಾಗಿ ಪರಿಶುದ್ಧ ಮನೋಧಮರ್ಿಯಾಗಿದ್ದರು. ಆದರೂ ಸಹಾ ದೇವದತ್ತನು ಅನುಪೂರ್ವ ಜನ್ಮಗಳಿಂದ ಬೋಧಿಸತ್ತರಿಗೆ ಸಮನಾಗಿರಲಿಲ್ಲವೇ? ಅಷ್ಟೇ ಏಕೆ, ಕೆಲ ಜನ್ಮಗಳಲ್ಲಿ ಅವರಿಗಿಂತ ಶ್ರೇಷ್ಠ ಸ್ಥಾನಗಳಲ್ಲೇ ಇದ್ದನು. ಅವರಿಗಿಂತ ಹೆಚ್ಚು ಖ್ಯಾತಿ ಮತ್ತು ಅನುಯಾಯಿಗಳನ್ನು ಪಡೆದಿದ್ದನು.

ಹೀಗೆ ನಾಗಸೇನರವರೆ, ಒಮ್ಮೆ ದೇವದತ್ತನು ಬ್ರಹ್ಮದತ್ತನ ರಾಜ ಪುರೋಹಿತ ನಾಗಿದ್ದಾಗ, ಬೋಧಿಸತ್ತರು ಚಾಂಡಾಲರಾಗಿದ್ದರು. ಆಗ ಅವರು ಮಂತ್ರಶಕ್ತಿಯಿಂದ ಆ ಕಾಲದಲ್ಲಿಯೂ ಮಾವಿನ ಹಣ್ಣುಗಳನ್ನು ಉತ್ಪಾದಿಸುತ್ತಿದ್ದರು. ಇಲ್ಲಿ ಬೋಧಿಸತ್ತರು ದೇವದತ್ತನಿಗಿಂತ ಸ್ಥಿತಿ ಮತ್ತು ಖ್ಯಾತಿಯಲ್ಲಿ ಕೆಳಮಟ್ಟದಲ್ಲಿದ್ದರು.

ಮತ್ತೆ ಇನ್ನೊಮ್ಮೆ ದೇವದತ್ತನು ಚಕ್ರವತರ್ಿಯಾಗಿದ್ದಾಗ, ಎಲ್ಲಾರೀತಿಯ ಸುಖಭೋಗಗಳನ್ನು ಅನುಭವಿಸುತ್ತಿದ್ದಾಗ ಬೋಧಿಸತ್ತರು ಆನೆಯಾಗಿರುತ್ತಾರೆ ಹಾಗು ರಾಜನು ಬಳಸಿ ಬಿಟ್ಟ ಆಭರಣಗಳನ್ನು ಧರಿಸಿದವರಾಗಿರುತ್ತಾರೆ ಮತ್ತು ಆನೆಯನ್ನು ಕಂಡ ರಾಜನು ಕ್ರುದ್ಧನಾಗಿ ಮಾವುತನಿಗೆ ಹೀಗೆ ಹೇಳುತ್ತಾನೆ: ಮಾವುತನೆ, ಈ ಆನೆಯು ಸರಿಯಾಗಿ ಶಿಕ್ಷಣ ಪಡೆದಿಲ್ಲ, ಇದಕ್ಕೆ ಆಕಾಶದ ನಡಿಗೆ ಕಲಿಸು ಇಲ್ಲಿ ಸಹಾ ಬೋಧಿಸತ್ತರು ದೇವದತ್ತನಿಗಿಂತ ಕೆಳಮಟ್ಟದವರಾಗಿ ಪ್ರಾಣಿಯಾಗಿ ಹುಟ್ಟಿದವರಾಗಿರುತ್ತಾರೆ.

ಮತ್ತೆ ದೇವದತ್ತನು ಇನ್ನೊಂದು ಜನ್ಮದಲ್ಲಿ ಧಾನ್ಯ ಪರೀಕ್ಷಕನಾಗಿರುವಾಗ ಬೋಧಿಸತ್ವರು ಮಹಾಪೃಥ್ವಿ ಎಂಬ ಕೋತಿಯಾಗಿರುತ್ತಾರೆ. ಇಲ್ಲೂ ಸಹಾ ದೇವದತ್ತ ಮಾನವನಾಗಿರುವಾಗ, ಬೋಧಿಸತ್ತರು ಅದಕ್ಕಿಂತ ಕೆಳಮಟ್ಟದ ಪ್ರಾಣಿಯಾಗಿರುತ್ತಾರೆ.

ಇನ್ನೊಮ್ಮೆ ದೇವದತ್ತ ಸೋಣುತ್ತರ ಎಂಬ ಮಾನವನಾಗಿ ಬೇಟೆಗಾರ ವೃತ್ತಿಯಲ್ಲಿರುತ್ತಾನೆ. ಆಗ ಛದ್ಧಂತ ಎಂಬ ಆನೆಗಳ ರಾಜನಾಗಿ ಬೋಧಿಸತ್ವರು ಇದ್ದಾಗ, ಬಲಶಾಲಿಯಾದ ಆ ಬೇಟೆಗಾರನು ಆನೆಯಾಗಿರುವ ಬೋಧಿಸತ್ವರನ್ನು ಸಾಯಿಸುತ್ತಾನೆ. ಇಲ್ಲಿ ಸಹಾ ದೇವದತ್ತನು ಉತ್ತಮ ಸ್ಥಾನದಲ್ಲೇ ಇದ್ದಾನೆ.

ಮತ್ತೊಮ್ಮೆ ದೇವದತ್ತನು ಮಾನವನಾಗಿರುವಾಗ, ಕಾಡಿನಲ್ಲಿ ಅಲೆಮಾರಿಯಾಗಿ ಅಲೆದಾಡುತ್ತ ಇದ್ದಾಗ, ಬೋಧಿಸತ್ತರು ಸಕುಣ ಎಂಬ ಪಕ್ಷಿಯಾಗಿರುತ್ತಾರೆ, ಆಗ ಅದಕ್ಕೆ ವೇದಮಂತ್ರಗಳು ಗೊತ್ತಿರುತ್ತದೆ. ಆಗ ದೇವದತ್ತನು ಆ ಜನ್ಮದಲ್ಲೂ ಪಕ್ಷಿಯನ್ನು ಕೊಲ್ಲುತ್ತಾನೆ, ಇಲ್ಲಿಯು ಸಹಾ ದೇವದತ್ತನು ಜನ್ಮದಲ್ಲಿ ಉತ್ತಮ ಸ್ಥಾನ ಹೊಂದಿದ್ದಾನೆ.

ಮತ್ತೊಮ್ಮೆ ದೇವದತ್ತನು ಕಾಶಿಯ ರಾಜನಾಗಿದ್ದಾಗ ಕಲಾಬು ಎಂಬ ಹೆಸರನ್ನು ಹೊಂದಿರುತ್ತಾನೆ. ಆಗ ಬೋಧಿಸತ್ವರು ಖಾಂತಿವಾದಿಯಾಗಿ ಕರುಣೆ, ಕ್ಷಮೆ ಬೋಧಿಸುವವರಾಗಿರುತ್ತಾರೆ. ಆಗ ರಾಜನು ಕ್ರುದ್ಧನಾಗಿ ಖಾಂತಿವಾದಿ ಋಷಿಯ ಕೈಕಾಲು ಕತ್ತರಿಸಿ ಹಾಕುತ್ತಾನೆ. ಈ ಜನ್ಮದಲ್ಲಿಯೂ ಸಹಾ ದೇವದತ್ತ ಉತ್ತಮ ಸ್ಥಾನವನ್ನು ಹೊಂದಿದ್ದಾನೆ.

ಪುನಃ ದೇವದತ್ತನು ಬೇಟೆಗಾರನಾಗಿದ್ದಾಗ ಬೋಧಿಸತ್ವರು ಮಂಗರಾಜ ನಂದಿಯರಾಗಿದ್ದರು. ಹಾಗು ಈ ಜನ್ಮದಲ್ಲಿಯು ಆ ಮನುಷ್ಯ ಬೋಧಿಸತ್ವರನ್ನು ಕೊಂದನು. ಅಷ್ಟೇ ಅಲ್ಲದೆ ಆ ಮಂಗದ ತಮ್ಮ ಹಾಗು ಅದರ ತಾಯಿಯನ್ನು ಕೊಂದನು. ಹೀಗಾಗಿ ಇಲ್ಲಿಯೂ ಸಹಾ ದೇವದತ್ತ ಜನ್ಮದಿಂದ ಶ್ರೇಷ್ಠನಾಗಿದ್ದನು.

ಪುನಃ ದೇವದತ್ತನು ಕಾರಂಭಿಯನೆಂಬ ನಗ್ನ ಸನ್ಯಾಸಿಯಾಗಿದ್ದನು. ಆಗ ಬೋಧಿಸತ್ತರು ನಾಗರಾಜ ಪಂಡರಕರಾಗಿದ್ದರು. ಹಾಗು ಇಲ್ಲಿಯೂ ಸಹಾ ದೇವದತ್ತನು ಜನ್ಮದಿಂದ ಶ್ರೇಷ್ಠನಾಗಿದ್ದನು.

ಪುನಃ ದೇವದತ್ತನು ಮಾನವನಿಗೆ ಕಪಟ ಸನ್ಯಾಸಿಯಾಗಿದ್ದಾಗ, ಬೋಧಿಸತ್ವರು ತಚ್ಚಕ ಎಂಬ ಹಂದಿಯಾಗಿ ಹುಟ್ಟಿದ್ದರು. ಇಲ್ಲಿಯೂ ಸಹಾ ದೇವದತ್ತ ಜನ್ಮದಿಂದ ಉತ್ತಮ ಸ್ಥಾನ ಹೊಂದಿದ್ದನು.

ಪುನಃ ದೇವದತ್ತನು ಮಾನವನಾಗಿ ಚೇತರ ರಾಜನಾಗಿದ್ದನು. ಆಗ ಆತನ ಹೆಸರು ಸುರಪಂಚರ ಎಂದಾಗಿತ್ತು. ಆಗ ಆತನಿಗೆ ಗಾಳಿಯಲ್ಲಿ ಮಾನವರ ತಲೆಗಳಿಗಿಂತ ಮೇಲಕ್ಕೆ ಹಾರುವ ಸಾಮಥ್ಯವಿತ್ತು. ಬೋಧಿಸತ್ತರು ಕಪಿಲ ಬ್ರಾಹ್ಮಣರಾಗಿದ್ದರು, ಇಲ್ಲಿಯೂ ಸಹಾ ದೇವದತ್ತನು ಕುಲದಲ್ಲಿ ಉತ್ತಮನಾಗಿದ್ದನು.

ಪುನಃ ದೇವದತ್ತನು ಮಾನವನಾಗಿ ಹುಟ್ಟಿ ನಾಮ ಎಂಬ ಹೆಸರು ಪಡೆದಿದ್ದನು, ಆಗ ಬೋಧಿಸತ್ತರು ರುರು ಎಂಬ ಜಿಂಕೆಗಳ ರಾಜನಾಗಿದ್ದನು. ಇಲ್ಲಿಯೂ ಸಹಾ ದೇವದತ್ತ ಜನ್ಮದಿಂದ ಶ್ರೇಷ್ಠನಾಗಿದ್ದನು.

ಪುನಃ ದೇವದತ್ತನು ಮಾನವನಾಗಿ ಹುಟ್ಟಿ, ಕಾಡಿನ ಬೇಟೆಗಾರನಾಗಿದ್ದಾಗ, ಬೋಧಿಸತ್ತರು ಆನೆಯಾಗಿದ್ದರು. ಆಗ ಬೇಟೆಗಾರನು ಏಳುಬಾರಿ ಬೋಧಿಸತ್ವರ ದಂತವನ್ನು ಕತ್ತರಿಸಿದ್ದನು. ಇಲ್ಲಿಯೂ ಸಹಾ ದೇವದತ್ತನು ಜನ್ಮದಿಂದ ಮೇಲುಗೈ ಸಾಧಿಸಿದ್ದನು.

ಪುನಃ ದೇವದತ್ತನು ಸಿಂಗಾಲನೆಂಬ ರಾಜನಾಗಿ ಗೆಲುವಿನ ಮಹತ್ವಾಕಾಂಕ್ಷಿಯಾಗಿ ಜಂಬುದ್ವೀಪದ ಎಲ್ಲಾ ರಾಜರನ್ನು ತನ್ನ ವಶದಲ್ಲಿ ತೆಗೆದುಕೊಂಡಿದ್ದಾಗ, ಬೋಧಿಸತ್ವರು ವಿಧುರ ಪಂಡಿತರಾಗಿದ್ದರು. ಇಲ್ಲಿಯೂ ಸಹಾ ದೇವದತ್ತ ಭವ್ಯವಾದ ಖ್ಯಾತಿ ಪಡೆದಿದ್ದನು.

ಪುನಃ ದೇವದತ್ತನು ಆನೆಯಾಗಿ, ಚಿನಾದ ತಿತ್ತರ ಪಕ್ಷಿಯ ಮರಿಗಳನ್ನು ನಾಶಪಡಿಸಿದ್ದನು. ಆಗ ಬೋಧಿಸತ್ವರು ಸಹಾ ಆನೆಯಾಗಿದ್ದರು, ತಮ್ಮ ಸಮೂಹಕ್ಕೆ ನಾಯಕರಾಗಿದ್ದರು, ಇಲ್ಲಿ ಈರ್ವರೂ ಸರಿಸಮಾನರಾಗಿದ್ದರು.

ಪುನಃ ದೇವದತ್ತನು ಅಧಮ್ಮ ಎಂಬ ಯಕ್ಷನಾಗಿದ್ದಾಗ, ಬೋಧಿಸತ್ವರು ಧಮ್ಮ ಎಂಬ ಯಕ್ಷರಾಗಿದ್ದರು, ಇಲ್ಲಿ ಈರ್ವರೂ ಸಮನಾಗಿದ್ದರು.

ಪುನಃ ದೇವದತ್ತನು ನಾವಿಕನಾಗಿ 500 ಕುಟುಂಬಗಳಿಗೆ ನಾಯಕರಾಗಿದ್ದನು. ಆಗ ಬೋಧಿಸತ್ವರು ಸಹಾ ನಾವಿಕನಾಗಿ 500 ಕುಟುಂಬಗಳಿಗೆ ನಾಯಕರಾಗಿದ್ದರು, ಇಲ್ಲಿ ಈರ್ವರೂ ಸರಿಸಮಾನರಾಗಿದ್ದರು.

ಪುನಃ ದೇವದತ್ತನು ವರ್ತಕನಾಗಿ 500 ಬಂಡಿಗಳನ್ನು ಹೊಂದಿದ್ದನು. ಆಗ ಬೋಧಿಸತ್ವರು ಸಹಾ ವರ್ತಕನಾಗಿ 500 ಬಂಡಿಗಳನ್ನು ಹೊಂದಿದ್ದರು. ಇಲ್ಲಿ ಸಹಾ ಈರ್ವರೂ ಸರಿಸಮಾನರಾಗಿದ್ದರು.

ಪುನಃ ದೇವದತ್ತನು ಸಾಖ ಎಂಬ ಜಿಂಕೆಯಾಗಿದ್ದಾಗ, ಬೋಧಿಸತ್ವರು ಸಹಾ ನಿಗ್ರೋಧ ಎಂಬ ಜಿಂಕೆಯಾಗಿದ್ದರು. ಇಲ್ಲೂ ಸಹಾ ಈರ್ವರೂ ಸರಿಸಮಾನರಾಗಿದ್ದರು.

ಪುನಃ ದೇವದತ್ತನು ಖಂಡಹಾಲನೆಂಬ ಬ್ರಾಹ್ಮಣನಾಗಿದ್ದಾಗ, ಬೋಧಿಸತ್ವರು ಚಂದನೆಂಬ ರಾಜಕುಮಾರರಾಗಿದ್ದರು, ಇಲ್ಲಿ ಖಂಡಹಾಲನೇ ಉತ್ತಮ ಸ್ಥಾನ ಹೊಂದಿದ್ದನು.

ಪುನಃ ದೇವದತ್ತನು ಬ್ರಹ್ಮದತ್ತ ಎಂಬ ರಾಜನಾಗಿದ್ದಾಗ, ಬೋಧಿಸತ್ವರು ಮಹಾಪದುಮ ಎಂಬ ಹೆಸರಿನಲ್ಲಿ ಆತನಿಗೆ ಪುತ್ರನಾಗಿದ್ದರು. ಆಗ ರಾಜನು ಬೋಧಿಸತ್ವರಿಗೆ ಏಳುಬಾರಿ ಪ್ರಪಾತದಲ್ಲಿ ತಳ್ಳಿಸಿದ್ದನು. ಇಲ್ಲಿಯೂ ಸಹಾ ದೇವದತ್ತನೇ ಉತ್ತಮ ಸ್ಥಾನ ಹೊಂದಿದ್ದನು.

ಪುನಃ ದೇವದತ್ತ ಮಹಾಪ್ರತಾಪನೆಂಬ ಹೆಸರಿನ ರಾಜನಾಗಿದ್ದಾಗ ಬೋಧಿಸತ್ವರು ಅವರ ಮಗ ಧಮ್ಮಪಾಲನಾಗಿ ಜನಿಸಿದ್ದರು. ಆದರೆ ಕ್ರೂರಿ ರಾಜ ಬೋಧಿಸತ್ವರ (ಆ ಮಗುವಿನ) ತಲೆ, ಕೈಕಾಲು ಕಡಿಸಿದ್ದನು. ಹೀಗಾಗಿ ಇಲ್ಲಿಯೂ ಸಹಾ ದೇವದತ್ತ ಉತ್ತಮ ಅಧಿಕಾರ ಹೊಂದಿದ್ದನು.

ಪುನಃ ಬೋಧಿಸತ್ವರು ಅಂತಿಮ ಜನ್ಮದಲ್ಲಿ ಬುದ್ಧರಾದಾಗ, ಲೋಕಕ್ಕೆ ನಾಯಕರಾಗಿದ್ದಾಗ ದೇವದತ್ತನು ಸಂಘ ಪ್ರವೇಶ ಮಾಡಿದನು. ಇದ್ದಿಬಲಗಳನ್ನು ಪ್ರಾಪ್ತಿಮಾಡಿದ್ದನು, ಬುದ್ಧರಾಗಲು ಇಚ್ಛಿಸಿದನು. ಈಗ ಹೇಳಿ ಭಂತೆ ನಾಗಸೇನ, ನಾನು ಈವರೆಗೆ ಹೇಳಿದ್ದು ಸತ್ಯವಲ್ಲವೇ?
ಓ ಮಹಾರಾಜ, ನೀವು ಇಷ್ಟು ಮಾಹಿತಿ ಹೇಳಿದ್ದು ಸರಿಯಾಗಿಯೇ ಇದೆ, ಬೇರೆ ಅಲ್ಲ.

ಹಾಗಾದರೆ ಭಂತೆ ನಾಗಸೇನ, ಕಪ್ಪು-ಬಿಳುಪು ಸಮವಾಗಿದೆ ಎನ್ನುವುದಾದರೆ ಕುಶಲ ಮತ್ತು ಅಕುಶಲಗಳು ಸಮವಾಗಿ ಫಲ ನೀಡುತ್ತವೆ ಎಂದಾಯಿತು.

ಹಾಗಲ್ಲ ಮಹಾರಾಜ, ಕುಶಲ ಮತ್ತು ಅಕುಶಲಗಳು ಸಮ ಫಲಿತಾಂಶ ನೀಡಲಾರವು. ದೇವದತ್ತನು ಪ್ರತಿಯೊಬ್ಬರಿಂದ ವಿರೋಧಿಸಲ್ಪಟ್ಟಿದ್ದಾನೆ. ಯಾರೂ ಬೋಧಿಸತ್ವರಿಗೆ ದ್ವೇಷಿಸಿಲ್ಲ. ದೇವದತ್ತನು ಬೋಧಿಸತ್ವರ ಮೇಲೆ ದ್ವೇಷಿಸಿ ಮುಂದಿನ ಜನ್ಮಗಳಲ್ಲಿ ಅದರ ಫಲಗಳನ್ನು ಪಡೆದನು. ಅಷ್ಟೇ ಅಲ್ಲ, ದೇವದತ್ತನು ಯಾವಾಗ ಲೋಕಗಳ ಮೇಲೆ ಅಧಿಪತ್ಯ ಪಡೆದನೋ ಆಗ ಆತನು ಬಡವರಿಗೆ ರಕ್ಷಣೆ ನೀಡಿದನು, ಸೇತುವೆಗಳನ್ನು ನಿಮರ್ಿಸಿದನು, ನ್ಯಾಯಾಲಯಗಳನ್ನು ಸ್ಥಾಪಿಸಿದನು, ಜನರಿಗಾಗಿ ವಸತಿ ಗೃಹಗಳನ್ನು ಕಟ್ಟಿಸಿದನು, ಸಮಣ ಬ್ರಾಹ್ಮಣರಿಗೆ ದಾನ ಮಾಡಿದನು. ಬಡ ಹಾಗೂ ಅಗತ್ಯವುಳ್ಳವರಿಗೆ ಸಹಾಯ ಮಾಡಿದನು. ಈ ಎಲ್ಲಾ ಕರ್ಮಗಳಿಂದಾಗಿ ಆತನು ಜನ್ಮದಿಂದ ಜನ್ಮಕ್ಕೆ ಸುಖ ಹಾಗು ಉನ್ನತಿ ಹೊಂದಿದನು. ಓ ಮಹಾರಾಜ, ದಾನವಿಲ್ಲದೆ, ಸಂಯಮವಿಲ್ಲದೆ, ಸ್ವನಿಯಂತ್ರಣವಿಲ್ಲದೆ, ಉಪೋಸಥವಿಲ್ಲದೆ ಯಾರಾದರೂ ಉನ್ನತಿಗೇರುವರೇ?

ಮತ್ತೆ ಓ ಮಹಾರಾಜ, ನೀವು ಹೇಳಿದಿರಿ ಬೋಧಿಸತ್ತರು ಹಾಗು ದೇವದತ್ತ ಜನ್ಮದಿಂದ ಜನ್ಮಕ್ಕೆ ಜೊತೆಯಾಗಿದ್ದರೆಂದು. ಆದರೆ ಅದು ಹಾಗಿರಲಿಲ್ಲ. ಅವರು ಪರಸ್ಪರ ಸಂಧಿಸುತ್ತಿದ್ದುದು ನೂರು ಜನ್ಮಗಳ ಕೊನೆಯಲ್ಲಿ ಅಥವಾ ಸಾವಿರ ಅಥವಾ ಲಕ್ಷ ಹೀಗೆ ಅಸಂಖ್ಯಾತ ಕಾಲದಲ್ಲಿಯಾದರೂ ಅವರು ಆಗಾಗ್ಗೆ ಭೇಟಿಯಾಗುತ್ತಿದ್ದಂತು ನಿಜ. ಆದರೆ ದೇವದತ್ತ ಮಾತ್ರವಲ್ಲ, ಓ ಮಹಾರಾಜ, ಸಾರಿಪುತ್ತ ಸಹಾ ಸಾವಿರಾರು ಜನ್ಮಗಳಲ್ಲಿ ತಂದೆಯಾಗಿ, ತಾತನಾಗಿ, ಚಿಕ್ಕಪ್ಪನಾಗಿ, ಸೋದರನಾಗಿ, ಮಗನಾಗಿ, ಮಿತ್ರನಾಗಿ, ಸೋದರಳಿಯನಾಗಿದ್ದರು ಮತ್ತು ಬೋಧಿಸತ್ವರು ಸಹಾ ತಂದೆಯಾಗಿ, ತಾತನಾಗಿ, ಚಿಕ್ಕಪ್ಪನಾಗಿ, ಸೋದರನಾಗಿ, ಮಗನಾಗಿ, ಸೋದರಳಿಯನಾಗಿ, ಮಿತ್ರರಾಗಿದ್ದರು.

ಓ ಮಹಾರಾಜ, ವಾಸ್ತವವಾಗಿ ಎಲ್ಲಾ ಜೀವಿಗಳು, ಯಾವುದೆ ರೂಪದ ಜೀವಿಗಳಾಗಿರಲಿ, ಸಂಸಾರದಲ್ಲಿ ಪುನರ್ಜನ್ಮ ಪಡೆಯುತ್ತಲಿರುತ್ತವೆ, ಸಮಾಗಮ ಹೊಂದುತ್ತವೆ, ವಿಯೋಗ ಹೊಂದುತ್ತಿರುತ್ತವೆ. ನಿರಂತರ ಸುತ್ತಾಡುವಿಕೆಯಿರುತ್ತದೆ. ಪ್ರಿಯರ ಹಾಗು ಅಪ್ರಿಯರ ಸಮಾಗಮ ಹೊಂದುತ್ತೇವೆ. ಹಾಗೆಯೇ ವಿಯೋಗವನ್ನು ಹೊಂದುತ್ತೇವೆ. ಹೇಗೆಂದರೆ ಹೊಳೆಯ ಸುಳಿಯಲ್ಲಿ ಶುದ್ಧ-ಅಶುದ್ಧ ವಸ್ತುಗಳು, ಸುಂದರ-ಕುರೂಪ ವಸ್ತುಗಳು ಸುತ್ತಾಡುವಂತೆ ಚಲಿಸುತ್ತೇವೆ.

ಮತ್ತೆ ಓ ಮಹಾರಾಜ, ದೇವದತ್ತನು ದೇವತೆಯಾಗಿಯು, ಅಧಮರ್ಿಯಾದಾಗ, ಪರರನ್ನೂ ಅಧಮರ್ಿಯರನ್ನಾಗಿ ಮಾಡಿದಾಗ, ಅದರ ಫಲಿತಾಂಶವಾಗಿ ಆತನು ಲೆಕ್ಕಸಿಗದ ಕಾಲದಷ್ಟು ಸಮಯ ನರಕದಲ್ಲಿದ್ದನು. ಆದರೆ ಬೋಧಿಸತ್ವರು ದೇವತೆಯಾಗಿದ್ದಾಗ, ಧಮರ್ಿಷ್ಠರಾಗಿ ಪರರಿಗೂ ಧಮರ್ಿಷ್ಠರನ್ನಾಗಿಸಿದಾಗ ಸುಗತಿಯಲ್ಲಿ ಅಸಂಖ್ಯಾತ ಕಾಲದಷ್ಟು ನೆಲೆಸಿದ್ದರು. ಹಾಗು ಈ ಜನ್ಮದಲ್ಲಿ ದೇವದತ್ತನು ಬುದ್ಧರಿಗೆ ಗಾಯವುಂಟು ಮಾಡಿ, ಸಂಘಬೇಧ ಮಾಡಿದ್ದರಿಂದಾಗಿ, ಭೂಮಿಯಿಂದ ನುಂಗಲ್ಪಟ್ಟನು. ತಥಾಗತರು ಅರಿಯ ಬೇಕಾಗಿರುವುದನ್ನೆಲ್ಲಾ ಅರಿತಿರುವರು, ಬುದ್ಧತ್ವ ಪ್ರಾಪ್ತಿಯಾದಾಗಲೇ ಅವರು ಜನ್ಮಕ್ಕೆ ಕಾರಣವಾಗಿರುವುದೆಲ್ಲವನ್ನು ನಾಶಗೊಳಿಸಿ, ಮುಕ್ತರಾದರು.

ತುಂಬಾ ಚೆನ್ನಾಗಿ ವಿವರಿಸಿದಿರಿ ನಾಗಸೇನ, ನೀವು ಹೇಳಿದ್ದನ್ನು ನಾನು ಒಪ್ಪುವೆ.


8. ಅಮರದೇವಿಯ ಬಗ್ಗೆ ಪ್ರಶ್ನೆ


11. ಭಂತೆ ನಾಗಸೇನ, ಭಗವಾನರು ಬೋಧಿಸತ್ವರಾಗಿದ್ದಾಗ ಹೀಗೆ ಹೇಳಿರುವರು: ಎಲ್ಲಾ ಸ್ತ್ರೀಯರು, ಅವಕಾಶ ಸಿಕ್ಕರೆ, ರಹಸ್ಯತಾಣ ಸಿಕ್ಕರೆ ಮತ್ತು ಪ್ರೇಮಾಯಾಚಿಸುವವನು ಸಿಕ್ಕಾಗ, ಅವರು ಹೆಳವನಲ್ಲೂ ಸಹಾ ಪಾಪ ಮಾಡುತ್ತಾರೆ.

ಆದರೆ ಮತ್ತೊಂದೆಡೆ ಹೀಗೆ ಹೇಳಲಾಗಿದೆ: ಮಹೋಸಧನ ಪತ್ನಿ ಅಮರಳು ಹಳ್ಳಿಯಿಂದ ಹೊರಟಾಗ, ತನ್ನ ಪತಿ ಇಲ್ಲದಿದ್ದಾಗ, ಏಕಾಂಗಿಯಾಗಿದ್ದಾಗ, ಆಕೆ ಪತಿವ್ರತೆಯಾಗಿಯೇ ಇದ್ದು, ಸಾವಿರ ವರಹಗಳಿಗೂ ಲೋಭತಾಳಕ್ಕೆ, ಪಾಪ ಮಾಡಲು ನಿರಾಕರಿಸುತ್ತಾಳೆ.

ಈಗ ಇಲ್ಲಿ ಮೊದಲ ಗಾಥೆ ಸತ್ಯವಾಗಿದ್ದರೆ, ಎರಡನೆಯ ಘಟನೆ ಸುಳ್ಳಾಗುತ್ತದೆ, ಆ ಘಟನೆಯೇ ಸತ್ಯವಾಗಿದ್ದಾಗ, ಬೋಧಿಸತ್ವರ ಗಾಥೆಯು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಪ್ರಶ್ನೆಯಾಗಿದೆ. ನಿಮಗೆ ಹಾಕಿದ್ದೇನೆ ಮತ್ತು ನೀವೇ ಇದನ್ನು ಬಿಡಿಸಬೇಕು. (130)

ಓ ಮಹಾರಾಜ, ನೀವು ಹೇಳಿದಂತೆಯೇ ಆ ಘಟನೆ ಗಾಥೆಯಿದೆ. ಇನ್ನು ಅಮರಾದೇವಿಯ ಬಗ್ಗೆ ಹೇಳುವುದಾದರೆ, ಆಕೆ ಪಾಪ ಮಾಡುತ್ತಿದ್ದಳೆ? ಸಾವಿರ ವರಹ ಸಿಕ್ಕರೂ ಆಕೆ ಏಕೆ ನಿರಾಕರಿಸಿದಳು? ಆಕೆಗೆ ಅವಕಾಶ ಸಿಕ್ಕಿರಲಿಲ್ಲ. ರಹಸ್ಯತೆಯ ಬಗ್ಗೆ ಖಚಿತತೆ ಇರಲಿಲ್ಲ. ಯಾಚಿಸುವವನು ಯೋಗ್ಯನೂ ಆಗಿರಲಿಲ್ಲ. ಜಗತ್ತಿನಲ್ಲಿ ನಿಂದಾಭಯದಿಂದಾಗಿ ಆಕೆಗೆ ಅವಕಾಶ ಹೊಂದಿರಲಿಲ್ಲ. ನರಕದ ಭಯವೂ ಆಕೆಗಿತ್ತು. ಆಕೆಗೆ ಪಾಪದ ಪರಿಣಾಮದ ಕಹಿಫಲ ತಿಳಿದಿತ್ತು. ಮೇಲಾಗಿ ಆಕೆ ತನ್ನ ಪತಿಯನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ. ಆಕೆ ಆತನನ್ನು ಅತಿಯಾಗಿ ಪ್ರೀತಿಸುತ್ತಿದ್ದಳು. ಆಕೆಯು ಧರ್ಮವನ್ನು ಗೌರವಿಸುತ್ತಿದ್ದಳು, ಅಧರ್ಮವನ್ನು ದ್ವೇಷಿಸುತ್ತಿದ್ದಳು ಮತ್ತು ಆಕೆ ಸಂಪ್ರದಾಯದ ಜೀವನ ಮುರಿಯಲು ಇಚ್ಛಿಸಲಿಲ್ಲ. ಇವೆಲ್ಲಾ ಕಾರಣಗಳಿಂದ ಆಕೆಗೆ ಅವಕಾಶ ಹೊಂದಿಕೆಯಾಗಿರಲಿಲ್ಲ.

ಮತ್ತೆ ಆಕೆಯು ಪಾಪ ನಿರಾಕರಿಸಲು ಕಾರಣವೇನೆಂದರೆ ಆಕೆಗೆ ಜಗತ್ತಿನಿಂದ ರಹಸ್ಯವನ್ನು ಕಾಪಾಡುವುದರ ಬಗೆಗೆ ಖಚಿತತೆಯಿರಲಿಲ್ಲ. ಆಕೆ ಮಾನವ ರಹಸ್ಯ ಕಾಪಾಡಿದರೂ, ಅಮನುಷ್ಯರುಗಳಿಂದ ಮುಚ್ಚಿಡಲು ಆಗುತ್ತಿರಲಿಲ್ಲ. ಆಕೆಯು ಅಮನುಷ್ಯರುಗಳಿಂದಲೂ ರಹಸ್ಯ ಕಾಪಾಡಿದರೂ ಸಹಾ, ಪರರ ಚಿತ್ತವನ್ನು ಅರಿಯುವ ಪಬ್ಬಜಿತರಿಂದ ರಹಸ್ಯ ಕಾಪಾಡಲು ಸಾಧ್ಯವಿರಲಿಲ್ಲ. ಅವರಿಂದ ಕಾಪಾಡಿದರೂ ದೇವತೆಗಳಿಂದ ರಹಸ್ಯ ಕಾಪಾಡಲು ಸಾಧ್ಯವಿಲ್ಲ ಹಾಗು ಅವರಿಂದಲೂ ರಹಸ್ಯ ಕಾಪಾಡಿದರೂ, ಆಕೆ ತನ್ನಿಂದಲೇ ಪಾಪಲಜ್ಜೆ ಘಾತಿಸುತ್ತದೆ. ಆಕೆ ತನ್ನ ಬಗ್ಗೆಯು ಅಜ್ಞಾನಿಯಾಗಿದ್ದರೂ, ಅಧರ್ಮದ ಪರಿಣಾಮದಿಂದ ಪಾರಾಗುವಂತಿರಲಿಲ್ಲ. ಈ ರೀತಿಯಾಗಿ ಹಲವಾರು ಕಾರಣಗಳಿಂದ, ಆಕೆಗೆ ರಹಸ್ಯ ಕಾಣದೆ, ಆಕೆ ಪಾಪವೆಸಗಲಿಲ್ಲ.

ಮತ್ತೆ ಆಕೆಯು ಪಾಪವಿಮುಖಳಾಗಲು ಇನ್ನೊಂದು ಕಾರಣವಿದೆ. ಅದೆಂದರೆ ಯಾಚಿಸುವವನು ಯೋಗ್ಯ ಪ್ರೇಮಿಯಾಗಿರಲಿಲ್ಲ. ಮಹೂಸತನು ಮೇಧಾವಿಯಾಗಿದ್ದನು. ಆತನು ಒಳ್ಳೆ ಗುಣಲಕ್ಷಣಗಳಿಂದ ಕೂಡಿದ್ದನು. ಅವು ಯಾವುವೆಂದರೆ ಆತನು ಧೈರ್ಯಶಾಲಿಯಾಗಿದ್ದನು, ಶೂರನಾಗಿದ್ದನು, ಪಾಪಲಜ್ಜೆಯಿಂದ ಕೂಡಿದ್ದನು. ಹಲವಾರು ಅನುಯಾಯಿಗಳನ್ನು ಹೊಂದಿದ್ದನು. ಹಲವರು ಮಿತ್ರರನ್ನು ಹೊಂದಿದ್ದನು. ಕ್ಷಮಾಶೀಲನಾಗಿದ್ದನು, ಶೀಲವಂತನಾಗಿದ್ದನು, ಸತ್ಯವಾದಿಯಾಗಿದ್ದನು, ಶುಚಿಸಂಪನ್ನನಾಗಿದ್ದನು, ಅಕ್ರೋಧದಿಂದಿದ್ದನು, ಉಬ್ಬಿಹೋಗುತ್ತಿರಲಿಲ್ಲ, ನಿರಹಂಕಾರಿ ಯಾಗಿದ್ದನು, ಅಸೂಯಾರಹಿತನಾಗಿದ್ದನು, ಪ್ರಯತ್ನಶಾಲಿಯಾಗಿದ್ದನು, ಕುಶಲದ ಸಂಗ್ರಾಹಕನಾಗಿದ್ದನು, ಜನಪ್ರಿಯನಾಗಿದ್ದನು, ದಾನಿಯಾಗಿದ್ದನು, ಮೈತ್ರಿಯಿಂದ ಕೂಡಿದ್ದನು, ವಿಧೇಯತೆಯಿಂದ ಕೂಡಿದ್ದನು, ಠಕ್ಕತನವಿರಲಿಲ್ಲ, ಮಾಯಾವಿತನವಿರಲಿಲ್ಲ, ಬುಧ್ಧಿಸಂಪನ್ನನಾಗಿದ್ದನು, ಕೀತರ್ಿವಂತನಾಗಿದ್ದನು, ವಿದ್ಯಾಸಂಪನ್ನನಾಗಿದ್ದನು, ಅವಲಂಬಿತರಿಗೆ ಹಿತೈಷಿಯಾಗಿದ್ದನು, ಸರ್ವರಿಂದಲೂ ಶ್ಲಾಘ್ಯಗೊಳ್ಳಲ್ಪಟ್ಟವನು, ಧನವಂತನು ಮತ್ತು ಯಶಸ್ವಿಯಾಗಿದ್ದನು. ಈ ರೀತಿಯ 28 ಗುಣಗಳಿಂದ ಕೂಡಿದ ಮಹೊಸಧನನ್ನು ಅಮರಾದೇವಿ ಹೊಂದಿದ್ದರಿಂದ ಆತನಿಗೆ ಸರಿಸಮಾನರಿಲ್ಲದ ಬೇರೆ ಯಾರನ್ನು ಆಕೆ ಪ್ರೇಮಿಯೆಂದು ಒಪ್ಪಲಿಲ್ಲ, ಆದ್ದರಿಂದಾಗಿ ಆಕೆ ಪಾಪವನ್ನು ಮಾಡಲಿಲ್ಲ.

ಬಹುಚೆನ್ನಾಗಿ ವಿವರಿಸಿದಿರಿ ನಾಗಸೇನ, ನೀವು ಹೇಳಿದುದರಲ್ಲಿ ನನ್ನ ಒಪ್ಪಿಗೆಯಿದೆ.


9. ಅರಹಂತ ಅಭಯಾನ ಪನ್ಹೊ (ಅರಹಂತರ ನಿಭರ್ಿತಿ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ಅರಹಂತರು ಎಲ್ಲಾ ಭಯಗಳಿಂದ ಮತ್ತು ಕಂಪನಗಳಿಂದ ಮುಕ್ತರು. ಆದರೆ ಇನ್ನೊಂದೆಡೆ ಹೇಳುವುದಾದರೆ ರಾಜಗೃಹ ನಗರದಲ್ಲಿ ಧನಪಾಲಕ ಆನೆಗೆ (ನಾಲಾಗಿರಿ) ಮದೋನ್ಮತ್ತನನ್ನಾಗಿಸಿ ಬುದ್ಧರನ್ನು ಕೊಲ್ಲಿಸಲು ಕಳುಹಿಸಿದಾಗ ಆ ರಭಸ ಕಂಡು 500 ಅರಹಂತರು ಪರಾರಿಯಾದರು, ಕೇವಲ ಆನಂದ ಒಬ್ಬರೇ ಅಲ್ಲಿದ್ದರು. ಇದು ಹೇಗೆ ನಾಗಸೇನ? ಆ ಅರಹಂತರು ಭೀತಿಯಿಂದ ಓಡಿಹೋದರೆ? ಅಥವಾ ತಥಾಗತರು ಅಳಿದುಹೋಗಲೆಂದು ಹಾಗೇ ಮಾಡಿದರೆ? ನಮ್ಮ ದಾರಿ ನಮಗೆ, ಅವರೇ ಏನಾದರೂ ಮಾಡಲಿ ಎಂದು ಯೋಚಿಸಿ ತೊರೆದರೆ, ಅಥವಾ ತಥಾಗತರ ಬೃಹತ್ಶಕ್ತಿ ಗಮನಿಸಲು ದಾರಿಬಿಟ್ಟರೇ? ಹೇಳಿ ಭಂತೆ ನಾಗಸೇನ, ಅರಹಂತರಲ್ಲಿ ಭಯವಿಲ್ಲದಿದ್ದರೆ, ಈ ಘಟನೆಯು ಸುಳ್ಳಾಗುತ್ತದೆ. ಈ ಘಟನೆ ಸತ್ಯವಾಗಿದ್ದಲ್ಲಿ ಆ ಗಾಥೆಯು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಕೋನ ಇಕ್ಕಟ್ಟಿನ ಪ್ರಶ್ನೆಯಾಗಿದೆ ನಿಮಗೆ ಹಾಕಿದ್ದೇನೆ ಮತ್ತು ಇದನ್ನು ನೀವೇ ಬಿಡಿಸಬೇಕು.(131)

ಓ ಮಹಾರಾಜ, ಭಗವಾನರು ಅರಹಂತರಲ್ಲಿ ಭಯವಿರುವುದಿಲ್ಲ ಎಂದು ಹೇಳಿರುವುದು ಸತ್ಯವೇ ಆಗಿದೆ. ಆದರೆ ಆ ಘಟನೆಯು ನೀವು ಹೇಳಿದ ಹಾಗಿಲ್ಲ. ಆಗ ಅರಹಂತರು ದಾರಿಬಿಟ್ಟರು, ಪರಾರಿಯಾಗಲಿಲ್ಲ. ಆನಂದರವರು ತಥಾಗತರ ರಕ್ಷಣೆಗೆಂದು ಆನೆಯ ಮುಂದೆ ಹೋದರು. ಆದರೆ ತಥಾಗತರ ಮೈತ್ರಿಬಲದಿಂದಾಗಿ ಆನೆಯು ಮಂಡಿಯೂರಿ ಶರಣಾಯಿತು. ಆದರೆ ಆ ಭಿಕ್ಷುಗಳು ಹಾಗೆ ಮಾಡಿದ್ದು ಭಯದಿಂದಲೂ ಅಲ್ಲ, ಹಾಗೆಯೇ ತಥಾಗತರಿಗೆ ಹಾನಿಯಾಗಲಿ ಎಂದೂ ಸಹ ಅಲ್ಲ. ಅರಹಂತರಲ್ಲಿ ಭಯಕ್ಕೆ ಕಾರಣವಾಗಿರುವುದೆಲ್ಲಾ ನಾಶವಾಗಿದೆ. ಅದರಿಂದಾಗಿ ಅವರು ಸಹಾ ಭಯಮುಕ್ತರಾಗಿದ್ದಾರೆ. ಓ ಮಹಾರಾಜ, ಈ ವಿಶಾಲಧರೆಯು ಜನರು ಭೂಮಿ ಅಗೆದರೆ ಭಯಪಡುವುದೇ? ಅಥವಾ ಇಬ್ಭಾಗವಾದೀತೆಂದು ಅಥವಾ ಸಮುದ್ರದ ಭಾರವೆಂದು ಅಥವಾ ಪರ್ವತಗಳ ಭಾರ ಎಂದು ಭಯಪಡುವುದೇ?

ಖಂಡಿತ ಇಲ್ಲ ಭಂತೆ.

ಏಕೆ?

ಏಕೆಂದರೆ ವಿಶಾಲಧರೆಗೆ ಭಯಪಡುವಂತಹ ಕಾರಣವೇ ಇಲ್ಲ.

ಅದೇರೀತಿಯಲ್ಲಿ ಓ ರಾಜ, ಅರಹಂತರಲ್ಲೂ ಭಯಕ್ಕೆ ಯಾವ ಕಾರಣಗಳಿರುವುದಿಲ್ಲ. ಪರ್ವತವು ಇಬ್ಭಾಗವಾದಿತೆಂದು ಭಯಪಡುವುದೇ? ಅಥವಾ ಬೀಳುವುದೆಂದು ಅಥವಾ ಸುಟ್ಟುಹೋಗುವದೆಂದು ಭಯಪಟ್ಟೇತೆ?

ಖಂಡಿತ ಇಲ್ಲ ಭಂತೆ.

ಏಕಿಲ್ಲ.

ಏಕೆಂದರೆ ಭಯಕ್ಕೆ ಕಾರಣವಾದುದು ಯಾವುದು ಇಲ್ಲದಿರುವುದರಿಂದಾಗಿ.


ಅದೇರೀತಿಯಲ್ಲಿ ಓ ಮಹಾರಾಜ, ಅರಹಂತರು ಸಹಾ ಒಂದುವೇಳೆ ಜಗತ್ತಿನ ಎಲ್ಲಾ ಜೀವಿಗಳು ಭಯಾನಕವಾಗಿ ಒಮ್ಮೆಗೆ ಆಕ್ರಮಣ ಮಾಡಿದರೂ ಸಹಾ ಅರಹಂತರಲ್ಲಿ ಲವಲೇಶವು ಕಂಪನವಾಗುವುದಿಲ್ಲ, ಭೀತಿಪಡುವುದಿಲ್ಲ. ಏಕೆಂದರೆ ಅವರಲ್ಲಿ ಭಯವು ಉದಯಿಸಲು ಕಾರಣವಾಗಲಿ ಸ್ಥಿತಿಯಾಗಲಿ ಇಲ್ಲ. ಓ ಮಹಾರಾಜ, ಅಂದು ಅರಹಂತರಲ್ಲಿ ಈ ಬಗೆಯ ಚಿಂತನೆ ಮೂಡಿತು. ಇಂದು ಅತ್ಯುತ್ತಮರಾದವರಲ್ಲಿ ಅತ್ಯುತ್ತಮರಾದ ಬುದ್ಧರು, ಜಿನವಾಸಭರು, ಖ್ಯಾತ ನಗರವಾದ ರಾಜಗೃಹಕ್ಕೆ ಪ್ರವೇಶಿಸುತ್ತಿರುವರು, ಇಲ್ಲಿ ಧನಪಲ (ನಾಲಾಗಿರಿ) ಆನೆಯು ಸಹಾ ಬೀದಿಗಳಿಂದ ನುಗ್ಗಿ ಈ ಕಡೆಯೇ ಬರುತ್ತಿದೆ. ಪೂಜ್ಯ ಆನಂದರವರು ಭಗವಾನರಲ್ಲಿ ಇಟ್ಟಂತಹ ಭಕ್ತಿ ಇಂದು ಪ್ರಕಟಪಡಿಸಬೇಕು. ನಾವು ಈಗ ದಾರಿಬಿಡದೆ ಹೋದರೆ ಆನಂದರವರ ಭಕ್ತಿಯಾಗಲಿ, ಆನೆಯ ಆಗಮನವು ಆಗುವುದಿಲ್ಲ, ಆದ್ದರಿಂದಾಗಿ ನಾವು ದಾರಿಬಿಡೋಣ. ಇಂದು ಆನಂದರವರ ಭಕ್ತಿ ಹಾಗು ಭಗವಾನರ ಮೈತ್ರಿಯ ಶಕ್ತಿ ಜನರು ಕಂಡು ಶ್ರದ್ಧಾವಂತರಾಗಿ, ಕ್ಲೇಷ ಬಂಧನಗಳಿಂದ ಮುಕ್ತರಾಗುವರು ಮತ್ತು ಆನಂದರವರ ಗುಣವು ಪ್ರಕಟಿತವಾಗುವುದು ಹೀಗಾಗಿ ಅರಹಂತರು ಆನೆ ಬರುವಂತೆಯೇ ದಾರಿ ಬಿಟ್ಟರು.

ಭಂತೆ ನಾಗಸೇನ, ಬಹುಚೆನ್ನಾಗಿ ಈ ಸಮಸ್ಯೆ ಪರಿಹರಿಸಿದಿರಿ, ಖಂಡಿತವಾಗಿಯೂ ಅರಹಂತರು ಭೀತರಾಗುವುದಿಲ್ಲ, ಹಾಗೆಯೇ ಕಂಪನಮಯರಾಗುವುದಿಲ್ಲ. ಈ ರೀತಿ ಯೋಚಿಸಿಯೇ ದಾರಿ ಬಿಟ್ಟರೆಂದು ನಾನು ಒಪ್ಪುತ್ತೇನೆ.


10. ಬುದ್ಧಸಬ್ಬಞ್ಞಬಾವ ಪನ್ಹೊ (ಬುದ್ಧರ ಸರ್ವಜ್ಞತೆಯ ಬಗ್ಗೆ ಪ್ರಶ್ನೆ)


19. ಭಂತೆ ನಾಗಸೇನ, ನೀವು ಹೇಳಿದಿರಿ, ತಥಾಗತರು ಸರ್ವಜ್ಞರೆಂದು, ಆದರೆ ಮತ್ತೊಂದೆಡೆ ನೀವು ಹೀಗೂ ಹೇಳಿದಿರಿ. ಸಾರಿಪುತ್ತ ಹಾಗು ಮೊಗ್ಗಲಾನರಂತಹ ನಾಯಕರನ್ನು ಒಳಗೊಂಡ ಭಿಕ್ಖುಗಣಗಳನ್ನು ಭಗವಾನರು ಹೊರ ಕಳುಹಿಸಿದ್ದರು. ಆಗ ಶಾಕ್ಯರಾದ ಚಾತುಮ ಮತ್ತು ಬ್ರಹ್ಮಾ ಸಬನಿಪತಿಯವರು ಬೀಜ ಮತ್ತು ಕರುವಿನ ಉಪಮೆ ನೀಡಿ ಭಗವಾನರಿಂದ ಕ್ಷಮೆ ಸಿಗುವಂತೆ ಮಾಡಿದರು. ಸತ್ಯಾಸತ್ಯತೆಗಳನ್ನು ಬೆಳಕಿನಲ್ಲಿ ಕಾಣುವಂತೆ ಮಾಡಿದರು. ಇದು ಹೇಗೆ ಸಾಧ್ಯ ನಾಗಸೇನ? ಭಗವಾನರಿಗೆ ಆ ಎರಡು ಉಪಮೆಗಳು ಅಗೋಚರವಾಗಿತ್ತೇ? ಅದನ್ನು ಅವರಿಂದಲೇ ಕಾಣುವಂತಾಯಿತೆ? ಆದರೆ ಅವರಿಗೆ ಮೊದಲೇ ಗೊತ್ತಿಲ್ಲದಿದ್ದರೆ ಅವರು ಸರ್ವಜ್ಞರಲ್ಲ. ಅವರಿಗೆ ಮೊದಲೇ ಗೊತ್ತಿದ್ದರೆ, ಅವರು ತಪ್ಪಿತಸ್ಥರಾದ ಭಿಕ್ಷುಗಳನ್ನು ಬಲವಂತವಾಗಿ ಹೊರದಬ್ಬಬಹುದಿತ್ತು. ಹಾಗೇ ಮಾಡಿದಾಗಲು ಅವರಲ್ಲಿ ದಯೆರಹಿತತೆಯು ವ್ಯಕ್ತವಾಗುತ್ತಿತ್ತು. ಇದು ಸಹಾ ದ್ವಿ-ಅಂಚಿನ ಪೇಚಿನ ಸಮಸ್ಯೆಯಾಗಿದೆ. ನಿಮಗೆ ಹಾಕುತ್ತಿದ್ದೇನೆ ಮತ್ತು ಇದನ್ನು ನೀವೇ ಬಿಡಿಸಬೇಕು. (132)

ಓ ಮಹಾರಾಜ, ಖಂಡಿತವಾಗಿ ತಥಾಗತರು ಸರ್ವಜ್ಞ ಸಂಪನ್ನರು ಆಗಿದ್ದರು. ಭಗವಾನರು ಭಿಕ್ಷುಗಳನ್ನು ಸರಿದಾರಿಗೆ ತರಲು ಕೆಲವು ನಿರ್ವಹಣ ತಂತ್ರಗಳನ್ನು ಮಾಡುತ್ತಿದ್ದರು. ಭಗವಾನರು ಸರ್ವಜ್ಞಾ ಸಂಪನ್ನರಾಗಿದ್ದರೂ ಸಹಾ ಆ ಉಪಮೆಗಳನ್ನು ಆಲಿಸಿ, ಭಿಕ್ಷುಗಳನ್ನು ಕ್ಷಮಿಸಿ ಕಳುಹಿಸಿದರು. ಓ ರಾಜ, ಭಗವಾನರು ಧಮ್ಮ ಸ್ವಾಮಿಗಳಾಗಿದ್ದಾರೆ, ಆ ಉಪಮೆಗಳು ಭಗವಾನರಿಂದಲೇ ಬೋಧಿಸಲ್ಪಟ್ಟಿತ್ತು. ಆದರೆ ಇಲ್ಲಿ ಭಗವಾನರ ಮನವೊಲಿಸಿ ಕ್ಷಮಿಸುವಂತೆ ಮಾಡಲು ಅವರು ಹಾಗೆ ಮಾಡಿದರು. ಓ ಮಹಾರಾಜ, ಇದು ಹೇಗೆಂದರೆ ಪತ್ನಿಯು ತನ್ನ ಪತಿಯನ್ನು ಒಲಿಸಿಕೊಳ್ಳಲು ಪತಿಯ ವಸ್ತುಗಳಿಂದಲೇ ಮನವೊಲಿಸುವಳು. ಆಗ ಪತಿಯು ಒಪ್ಪುವನು. ಅಥವಾ ರಾಜಕ್ಷೌರಿಕನು ರಾಜನಿಗೆ ಒಲಿಸಿ ಚಿನ್ನದ ಬಾಚಣಿಕೆಯಿಂದ ಬಾಚುತ್ತ ಆ ವಸ್ತುಗಳೆಲ್ಲವೂ ರಾಜನದ್ದೇ ಆಗಿದ್ದರೂ ಮನವೊಲಿಸುತ್ತ ಅವರಿಂದ ಒಪ್ಪಿಗೆ ಪಡೆಯುತ್ತಾನೆ.

ಅಥವಾ ವಿದ್ಯಾಥರ್ಿಯು ಗುರುವಿನ ಸೇವೆ ಮಾಡುತ್ತ, ಗುರುವು ಮನೆಗೆ ತಂದಂತಹ ಆಹಾರದಿಂದಲೇ, ಅದನ್ನು ಬಡಿಸಿ ಸಂತೋಷಪಡಿಸಿ, ಒಲಿಸಿ ಅವರ ಒಪ್ಪಿಗೆ ಪಡೆಯುತ್ತಾನೆ.

ಬಹು ಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ, ನಿಮ್ಮ ಉತ್ತರಕ್ಕೆ ನನ್ನ ಒಪ್ಪಿಗೆಯಿದೆ.


ನಾಲ್ಕನೆಯ ಸಬ್ಬನ್ಯುತಜ್ಞಾನ ವರ್ಗ ಮುಗಿಯಿತು (ಇದರಲ್ಲಿ 10 ಪ್ರಶ್ನೆಗಳಿವೆ 

ಮಿಲಿಂದ ಪನ್ಹ 3. ಪಣಾಮಿತ ವಗ್ಗೋ milinda panha panamita vaggo

                                         

3. ಪಣಾಮಿತ ವಗ್ಗೋ

1. ಶ್ರೇಷ್ಠ ಧಮ್ಮದ ಪ್ರಶ್ನೆ


ಭಂತೆ ನಾಗಸೇನ, ಭಗವಾನರಿಂದ ಹೀಗೆ ಹೇಳಲ್ಪಟ್ಟಿದೆ: ಓ ವಾಸೆಟ್ಟೆ, ಇದೇ ಧಮ್ಮವಾಗಿದೆ. ಇದು ಲೋಕಗಳಲ್ಲೇ ಶ್ರೇಷ್ಠವಾಗಿದೆ. ಹೇಗೆಂದರೆ ನಾವು ಹಿಂದೆ ನೋಡಿದಂತೆ ಮತ್ತೆ ಮುಂದೆ ಬರುವಂತಹದಕ್ಕೆ ಹೋಲಿಸಿದಾಗಲೂ ಸಹಾ. ಅಂದರೆ ಮೆತ್ತ ಶ್ರದ್ಧೆಯಿಂದ ಕೂಡಿದ ಉಪಾಸಕನು ಸೋತಪನ್ನನಾಗಿದ್ದರೂ ಸಹಾ ಯಾವುದೇ ಆರ್ಯಸ್ಥಿತಿ ಮುಟ್ಟದ ಭಿಕ್ಷುವಿಗೆ ಗೌರವಿಸಬೇಕೆಂದು, ಎದ್ದು ಪೀಠವನ್ನು ಬಿಡಬೇಕೆಂದು ಸಂಘದ ಯಾವುದೇ ಸದಸ್ಯನಿಗೂ, ಸಮಣೇರನಿಗೂ ಗೌರವಿಸಬೇಕೆಂದು ಹೇಳುತ್ತಾರೆ. ಈಗ ಹೇಳಿ ಧಮ್ಮವೇ ಶ್ರೇಷ್ಠವಾಗಿದ್ದ ಪಕ್ಷದಲ್ಲಿ ಈ ಸಂಪ್ರದಾಯವು ಅಸಮಂಜಸವಾಗುತ್ತದೆ, ಸಂಪ್ರದಾಯವೇ ಇರಲಿ ಎಂದಾದರೆ ಧಮ್ಮವೇ ಶ್ರೇಷ್ಠವೆನ್ನುವುದು ಸುಳ್ಳಾಗುತ್ತದೆ. ಇದು ಸಹಾ             ದ್ವಿ-ಅಂಶಿಕ ಪೇಚಿನ ಪ್ರಶ್ನೆಯಾಗಿದೆ. ಇದನ್ನು ನಿಮಗೆ ಹಾಕಿದ್ದೆನೆ, ನೀವು ಇದನ್ನು ಪರಿಹರಿಸಬೇಕು. (109)


ಓ ಮಹಾರಾಜ, ನೀವು ಹೇಳಿದ್ದನ್ನು ಭಗವಾನರು ಹೇಳಿದ್ದಾರೆ ಮತ್ತು ನೀವು ವಿನಯದ ಸಂಪ್ರದಾಯವನ್ನು ಸರಿಯಾಗಿಯು ತಿಳಿಸಿರುವಿರಿ. ಆದರೆ ಆ ನಿಯಮಕ್ಕೆ ಕಾರಣವಿದೆ, ಅದು ಈ ರೀತಿಯಾಗಿದೆ, ಏನೆಂದರೆ ಸಮಣನ ಸಮಣತ್ವಕ್ಕೆ 20 ವೈಯಕ್ತಿಕ ಸದ್ಗುಣಗಳನ್ನು ಹೊಂದಿರುತ್ತಾರೆ ಮತ್ತು ಬಾಹ್ಯ ಚಿಹ್ನೆಗಳನ್ನು ಹೊಂದಿರುತ್ತಾರೆ. ಆದ್ದರಿಂದಲೇ ಸಮಣನು ಗೌರವಕ್ಕೆ ಅರ್ಹನಾಗಿದ್ದಾನೆ ಮತ್ತು ಆದರಕ್ಕೆ ಅರ್ಹನಾಗಿರುತ್ತಾನೆ, ಅವು ಯಾವುವು? ಸಂಯಮದ ಶ್ರೇಷ್ಠ ಆಕಾರ, ನಿಯಮಗಳ ಪಾಲನೆಯಲ್ಲಿ ಅಗ್ರತೆ, ಶ್ರೇಷ್ಠಚರ್ಯೆ, ಶಾಂತತೆಯಲ್ಲಿ ವಿಹರಿಸುವಿಕೆ, ಸಂಯಮತೆ, ಇಂದ್ರೀಯ ನಿಗ್ರಹತೆ, ಶಾಂತಿಪಾಲನೆ, ಸೊರಕ್ಖಂ (ಭವ್ಯ/ಶ್ರೇಷ್ಠಸುಖ), ಏಕಾಂತವಾಸಿ, ಏಕಾಂತತೆಯಲ್ಲಿ ಆನಂದಿಸುವಿಕೆ, ಧ್ಯಾನದಲ್ಲಿ ತಲ್ಲೀನತೆ, ಹಿರಿಓತಪ್ಪ (ಪಾಪಲಜ್ಜೆ, ಪಾಪಭೀತಿ ಹೊಂದಿರುವಿಕೆ), ಪ್ರಯತ್ನಶಾಲಿಯಾಗಿರುವಿಕೆ, ಜಾಗೃತನಾಗಿರುವಿಕೆ, ಶಿಕ್ಷಣದಲ್ಲಿ ಆನಂದಿಸುವವನು, ಪಠಿಸುವವನು, ಧಮ್ಮಾವಿನಯದ ಪ್ರಶಂಸಿಸುವವನು, ಶೀಲಾನಂದನು, ಪ್ರಾಪಂಚಿಕತೆಯ ಗೃಹ (ಆಲಯ)ವನ್ನು ತ್ಯಜಿಸಿರುವವನು, ಶೀಲಗಳನ್ನು ಪೂರ್ಣಗೊಳಿಸಿದವನು, ಕಾಷಾಯ ಧರಿಸುವಿಕೆ, ಮುಂಡನ ಮಾಡಿಕೊಂಡರುವಿಕೆ, ಸಾಧನೆಯ ವಿಷಯ ಬಂದಾಗ ಇಡೀ ಸಂಘದ ಸದಸ್ಯರು ಹೀಗೆಯೇ ಜೀವಿಸುತ್ತಾರೆ, ಹೀಗಿದ್ದು ಯಾವ ಕೊರತೆಯಿಲ್ಲದೆ, ಎಲ್ಲದರಲ್ಲೂ ಪೂರ್ಣವಾಗಿ, ಸಿದ್ಧಿಸಿ, ಹೀಗೆಯೇ ಸಾಧಿಸುತ್ತಾ ಅರಹತ್ವವನ್ನು ಗಳಿಸುತ್ತಾರೆ. ಆಗ ಅವರಲ್ಲಿ ಕಲಿಯಬೇಕಾದ್ದು ಏನೂ ಉಳಿದಿರುವುದಿಲ್ಲ. ಅವರು ಎಲ್ಲಾ ಭೂಮಿಗಳನ್ನು ದಾಟುತ್ತ ಅಮರತ್ವ ಗಳಿಸುತ್ತಾರೆ. ಸಮಣರು ಅರಹಂತರ ಸಂಗದಲ್ಲಿರುತ್ತಾರೆ. ಆದ್ದರಿಂದ ಶ್ರದ್ಧಾಳು ಗೃಹಸ್ಥನು ಸಮಣರಿಗೆ ಪೂಜಿಸುವುದು, ಗೌರವಿಸುವುದು ಯೋಗ್ಯವೆಂದು ಭಾವಿಸುತ್ತಾನೆ. ಸಮಣರು ಪುಥುಜ್ಜನ (ಸಾಮಾನ್ಯ ವ್ಯಕ್ತಿ) ಆಗಿದ್ದರೂ ಅವರನ್ನೇ ಗೌರವಿಸುತ್ತಾನೆ. ಮೇಲಾಗಿ ಓ ಮಹಾರಾಜ, ಸಮಾಜ ವಿಹಾರದ ಸಂಪ್ರದಾಯಗಳನ್ನು ಮುಂದುವರೆಸುತ್ತಾ ಬರುತ್ತಾರೆ. ಈ ಕಾರಣದಿಂದಲೂ ಅವರಿಗೆ ಗೌರವಿಸುತ್ತಾನೆ. ಸಮಣರು ಅರಹಂತರ ಜೊತೆಯಲ್ಲಿರುತ್ತಾರೆ. ಅವರ ಆಸವಗಳು ನಾಶವಾಗಿರುತ್ತವೆ. ತಾನು ಅಂತಹವರ ಜೊತೆಯಲ್ಲಿಲ್ಲ ಎಂದು ಗೃಹಸ್ಥನಿಗೆ ಭಾಸವಾಗುತ್ತದೆ. ಆದ್ದರಿಂದಲೇ ಆತನು ಸಾಮಾನ್ಯ ಭಿಕ್ಷುವಿಗೂ ಗೌರವಿಸುತ್ತಾರೆ. ಸಾಮಾನ್ಯ ಭಿಕ್ಷುವು ಪಾತಿಮೊಕ್ಖದ ನಿಯಮ ಪಾಲಿಸುತ್ತಾನೆ. ಆದರೆ ತಾನಲ್ಲ. ಅವರು ಸಂಘಕ್ಕೆ ಸೇರಿ ಭಗವಾನರ ಬೋಧನೆಯನ್ನು ಹರಡಿಸುತ್ತಾರೆ. ಆದರೆ ತಾನು ಆ ಕಾರ್ಯ ಮಾಡಲು ಅಸಮರ್ಥ, ಅವರು ಪಾಲಿಸುವ ಅಸಂಖ್ಯ ನಿಯಮಗಳನ್ನು ತಾನು ಪಾಲಿಸಲಾರೆ. ಹೀಗೆಲ್ಲಾ ಯೋಚಿಸಿ ಆತನು ಸಾಮಾನ್ಯ ಭಿಕ್ಷುವಿಗೂ ಗೌರವಿಸುತ್ತಾನೆ. ಸಮಣರು ಸಮಣತ್ವದ ಬಾಹ್ಯ ಚಿಹ್ನೆಗಳನ್ನು ಧರಿಸಿ ಬುದ್ಧರ ಇಚ್ಛೆಗಳನ್ನು ಪಾಲಿಸುತ್ತಿದ್ದಾರೆ. ಆದರೆ ತಾನು ಅದರಿಂದ ದೂರವಿದ್ದೇನೆ ಎಂದು ಆತನಿಗೆ ಗೊತ್ತಿರುತ್ತದೆ. ತಾನು ಸಮಣರಂತೆ ಗಡ್ಡ, ಕೂದಲುಗಳನ್ನು ತೆಗೆಸಿ, ಸುವರ್ಣ ಆಭರಣಗಳನ್ನು ತ್ಯಜಿಸಿ, ಸತ್ಯತೆಯ ಆಭರಣವನ್ನು ಸಮಣರಂತೆ ಧರಿಸಲು ಸಾಧ್ಯವಿಲ್ಲ ಎಂದು ಉಪಾಸಕನಿಗೆ ತಿಳಿದಿರುತ್ತದೆ. ಹೀಗಾಗಿ ಆತನು ಭಿಕ್ಷುಗಳಿಗೆ ಗೌರವಿಸುವುದೇ ಸರಿಯೆಂದು ನಿರ್ಧರಿಸುತ್ತಾನೆ.

ಮೇಲಾಗಿ ಓ ಮಹಾರಾಜ, ಸಮಣರಲ್ಲಿರುವ 20 ವ್ಯಕ್ತಿಗತ ಸದ್ಗುಣಗಳು ಮತ್ತು ಬಾಹ್ಯದ ಎರಡು ಚಿಹ್ನೆಗಳು ಹಾಗು ಸಮಣರು ಪರರಿಗೂ ಸಹಾ ಸುಶಿಕ್ಷಣ ನೀಡುತ್ತಾರೆ. ಇದನ್ನು ಕಂಡಂತಹ ಸೋತಪನ್ನ ಉಪಾಸಕನು ಸಹಾ, ತಾನು ಆ ಸಂಪ್ರದಾಯದಲ್ಲಿಲ್ಲ ಎಂದು ಅರಿತು ಭಿಕ್ಷುವನ್ನು ವಂದಿಸುವುದೇ ಯೋಗ್ಯವೆಂದು ಅರಿಯುತ್ತಾನೆ. ಮಹಾರಾಜ ಊಹಿಸಿ ರಾಜಕುಮಾರನು ರಾಜಪುರೋಹಿತ ಬ್ರಾಹ್ಮಣನ ಬಳಿ, ಕ್ಷತ್ರಿಯರ ಕರ್ತವ್ಯಗಳನ್ನು ಕಲಿಯುತ್ತಾನೆ, ವಿದ್ಯೆಗಳನ್ನು ಕಲಿಯುತ್ತಾನೆ, ಮುಂದೆ ರಾಜಕುಮಾರನು ರಾಜನಾದ ಮೇಲು ಸಹಾ ಆ ಪುರೋಹಿತನಿಗೆ ಆತನು ಗೌರವಿಸುತ್ತಾನೆ. ಈ ರೀತಿ ಕುಟುಂಬದ ಸಂಪ್ರದಾಯಗಳನ್ನು ಪಾಲಿಸುತ್ತಾನೆ, ಹೀಗೆಯೇ ಸೋತಪನ್ನ ಉಪಾಸಕನು, ಸೋತಪನ್ನ ನಲ್ಲದ ಭಿಕ್ಷುವಿಗೆ ಗೌರವಿಸುತ್ತಾನೆ.

ಮತ್ತೆ ಓ ರಾಜ, ನಿಮಗಂತೂ ಭಿಕ್ಷುವಿನ ಘನತೆಗಳ, ಅಸಮಾನ ಬದ್ಧತೆಯು ತಿಳಿದಿದೆ. ಒಂದುವೇಳೆ ಗೃಹಸ್ಥನು ಶ್ರದ್ಧೆಯಿಂದ ಆರ್ಯ ಮಾರ್ಗವನ್ನು ಅನುಸರಿಸಿದರೆ ಮುಂದೆ ಆತನು ಅರಹಂತನಾಗುತ್ತಾನೆ, ಆಗ ಆತನಿಗೆ ಎರಡು ದಾರಿಗಳು ಮಾತ್ರ ಇರುತ್ತದೆ. ಆತನು ಹಾಗೆಯೇ ಆ ದಿನವೇ ಪರಿನಿಬ್ಬಾಣ ಪಡೆಯುತ್ತಾನೆ. ಇಲ್ಲದೆ ಹೋದರೆ ಆತನು ಭಿಕ್ಷುವಾಗಿ ಸಂಘಕ್ಕೆ ಸೇರುತ್ತಾನೆ. ಓ ಮಹಾರಾಜ, ಆ ತ್ಯಾಗದ ಸ್ಥಿತಿಯು, ಭವ್ಯವಾದುದು ಮತ್ತು ಅತ್ಯುನ್ನತವಾದುದು, ಆದ್ದರಿಂದಲೇ ಆತನು ಸಂಘವನ್ನು ಸೇರುತ್ತಾನೆ.

ಭಂತೆ ನಾಗಸೇನ, ಈ ಸೂಕ್ಷ್ಮ ಸಮಸ್ಯೆಯು ನಿಮ್ಮ ಪ್ರಬಲವಾದ ಮತ್ತು ಶ್ರೇಷ್ಠ ಪ್ರಜ್ಞಾದಿಂದ ಪರಿಹಾರವಾಯಿತು. ನಿಮ್ಮಷ್ಟು ಪ್ರಾಜ್ಞರಲ್ಲದಿದ್ದರೆ, ಬೇರ್ಯಾರು ಇದನ್ನು ಪರಿಹರಿಸಲಾರರು.

2. ಸಬ್ಬಸತ್ತಹಿತಫರಣ ಪನ್ಹೊ (ಸರ್ವಜೀವಿಗಳ ಹಿತ ಪ್ರಶ್ನೆ)

ಭಂತೆ ನಾಗಸೇನ, ನೀವು ಹೇಳುವಿರಿ ತಥಾಗತರು ಸರ್ವಜೀವಿಗಳನ್ನು ಹಿಂಸೆಯಿಂದ ರಕ್ಷಿಸುವರು ಹಾಗು ಹಿತಸುಖವನ್ನುಂಟು ಮಾಡುವರು. ಮತ್ತೆ ನೀವು ಹೇಳಿದಂತಹ ಪ್ರಸಂಗವೇನೆಂದರೆ ಭಗವಾನರು ಉರಿಯುತ್ತಿರುವ ಜ್ವಾಲೆಯ ಉಪಮೆಯ ಸುತ್ತವನ್ನು ಉಪದೇಶಿಸುತ್ತಿರುವಾಗ ಅದನ್ನು ಆಲಿಸುತ್ತಿರುವ ಅರವತ್ತು ಭಿಕ್ಷುಗಳ ಬಾಯಲ್ಲಿ ಬಿಸಿಯಾದ ರಕ್ತವು ಹೊರಬಂದಿತು. ಈ ಸುತ್ತವನ್ನು ಉಪದೇಶಿಸುವಾಗಲೇ ಭಿಕ್ಷುಗಳಿಗೆ ಈ ಹಾನಿಯಾಗಿದೆ, ಒಳಿತಾಗಿಲ್ಲ. ಆದ್ದರಿಂದ ಇಲ್ಲಿ ಮೊದಲ ಹೇಳಿಕೆ ಸತ್ಯವಾಗಿದ್ದಲ್ಲಿ ಎರಡನೆಯದು ಸುಳ್ಳಾಗಿದೆ ಮತ್ತು ಎರಡನೆಯದು ಸರಿಯಾಗಿದ್ದರೆ ಮೊದಲನೆಯದು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಶಿಕ ಪೇಚಿನ ಸಮಸ್ಯೆಯಾಗಿದೆ. ಇದನ್ನು ನಿಮಗೆ ಹಾಕಿದ್ದೇನೆ, ಅದನ್ನು ನೀವೇ ಬಿಡಿಸಬೇಕು. (110)

ಓ ಮಹಾರಾಜ, ನೀವು ಹೇಳಿದ ಎರಡು ಹೇಳಿಕೆಗಳು ಸರಿಯಾಗಿದೆ, ಆದರೆ ಆ ಭಿಕ್ಷುಗಳಿಗೆ ಭಗವಾನರಿಂದೇನೂ ಆಗಲಿಲ್ಲ, ಅದು ಅವರಿಂದಲೇ ಆಯಿತು.

ಆದರೆ ನಾಗಸೇನ, ಭಗವಾನರು ಆ ಉಪದೇಶ ನೀಡದಿದ್ದಲ್ಲಿ ಅವರು ಬಿಸಿರಕ್ತವನ್ನು ವಾಂತಿ ಮಾಡುತ್ತಿದ್ದರೆ?

ಇಲ್ಲ, ಆ ಭಿಕ್ಷುಗಳು ಭಗವಾನರ ಉಪದೇಶವನ್ನು ತಪ್ಪಾಗಿ ಗ್ರಹಿಸಿದರು, ಆಗ ಅವರ ದೇಹದೊಳಗೆ ಉರಿಯೆದ್ದು ಬಾಯಿಂದ ರಕ್ತಕಾರಿದರು.

ಹಾಗಾದರೆ ಅದು ಆಗಲೇಬೇಕಲ್ಲವೆ ಭಂತೆ ನಾಗಸೇನ, ಅದು ತಥಾಗತರ ಕ್ರಿಯೆಯಿಂದಲೇ ಆಯಿತು. ಅದಕ್ಕೆ ಕಾರಣ ತಥಾಗತರೇ ಆಗಿದ್ದಾರೆ. ಆದ್ದರಿಂದಲೇ ಅವರಿಗೆ ಹಾನಿಯಾಗಿದೆ. ಊಹಿಸಿ ನಾಗಸೇನ, ಸರ್ಪವೊಂದು ಹುತ್ತದೊಳಗೆ ಹೋಗಿದೆ. ಮಣ್ಣಿನ ಅಗತ್ಯವಿದ್ದ ಮನುಷ್ಯನೊಬ್ಬನು ಹುತ್ತವನ್ನು ಅಗೆಯತೊಡಗಿದನು. ಪರಿಣಾಮವಾಗಿ ಹುತ್ತದ ದ್ವಾರವು ಮುಚ್ಚಿಹೋಗಿ ಹಾವು ಉಸಿರಾಡಲು ಆಗದೆ ಸತ್ತಿತು. ಈಗ ಹೇಳಿ ಅದು ಸಾವನ್ನಪ್ಪಿದ್ದು ಆ ಮಾನವನ ಕ್ರಿಯೆಯಿಂದಲೇ?

ಹೌದು ಓ ರಾಜ.

ಅದೇರೀತಿಯಾಗಿ ಭಂತೆ ನಾಗಸೇನ, ತಥಾಗತರಿಂದಲೇ ಅವರ ಹಾನಿಯಾಯಿತು.

ಓ ಮಹಾರಾಜ, ತಥಾಗತರು ಸುತ್ತವನ್ನು ಉಪದೇಶಿಸುತ್ತಿದ್ದುದು ಹೊಗಳಿಕೆಗಾಗಿ ಅಲ್ಲ, ಹಾಗೆಯೇ ದ್ವೇಷದಿಂದಲೂ ಅಲ್ಲ. ಇವೆರಡರಿಂದಲೂ ಮುಕ್ತರಾದ ಅವರು ಕರುಣೆಯಿಂದ ಉಪದೇಶಿಸಿದರು. ಅದನ್ನು ಯೋಗ್ಯವಾಗಿ ಆಲಿಸಿದವರು ಪ್ರಾಜ್ಞರಾಗುತ್ತಾರೆ. ಆದರೆ ಯಾರು ತಪ್ಪಾಗಿ ಗ್ರಹಿಸುವರೋ ಅವರು ಬೀಳುವರು. ಇದು ಹೇಗೆಂದರೆ ಓ ಮಹಾರಾಜ, ಒಬ್ಬ ಮನುಷ್ಯನು ಮಾವಿನ ಮರ ಅಥವಾ ನೇರಳೆಯ ಮರ ಅಥವಾ ಮಧುಕ ವೃಕ್ಷವನ್ನು ಅಲ್ಲಾಡಿಸುವಾಗ, ಅಂತಃಸಾರವುಳ್ಳ ಬಲವಾಗಿ ಅಂಟಿರುವುವು ಅಕ್ಷೊಭೆಯಿಂದಿರುತ್ತದೆ, ಆದರೆ ಕೊಳೆತ ಕಡ್ಡಿಗಳ ಮತ್ತು ಸಡಿಲವಾಗಿ ಅಂಟಿರುವವು ನೆಲಕ್ಕೆ ಬೀಳುವುವು. ಅದೇರೀತಿ ಅವರ ಉಪದೇಶವಾಗಿತ್ತು. ಓ ಮಹಾರಾಜ, ಇದು ಹೇಗೆಂದರೆ ರೈತನೊಬ್ಬನು ಗೋಧಿ ಬೆಳೆ ಪಡೆಯಲು ನೇಗಿಲು ಹೊಡೆಯುತ್ತಾನೆ. ಆದರೆ ಹಾಗೆ ಮಾಡುವಾಗ ಸಾವಿರಾರು ಹುಲ್ಲು ನಾಶವಾಗುತ್ತದೆ. ಅಥವಾ ಇನ್ನೊಂದು ಉದಾಹರಣೆ ಕೇಳಿ. ಸಿಹಿಗಾಗಿ ಮನುಷ್ಯನು ಕಬ್ಬನ್ನು ಯಂತ್ರದಿಂದ ಹಿಂಡುತ್ತಾನೆ, ಆದರೆ ಹಾಗೆ ಮಾಡುವಾಗ ಕೆಲವು ಸಣ್ಣ ಕೀಟಗಳು ಸಹಾ ಸತ್ತುಹೋಗುವವು. ಅದೇರೀತಿಯಾಗಿ ಯಾರ ಮನಸ್ಸುಗಳು ಪಕ್ವವಾಗಿವೆಯೋ, ಸಿದ್ಧವಾಗಿದೆಯೋ ಅವರಿಗೆ ತಥಾಗತರು ಹೊಗಳಿಕೆಯಿಲ್ಲದೆ ಅಥವಾ ದ್ವೇಷವಿಲ್ಲದೆ ಧಮ್ಮೋಪದೇಶ ಮಾಡುವರು. ಅದನ್ನು ಯೋಗ್ಯವಾಗಿ ಗ್ರಹಿಸಿದವರು ಪ್ರಾಜ್ಞರಾಗುತ್ತಾರೆ, ತಪ್ಪಾಗಿ ಗ್ರಹಿಸಿದವರು ಬೀಳುತ್ತಾರೆ.

ಹಾಗಾದರೆ ಬಿದ್ದ ಆ ಭಿಕ್ಖುಗಳಿಗೆ ಹಾಗೆ ಆಗಿದ್ದು ಉಪದೇಶ ಆಲಿಸಿಯೇ?

ಬಡಗಿಗಾರನು ಮರದ ತುಂಡಿಗೆ ಏನೂ ಮಾಡದೆ ನೇರವಾಗಿ ಉಪಯುಕ್ತವಾಗಿ ಮಾಡಬಲ್ಲನೇ?

ಇಲ್ಲ ಭಂತೆ, ಆತನು ಆ ಬಾಗುವಿಕೆಗಳನ್ನೆಲ್ಲಾ ದೂರೀಕರಿಸಬೇಕಾಗುತ್ತದೆ. ನಂತರವೇ ಅದು ಉಪಯುಕ್ತವಾಗಬಲ್ಲದು.

ಅದೇರೀತಿಯಲ್ಲಿ ಓ ಮಹಾರಾಜ, ತಥಾಗತರು ಕೇವಲ ಭಿಕ್ಖುಗಳನ್ನು ಗಮನಿಸಿಯೆ, ನೋಡಲು ಸಿದ್ಧರಾಗಿರುವವರ ಕಣ್ಣುಗಳನ್ನು ತೆರೆಯಲಾಗದು. ಆದರೆ ತಪ್ಪಾಗಿ ಗ್ರಹಿಸುವವರನ್ನು ಬಿಟ್ಟು ರಕ್ಷಿಸಬಹುದಾದಂತಹವರನ್ನು ರಕ್ಷಿಸುತ್ತಾರೆ ಮತ್ತು ಇದೆಲ್ಲವೂ ಅವರ ಸ್ವತಃ ಕ್ರಿಯೆಯಿಂದಾಗುತ್ತದೆ. ಓ ಮಹಾರಾಜ, ಹೇಗೆಂದರೆ, ಆಲದ ಮರದಂತೆ ಅಥವಾ ಬಿದಿರಿನ ಮರದಂತೆ ಅಥವಾ ಹೆಸರಕತ್ತೆಯಂತೆ ಜನ್ಮ ನೀಡಿ ಸಾಯುವಂತೆ ಪಾಪಚಿತ್ತವುಳ್ಳವರು ಬೀಳುವರು, ಓ ಮಹಾರಾಜ, ಹೇಗೆ ಡಕಾಯಿತರು ತಮ್ಮ ದುಷ್ಕೃತ್ಯದಿಂದಾಗಿಯೇ ತಮ್ಮ ಕಣ್ಣುಗಳನ್ನು ಕೀಳಿಸಲ್ಪಡುವರೋ ಅಥವಾ ಶೂಲಕ್ಕೆ ಹಾಕಲ್ಪಡುವರೋ ಅಥವಾ ಗಲ್ಲಿಗೇರಿಸಲ್ಪಡುವರೋ ಅದೇರೀತಿಯಾಗಿ ಪಾಪಚಿತ್ತವುಳ್ಳವರು, ತಮ್ಮ ತಪ್ಪುಗ್ರಹಿಕೆಯಿಂದ ತಥಾಗತರ ಬೋಧನೆಯಿಂದ ಹೊರಗೆ ಬೀಳುವರು.

ಅದೇರೀತಿಯಲ್ಲಿ ಆ ಅರವತ್ತು ಭಿಕ್ಷುಗಳು ತಥಾಗತರ ಕ್ರಿಯೆಯಿಂದ ಅಥವಾ ಬೇರೆ ಯಾರಿಂದಲೂ ಬೀಳಲಿಲ್ಲ, ಬದಲಾಗಿ ತಮ್ಮ ಕ್ರಿಯೆಗಳೊಂದರಿಂದಲೇ ಹಾಗಾದರು. ಊಹಿಸಿ, ಓ ರಾಜ, ಒಬ್ಬ ಮಾನವನು ಎಲ್ಲರಿಗೂ ಅಮೃತವನ್ನು ನೀಡುತ್ತಾನೆ. ಆದರೆ ಅದನ್ನು ತಿಂದಕೂಡಲೇ ಅವರೆಲ್ಲರೂ ಆರೋಗ್ಯ ಹಾಗು ದೀಘರ್ಾಯುಗಳು, ರೋಗಗಳಿಂದ ಮುಕ್ತರಾಗುತ್ತಿದ್ದರು. ಆದರೆ ಒಬ್ಬನು ತನ್ನ ಅಜೀರ್ಣತೆಯಿಂದಾಗಿ ಅದನ್ನು ಸೇವಿಸಿಯು ಮೃತಪಟ್ಟನು. ಈಗ ಹೇಳಿ ಮಹಾರಾಜ, ಅಮೃತ ನೀಡಿದವನು ದೋಷಿಯೇ?

ಇಲ್ಲ ಭಂತೆ.

ಓ ಮಹಾರಾಜ, ಅದೇರೀತಿಯಲ್ಲಿ ತಥಾಗತರು ದಶಸಹಸ್ರ ಲೋಕ ವ್ಯವಸ್ಥೆಯಲ್ಲಿರುವ ದೇವ ಹಾಗು ಮಾನವರಿಗೆ ಅಮರತ್ವದ ಉಪದೇಶ ನೀಡಿದ್ದಾರೆ. ಯಾರು ಸಾಮಥ್ರ್ಯವುಳ್ಳವರು ಅದನ್ನು ಆಲಿಸಿ, ಪ್ರಾಜ್ಞರಾಗಿ ಮುಕ್ತರಾಗಿರುವರು. ಅವರಲ್ಲಿ ಯಾರು ಸಹಾ ನಾಶವಾಗಲಿಲ್ಲ ಮತ್ತು ಬೀಳಲಿಲ್ಲ.

ಭಂತೆ ನಾಗಸೇನ, ನೀವು ತುಂಬಾ ಚೆನ್ನಾಗಿ ಇದನ್ನು ಪರಿಹರಿಸಿದಿರಿ. ನೀವು ಹೇಳಿದ್ದನ್ನು ನಾನು ಒಪ್ಪುವೆ.

3. ವಸ್ತು ಗುಹ್ಯ ನಿದರ್ಶನ ಪ್ರಶ್ನೆ


ಭಂತೆ ನಾಗಸೇನ, ಭಗವಾನರಿಂದ ಹೀಗೆ ಹೇಳಲ್ಪಟ್ಟಿದೆ: ಕಾಯದಲ್ಲಿ ಸಂಯಮ ಸಾಧುವಾದುದು (ಒಳ್ಳೆಯದು). ಮಾತಿನಲ್ಲೂ ಸಂಯಮ ಸಾಧುವಾದುದು. ಮನಸ್ಸಿನಲ್ಲೂ ಸಂಯಮ ಸಾಧುವಾದುದು. ಎಲ್ಲದರಲ್ಲೂ ಸಂಯಮ ಸಾಧುವಾದುದು. ಆದರೂ ಸಹ ತಥಾಗತರು ನಾಲ್ಕು ಪರಿಷತ್ತಿನ ಮಧ್ಯೆ, ಬ್ರಾಹ್ಮಣ ಸೇಲನಿಗೆ ಬಹಿರಂಗವಾಗಿ ತೋರಿಸಬಾರದ್ದನ್ನು ತೋರಿಸಿದರು (ಅಂದರೆ ಕೋಶದಿಂದ ಆವೃತವಾದ ಗುಹ್ಯ). ಅವರು ಹೀಗೆ ಮಾಡಿದ್ದರೆ ಮೊದಲನೆಯ ಗಾಥೆ ಸುಳ್ಳಾಗುತ್ತದೆ. ಅವರು ತೋರಿಸಿಲ್ಲ ಎಂದರೆ ಎರಡನೆಯ ಹೇಳಿಕೆ ಸುಳ್ಳಾಗುತ್ತದೆ. ಇದು ಅತಿ ಸೂಕ್ಷ್ಮವಾದ ದ್ವಿಮುಖ ಪೇಚಿನ ಪ್ರಶ್ನೆಯಾಗಿದೆ, ನಿಮಗೆ ಹಾಕಿದ್ದೇನೆ ಬಿಡಿಸಿ. (111)

ಓ ಮಹಾರಾಜ, ನೀವು ಹೇಳಿದ ಎರಡೂ ಹೇಳಿಕೆಗಳು ಸರಿಯಾಗಿಯೇ ಇದೆ. ಆದರೆ ಇಲ್ಲಿ ಗಮನಿಸಿ. ಭಗವಾನರು ಸೇಲ ಬ್ರಾಹ್ಮಣನಿಗೆ ತೋರಿಸಿದ್ದು ಎಲ್ಲರಿಗೂ ಕಾಣುವಂತೆ ಬಹಿರಂಗವಾಗಿ ಅಲ್ಲ, ಬದಲಾಗಿ ತಮ್ಮ ಅತೀಂದ್ರಿಯ ಬಲದಿಂದಾಗಿ ಕೇವಲ ಸೇಲನಿಗೆ ಕಾಣುವಂತೆ (ಬಿಂಬ) ಚಿತ್ರವನ್ನು ಸೃಷ್ಟಿಸಿದರು. ಹೀಗೆ ಏಕೆ ಮಾಡಿದ್ದರೆಂದರೆ ಆತನಿಗೆ ತಥಾಗತರ ಮೇಲೆ ಸಂಶಯ ಉಂಟಾಗಿತ್ತು. ಅದಕ್ಕೆ ಪರಿಹಾರವೆಂದರೆ ಆತನು ನಂಬುವಂತೆ 32 ಮಹಾಪುರುಷ ಲಕ್ಷಣಗಳನ್ನು ತೋರಿಸುವುದೇ ಆಗಿತ್ತು. ಆದ್ದರಿಂದಾಗಿ ಆತನಿಗೆ 32 ಮಹಾಪುರುಷ ಲಕ್ಷಣಗಳನ್ನು ಆತನಿಗೆ ತೋರಿಸಿದರು. ಕೋಶದಿಂದ ಆವೃತವಾಗಿದ್ದ ಗುಹ್ಯ ಹಾಗು ಉದ್ದವಾದ ನಾಲಿಗೆಯ ವಿನಃ ಆತನಿಗೆ ಎಲ್ಲವೂ ಗೋಚರವಾಗಿತ್ತು. ಅವೆರಡನ್ನು ಆತನು ಕಾಣಲು ಪರಿತಪಿಸುತ್ತಿದ್ದ, ಸಂಶಯ ಪಡುತ್ತಿದ್ದನು. ಆತನ ಸಂಶಯ ನಿವಾರಣೆಯಾದಾಗಲೇ ಆತನಿಗೆ ಬೋಧಿಸುವ ಧಮ್ಮ ಅರ್ಥವಾಗುತ್ತಿತ್ತು. ಆದ್ದರಿಂದಾಗಿ ಭಗವಾನರು ಹಾಗೆ ಮಾಡಬೇಕಾಯಿತು.

ಓ ಮಹಾರಾಜ, ಭಗವಾನರು ಉಪಾಯ ಕೌಶಲ್ಯದಲ್ಲಿ ನಿಪುಣರಾಗಿದ್ದರು. ಅವರು ಬಗೆಬಗೆಯ ಜನರಿಗೆ ವಿವಿಧರೀತಿಯಲ್ಲಿ ಪ್ರಜ್ಞಾ ಪ್ರಕಾಶ ನೀಡುತ್ತಿದ್ದರು. ಉದಾಹರಣೆಗೆ ಪೂಜ್ಯ ನಂದರನ್ನು ದೇವಲೋಕಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಅಪ್ಸರೆಯರನ್ನು ತೋರಿಸಿ ಮೊದಲು ಆಸೆ ಮೂಡಿಸಿ, ನಂತರ ವೈರಾಗ್ಯ ಉಂಟಾಗುವಂತೆ ಮಾಡಿದರು. ಅದೇರೀತಿ ಪೂಜ್ಯ ಚುಲ್ಲಪಂಥಕನಿಗೆ ಬಿಳಿಯ ಬಟ್ಟೆಯನ್ನು ಉಜ್ಜುತ್ತಾ ರಜೋಹರಣಂ ಜಪಿಸುವಂತೆ ಹೇಳಿ ಅಶುಭಾ ಧ್ಯಾನದಲ್ಲಿ ಜಾಗೃತನಾಗಿ ಅರಹಂತನನ್ನಾಗಿ ಮಾಡಿದರು. ಅದೇರೀತಿಯಲ್ಲಿ ಮಹಾರಾಜ, ತಥಾಗತರು ಯೋಗಞ್ಞರು ಉಪದೇಶ ಕೌಶಲ್ಯವುಳ್ಳವ ರಾಗಿದ್ದರು. ಆದ್ದರಿಂದಲೇ ಅವರು ಹಾಗೆ ಮಾಡಬೇಕಾಯಿತು.

ಸಾಧು ಭಂತೆ ನಾಗಸೇನ, ಬಹುವಿಧದ ಉದಾಹರಣೆ ನೀಡಿ, ಗಹನವಾದುದನ್ನು ಅಗಹನ ಮಾಡಿದಿರಿ. ಅಂಧಕಾರವನ್ನು ಬೆಳಗಿಸಿದಿರಿ, ಬಿಡಿಬಿಡಿಯಾಗಿ ವಿಶ್ಲೇಷಿಸಿದಿರಿ, ಪರವಾದವನ್ನು ಭಂಗ ಮಾಡಿದಿರಿ. ಜಿನಪುತ್ರರಲ್ಲಿ ಚಕ್ಷುವನ್ನು ಉತ್ಪಾದಿಸಿದಿರಿ. ನೀವು ನಿಜಕ್ಕೂ ಗಣಪರಿವಾರಕ್ಕೆ ನಾಯಕರಾಗಿರುವಿರಿ.

4. ಫರೂಸವಾಚಾಭಾವ ಪನ್ಹೊ (ಅಪ್ರಿಯ ನುಡಿಯ ಪ್ರಶ್ನೆ)

ಭಂತೆ ನಾಗಸೇನ, ಧಮ್ಮ ಸೇನಾನಿಯಾದ ಸಾರಿಪುತ್ತರು ಹೀಗೆ ಹೇಳಿದ್ದರು: ಭಿಕ್ಷುಗಳೇ, ತಥಾಗತರು ಸೌಜನ್ಯಯುತ ಮಾತಿನಲ್ಲಿ ಪರಿಶುದ್ಧರು ಹಾಗು ಸಂಪೂರ್ಣರಾಗಿದ್ದಾರೆ. ಅವರ ವಾಣಿಯಲ್ಲಿ ಯಾವ ತಪ್ಪನ್ನು ಹುಡುಕಲಾಗದು, ಇದು ಪರರು ಅರಿಯಬಾರದು ಎಂಬ ಸ್ವಾರ್ಥವು ಅವರಲ್ಲಿಲ್ಲ. ಆದರೆ ಮತ್ತೊಂದೆಡೆ ತಥಾಗತರು ಪ್ರಥಮ ಪಾರಾಜಿಕ ನಡೆಸುತ್ತಿದ್ದಾಗ, ಕಲಂದದ ಸುದಿನ್ನನಿಗೆ ಅಪ್ರಿಯ ನುಡಿಗಳಿಂದ ಸಂಬೋಧಿಸಿ ವ್ಯರ್ಥವಾದ (ದಡ್ಡ) ವ್ಯಕ್ತಿ ಎಂದು ಹೇಳಿದರು. ಮತ್ತು ಆ ಥೇರ ಆ ರೀತಿಯಿಂದ ಕರೆಯಲ್ಪಟ್ಟಾಗ, ಗುರುಗಳ ಮೇಲೆ ಭೀತಿಯಿಂದ, ಪಶ್ಚಾತ್ತಾಪಕ್ಕೆ ಒಳಗಾಗಿ ಅತನಿಗೆ ಆಗ ಶ್ರೇಷ್ಠ ಮಾರ್ಗವು ಅರಿಯಲಾಗಲಿಲ್ಲ. ಈಗ ಇಲ್ಲಿ ಮೊದಲ ವಾಕ್ಯವು ಸರಿಯಾಗಿದ್ದರೆ, ಕಲಂದದ ಸುದಿನ್ನನಿಗೆ ಹಾಗೆ ನುಡಿದಿದ್ದು ಸುಳ್ಳಾಗುತ್ತದೆ. ಅದೇ ನಿಜವಾಗಿದ್ದರೆ ಸಾರಿಪುತ್ತರ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿಮುಖ ಇಕ್ಕಟ್ಟಿನ ಪ್ರಶ್ನೆಯಾಗಿದೆ. ನಿಮಗೆ ಕೇಳಿದ್ದೇನೆ, ನೀವೇ ಇದನ್ನು ಪರಿಹರಿಸಬಲ್ಲಿರಿ. (112)

ಓ ಮಹಾರಾಜ, ಸಾರಿಪುತ್ತರ ಹೇಳಿಕೆ ಸತ್ಯವಾಗಿದೆ. ಹಾಗೆಯೇ ಭಗವಾನರು ಸುದಿನ್ನನಿಗೆ ಒಂದು ಸಂದರ್ಭದಲ್ಲಿ ಹಾಗೆ ಕರೆದಿದ್ದು ನಿಜವೇ ಆಗಿದೆ. ಆದರೆ ಹಾಗೆ ನುಡಿದದ್ದು ಒರಟುತನದಿಂದಲ್ಲ, ಅಲ್ಲಿ ಆತನ ನಿಜಸ್ವರೂಪವನ್ನು ಆತನಿಗೆ ತಿಳಿಯಪಡಿಸಿದರಷ್ಟೇ. ಇದರಿಂದಾಗಿ ಅತನಿಗೆ ಹಾನಿಯಾಗಲಿಲ್ಲ, ಬದಲಾಗಿ ಲಾಭವೇ ಆಯಿತು. ಆತನು ತನ್ನ ತಪ್ಪನ್ನು ತಿದ್ದಿಕೊಂಡನು. ಓ ಮಹಾರಾಜ, ಯಾವುದೇ ಮನುಷ್ಯನು ಈ ಜನ್ಮದಲ್ಲಿ ಆರ್ಯಸತ್ಯಗಳ ಸಾಕ್ಷಾತ್ಕಾರದ ಅರಿವು ಪಡೆದಿಲ್ಲದವರಾದರೆ ಆತನ ಮಾನವತ್ವವು ವ್ಯರ್ಥವೇ ಸರಿ. ಆದರೆ ಆತನು ವಿಭಿನ್ನವಾಗಿ ವತರ್ಿಸಿದರೆ ಆತನು ಬದಲಾಗುತ್ತಾನೆ, ಆದ್ದರಿಂದ ಭಗವಾನರು ಕಲಂದದ ಸುದಿನ್ನನಿಗೆ ಅಪ್ರಿಯವಾದ ಸತ್ಯವನ್ನು ನುಡಿದರೇ ಹೊರತು ಸತ್ಯವಿಹಿನ ವಿಷಯಗಳೇನೂ ಹೇಳಲಿಲ್ಲ.

ಆದರೆ ನಾಗಸೇನ, ಒಬ್ಬನು ಇನ್ನೊಬ್ಬನಿಗೆ ಬಯ್ಯುವಾಗಲು ಸತ್ಯವನ್ನೇ ಹೇಳುತ್ತಿರುತ್ತಾನೆ. ಆದರೂ ಆತನಿಗೆ ದಂಡವನ್ನು ಹಾಕುತ್ತೇವೆ, ಆತನು ತಪ್ಪಿತಸ್ಥನಾಗುತ್ತಾನೆ. ಅದೂ ಅಲ್ಲದೆ ಅಪ್ರಿಯವಾದ ಸತ್ಯದ ನುಡಿಗಳನ್ನು ಹೇಳಿದಾಗ ವಿನಯಭಂಗ ವಾಗುವುದಿಲ್ಲವೇ?

ಓ ಮಹಾರಾಜ, ಜನರು ಅಪರಾಧಿಗಳಿಗೆ ಗೌರವದಿಂದ ಎದ್ದು ಬಾಗಿ ನಮಸ್ಕರಿಸುವುದನ್ನು, ಸತ್ಕಾರ ಮಾಡುವುದನ್ನು, ಉಡುಗೊರೆಗಳನ್ನು ನೀಡುವುದನ್ನು ನೀವು ಕೇಳಿರುವಿರಾ?

ಇಲ್ಲ ಭಂತೆ, ವ್ಯಕ್ತಿಯು ಯಾವುದೇರೀತಿಯ ಅಪರಾಧಗಳನ್ನು ಮಾಡಿರಲಿ, ಆತನು ಆಕ್ಷೇಪಣೆಗೆ, ದಂಡನೆಗೆ, ಶಿಕ್ಷೆಗೆ ಅರ್ಹನಾಗುತ್ತಾನೆ. ಅಪರಾಧಿಗಳಿಗೆ ಸಾಮಾನ್ಯವಾಗಿ ತಲೆ ತೆಗೆಯುತ್ತಾರೆ ಅಥವಾ ಚಿತ್ರಹಿಂಸೆ ನೀಡುತ್ತಾರೆ, ಬಂಧಿಸುತ್ತಾರೆ ಅಥವಾ ಮರಣದಂಡನೆ ವಿಧಿಸುತ್ತಾರೆ.

ಓ ಮಹಾರಾಜ, ಭಗವಾನರು ನ್ಯಾಯಯುತವಾಗಿ ವತರ್ಿಸುವರೇ ಅಥವಾ ಇಲ್ಲವೇ?

ಭಂತೆ, ಭಗವಾನರು ನ್ಯಾಯಯುತವಾಗಿ, ಯೋಗ್ಯಯುತವಾಗಿ, ಸಮಂಜಸ ವಾಗಿಯೇ ವತರ್ಿಸುವರು, ಅವರು ಸರ್ವಲೋಕದಲ್ಲಿ ಪರರಿಗಿಂತ ಹೆಚ್ಚಾಗಿ, ಪಾಪಲಜ್ಜೆ ಹಾಗು ಪಾಪಭೀತಿಯಿಂದ ಕೂಡಿರುವರು. ಅವರು ಕೆಟ್ಟವರೊಂದಿಗೆ ಸೇರುವುದಾಗಲಿ ಅಥವಾ ಕೆಟ್ಟದ್ದನ್ನು ಮಾಡುವುದಾಗಲಿ ಮಾಡಲಾರರು?

ಓ ಮಹಾರಾಜ, ಒಬ್ಬ ವೈದ್ಯನು, ಎಲ್ಲಾ ದೋಷಗಳು ಆಕ್ರಮಣ ಮಾಡಿದ, ಇಡೀ ಶರೀರ ಅಸ್ತವ್ಯಸ್ತಗೊಂಡ, ರೋಗಗಳಿಂದ ತುಂಬಿದ ರೋಗಿಗೆ ಪ್ರಿಯವಾಗಿರುವ ಸಿಹಿಯಾಗಿರುವ ಔಷಧಿಗಳನ್ನು ನೀಡಬಹುದೇ?

ಖಂಡಿತವಾಗಿ ಇಲ್ಲ, ಆ ರೋಗಿಯು ಮುಕ್ತನಾಗಬೇಕಾದರೆ, ಆತನಿಗೆ ಹರಿತವಾದ ಮತ್ತು ಕಹಿಯಾದ ಔಷಧಿಗಳನ್ನೇ ನೀಡಬೇಕು.

ಓ ಮಹಾರಾಜ, ಅದೇರೀತಿಯಲ್ಲಿ ಭಗವಾನರು ಸಹಾ, ಪಾಪಗಳ ರೋಗಗಳನ್ನು ಹೊತ್ತಿರುವ ಭಿಕ್ಷುಗಳೊಂದಿಗೆ ವತರ್ಿಸುತ್ತಾರೆ. ತಥಾಗತರ ವಾಣಿಯು ನಿಷ್ಠುರವಾಗಿದ್ದರೂ ಸಹಾ ಜನರನ್ನು ಮೃದುವನ್ನಾಗಿಸಿ ಕೋಮಲವನ್ನಾಗಿಸುತ್ತದೆ. ಓ ಮಹಾರಾಜ, ಹೇಗೆ ಬಿಸಿನೀರನ್ನು ಮೃದುವನ್ನಾಗಿಸುವುದೋ, ಅದೇರೀತಿಯಲ್ಲಿ ತಥಾಗತರ ವಚನಗಳು ನಿಷ್ಠೂರವಾಗಿದ್ದರೂ, ಮೃದುವನ್ನಾಗಿಸುತ್ತದೆ, ಹಿತಕಾರಿಯಾಗಿವೆ. ಅದು ದಯಾಮಯ ತಂದೆಯು ತನ್ನ ಮಕ್ಕಳನ್ನು ತಿದ್ದುವ ರೀತಿಯಲ್ಲಿದೆ. ಓ ಮಹಾರಾಜ, ಹೇಗೆ ಕೆಟ್ಟ ವಾಸನೆಯ ಕಷಾಯಗಳನ್ನು, ಔಷಧಿಗಳನ್ನು ಸೇವಿಸಿದರೆ ಮಾನವನ ಶರೀರದ ದೌರ್ಬಲ್ಯಗಳು ನಾಶವಾಗುವವು. ಅದೇರೀತಿ ಬುದ್ಧ ವಚನವು ಅಪ್ರಿಯವಾಗಿದ್ದರೂ ಲಾಭವನ್ನು, ಹಿತವನ್ನು, ಸುಖವನ್ನು ತರುತ್ತದೆ. ಏಕೆಂದರೆ ಅದು ಕರುಣಾಭರಿತವಾಗಿದೆ. ಓ ಮಹಾರಾಜ, ಹೇಗೆ ಹತ್ತಿಯು ಮಾನವನ ಮೇಲೆ ಬಿದ್ದರೂ ಆತನಿಗೆ ಯಾವ ಗಾಯವು, ಹಾನಿಯೂ ಆಗುವುದಿಲ್ಲವೋ ಹಾಗೆಯೇ ತಥಾಗತರ ವಾಣಿಯು ಹಿತಕಾರಿಯಾಗಿದೆ.

ಒಳ್ಳೆಯದು ನಾಗಸೇನ, ಬಹುವಿಧದ ಉದಾಹರಿಸುವಿಕೆಯಿಂದಾಗಿ, ಕ್ಲಿಷ್ಟವಾದ ಈ ಸಮಸ್ಯೆ ಬಿಡಿಸಿದಿರಿ. ನೀವು ಹೇಳಿದ್ದನ್ನು ನಾನು ಒಪ್ಪುವೆ.

5. ರುಕ್ಖ-ಅಚೇತನಭಾವ ಪನ್ಹೊ (ವೃಕ್ಷದ ಪ್ರಶ್ನೆ)


ಭಂತೆ ನಾಗಸೇನ, ತಥಾಗತರು ಒಮ್ಮೆ ಹೀಗೆ ಹೇಳಿದ್ದಾರೆ ಬ್ರಾಹ್ಮಣ, ಏಕೆ ನೀನು ಅಚೇತನವಾದ ವಸ್ತುವಿನಲ್ಲಿ ಬೇಡಿಕೊಳ್ಳುವೆ? ಅದಂತು ಆಲಿಸದು, ಇದು. ಹೇಗಿದೆ? ಕ್ರಿಯಾತ್ಮಕವಾಗಿ, ಪ್ರಾಜ್ಞವಾಗಿ, ಜೀವಯುತವಾಗಿದೆಯೇ? ಈ ಕಾಡಿನ ಪಲಾಸ ವೃಕ್ಷ ಅಚೇತನಾ ವಸ್ತುವಾಗಿದೆ, ಇದರೊಂದಿಗೆ ನೀನು ಹೇಗೆ ಮಾತನಾಡುವೆ?

ಮತ್ತೊಂದೆಡೆ ಹೀಗೆ ಹೇಳಿದ್ದಾರೆ: ಮತ್ತೆ ಈ ಅಸ್ಪ ಮರವು ಪ್ರತಿಕ್ರಿಯೆ ಮಾಡುವುದು, ನಾನು ಭಾರಾಧ್ವಜ ಮಾತನಾಡುತ್ತಿರುವುದು ಕೇಳುತ್ತಿರುವೆಯಾ?

ಈಗ ಭಂತೆ ನಾಗಸೇನಾ, ವೃಕ್ಷವು ಅಚೇತನಾವಾಗಿದ್ದರೆ, ಅಸ್ಪ ವೃಕ್ಷವು ಬಾರಧ್ವಜನೊಂದಿಗೆ ಮಾತನಾಡಿದ್ದು ಸುಳ್ಳಾಗಿದೆ. ಆದರೆ ಇದು ನಿಜವಾಗಿದ್ದರೆ, ವೃಕ್ಷವು ಅಚೇತನಾ ಎನ್ನುವುದು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಶಿಕ ಪೇಚಿನ ಪ್ರಶ್ನೆಯಾಗಿದೆ, ಇದನ್ನು ನಿಮಗೆ ಹಾಕುತ್ತಿದ್ದೇನೆ, ಬಿಡಿಸಿ. (113)

ಒ ಮಹಾರಾಜ, ಭಗವಾನರು ವೃಕ್ಷವನ್ನು ಅಚೇತನಾ (ಮನಸ್ಸಿಲ್ಲದ್ದು) ವಸ್ತು ಎಂದಿದ್ದಾರೆ ಮತ್ತು ಬಾರದ್ವಜರೊಂದಿಗೆ ಮಾತನಾಡಿದ್ದು, ವ್ಯವಹಾರಿಕವಾಗಿ ಹೇಳಲಾಗಿದೆ. ಹೇಗೆಂದರೆ ಮರವು ಅಚೇತನಾ ಮಾತನಾಡಲಾರದು, ಆದರೆ ಮರದಲ್ಲಿರುವ ವೃಕ್ಷದೇವತೆಯು ಮಾತನಾಡಬಲ್ಲದು. ಇಲ್ಲಿ ವೃಕ್ಷ ದೇವತೆಗೆ ಮರವೆಂದು ಸಂಬೋಧಿಸಲಾಗಿದೆ. ಓ ಮಹಾರಾಜ, ಯಾವ ಬಂಡಿಯಲ್ಲಿ ಧಾನ್ಯ ತುಂಬುವರೋ, ಅದನ್ನು ಧಾನ್ಯದ ಬಂಡಿ ಎನ್ನುತ್ತಾರೆ. ಆ ಬಂಡಿಯನ್ನು ಧಾನ್ಯದಿಂದ ಏನೂ ಸಿದ್ಧಪಡಿಸಿರುವುದಿಲ್ಲ. ಆದರೂ ವ್ಯವಹಾರಿಕವಾಗಿ ಧಾನ್ಯದ ಬಂಡಿ ಎನ್ನುವೆವು. ಹಾಗೆಯೇ ಒಬ್ಬ ಮೊಸರನ್ನು ಕಡೆಯುತ್ತಿದ್ದರೆ, ಆತನಿಗೆ ಬೆಣ್ಣೆ ಕಡೆಯುತ್ತಿದ್ದಾರೆ ಎನ್ನುವೆವು. ಹಾಗೆಯೇ ಯಾವಾಗ ಒಬ್ಬ ವ್ಯಕ್ತಿ ಏನನ್ನಾದರೂ ಸಿದ್ಧಪಡಿಸುತ್ತಿದ್ದರೆ, ಅದೇ ಹೆಸರಿನಿಂದ ಆತನಿಗೆ ಕರೆಯುವರು. ಅದರಂತೆಯೇ ತಥಾಗತರು ಸಹಾ ಧಮ್ಮವನ್ನು ವಿವರಿಸುವಾಗ ಅವರ ಭಾಷೆಯಲ್ಲೇ ಹೇಳುತ್ತಾರೆ. ಏಕೆಂದರೆ ಅದು ಜನಹಿತಕಾರಿ ಆಗಿರುವುದರಿಂದಾಗಿ.
ತುಂಬಾ ಒಳ್ಳೆಯದು ನಾಗಸೇನ, ಇದು ನಿಜಕ್ಕೂ ಹೀಗೆ ಇದೆ, ನೀವು ಹೇಳಿದ್ದನ್ನು ನಾನು ಒಪ್ಪುತ್ತೇನೆ.

6. ಪಿಂಡಪಾತ ಮಹತ್ಫಲ ಪ್ರಶ್ನೆ


ಭಂತೆ ನಾಗಸೇನ, ಹೀಗೆ ಥೇರರಿಂದ ಪಠಿಸಲಾಗಿದೆ: ಯಾವಾಗ ಅವರು ಚುಂದನ ಮನೆಯಲ್ಲಿ ತಿಂದರೊ, ನಂತರ ಬುದ್ಧರು ಭಯಾನಕವಾದ ರೋಗದ ನೋವು ಅನುಭವಿಸಿದರು, ಅದು ಮರಣಾಂತಿಕ ನೋವಾಗಿತ್ತು. ಮತ್ತೆ ಭಗವಾನರು ಹೀಗೆ ಹೇಳಿದ್ದಾರೆ ಓ ಆನಂದ, ಎರಡು ದಾನಗಳು ಸಮಾನವಾದ ಮಹತ್ಪಲವಾದ ದಾನಗಳಾಗಿದೆ. ಸಮನಾದ ಪರಿಣಾಮ ತೋರುತ್ತದೆ, ಅದು ಬೇರೆ ಯಾವುದೇ ದಾನಕ್ಕಿಂತ ಅತ್ಯಂತ ಮಹತ್ಫಲಯುತವಾಗಿದೆ.

ಈಗ ಹೇಳಿ ಭಂತೆ ನಾಗಸೇನರವರೆ, ಅವರು ತಾಮ್ರಕಾರ ಚುಂದನ ಮನೆಯಲ್ಲಿ ಆಹಾರ ಸೇವಿಸಿಯೇ ಆ ಮರಣಾಂತಿಕ ನೋವು ಅನುಭವಿಸಿದ್ದರೆ. ಎರಡನೆಯ ಹೇಳಿಕೆ ಸುಳ್ಳಾಗುತ್ತದೆ, ಆದರೆ ಆ ಹೇಳಿಕೆಯೇ ನಿಜವಾದ ಪಕ್ಷದಲ್ಲಿ ಮೊದಲ ವಿವರಣೆ ಸುಳ್ಳಾಗುತ್ತದೆ. ಹೇಗೆತಾನೆ ಮರಣಾಂತಿಕ ನೋವುಕಾರಕ ದಾನವು ಮಹತ್ಫಲವಾಗಲು ಸಾಧ್ಯ? ಈ ವಿಪರೀತತೆಯ ಹೇಳಿಕೆಗಳ ಸತ್ಯಾಂಶ ವಿವರಿಸಿರಿ, ಜನರಿಗೂ ಸಹಾ ಈ ವಿಷಯದಲ್ಲಿ ಕುತೂಹಲವಿದೆ. ಕೆಲವರು ಲೋಭದಿಂದ ಅತಿ ತಿಂದು ಅಜೀರ್ಣ ವಾಗಿರಬಹುದೆ ಎಂದು ಯೋಚಿಸುತ್ತಾರೆ, ಆದ್ದರಿಂದ ಸತ್ಯವನ್ನು ಪ್ರಕಟಪಡಿಸಿ. (114)

ಓ ಮಹಾರಾಜ, ಎರಡುಬಗೆಯ ದಾನಗಳು ಮಹತ್ಫಲವಾಗಿವೆ. ಅವು ಸಮನಾದ ಫಲವನ್ನು, ಸಮನಾದ ಪರಿಣಾಮಗಳನ್ನು ನೀಡುತ್ತದೆ. ಅವು ಬೇರೆ ಯಾವುದೇ ದಾನಕ್ಕಿಂತ ಅತ್ಯಂತ ಮಹತ್ವತೆ ಪಡೆದಿವೆ. ಅವೆಂದರೆ ತಥಾಗತರು ಬೋಧಿಪ್ರಾಪ್ತಿಯ ಹಿಂದಿನ ದಾನ ಮತ್ತು ಪರಿನಿಬ್ಬಾಣಕ್ಕೆ ಹಿಂದಿನ ದಾನ. ಆ ಸಂದರ್ಭದ ದಾನ ಅತ್ಯಂತ ಮಹತ್ಫಲ ನೀಡುವುದು. ಆ ಸಂದರ್ಭದಲ್ಲಿ ದೇವತೆಗಳು ಸಹಾ ಆನಂದನಿಂದ ಹೀಗೆ ಯೋಚಿಸುವರು: ಇದು ತಥಾಗತರ ಕೊನೆಯ ಭೋಜನವಾಗಿದೆ. ಆಗ ಸೂಕರ ಮದ್ದವವನ್ನು ಸೇವಿಸಿದರು. ಆ ಆಹಾರವು ಉತ್ತಮ ಸ್ಥಿತಿಯಲ್ಲಿತ್ತು, ಹಗುರವಾಗಿತ್ತು, ಸುಖಕರವಾಗಿತ್ತು, ಸುವಾಸಿತವಾಗಿತ್ತು, ಜೀಣರ್ಿಸಲು ಸುಲಭವಾಗಿತ್ತು, ಅದರಿಂದಾಗಿಯೇ ಭಗವಾನರಿಗೆ ರೋಗ ಉಂಟಾಗಲಿಲ್ಲ. ಅದು ಅತಿಯಾದ ಶಾರೀರಿಕ ದುರ್ಬಲತೆ ಯಿಂದಾಗಿತ್ತು. ಏಕೆಂದರೆ ಅದರ ಕಾಲಾವಧಿಯು ಮೀರಿತ್ತು. ಅದರಿಂದಾಗಿ ರೋಗ ಉದಯಿಸಿತು ಮತ್ತು ಪರಿಸ್ಥಿತಿ ಕೆಡುತ್ತಾ ಬಂದಿತು. ಹೇಗೆಂದರೆ ಓ ರಾಜ, ಸಾಮಾನ್ಯ ಬೆಂಕಿಯು ಇಂಧನ ಸಿಕ್ಕರೆ ಇನ್ನಷ್ಟು ಉರಿಯುವಂತೆ ಅಥವಾ ಹೊಳೆಗೆ ಮಳೆಯ ಆಸರೆ ಸಿಕ್ಕರೆ ಪ್ರವಾಹವಾಗುವಂತೆ. ಹೀಗಾಗಿ ಓ ಮಹಾರಾಜ, ಅದು ಆಹಾರದ ದೋಷವಲ್ಲ, ಅಲ್ಲಿ ಕಾಲವನ್ನಷ್ಟೇ ಸೂಚಿಸಲಾಗಿದೆ. ಕಾರಣದಂತೆ ಸೂಚಿಸಿಲ್ಲ.

ಆದರೆ ಪೂಜ್ಯ ನಾಗಸೇನ, ಏತಕ್ಕಾಗಿ ಆ ಎರಡು ದಾನಗಳು ಅಷ್ಟು ಮಹತ್ಫಲಕಾರಿಯಾಗಿದೆ? (115)

ಏಕೆಂದರೆ ಆ ಆಹಾರದ ಪರಿಣಾಮವಾಗಿಯೇ (ಸಹಕಾರಿಯಾಗಿಯೇ) ಅವರು ಆ ಅತ್ಯುನ್ನತ ಸ್ಥಿತಿಗಳನ್ನು ಪ್ರಾಪ್ತಿಮಾಡಿದರು.

ಭಂತೆ ನಾಗಸೇನ, ಯಾವ ಸ್ಥಿತಿಗಳನ್ನು ಉದ್ದೇಶಿಸಿ ನೀವು ಮಾತನಾಡುತ್ತಿರುವಿರಿ?

ನವಸಮಾಪತ್ತಿಗಳನ್ನು ಅವರು ಆಗ ಅನುಲೋಮವಾಗಿ ಹಾಗು ವಿಲೋಮವಾಗಿ ನೆಲೆಸಿ ವಿಹರಿಸುತ್ತಾರೆ.


ಭಂತೆ ನಾಗಸೇನ, ಅವರು ಕೇವಲ ಆ ಎರಡು ದಿನಗಳಲ್ಲಿ ಮಾತ್ರ ಆ ಸ್ಥಿತಿಗಳನ್ನು ಅತ್ಯುನ್ನತ ಮಟ್ಟದಲ್ಲಿ ಪ್ರಾಪ್ತಿ ಮಾಡುತ್ತಾರೆಯೇ? (116)

ಹೌದು, ಮಹಾರಾಜ.

ಓಹ್ ಭಂತೆ ನಾಗಸೇನ, ಇದು ನಿಜಕ್ಕೂ ಅದ್ಭುತ ಸಂಗತಿಯಾಗಿದೆ, ಆಶ್ಚರ್ಯಕರ ಸಂಗತಿಯಾಗಿದೆ, ಅತಿಶ್ರೇಷ್ಠಕರವು ಹಾಗು ಭವ್ಯವಾದ ಆ ಎರಡು ದಾನಗಳು ಮಿಕ್ಕ ದಾನಗಳಿಗೆ ಹೋಲಿಸಲು ಸಾಧ್ಯವಾಗುವುದಿಲ್ಲ. ಆ ನವಸಮಾಪತ್ತಿಗಳು ಸಹಾ ಅದ್ಭುತವಾಗಿದೆ, ಭವ್ಯವಾಗಿದೆ, ನಿಜಕ್ಕೂ ಇವು ಮಹತ್ಫಲವೇ ಆಗಿದೆ. ತುಂಬಾ ಒಳ್ಳೆಯದು ನಾಗಸೇನ, ನೀವು ಹೇಳಿದ್ದನ್ನು ನಾನು ಒಪ್ಪುವೆ.


7. ಬುದ್ಧ ಪೂಜೆಯ ಪ್ರಶ್ನೆ


ಭಂತೆ ನಾಗಸೇನ, ತಥಾಗತರು ಹೀಗೆ ಹೇಳಿದ್ದಾರೆ: ಆನಂದ, ತಥಾಗತರ ಶರೀರ ಪೂಜೆಗಾಗಿ, ನೀವು ಸಾಧನೆಯಲ್ಲಿ ತಡಮಾಡಬೇಡಿ. ಆದರೆ ಮತ್ತೊಂದೆಡೆ ಹೀಗೆ ಹೇಳಿರುವರು: ಯಾರು ಅತ್ಯಂತ ಗೌರವಾರ್ಹರೋ, ಅವರಿಗೆ ಅಂತಹವರ ಧಾತುವಿಗೆ (ಸ್ತೂಪಕ್ಕೆ) ಗೌರವಿಸಿ, ಈ ರೀತಿಯಾದ ಸ್ತೂಪ ಪೂಜೆಯಿಂದ ನೀವು ಸುಗತಿ ಪಡೆಯುವಿರಿ.

ಈಗ ಇಲ್ಲಿ ಮೊದಲ ಹೇಳಿಕೆ ನಿಜವಾದಲ್ಲಿ, ಎರಡನೆಯದು ಸುಳ್ಳಾಗುತ್ತದೆ ಮತ್ತು ಎರಡನೆಯ ಹೇಳಿಕೆ ನಿಜವಾದಲ್ಲಿ ಮೊದಲನೆಯದು ಸುಳ್ಳಾಗುತ್ತದೆ. ಇದು ಸಹಾ ದ್ವಿಮುಖ ಪೇಚಿನ ಪ್ರಶ್ನೆಯಾಗಿದೆ, ಇದನ್ನು ನಿಮಗೆ ಹಾಕಲಾಗಿದೆ ಮತ್ತು ನೀವೇ ಇದನ್ನು ಪರಿಹರಿಸಬೇಕು. (117)

ಓ ಮಹಾರಾಜ, ಈ ಎರಡು ಹೇಳಿಕೆಗಳು ಭಗವಾನರೇ ನುಡಿದಿದ್ದಾರೆ. ಆದರೆ ಇದು ಎಲ್ಲಾ ಜನರಿಗಾಗಿ ಅಲ್ಲ. ಜಿನಪುತ್ರರಿಗಾಗಿ ಅವರು ಈ ತಥಾಗತರ ಪೂಜೆಗಾಗಿ ನಿಮ್ಮನ್ನು ನೀವೇ ತಡೆಮಾಡಿಕೊಳ್ಳದಿರಿ ಎಂದಿದ್ದಾರೆ.

ಧಾತು ಪೂಜೆಯು ಜಿನಪುತ್ತರ ಕಾರ್ಯವಲ್ಲ. ಬದಲಾಗಿ ಅವರು ಎಲ್ಲಾ ಸ್ಥಿತಿಗಳ ನಿಜಸ್ವರೂಪವನ್ನು ಗ್ರಹಿಸಬೇಕಾಗಿದೆ. ಸಮಾಧಿ, ಸತಿಪಟ್ಟಾನ ಅನುಸ್ಸತಿ, ಸಾರವಾದುದನ್ನು ಅರಿಯುವಿಕೆ, ಕ್ಲೇಶದೊಡನೆ ಯುದ್ಧ, ತಮ್ಮ ಹಿತದಲ್ಲೇ ತಲ್ಲೀನವಾಗುವಿಕೆ ಇವು ಜಿನಪುತ್ತರ (ಭಿಕ್ಖುಗಳ) ಕರ್ತವ್ಯವಾಗಿದೆ, ಶರೀರ ಪೂಜೆಯು ಧಾತುಪೂಜೆಯು ಮಿಕ್ಕ ಗೃಹಸ್ಥರು ಮಾಡಬೇಕಾಗಿದೆ.

ಓ ಮಹಾರಾಜ, ಇದು ಹೇಗೆಂದರೆ ರಾಜಕುಮಾರರ ಕರ್ತವ್ಯ ಏನೆಂದರೆ ಚತುರಂಗ ಬಲದ ಶಸ್ತ್ರವಿದ್ಯೆ ಕಲಿಯುವಿಕೆ, ಲೇಖನ ಮುದ್ರವನ್ನು ಕಲಿಯುವಿಕೆ, ಕ್ಷಾತ್ರವರ್ಣದ ಸಂಪ್ರದಾಯ ಪಾಲನೆ, ಶತೃಗಳಿಂದ ದೇಶ, ಜನರನ್ನು ಕಾಪಾಡುವಿಕೆ ಇವೇ ಮುಂತಾದವು ಆಗಿದೆ. ಆದರೆ ಕೃಷಿಯು ಕೆಲವರ ವೃತ್ತಿಯಾದರೆ, ವ್ಯಾಪಾರವು ಕೆಲವರ ವೃತ್ತಿಯಾಗಿದೆ. ಬ್ರಾಹ್ಮಣರು ಋಗ್ವೇದವನ್ನು, ಯಜುವರ್ೆದವನ್ನು, ಸಾಮವೇದವನ್ನು ಅಥರ್ವವೇದವನ್ನು, ಲಕ್ಷಣಶಾಸ್ತ್ರವನ್ನು, ಇತಿಹಾಸವನ್ನು, ಪುರಾಣವನ್ನು, ನಿಘಂಟುವನ್ನು ಅಕ್ಷರ ಶಾಸ್ತ್ರವನ್ನು, ವ್ಯಾಕರಣವನ್ನು, ಭಾಸಮಾಗ್ಗಂ, ಖಗೋಳಶಾಸ್ತ್ರವನ್ನು, ಸ್ವಪ್ನಫಲವನ್ನು, ನಿಮಿತ್ತವನ್ನು, ಷಟವೇದಾಂಗವನ್ನು, ಗ್ರಹಣ, ಧೂಮಕೇತು, ಸಿಡಿಲು, ಗ್ರಹಗತಿ, ಭೂಕಂಪ, ಆಕಾಶಚಿಹ್ನೆಗಳನ್ನು, ಅಂಕಗಣಿತ, ಪ್ರಾಣಿಗಳ ವರ್ತನೆಯ ಶಕುನ, ಪಕ್ಷಿಗಳ ಕೂಗುಗಳ ಶಕುನ, ದ್ರವಗಳ ಮಿಶ್ರಣ (ರಸಾಯನಶಾಸ್ತ್ರ), ಇವುಗಳನ್ನು ಅಭ್ಯಸಿಸುತ್ತಾರೆ. ಮಿಕ್ಕವರು ಬೇಸಾಯ, ವ್ಯಾಪಾರ, ಗೋಪಾಲನೆ, ಇತ್ಯಾದಿಗಳನ್ನು ಮಾಡುತ್ತಾರೆ. ಇವೆಲ್ಲಾ ಪ್ರಾಪಂಚಿಕ ಕಾರ್ಯವಾಗಿದೆ. ಓ ಮಹಾರಾಜ, ಇವುಗಳಲ್ಲಿ ಗಮನಹರಿಸದಂತೆ ಭಗವಾನರು ಹೀಗೆ ಹೇಳಿದ್ದಾರೆ: ಇಂತಹ ನೀಚ ವೃತ್ತಿಗಳಲ್ಲಿ ನೀವು ತೊಡಗಬೇಡಿ ಭಿಕ್ಷುಗಳೆ, ಈ ವಿಷಯಗಳು ಹೀಗಿವೆ. ಭಿಕ್ಷುಗಳ ಪರಮಾರ್ಥ ಉನ್ನತಿಗಾಗಿಯೇ ಭಗವಾನರು ಹೀಗೆ ಹೇಳಿದ್ದರು: ಆನಂದ, ತಥಾಗತರ ಶರೀರ ಪೂಜೆ ಮಾಡುತ್ತಾ ನಿಮ್ಮನ್ನು ನೀವು ತಡೆಗೊಳಿಸಿಕೊಳ್ಳಬೇಡಿ. ಓ ಮಹಾರಾಜ, ಭಗವಾನರು ಹಾಗೆ ಹೇಳದಿದ್ದರೆ, ಈಗಾಗಲೇ ಭಿಕ್ಷುಗಳು ಅವರ ಪಿಂಡಪಾತ್ರೆ ಮತ್ತು ಚೀವರ ತೆಗೆದುಕೊಂಡು ಕೇವಲ ಬುದ್ಧರ ಪೂಜೆಯಲ್ಲೇ ತಲ್ಲೀನರಾಗುತ್ತಿದ್ದರು.

ತುಂಬಾ ಒಳ್ಳೆಯದು ನಾಗಸೇನ, ನಿಜಕ್ಕೂ ಇದು ಹೀಗೆಯೇ ಇದೆ. ನೀವು ಹೇಳಿದ್ದನ್ನು ನಾನು ಒಪ್ಪುವೆ.

8. ಪಾದಸಕಲಿಕಾಹತ ಪನ್ಹೋ (ಪಾದಗಾಯದ ಪ್ರಶ್ನೆ)


ಪೂಜ್ಯ ನಾಗಸೇನ, ನೀವು ಭಿಕ್ಷುಗಳು ಹೀಗೆ ಹೇಳುವಿರಿ: ತಥಾಗತರು ಭೂಮಿಯ ಮೇಲೆ ನಡೆಯುತ್ತಿದ್ದರೆ, ಭೂಮಿಯು ಅಚೇತನಾ ವಸ್ತುವಾಗಿದ್ದರೂ ಸಹಾ ಹಳ್ಳಗಳು ಮುಚ್ಚಲ್ಪಟ್ಟು ನೆಲಸಮವಾಗುತ್ತಿತ್ತು. ಆದರೆ ಮತ್ತೊಂದೆಡೆ ನೀವೇ ಹೇಳುವಿರಿ, ಬಂಡೆಯ ಚೂರು ಸಿಡಿದು ತಾಗಿ ಅವರ ಪಾದವು ಗಾಯವಾಯಿತೆಂದು. ಯಾವಾಗ ಬಂಡೆಯು ಬೀಳುತ್ತಿತ್ತೊ ಅದೇಕೆ ಪಕ್ಕಕ್ಕೆ ಸರಿಯಲಿಲ್ಲ? ಮೊದಲ ಹೇಳಿಕೆ ಸರಿಯಾದ ಪಕ್ಷದಲ್ಲಿ ಎರಡನೆಯ ಹೇಳಿಕೆ ಸುಳ್ಳಾಗುತ್ತದೆ. ಆದರೆ ಎರಡನೆಯ ಹೇಳಿಕೆ ಸರಿಯಾಗಿದ್ದರೆ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಸಮಸ್ಯೆಯಾಗಿದೆ, ಇದನ್ನು ನಿಮಗೆ ಹಾಕಿದ್ದೇನೆ, ಬಿಡಿಸಿ. (118)

ಓ ಮಹಾರಾಜ, ಈ ಎರಡು ಹೇಳಿಕೆಗಳು ಸಹಾ ಸರಿಯಾಗಿಯೇ ಇವೆ. ಆದರೆ ಇಲ್ಲಿ ಗಮನಿಸಿ ರಾಜ, ಆ ಬಂಡೆಯು ತಾನಾಗಿಯೇ ಬೀಳಲಿಲ್ಲ. ಅದು ದೇವದತ್ತನಿಂದ ತಳ್ಳಲ್ಪಟ್ಟಿತ್ತು. ಓ ಮಹಾರಾಜ, ದೇವದತ್ತ ಲಕ್ಷ ಜನ್ಮಗಳ ಹಿಂದಿನಿಂದಲೂ ಬೋಧಿಸತ್ತರನ್ನು ದ್ವೇಷಿಸುತ್ತಲೇ ಬಂದಿದ್ದಾನೆ. ಆತನು ದ್ವೇಷದಿಂದ ಬೃಹತ್ ಬಂಡೆಯನ್ನು ಹಿಡಿದು, ಭಗವಾನರ ತಲೆಯ ಮೇಲೆ ಬೀಳುವಂತೆ ತಳ್ಳಿದನು. ಆದರೆ ಅದರ ಜೊತೆಯಲ್ಲಿ ಬೇರೆ ಬಂಡೆಗಳು ಬಂದಿದ್ದರಿಂದಾಗಿ. ಅವು ತಥಾಗತರ ಬಳಿಗೆ ಬರುವ ಮುಂಚೆಯೇ ತಡಗೊಳ್ಳಲ್ಪಟ್ಟವು. ಆದರೆ ಅವುಗಳ ಘರ್ಷಣೆಯ ಬಲದಿಂದಾಗಿ ಬಂಡೆಯ ಚೂರು ಏರ್ಪಟ್ಟು, ಸಿಡಿದು, ಭಗವಾನರ ಕಾಲಿಗೆ ಚುಚ್ಚಿತು.

ಆದರೆ ನಾಗಸೇನ, ಯಾವಾಗ ಎರಡು ಬೃಹತ್ ಬಂಡೆಗಳು ತಡೆಗೊಳ್ಳಲ್ಪಟ್ಟಿದ್ದರೆ ಆ ಚೂರು ಏಕೆ ತಡೆಗೊಳ್ಳಲ್ಪಟ್ಟಿಲ್ಲ.

ಆದರೆ ಮಹಾರಾಜ, ಒಂದು ವಿಷಯ ತಡೆಗೊಳ್ಳಲ್ಪಡಬಹುದು, ಪಾರಾಗಬಹುದು, ಹೇಗೆಂದರೆ ನೀವು ಪಾರಾಗುವರೀತಿ, ಬೆರಳುಗಳಿಂದ ಅದನ್ನು ಕೈಗೆ ತೆಗೆದುಕೊಂಡಾಗ ಅಥವಾ ಹಾಲು, ಅಥವಾ ಮಜ್ಜಿಗೆ ಅಥವಾ ತುಪ್ಪ, ಅಥವಾ ಎಣ್ಣೆ ಅಥವಾ ಮೀನುಸಾರು ಅಥವಾ ಸೂಕ್ಷ್ಮವಾದ ಮಣ್ಣಿನ ಧೂಳು, ಇದನ್ನು ತೆಗದುಕೊಂಡು ಮುಷ್ಠಿ ಮುಚ್ಚಿದಾಗ, ಅವು ಪಾರಾಗುತ್ತದೆ. ಅಥವಾ ನೀವು ಅನ್ನವನ್ನು ತೆಗೆದುಕೊಂಡು ಬಾಯಲ್ಲಿ ತೆಗೆದುಕೊಳ್ಳುವ ಮೊದಲೇ ಆ ಅನ್ನದ ಅಗಳು ಪಾರಾಗುತ್ತವೆ.

ಆಯಿತು ಭಂತೆ ನಾಗಸೇನ, ಅದು ಹೀಗಿದ್ದ ಪಕ್ಷದಲ್ಲಿ ನಾನು ಒಪ್ಪುವೆ. ಆದರೆ ಆ ಬಂಡೆಯ ಚೂರು, ಭೂಮಿಯಂತೆ ಭಗವಾನರಿಗೆ ಗೌರವ ಸೂಚಿಸಬಹುದಿತ್ತಲ್ಲ.

ಓ ಮಹಾರಾಜ, ಹನ್ನೆರಡು ರೀತಿಯ ಜನರು ಗೌರವ ನೀಡುವುದಿಲ್ಲ. ಅವರೆಂದರೆ ರಾಗಯುಕ್ತನಾದ ಮನುಷ್ಯನು ರಾಗದಿಂದ ಇದ್ದಾಗ, ದ್ವೇಷಿಯು ತನ್ನ ಕೋಪದಿಂದ ಕೂಡಿದಾಗ, ಮೋಹಿಯು ಮೂಢತ್ವದಿಂದ ಕೂಡಿರುವಾಗ, ಅಹಂಕಾರಿಯು ಮುಖಸ್ತುತಿಗೊಂಡಾಗ, ನಿಗರ್ುಣಿಯು ಪಕ್ಷಪಾತದಿಂದ ಕೂಡಿರುವಾಗ, ಹಠಮಾರಿಯು ನಮ್ರತೆ ಬಯಸಿದಾಗ, ಹೀನನಾಗಿರುವವನು ಹೀನತ್ವದಿಂದ ಕೂಡಿರುವಾಗ, ಮಾತುಗಾರನು ಒಣಹೆಮ್ಮೆಯಿಂದ ಕೂಡಿರುವಾಗ, ಪಾಪಿಯು ಕ್ರೂರತ್ವದಿಂದ ಇದ್ದಾಗ, ದುಃಖಿಯು ಶೋಕದಿಂದ ಇದ್ದಾಗ ಮತ್ತು ಜೂಜುಗಾರನು. ಏಕೆಂದರೆ ಆತನು ಲೋಭದಿಂದ ಆವೃತನಾಗಿ ಮತ್ತು ಕಾರ್ಯನಿರತನೂ ಮತ್ತೊಂದು ಲಾಭದ ಹಿಂದೆ ಬಿದ್ದಾಗ, ಅವರೆಲ್ಲ ಗೌರವಿಸಲಾರರು, ಆದರೆ ಇಲ್ಲಿ ಬಂಡೆಯ ಚೂರು, ಘರ್ಷಣೆಯಿಂದ ಸಿಡಿದು ಅಕಸ್ಮಾತ್ತಾಗಿ ಹಾರಿದಾಗ, ಅದು ಭಗವಾನರ ಕಾಲಿಗೆ ಚುಚ್ಚಿ ಆಗಿತ್ತು. ಹೇಗೆ ಸೂಕ್ಷ್ಮವಾದ, ಮಣ್ಣಿನ ಧೂಳು, ವಾಯುವಿನ ಬಲದಿಂದಾಗಿ ಚಲಿಸುವವೋ ಆಗ ಅವು ಯಾವ ದಿಕ್ಕಿಗೆ ಚಲಿಸುತ್ತವೋ ಅದೇರೀತಿಯಲ್ಲಿ ಮಹಾರಾಜ, ಬಂಡೆಯ ಚೂರು ಸಿಡಿದಾಗ ಅದು ಭೂಮಿಯಲ್ಲಿ ಇರಲಿಲ್ಲ. ಗಾಳಿಯಲ್ಲಿ ಸ್ಥಿರವಾಗಿರಲಿಲ್ಲ. ಅಂತಹ ಸ್ಥಿತಿಯಲ್ಲಿ, ಅದು ಬಲಪ್ರಯೋಗಗೊಂಡ ದಿಕ್ಕಿನಲ್ಲಿಯೇ ಚಲಿಸಿತು ಹಾಗು ಭಗವಾನರ ಕಾಲಿಗೆ ಅಪ್ಪಳಿಸಿತು. ಹೇಗೆ ಉದುರಿದ ಒಣ ಎಲೆಯು ಗಾಳಿಗೆ ಸಿಲುಕಿ ಹಾರುವುದೋ ಹಾಗೇ ಇಲ್ಲೂ ಆಯಿತು. ಇದಕ್ಕೆ ಕಾರಣ ಬಂಡೆಯ ಚೂರಲ್ಲ, ಅದಕ್ಕೆ ದೇವದತ್ತನ ಕೃತಘ್ನತೆ, ಪಾಪಯುತ ಮನಸ್ಸು ಮತ್ತು ಆತನ ಪಾಪಕೃತ್ಯವೇ ಕಾರಣವಾಗಿದೆ.

ತುಂಬಾ ಚೆನ್ನಾಗಿ ಹೇಳಿದಿರಿ ನಾಗಸೇನ. ಅದು ಹೀಗೆಯೇ ಇದೆ ಮತ್ತು ಇದನ್ನು ನಾನು ಒಪ್ಪುವೆ.

9. ಅಗ್ಗಗ್ಗ ಸಮಣ ಪನ್ಹೋ (ಸಮಣತ್ವದ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ ಒಬ್ಬನು ಅಸ್ರವಗಳ ನಾಶದಿಂದಲೇ ಸಮಣನಾಗುತ್ತಾನೆ ಆದರೆ ಮತ್ತೊಂದೆಡೆ ಯಾರಲ್ಲಿ ಈ ನಾಲ್ಕು ಗುಣಗಳಿವೆಯೋ ಆತನೇ ಸಮಣ ಅವೆಂದರೆ-ಕ್ಷಾಂತಿ, ಮಿತಹಾರ, ತ್ಯಾಗ ಮತ್ತು ಏನನ್ನೂ ಹೊಂದದಿರುವಿಕೆ. ಈಗ ಈ ನಾಲ್ಕು ಗುಣಗಳು ಪರರಲ್ಲೂ ಕಾಣುತ್ತೇವೆ. ಅವರ ಆಸವಗಳು ಪೂರ್ಣವಾಗಿ ನಾಶವಾಗಿರುವುದಿಲ್ಲ. ಈಗ ಹೇಳಿ ಇಲ್ಲಿ ಮೊದಲ ಹೇಳಿಕೆ ಸತ್ಯವಾಗಿದ್ದರೆ ಎರಡನೆಯದು ತಪ್ಪಾಗುತ್ತದೆ, ಎರಡನೆಯದು ಸರಿಯಾಗಿದ್ದರೆ ಮೊದಲನೆಯದು ತಪ್ಪಗಿರುತ್ತದೆ. ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಸಮಸ್ಯೆಯಾಗಿದೆ. ಇದನ್ನು ನಿಮಗೆ ಹಾಕಿದ್ದೇನೆ ಮತ್ತು ಇದನ್ನು ನೀವು ಬಿಡಿಸಬೇಕು. (119)

ಓ ಮಹಾರಾಜ, ಈ ಎರಡು ಹೇಳಿಕೆಗಳು ಭಗವಾನರಿಂದಲೇ ಬಂದಿವೆ. ಆದರೆ ಎರಡನೆಯ ಹೇಳಿಕೆಯು ಇಂತಿಂಥ ಗುಣಲಕ್ಷಣಗಳಿಂದ ಇರಬೇಕು ಎಂದಿದ್ದಾರೆ. ಆದರೆ ಮೊದಲ ಹೇಳಿಕೆಯು ಎಲ್ಲ ಅರ್ಥವನ್ನು ಒಳಗೊಂಡಿದೆ. ಏನೆಂದರೆ ಯಾರಲ್ಲಿ ಆಸವಗಳು ನಾಶವಾಗಿದೆಯೋ ಆತನೇ ಸಮಣ ಮತ್ತು ಯಾರೆಲ್ಲರೂ ತಮ್ಮ ಅಕುಶಲಗಳ ಧಮನದಿಂದಾಗಿ ಪೂರ್ಣರೆಂದು ಹೇಳುವರೊ, ಅವರನ್ನೆಲ್ಲಾ ಒಂದೆಡೆ ನಿಲ್ಲಿಸಿದಾಗ ಅಸವಗಳ ನಾಶದಿಂದ ಅರಹಂತನಾಗಿರುವವನು ಪ್ರಧಾನವಾಗಿ ಎದ್ದು ಕಾಣಿಸುವನು. ಹೇಗೆಂದರೆ ಮಹಾರಾಜ, ಯಾವೆಲ್ಲ ಪುಷ್ಪಗಳು ನೀರಿನಲ್ಲೇ ಆಗಲಿ ಅಥವಾ ಭೂಮಿಯಲ್ಲೇ ಆಗಲಿ, ವಷರ್ಿಕ (ದ್ವಿಮಲ್ಲಿಗೆ) ಪುಷ್ಪವೇ ಚೆನ್ನಾಗಿರುತ್ತದೆ ಹಾಗು ಜನಪ್ರಿಯವಾಗಿವೆ. ಅಥವಾ ಓ ಮಹಾರಾಜ, ಎಲ್ಲಾರೀತಿಯ ಧಾನ್ಯಗಳಲ್ಲಿ ಅಕ್ಕಿಯೇ ಶ್ರೇಷ್ಠವಾಗಿದೆ, ಅದನ್ನೇ ಇಷ್ಟಪಟ್ಟು ಆಹಾರಕ್ಕೆ ಬಳಸುತ್ತಾರೆ.

ತುಂಬಾ ಚೆನ್ನಾಗಿ ಹೇಳಿದಿರಿ ನಾಗಸೇನ, ಹೀಗಾದಲ್ಲಿ ನೀವು ಹೇಳಿದ್ದನ್ನು ನಾನು ಒಪ್ಪುವೆ.

10. ವಣ್ಣಭಣನ ಪನ್ಹೊ (ವರ್ಣನೆ ಬಗ್ಗೆ ಪ್ರಶ್ನೆ)

ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿದ್ದಾರೆ: ಓ ಭಿಕ್ಷುಗಳೇ, ಯಾರಾದರೂ ನನಗಾಗಲೀ ಅಥವಾ ಧಮ್ಮಕ್ಕಾಗಲಿ ಅಥವಾ ಸಂಘಕ್ಕಾಗಲಿ ಪ್ರಶಂಸಿಸಿದರೆ ನೀವು ಆನಂದಗೊಳ್ಳಬಾರದು, ಸೋಮನಸ್ಸು ಹೊಂದಬಾರದು, ಚಿತ್ತವನ್ನು ಉಬ್ಬಿಸಬಾರದು. ಆದರೆ ಇನ್ನೊಂದೆಡೆ ಸೇಲ ಬ್ರಾಹ್ಮಣನಿಂದ ಪ್ರಶಂಸಿತಗೊಂಡಾಗ ಅವರು ಆನಂದಪಟ್ಟವರಂತೆ ಕಾಣುತ್ತಾರೆ. ಹಾಗೆಯೇ ಅವರು ಹೀಗೆ ಹೇಳುತ್ತಾರೆ: ರಾಜನಾಗಿದ್ದೇನೆ ನಾನು ಸೇಲ, ಅನುತ್ತರ ಧಮ್ಮರಾಜ, ಧಮ್ಮಚಕ್ರವನ್ನು ಪ್ರವತ್ತಿಸಿದ್ದೇನೆ, ಆ ಚಕ್ರವನ್ನು ಯಾರೂ ಸಹಾ ಹಿಂತಿರುಗಿಸಲಾರರು ಎಂದಿದ್ದಾರೆ. ಈಗ ಇಲ್ಲಿ ಮೊದಲನೆಯದು ಸತ್ಯವಾಗಿದ್ದರೆ ಎರಡನೆಯದು ಸುಳ್ಳಾಗುತ್ತದೆ. ಎರಡನೆಯದು ಸತ್ಯವಾಗಿದ್ದರೆ ಮೊದಲನೆಯದು ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಸಮಸ್ಯೆಯಾಗಿದೆ, ಇದನ್ನು ನಿಮಗೆ ಹಾಕಿದ್ದೇನೆ ಮತ್ತು ನೀವೇ ಪರಿಹರಿಸಬೇಕು. (120)
ಓ ಮಹಾರಾಜ, ನೀವು ಹೇಳಿದ ಹೇಳಿಕೆಗಳೆಲ್ಲಾ ಸರಿಯಾಗಿಯೇ ಇದೆ. ಆದರೆ ಇಲ್ಲಿ ಮೊದಲ ಹೇಳಿಕೆಯು ಧಮ್ಮಾನುಸಾರವಾಗಿ, ಸಾರಯುತವಾಗಿ, ಸತ್ಯದ ವಾಸ್ತವಿಕತೆಯಲ್ಲಿ ಜೀವಿಸುವ ರೀತಿ ಹೇಳಿದ್ದಾರೆ ಮತ್ತು ಎರಡನೆಯ ಹೇಳಿಕೆಯು ಅವರು ಯಾವುದೇ ಲಾಭಕ್ಕಾಗಿ ಅಥವಾ ಪ್ರಶಂಸೆಗಾಗಿ ಅಥವಾ ಪ್ರಶಂಸಿತರಾಗಿ, ಅಥವಾ ಎಚ್ಚರತಪ್ಪಿ ಮೋದಗೊಂಡು ಅಥವಾ ಅನುಚರರನ್ನು ಗೆಲ್ಲಲು ಹೇಳಲಿಲ್ಲ. ಬದಲಾಗಿ ದಯೆಯಿಂದ, ಕರುಣೆಯಿಂದ, ಪರಹಿತವನ್ನು ನೆನಪಿಟ್ಟು, 300 ಯುವ ಬ್ರಾಹ್ಮಣರಲ್ಲಿ ಶ್ರದ್ಧೆಯುಕ್ಕಿಸಲು, ಅವರಲ್ಲಿ ಜ್ಞಾನ ವಿಕಾಸವಾಗಿಸಲು ಸತ್ಯವನ್ನೇ ಅವರು ಹೇಳಿದ್ದಾರೆ.

ಸೇಲ, ನಾನು ಅನುತ್ತರ ಧಮ್ಮರಾಜನಾಗಿದ್ದೇನೆ, ಧಮ್ಮಚಕ್ರವನ್ನು ಪ್ರವತರ್ಿಸಿದ್ದೇನೆ, ಅದನ್ನು ಯಾರು ಸಹಾ ಹಿಂತಿರುಗಿಸಲಾರರು ಎಂದಿದ್ದಾರೆ (ಜನರೇ ಹೀಗೆ ಸತ್ಯ ಹೇಳಿದರೆ ಪ್ರಶಂಸೆ ಮಾಡಿಕೊಂಡ ಎನ್ನುತ್ತಾರೆ, ಸತ್ಯ ಹೇಳದಿದ್ದರೆ ಕೊರತೆ ಇರಬಹುದಾ ಎಂದು ಸಂದೇಹಪಡುತ್ತಾರೆ).

ತುಂಬಾ ಚೆನ್ನಾಗಿ ಹೇಳಿದಿರಿ ನಾಗಸೇನ, ಹೀಗೆಯೇ ವಾಸ್ತವಾಂಶವು ಇದೆ. ನೀವು ಹೇಳಿದ್ದನ್ನು ನಾನು ಒಪ್ಪುತ್ತೇನೆ.


11. ಅಹಿಂಸಾಸಿಗ್ಗಹ ಪನ್ಹೊ (ಅಹಿಂಸೆ ನಿಗ್ರಹ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು : ಯಾರಿಗೂ ಹಿಂಸೆ ಮಾಡದಿರಿ, ಮೆತ್ತ ಮತ್ತು ಕರುಣೆಯಿಂದ ಲೋಕದಲ್ಲಿ ವಿಹರಿಸಿರಿ. ಆದರೆ ಮತ್ತೊಂದೆಡೆ ಹೀಗೆ ಹೇಳಿದ್ದಾರೆ ಯಾರು ನಿಗ್ರಹಕ್ಕೆ ಅರ್ಹರೋ ಅವರನ್ನು ನಿಗ್ರಹಿಸಿ ಮತ್ತು ಯಾರು ಪ್ರೋತ್ಸಾಹಕ್ಕೆ ಅರ್ಹರೋ ಅವರನ್ನು ಪ್ರೋತ್ಸಾಹಿಸಿ ಎಂದಿದ್ದಾರೆ. ಭಂತೆ ನಾಗಸೇನ, ಶಿಕ್ಷೆ (ನಿಗ್ರಹ) ಎಂದರೆ ಕೈಕಾಲು ಕತ್ತರಿಸುವುದು, ವಧಿಸುವುದು, ಬಂಧಿಸುವುದು, ಚಿತ್ರಹಿಂಸೆ, ನೀಡುವುದು, ಗಲ್ಲಿಗೇರಿಸುವುದು, ಜೀವಾವಧಿ ಕಾಗಾಗೃಹ. ಈಗ ಹೇಳಿ ಇಲ್ಲಿ ಮೊದಲ ಹೇಳಿಕೆ ಸತ್ಯವಾದರೆ ಎರಡನೆಯ ಹೇಳಿಕೆ ಸುಳ್ಳಾಗುತ್ತದೆ. ಇಲ್ಲವೇ ಎರಡನೆಯ ಹೇಳಿಕೆ ಸತ್ಯವಾದರೆ ಮೊದಲ ಹೇಳಿಕೆ ಸುಳ್ಳಾಗುತ್ತದೆ. ಇದು ಸಹಾ ದ್ವಿ-ಅಂಚಿನ ಸಮಸ್ಯೆಯಾಗಿದೆ, ನಿಮಗೆ ಹಾಕಿದ್ದೇನೆ ಬಿಡಿಸಿ. (121)


ಓ ಮಹಾರಾಜ, ನೀವು ಹೇಳಿದಂತಹ ಹೇಳಿಕೆಗಳು ಸರಿಯಾಗಿಯೇ ಇವೆ. ಮೊದಲನೆಯದು, ಅಹಿಂಸೆಯಿಂದ ಜೀವಿಸುವುದು ಹಾಗು ಮೆತ್ತ ಕರುಣೆಯಿಂದ ವಿಹರಿಸುವುದು, ಇದು ಎಲ್ಲಾ ಬುದ್ಧರಿಂದ ಬಂದಿದ್ದುದಾಗಿದೆ. ಅದೇ ಧಮ್ಮಾದೇಶನವಾಗಿದೆ, ಧಮ್ಮವಾಗಿದೆ ಮತ್ತು ಧಮ್ಮದ ಲಕ್ಷಣವೆಂದರೆ ಯಾವುದೇ ಪಾಪವನ್ನು (ಕೆಟ್ಟದ್ದನ್ನು) ಮಾಡದಿರುವುದು. ಇದು ಸರಿಯಾಗಿಯೇ ಇದೆ, ಆದರೆ ಎರಡನೆಯ ಹೇಳಿಕೆಯು ವಿಶೇಷ ಅರ್ಥದಲ್ಲಿ ಹೇಳಲಾಗಿದೆ. ಅದನ್ನು ನೀವು ಅಪಾರ್ಥವಾಗಿ ಭಾವಿಸಿರುವಿರಿ, ಅದೆಂದರೆ ನಿಗ್ರಹಿಸಬೇಕಾದುದನ್ನು ನಿಗ್ರಹಿಸಿ, ಪ್ರೋತ್ಸಾಹಿಸಬೇಕಾದ್ದನ್ನು ಪ್ರೋತ್ಸಾಹಿಸಿ. ಓ ಮಹಾರಾಜ, ಇಲ್ಲಿ ಅಹಂಕಾರವನ್ನು ನಿಗ್ರಹಿಸಬೇಕಾಗುತ್ತದೆ ಮತ್ತು ವಿಧೇಯತೆಯನ್ನು ಪ್ರೋತ್ಸಾಹಿಸಬೇಕಾಗುತ್ತದೆ. ಪಾಪಚಿತ್ತವನ್ನು ನಿಗ್ರಹಿಸಬೇಕಾಗುತ್ತದೆ ಮತ್ತು ಎಚ್ಚರಿಕೆಯನ್ನು, ಯೋಗ್ಯ ಗಮನಹರಿಸುವಿಕೆಯನ್ನು ಪ್ರೋತ್ಸಾಹಿಸಬೇಕಾಗುತ್ತದೆ. ಮಿಥ್ಯಾದೃಷ್ಟಿಗಳನ್ನು ನಿಗ್ರಹಿಸಬೇಕಾಗುತ್ತದೆ ಮತ್ತು ಸಮ್ಮಾದೃಷ್ಟಿಗಳನ್ನು ಪ್ರೋತ್ಸಾಹಿಸಬೇಕಾಗುತ್ತದೆ. ಆರ್ಯರಲ್ಲದವರನ್ನು ನಿಗ್ರಹಿಸಬೇಕಾಗುತ್ತದೆ ಮತ್ತು ಆರ್ಯರನ್ನು ಪ್ರೋತ್ಸಾಹಿಸಬೇಕಾಗುತ್ತದೆ. ಚೋರರನ್ನು ನಿಗ್ರಹಿಸಬೇಕಾಗುತ್ತದೆ ಮತ್ತು ಅಚೋರರನ್ನು ಪ್ರೋತ್ಸಾಹಿಸಬೇಕಾಗುತ್ತದೆ.

ಭಂತೆ ನಾಗಸೇನ, ನಿಮ್ಮ ಕೊನೆಯ ವಾಕ್ಯವು ನನ್ನ ಬಲವನ್ನು ಬಲಪಡಿಸಿದೆ, ನಾನು ಭಾವಿಸಿದ ರೀತಿಯಲ್ಲೇ ನೀವು ಹೇಳಿರುವಿರಿ. ಈಗ ಹೇಳಿ ಚೋರರನ್ನು ಹೇಗೆ ನಿಗ್ರಹಿಸಬೇಕು?

ಮಹಾರಾಜ, ಖಂಡಿಸಬೇಕಾದವನನ್ನು ಖಂಡಿಸಬೇಕು, ದಂಡ ಹಾಕಬೇಕಾಗಿರುವ ವನನ್ನು ದಂಡ ಹಾಕಬೇಕು, ಗಡಿಪಾರು ಮಾಡಬೇಕಾಗಿರುವವನನ್ನು ಗಡಿಪಾರು ಮಾಡಬೇಕು, ಮರಣದಂಡನೆಗೆ ಅರ್ಹರಾದವರಿಗೆ ಮರಣದಂಡನೆ ನೀಡಬೇಕು.

ಹಾಗಾದರೆ ಭಂತೆ ನಾಗಸೇನ, ಚೋರರಿಗೆ ಗಲ್ಲಿಗೇರಿಸುವುದು, ತಥಾಗತರ ಬೋಧನೆಯೇ?

ಖಂಡಿತವಾಗಿಯು ಇಲ್ಲ, ಓ ಮಹಾರಾಜ.

ಹಾಗಾದರೆ ತಥಾಗತರು ಚೋರರನ್ನು ನಿಗ್ರಹಿಸಲು ಆಜ್ಞಾಪಿಸಿರುವುದು ಏಕೆ?

ಓ ಮಹಾರಾಜ, ಯಾರೇ ಆಗಲಿ ಮರಣದಂಡನೆಗೆ ಗುರಿಯಾಗಿರುವಾಗ ಆತನು ಆ ಶಿಕ್ಷೆಯನ್ನು ಅನುಭವಿಸುತ್ತಿರುವುದು ತಥಾಗತರ ಅಭಿಪ್ರಾಯದಿಂದ ಎಂದಲ್ಲ. ಬದಲಾಗಿ ಆತನು ತಾನು ಮಾಡಿದ ಕೃತ್ಯಕ್ಕೆ ಶಿಕ್ಷೆ ಅನುಭವಿಸುತ್ತಿದ್ದಾನೆ. ಹೇಳಿ ಮಹಾರಾಜ, ಯಾರಾದರೂ ನಿರಪರಾಧಿ ಮುಗ್ಧನನ್ನು ಬಂಧಿಸಿ ಮರಣದಂಡನೆಗೆ ನೀಡುವರೇ?

ಖಂಡಿತ ಇಲ್ಲ.

ಏಕೆ?

ಏಕೆಂದರೆ ಆತನು ನಿರಪರಾಧಿಯಾಗಿದ್ದಾನೆ.

ಅದೇರೀತಿಯಲ್ಲಿ ಮಹಾರಾಜ, ಚೋರರು ಶಿಕ್ಷೆಗೆ ಗುರಿಯಾಗುತ್ತಿರುವುದು, ತಥಾಗತ ವಚನದಿಂದಲ್ಲ (ತಥಾಗತರ ವಚನವು ಕಳ್ಳತನ ಮಾಡಬೇಡಿ ಎಂದಾಗಿದೆ). ಆದರೆ ತನ್ನ ಹೀನ ಕೃತ್ಯದ ಕಾರಣದಿಂದಾಗಿಯೇ ಶಿಕ್ಷೆಗೆ ಗುರಿಯಾಗುತ್ತಿದ್ದಾನೆ. ಹೇಗೆ ತಾನೆ ಭಗವಾನರ ಧಮ್ಮದಲ್ಲಿ ತಪ್ಪು ಸಿಗುವುದು?

ಹೌದು ಭಂತೆ, ಸಿಗಲಾರದು.

ಹಾಗಾದರೆ ನೀವು ತಥಾಗತರ ಬೋಧನೆಯಲ್ಲಿ ಸತ್ಯವನ್ನು, ಒಳ್ಳೆಯದನ್ನು ಕಾಣುತ್ತಿರುವಿರಿ ಅಲ್ಲವೇ?

ಹೌದು ನಾಗಸೇನ, ಅದು ನಿಜಕ್ಕೂ ಒಳಿತಿನಿಂದಲೇ ಕೂಡಿದೆ, ನೀವು ಹೇಳಿದ್ದನ್ನು ನಾನು ಒಪ್ಪುವೆ.



13. ಭಿಕ್ಖು ಪಣಾಮಿತ ಪನ್ಹೋ (ಕೋಪದ ಬಗ್ಗೆ ಪ್ರಶ್ನೆ)


ಭಂತೆ ನಾಗಸೇನ, ಭಗವಾನರು ಹೀಗೆ ಹೇಳಿರುವರು: ನಾನು ಕೋಪದಿಂದಾಗಲಿ ಅಥವಾ ಸಿಡುಕಿನಿಂದಾಗಲಿ ಕೂಡಿರುವುದಿಲ್ಲ. ಆದರೆ ಮತ್ತೊಂದೆಡೆ ಒಮ್ಮೆ ತಥಾಗತರು ಪೂಜ್ಯ ಸಾರಿಪುತ್ತ ಮತ್ತು ಪೂಜ್ಯ ಮೊಗ್ಗಲಾನರ ಸಮೇತ ಅವರ 500 ಶಿಷ್ಯಗಣವನ್ನು ಹೊರಕಳುಹಿಸಿದರು. ಈಗ ಹೇಳಿ ನಾಗಸೇನ ಅವರು ಹಾಗೆ ಮಾಡಿದ್ದು ಕೋಪದಿಂದಲ್ಲವೇ? ಅಥವಾ ಆನಂದದಿಂದ ಮಾಡಿದರೆ? ದಯವಿಟ್ಟು ಇದನ್ನು ವಿವರಿಸಿ, ಅವರು ಕೋಪದಿಂದ ಮಾಡಿದ್ದರೆ ಅವರಿಗೆ ಮಾತ್ರ ಕೋಪಗೊಳ್ಳಲು ಸ್ವಾತಂತ್ರ್ಯವಿದೆಯೇ? ಅಥವಾ ಆನಂದದಿಂದ ಹಾಗೆ ಮಾಡಿದ್ದರೆ ಅವರು ಅಜ್ಞಾನದಿಂದ ಮಾಡಿದ್ದಾರೆ ಅನಿಸುತ್ತದೆ ಅಥವಾ ಕಾರಣವಿಲ್ಲದೆ ಮಾಡಿದ್ದಾರೆ ಅನಿಸುತ್ತದೆ, ಇದು ಸಹಾ ದ್ವಿ-ಅಂಚಿನ ಇಕ್ಕಟ್ಟಿನ ಪ್ರಶ್ನೆಯಾಗಿದೆ, ನಿಮಗೆ ಹಾಕುತ್ತಿದ್ದೇನೆ, ನೀವೇ ಪರಿಹರಿಸಬೇಕು. (122)

ಓ ಮಹಾರಾಜ, ಭಗವಾನರು ಹೀಗೆ ಹೇಳಿದ್ದಾರೆ ನಾನು ಕೋಪದಿಂದಾಗಲಿ ಅಥವಾ ಸಿಡುಕಿನಿಂದಾಗಲಿ ಕೂಡಿರುವುದಿಲ್ಲ ಎಂದು ಹೇಳಿರುವುದು ನಿಜ. ಹಾಗೆಯೇ ಅವರು ಸಾರಿಪುತ್ತ ಹಾಗು ಮೊಗ್ಗಲಾನರನ್ನು ಅವರ ಶಿಷ್ಯರ ಸಮೇತ ಹೊರಕಳುಹಿಸಿದ್ದು ನಿಜವೇ ಆಗಿದೆ. ಆದರೂ ಸಹಾ ಅವರು ಹಾಗೆ ಮಾಡಿದ್ದು ಕೋಪದಿಂದಲ್ಲ. ಊಹಿಸಿ ಮಹಾರಾಜ, ಒಬ್ಬ ಮನುಷ್ಯ ಕಲ್ಲಿಗೆ ಅಥವಾ ಕಾಂಡಕ್ಕೆ ಅಥವಾ ಮಡಿಕೆಗೆ ಅಥವಾ ಸಮವಲ್ಲದ ಭೂಮಿಗೆ ಮುಗ್ಗರಿಸಿದಾಗ, ಹಾಗೆ ಮುಗ್ಗರಿಸಿ ನೆಲಕ್ಕೆ ಬಿದ್ದಾಗ ಈ ವಿಶಾಲಧರೆಯು ಆತನ ಮೇಲೆ ಕೋಪಗೊಳ್ಳುವುದೇ?

ಇಲ್ಲ ಭಂತೆ, ಆ ಧರೆಯು ಆತನ ಮೇಲೆ ಕೋಪವಾಗಲಿ ಅಥವಾ ಆನಂದವಾಗಲಿ ಪಡಲಾರದು. ಧರೆಯು ದ್ವೇಷದಿಂದ ಹೊರತಾಗಿದೆ, ಅದು ಯಾರೊಂದಿಗೂ ಸಿಡುಕಲಾರದು. ಅದು ಮುಗ್ಗುರಿಸಿದ ಮಾನವನ ಅಲಕ್ಷದಿಂದಾದ ತಪ್ಪಾಗಿದೆ.

ಅದೇರೀತಿಯಲ್ಲಿ ಮಹಾರಾಜ, ತಥಾಗತರು ಯಾವುದೇ ಮನುಷ್ಯನ ಮೇಲೆ ಕೋಪವಾಗಲಿ, ಅಹಂಕಾರವಾಗಲಿ ಪಡಲಾರರು. ಸಮ್ಮಾಸಂಬುದ್ಧರನಷ್ಟೇ ಅಲ್ಲ, ಪಚ್ಚೇಕಬುದ್ಧರಾಗಲಿ, ಅರಹಂತರಾಗಲಿ, ದ್ವೇಷದಿಂದ ಮುಕ್ತರಾಗಿರುತ್ತಾರೆ, ಅವರು ಯಾರೊಂದಿಗೂ ಕೋಪಗೊಳ್ಳಲಾರರು, ಅದು ಆ ಶಿಷ್ಯರಿಂದಾದ ತಪ್ಪಿಗಾಗಿ, ಅವರನ್ನು ತಿದ್ದುವುದಕ್ಕಾಗಿ ಹಾಗೆ ಮಾಡಬೇಕಾಯಿತು, ಹೇಗೆ ಸಾಗರವು ಶವವನ್ನು ತನ್ನಲ್ಲಿ ಇಟ್ಟುಕೊಳ್ಳದೆ ದಡಕ್ಕೆ ಎಸೆಯುವುದು. ಹಾಗೆಯೇ ದಡಕ್ಕೆ ಎಸೆಯುವ ಸಾಗರವು ಕೋಪದಿಂದ ಕೂಡಿರುವುದೇ?

ಖಂಡಿತ ಇಲ್ಲ ಭಂತೆ, ವಿಶಾಲ ಸಾಗರವು ಎಂದಿಗೂ ಯಾರೊಂದಿಗೂ ಕೋಪವನ್ನಾಗಲಿ ಅಥವಾ ನಲಿವನ್ನಾಗಲಿ ಪಡಲಾರದು. ಅದು ಯಾರಿಗೂ ಸಂತೋಷಪಡಿಸುವುದಾಗಲಿ ಹಾಗೆಯೇ ಹಿಂಸಿಸುವುದಾಗಲಿ ಮಾಡಲಾರದು.

ಓ ಮಹಾರಾಜ, ಅದೇರೀತಿಯಲ್ಲಿ, ತಥಾಗತರು ಸಹಾ ಯಾವುದೇ ಮಾನವನ ಮೇಲೆ, ಕೋಪಪಡಲಾರರು, ಹಾಗೆಯೇ ಅವರು ಯಾವುದೇ ಮನುಷ್ಯನ ಮೇಲೆ ನಂಬಿಕೆಯು ಇಡಲಾರರು. ತಥಾಗತರು ಅರಹಂತರು ಮತ್ತು ಸಮ್ಮಾಸಂಬುದ್ಧರಾಗಿರುವ ಅವರು ಎಲ್ಲಾಬಗೆಯ ಬಯಕೆಗಳಿಂದ ಮುಕ್ತರಾಗಿರುವರು. ಹಾಗೆಯೇ ಯಾವುದೇ ವ್ಯಕ್ತಿಯ ಮೇಲೆ ಅನುಗ್ರಹವಾಗಲಿ ಅಥವಾ ಹೀನಾಭಾವನೆಯಾಗಲಿ ಇಡಲಾರರು. ಅದು ಆ ಶಿಷ್ಯರ ತಪ್ಪಿನಿಂದಾಗಿಯೇ ಅವರನ್ನು ಹೊರಗೆ ಕಳುಹಿಸಲಾಯಿತು. ಓ ಮಹಾರಾಜ, ಹೇಗೆ ಕಲ್ಲನ್ನು ಎಡವಿ ವ್ಯಕ್ತಿಯು ಭೂಮಿಗೆ ಬೀಳುವನೊ, ಹೇಗೆ ಸಾಗರವು ಶವವನ್ನು ಇಟ್ಟುಕೊಳ್ಳುವುದಿಲ್ಲವೋ ಹಾಗೆಯೇ ಯಾರು ಜನಶ್ರೇಷ್ಠರ ಬೋಧನೆಯಲ್ಲಿ ಎಡವುವರೋ ಅಂತಹವರನ್ನು ತಥಾಗತರು ಹೊರಕಳುಹಿಸುವರು. ಅದು ಕೇವಲ ಅವರ ಒಳಿತಿಗಾಗಿ, ಅವರ ಲಾಭಕ್ಕಾಗಿ, ಅವರ ಚಿತ್ತ ಶುದ್ಧಿಗಾಗಿ. ಅವರು ಜನ್ಮ, ಜರೆ, ಜರಾ ಮೃತ್ಯುವಿನಿಂದ ಮುಕ್ತಿ ಹೊಂದುವುದಕ್ಕಾಗಿ ಹಾಗೆ ಮಾಡುತ್ತಾರೆ.

ತುಂಬಾ ಚೆನ್ನಾಗಿ ವಿವರಿಸಿದಿರಿ ಭಂತೆ ನಾಗಸೇನ, ನೀವು ಹೇಳಿದ್ದನ್ನು ನಾನು ಅಕ್ಷರಷಃ ಒಪ್ಪುವೆ.